ಮಧು ಬಂಗಾರಪ್ಪ ಕಾಂಗ್ರೆಸ್ ಸೇರ್ಪಡೆಗೆ ಕೆಪಿಸಿಸಿ ಅಧ್ಯಕ್ಷರ ಮುದ್ರೆ; ಡಿಕೆಶಿ ಕೊಟ್ಟ ಅಭಯವೇನು?
ಬೆಂಗಳೂರು, ಮಾರ್ಚ್ 12: ಸೊರಬ ಕ್ಷೇತ್ರದ ಮಾಜಿ ಶಾಸಕ, ಜೆಡಿಎಸ್ ಮುಖಂಡ ಮಧು ಬಂಗಾರಪ್ಪ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರನ್ನು ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ ಶುಕ್ರವಾರ ಬೆಳಗ್ಗೆ ಭೇಟಿ ಮಾಡಿ, ಕಾಂಗ್ರೆಸ್ ಸೇರ್ಪಡೆ ಸಂಬಂಧ ಸಮಾಲೋಚನೆ ನಡೆಸಿದರು.
ಸದ್ಯ ಜೆಡಿಎಸ್ ಪಕ್ಷದ ಕಾರ್ಯಾಧ್ಯಕ್ಷರಾಗಿರುವ ಮಧು ಬಂಗಾರಪ್ಪ ಅವರು ಕಾಂಗ್ರೆಸ್ ಸೇರ್ಪಡೆ ಕುರಿತು ಕೆಪಿಸಿಸಿ ಅಧ್ಯಕ್ಷರ ಮಾತುಕತೆ ನಡೆಸಿದರು. ಮಧು ಬಂಗಾರಪ್ಪ ಗುರುವಾರವಷ್ಟೇ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದರು.
ಜೆಡಿಎಸ್ ಪಕ್ಷ ತೊರೆದು ಕಾಂಗ್ರೆಸ್ ಸೇರ್ಪಡೆಗೊಳ್ಳುತ್ತಿರುವ ಮಧು ಬಂಗಾರಪ್ಪ ಅವರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು, ಕಾಂಗ್ರೆಸ್ ಪಕ್ಷದ ಪರ ಈಗಿನಿಂದಲೇ ಕೆಲಸ ಮಾಡು, ಶಿವಮೊಗ್ಗ ಜಿಲ್ಲೆಯಲ್ಲಿ ಪ್ರವಾಸ ಮಾಡು ಎಂದು ತಿಳಿಸಿದ್ದಾರೆ.

ಅಧಿಕೃತ ಪಕ್ಷ ಸೇರ್ಪಡೆ ನಂತರ ಮತ್ತಷ್ಟು ಜವಾಬ್ದಾರಿ ಕೊಡುತ್ತೇವೆ, ರಾಜ್ಯ ಮಟ್ಟದ ಪಕ್ಷ ಸಂಘಟನೆಗೆ ಸೇರಿಸುತ್ತೇವೆ. ಯುವಜನತೆ ಗಮನದಲ್ಲಿಟ್ಟುಕೊಂಡು ಕೆಲಸ ಆರಂಭಿಸು, ಶೀಘ್ರದಲ್ಲೇ ಅಧಿಕೃತ ಕಾರ್ಯಕ್ರಮ ಇಟ್ಟುಕೊಳ್ಳೋಣ ಎಂದು ಮಧು ಬಂಗಾರಪ್ಪಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅಭಯ ನೀಡಿದ್ದಾರೆ.
ಇಬ್ಬರ ಮಾತುಕತೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, "ನನ್ನ ರಾಜಕಾರಣಕ್ಕೆ ಮಾಜಿ ಸಿಎಂ ಎಸ್.ಬಂಗಾರಪ್ಪ ಅವರು ಬೆಂಬಲವಾಗಿದ್ದರು. ನನ್ನನ್ನು ಬೆಳೆಸಿದ ಧೀಮಂತ ನಾಯಕ ಅವರು. ಯುವಕರನ್ನು ಸೆಳೆಯುವ ಶಕ್ತಿ ಬಂಗಾರಪ್ಪ ಅವರಲ್ಲಿ ಇತ್ತು'' ಎಂದು ಹೇಳಿದರು.

"ನನ್ನಂತಹ ಅನೇಕ ಜನರನ್ನು ಬಂಗಾರಪ್ಪನವರು ಬೆಳೆಸಿದ್ದಾರೆ, ಕಾಂಗ್ರೆಸ್ ಕಟ್ಟುವಲ್ಲಿ ಬಂಗಾರಪ್ಪ ಅವರು ಪ್ರಮುಖರು. ಆದರೆ ಅನೇಕ ಕಾರಣಗಳಿಂದ ಪಕ್ಷ ತೊರೆದು ಹೋಗಿದ್ದರು. ಅವರ ಮಗ ಮಧು ಸೆಳೆಯುವ ಪ್ರಯತ್ನ ಮಾಡಿದ್ದೆವು. ಆದರೆ ಒಳ್ಳೆಯ ಸಮಯಕ್ಕೆ ಕಾಯ್ತಾ ಇದ್ದರು'' ಎಂದರು.
"ಮಧು ಬಂಗಾರಪ್ಪ ಅವರು ಹುಟ್ಟು ಕಾಂಗ್ರೆಸ್ಸಿಗರಾಗಿದ್ದಾರೆ, ಪಕ್ಷ ಸೇರ್ತಾರೆ ಅಂತ ಎಐಸಿಸಿಯಿಂದ ಸೂಚನೆ ಬಂತು. ಬಂಗಾರಪ್ಪ ಅವರಿಗೆ ದೊಡ್ಡ ಅಭಿಮಾನಿ ಬಳಗವಿದೆ. ಅವರ ಅಭಿಪ್ರಾಯ ಪಡೆದು ಮಧು ಕಾಂಗ್ರೆಸ್ ಸೇರುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಕಾಗೋಡು ತಿಮ್ಮಪ್ಪ, ಜನಾರ್ಧನ್ ಪೂಜಾರಿ ಹಾಗೂ ಬಂಗಾರಪ್ಪ ಅಂತವರ ಕೊಡುಗೆ ಮರೆಯುವಾಗಿಲ್ಲ'' ಎಂದು ಡಿಕೆಶಿ ಅಭಿಪ್ರಾಯಪಟ್ಟರು.

ಮಧು ಬಂಗಾರಪ್ಪ ಇಂದು ನಮ್ಮ ಪಕ್ಷ ಸೇರುವುದಕ್ಕೆ ಬಂದಿದ್ದಾರೆ, ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸ್ವಾಗತ ಮಾಡ್ತೇನೆ. ಶೀಘ್ರದಲ್ಲೇ ದೊಡ್ಡ ಕಾರ್ಯಕ್ರಮ ನಡೆಸುತ್ತೇವೆ ಎಂದು ಸದಾಶಿವನಗರದ ನಿವಾಸದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದರು.
ಇದೇ ವೇಳೆ ಮಧು ಬಂಗಾರಪ್ಪ ಅವರು ತಮ್ಮ ಬೆಂಬಲಿತ ನಾಯಕರನ್ನು ಡಿ.ಕೆ ಶಿವಕುಮಾರ್ ಅವರಿಗೆ ಪರಿಚಯ ಮಾಡಿಕೊಡುವ ಸಂದರ್ಭದಲ್ಲಿ ಕಾಂಗ್ರೆಸ್ ಸಹ ಸದಸ್ಯ, ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ ಉಪಸ್ಥಿತರಿದ್ದರು.












Click it and Unblock the Notifications