ಕೂಲಿ ಮಾಡಿಕೊಂಡೇ ವಿದ್ಯಾಭ್ಯಾಸ ಮಾಡಿದೆ: ಶಿವಮೊಗ್ಗ ಜಿಲ್ಲಾಧಿಕಾರಿ ದಯಾನಂದ
ಶಿವಮೊಗ್ಗ ಆಗಸ್ಟ್.13: ಅನೇಕ ಬಡ ಮಕ್ಕಳು ವಿದ್ಯಾಭ್ಯಾಸ ಮಾಡುವಂತೆ ನಾನೂ ಕೂಡ ಬಡತನದಲ್ಲೇ ಬೆಳೆದೆ. ಬಡ ಕೃಷಿ ಕುಟುಂಬ ನಮ್ಮದು. ಮೈಸೂರು ಜಿಲ್ಲೆಯ ಕೆ.ಆರ್.ನಗರದ ಕೆಸ್ತೂರು ನಮ್ಮ ಊರು. ಕೆಲವೊಮ್ಮೆ ಊಟಕ್ಕೂ ತೊಂದರೆಯ ಪರಿಸ್ಥಿತಿ. ಎಲ್ಲರಂತೆ ನಾನೂ ಕೂಲಿ ಮಾಡಿಕೊಂಡು ವಿದ್ಯಾಭ್ಯಾಸ ಮುಂದುವರೆಸಿದ್ದೇನೆ.
ಎಂಎ ಓದುವಾಗಲೂ ಕೂಡ ನಾನು ಮೇಸ್ತ್ರಿಯಾಗಿ ಕೆಲಸ ಮಾಡಿದ್ದೇನೆ. ಗುರಿ, ಓದುವ ತವಕ ಇವೆಲ್ಲವೂ ಇದ್ದರೆ ಸಾಧನೆ ಕಷ್ಟವಾಗುವುದಿಲ್ಲ ಎಂದು ನೂತನ ಜಿಲ್ಲಾಧಿಕಾರಿ ಕೆ.ಎ.ದಯಾನಂದ ಹೇಳಿದರು.
ಗುಮಾಸ್ತ, ಶಿಕ್ಷಕ, ಪತ್ರಕರ್ತ ದಯಾನಂದ್ ಈಗ ಶಿವಮೊಗ್ಗ ಜಿಲ್ಲಾಧಿಕಾರಿ
ಪ್ರೆಸ್ ಟ್ರಸ್ಟ್ ವತಿಯಿಂದ ಸೋಮವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಜಿಲ್ಲಾಧಿಕಾರಿ ಕೆ.ಎ.ದಯಾನಂದ ನಾನು ಕಷ್ಟದಲ್ಲೇ ಬೆಳೆದು ಬಂದವನು. ಹಾಗಾಗಿ ಬಡ ಜನರ ಕಷ್ಟದ ಅರಿವು ನನಗೆ ಇದೆ. ನಾನೂ ಕೂಡ ಫುಟ್ ಪಾತ್ ನಲ್ಲಿ ಕೆಲಸ ಮಾಡಿದ್ದೇನೆ.
ಒಂದು ಜಾತಿ ಆದಾಯದ ಪ್ರಮಾಣ ಪತ್ರ ಪಡೆಯಲು ಎಷ್ಟು ಕಷ್ಟ ಎಂಬುದನ್ನು ನಾನು ಬಲ್ಲೆ. ಹಾಗಾಗಿಯೇ ಆಡಳಿತದ ಎಲ್ಲ ತಪ್ಪು, ಒಪ್ಪುಗಳು ನನಗೆ ತಿಳಿದಿವೆ. ಇದರಿಂದ ಒಳ್ಳೆಯ ಆಡಳಿತ ನೀಡಬೇಕೆಂಬ ತುಡಿತ ಮೊದಲಿನಿಂದಲೂ ನನಗಿದೆ. ಆಡಳಿತಾತ್ಮಕ ಸಮಸ್ಯೆಗಳಿಗೆ ಉತ್ತರ ಹುಡುಕುವುದೇ ನನ್ನ ಶೈಲಿ.
ಬಗರ್ ಹುಕುಂ ಸೇರಿದಂತೆ ಜಿಲ್ಲೆಯಲ್ಲಿ ಅನೇಕ ಸಮಸ್ಯೆಗಳಿವೆ. ಇವೆಲ್ಲವಕ್ಕೂ ಸೂಕ್ತ ಬದಲಾವಣೆ ಮಾಡಿಕೊಳ್ಳುವುದು ಅನಿವಾರ್ಯವಾಗುತ್ತದೆ. ಆಡಳಿತಾತ್ಮಕ ಸುಧಾರಣೆಗೆ ನನ್ನ ಪ್ರಥಮ ಆದ್ಯತೆ ಇರುತ್ತದೆ. ಆಡಳಿತದಲ್ಲಿ ಕೆಲವು ನಿಯಮಗಳಿರುತ್ತದೆ. ಅದರಲ್ಲಿನ ತಪ್ಪುಗಳನ್ನು ಗುರುತಿಸಿ ಬದಲಾವಣೆ ಮಾಡಿ ಪರಿಹಾರ ಕಂಡುಕೊಳ್ಳುವುದೇ ಬಹಳ ಮುಖ್ಯ.
ಇದಕ್ಕಾಗಿ ಚುರುಕುತನ ಬೇಕಾಗುತ್ತದೆ. ಕಾನೂನಿನ ತೊಡಕುಗಳು ಇರುತ್ತವೆ. ಈ ಎಲ್ಲವನ್ನೂ ಗುರುತಿಸಿ ಒಳ್ಳೆಯ ಆಡಳಿತ ನೀಡುವುದೇ ನನ್ನ ಗುರಿ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ಜಿಲ್ಲಾಧಿಕಾರಿಗಳು, ಜಿಲ್ಲಾಧಿಕಾರಿ ಹುದ್ದೆಗೆ ಏರುವ ಮುನ್ನ ಯಾವ ಯಾವ ಕೆಲಸ ನಿರ್ವಹಿಸಿದರು ಎಂಬುದರ ಬಗ್ಗೆ ಸವಿವರವಾಗಿ ತಿಳಿಸಿದ್ದಾರೆ.
ದ್ವಿತೀಯ ದರ್ಜೆ ಗುಮಾಸ್ತನಾಗಿ ಕೆಲಸ ಆರಂಭ
"ಮೊದಲು ನನಗೆ ಕೆಲಸ ಸಿಕ್ಕಿದ್ದು ದ್ವಿತೀಯ ದರ್ಜೆ ಗುಮಾಸ್ತನಾಗಿ. ನಂತರ ಹೈಸ್ಕೂಲ್ ಶಿಕ್ಷಕನಾದೆ. ಈ ಸಂದರ್ಭದಲ್ಲಿಯೇ ಪಿಯುಸಿ ಮಕ್ಕಳಿಗೂ ಕೂಡ ಅರ್ಥಶಾಸ್ತ್ರ ಬೋಧಿಸಿದೆ. ಅದಾದ ನಂತರ ಎಂಎಬಿಎಡ್ ಮಾಡಿ ಕೆಎಎಸ್ ಶಿಕ್ಷಣ ಪೂರೈಸಿ ಹೊನ್ನಾಳಿ, ಚನ್ನಗಿರಿಯಲ್ಲಿ ತಹಶೀಲ್ದಾರ್ ಆಗಿ ಸೇವೆ ಸಲ್ಲಿಸಿದೆ. ನಂತರ ದಾವಣಗೆರೆ ಜಿಲ್ಲೆಯಲ್ಲಿ ಎಸಿ ಆಗಿ ಕೆಲಸ ನಿರ್ವಹಿಸಿದೆ" ಎಂದು ಕೆ.ಎ.ದಯಾನಂದ ತಿಳಿಸಿದರು
ಚಿಕ್ಕಮಗಳೂರು ಪ್ರೀತಿಯ ಜಿಲ್ಲೆ
ಚಿಕ್ಕಮಗಳೂರು ನನ್ನ ಪ್ರೀತಿಯ ಜಿಲ್ಲೆ. ಇಲ್ಲಿ ದಟ್ಟವಾದ ಅನುಭವಗಳು ನನಗಾಗಿದೆ. ನಕ್ಸಲ್ ಹೋರಾಟಗಳನ್ನು ಕೂಡ ಕಂಡಿದ್ದೇನೆ. ಅನೇಕ ಸಂತ್ರಸ್ಥ ಮಕ್ಕಳಿಗೆ ನೆರವು ನೀಡಿದ್ದೇನೆ. ಮಲೆನಾಡು ನನ್ನನ್ನು ಪುಳಕಿತಗೊಳಿಸಿದೆ. ಎಲ್ಲರ ಸ್ನೇಹ, ವಿಶ್ವಾಸ, ಪ್ರೀತಿ ನನಗೆ ಸಿಕ್ಕಿದೆ. ನಂತರ ನಾನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕನಾಗಿ ಕಾರ್ಯನಿರ್ವಹಿಸಿದ್ದೇನೆ.
ನಾನು ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿಯೂ ಕೆಲಸ ಮಾಡಿದ್ದೇನೆ ಎಂದು ತಮ್ಮ ನೆನಪಿನ ಬುತ್ತಿ ಬಿಚ್ಚಿಟ್ಟರು ಜಿಲ್ಲಾಧಿಕಾರಿ ದಯಾನಂದ.
ಇ-ಆಡಳಿತ ಜಾರಿಗೆ
ಪ್ರಮುಖವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಕೆಲಸ ಮಾಡುವಾಗ ಅಲ್ಲಿನ ಕಡತಗಳೇ ಕಾಣೆಯಾಗುತ್ತಿರುವುದು ಕಂಡುಬಂದಿತ್ತು. ಕೆಲವು ಭ್ರಷ್ಟಾಚಾರಗಳು ಕೂಡ ನುಸುಳಲು ಇದು ಕಾರಣವಾಗಿತ್ತು. ಹೀಗಾಗಿ ಕಾಗದ ರಹಿತ ಇಲಾಖೆಯನ್ನಾಗಿ ಮಾಡುವ ನಿಟ್ಟಿನಲ್ಲಿ ಇ-ಆಡಳಿತ ಜಾರಿಗೆ ತಂದೆ. ನಕಲಿ ಮತದಾರರ ಪಟ್ಟಿಯನ್ನು ಗುರುತಿಸಿ ರದ್ದು ಮಾಡಿದ್ದೇನೆ. ಹೀಗೆ ಹಲವು ಕೆಲಸಗಳನ್ನು ಮಾಡಿದ ತೃಪ್ತಿ ನನಗಿದೆ ಎಂದರು ಜಿಲ್ಲಾಧಿಕಾರಿಗಳು.
ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವೆ
ಶಿವಮೊಗ್ಗ ಜಿಲ್ಲೆಯಲ್ಲಿ ಹಲವು ಸಮಸ್ಯೆಗಳಿವೆ. ಬಗರ್ ಹುಕುಂ, ಚರಂಡಿ, ಕುವೆಂಪು ರಂಗಮಂದಿರ, ಮಲೆನಾಡಿನಲ್ಲಿರುವ ಸಂಕಗಳು, ಮಳೆಯಿಂದಾದ ಅತಿವೃಷ್ಟಿ, ರಸ್ತೆ, ಸೇತುವೆಗಳ ದುರಸ್ತಿ ಹೀಗೆ ಹಲವು ಸಮಸ್ಯೆಗಳು ಈಗಾಗಲೇ ನನಗೆ ತಿಳಿದಿವೆ. ಅಧಿಕಾರಿಗಳೊಡನೆ ಸಮಸ್ಯೆಗಳ ಜೊತೆ ಚರ್ಚಿಸಿರುವೆ.
ಹಲವು ಆಡಳಿತ ಸುಧಾರಣಾ ಕ್ರಮಗಳನ್ನು ನಾನು ತೆಗೆದುಕೊಳ್ಳುತ್ತೇನೆ. ಒಳ್ಳೆಯ ಆಡಳಿತ ನೀಡಲು ಪ್ರಾಮಾಣಿಕವಾಗಿ ಸೇವೆ ಮಾಡುತ್ತೇನೆ. ಸರ್ಕಾರದ ನಿಯಮಗಳನ್ನು ಪಾಲನೆ ಮಾಡುತ್ತಲೇ ಜನಪರ ಆಡಳಿತ ನೀಡುತ್ತೇನೆ. ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಮೊದಲ ಆದ್ಯತೆ ನನ್ನದು ಎಂದು ತಿಳಿಸಿದ್ದಾರೆ ಜಿಲ್ಲಾಧಿಕಾರಿ ದಯಾನಂದ.