ಸಾವರ್ಕರ್ ಫೋಟೋ ವಿವಾದ: ಸಹಜ ಸ್ಥಿತಿಗೆ ಮರಳಿದ ಶಿವಮೊಗ್ಗ ನಗರ, ಇವತ್ತು ಪರಿಸ್ಥಿತಿ ಹೇಗಿದೆ?
ಶಿವಮೊಗ್ಗ, ಆಗಸ್ಟ್, 17: ಸಾವರ್ಕರ್ ಫ್ಲೆಕ್ಸ್ ವಿವಾದದ ಹಿನ್ನೆಲೆ ಶಿವಮೊಗ್ಗ ನಗರದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಈ ಹಿನ್ನೆಲೆ ಸೆಕ್ಷನ್ 144ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಮಂಗಳವಾರ ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಹಾಗೂ ಅಂಗಡಿಗಳನ್ನು ಬಂದ್ ಮಾಡಿಸಲಾಗಿತ್ತು. ಇಂದು ನಗರ ಸಹಜ ಸ್ಥಿತಿಗೆ ಮರಳುತ್ತಿದ್ದು, ಶಾಲೆ, ಕಾಲೇಜುಗಳು ಪುನಾರಂಭವಾಗಿವೆ.
ಜನರ ಓಡಾಟ ಮತ್ತು ವಾಹನ ಸಂಚಾರವು ಕೂಡ ನಿಧಾನಗತಿಯಲ್ಲಿ ಆರಂಭವಾಗುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಎಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜನೆ ಮಾಡಲಾಗಿದೆ. ನಗರದ ಎಲ್ಲಾ ಶಾಲೆ, ಕಾಲೇಜುಗಳು ಇಂದಿನಿಂದ ಪುನಾರಂಭವಾಗಿವೆ. ನಗರದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು, ಹಲವು ಕಡೆಗಳಲ್ಲಿ ಪೋಷಕರೇ ಮಕ್ಕಳನ್ನು ಶಾಲಾ, ಕಾಲೇಜುಗಳಿಗೆ ಕರೆತರುತ್ತಿದ್ದಾರೆ.
ವಾಹನ ಸಂಚಾರ ಹೇಗಿದೆ?: ಎರಡು ದಿನಗಳಿಂದ ನಿಶಬ್ದವಾಗಿದ್ದ ಶಿವಮೊಗ್ಗ ನಗರದಲ್ಲಿ ಇದೀಗ ನಿಧಾನಗತಿಯಲ್ಲಿ ಬಸ್ಗಳು ರಸ್ತೆಗಿಳಿದಿವೆ. ಸಿಟಿ ಬಸ್ಗಳು ಎಂದಿನಂತೆ ಸಂಚರಿಸುತ್ತಿವೆ. ಇನ್ನು ಕೆಎಸ್ಆರ್ಟಿಸಿ ಬಸ್ಗಳು ಕೂಡ ಎಂದಿನಂತೆ ಸಂಚರಿಸುತ್ತಿವೆ. ಶಿವಮೊಗ್ಗ- ಭದ್ರಾವತಿ ಮತ್ತು ಹೊರ ಜಿಲ್ಲೆಗಳಿಗೂ ಬಸ್ಗಳ ಸಂಚಾರ ಆರಂಭವಾಗಿದೆ. ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಪ್ರಾಯಣಿಕರ ಸಂಖ್ಯೆ ಸಹಜ ಸ್ಥಿತಿಯಲ್ಲಿದೆ. ಇನ್ನು ಆಟೋಗಳ ವಿಚಾರಕ್ಕೆ ಬಂದರೆ, ಬೆರಳಣಿಕೆಯಷ್ಟು ಆಟೋಗಳು ರಸ್ತೆಗೆ ಇಳಿದಿವೆ. ಬಸ್ ನಿಲ್ದಾಣ, ರೈಲ್ವೆ ನಿಲ್ದಾಣಗಳ ಬಳಿ ಆಟೋಗಳು ಹೆಚ್ಚಿದ್ದು, ನಗರದ ವಿವಿಧ ಸ್ಟಾಂಡ್ಗಳಲ್ಲಿ ಆಟೋಗಳ ಸಂಖ್ಯೆ ಕಡಿಮೆ ಇದೆ.
ಆತಂಕದಲ್ಲಿರುವ ವರ್ತಕರು: ಸಾವರ್ಕರ್ ಫ್ಲೆಕ್ಸ್ ವಿವಾದದಿಂದ ನಗರದಲ್ಲಿ ವ್ಯಾಪಾರ, ವಹಿವಾಟು ಸ್ಥಗಿತಗೊಂಡು ಕೋಟ್ಯಂತರ ರೂಪಾಯಿ ನಷ್ಟವಾಗಿದೆ. ಇಂದು ನಗರ ಸಹಜಸ್ಥಿತಿಗೆ ಮರಳುತ್ತಿರುವುದರಿಂದ ಅಂಗಡಿಗಳ ಬಾಗಿಲಲು ತೆರೆಯುತ್ತಿದ್ದಾರೆ. ಕೆಲವೆಡೆ ವ್ಯಾಪಾರ ನಡೆಸುತ್ತಿದ್ದ ಸಂದರ್ಭದಲ್ಲಿ ಪೊಲೀಸರು ಅಂಗಡಿಗಳನ್ನು ಬಂದ್ ಮಾಡಿಸಿದ್ದಾರೆ. ಇನ್ನು ಕೆಲವೆಡೆ ಅಂಗಡಿ ಮಾಲೀಕರು ಆತಂಕದಲ್ಲಿಯೇ ವ್ಯಾಪಾರ ಮಾಡುತ್ತಿದ್ದಾರೆ. ಯಾವ ಸಂದರ್ಭದಲ್ಲಿ ಏನಾಗುತ್ತದೆಯೋ ಎಂಬ ಭೀತಿಯಲ್ಲಿ ವ್ಯಾಪಾರ ಮಾಡುತ್ತಿದ್ದಾರೆ. ಮತ್ತೊಂದೆಡೆ ಹಲವರು ಯಾವುದೇ ವಸ್ತುಗಳನ್ನು ಅಂಗಡಿಯಿಂದ ಹೊರಗಡೆ ಇಡದೇ ಬಾಗಿಲನ್ನಷ್ಟೇ ತೆಗೆದು ವ್ಯಾಪಾರ, ವಹಿವಾಟು ನಡೆಸುತ್ತಿದ್ದಾರೆ.
ಪೊಲೀಸ್ ಬಂದೋಬಸ್ತ್: ಸಿಆರ್ ಪಿಸಿ ಸೆಕ್ಷನ್ 144ರ ಅನ್ವಯ ನಿಷೇಧಾಜ್ಞೆ ಜಾರಿಯಲ್ಲಿ ಇರುವುದರಿಂದ ನಗರದಾದ್ಯಂತ ಪೊಲೀಸ್ ಬಂದೋಬಸ್ತ್ ಮುಂದುವರೆಸಲಾಗಿದೆ. ಅಮೀರ್ ಅಹಮ್ಮದ್ ಸರ್ಕಲ್, ಗಾಂಧಿ ಬಜಾರ್ ಮತ್ತು ಹೆಳೆ ಶಿವಮೊಗ್ಗ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ದೊಡ್ಡಪೇಟೆ, ತುಂಗಾ ನಗರ ಮತ್ತು ಕೋಟೆ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಹೆಚ್ಚಿನ ನಿಗಾ ವಹಿಸಲಾಗಿದೆ.