ಶಿವಮೊಗ್ಗ ರಾಜಕೀಯ : ತವರು ಜಿಲ್ಲೆ ಗೆಲ್ಲಲು ಬಿಎಸ್ವೈ ತಂತ್ರವೇನು?
Recommended Video

ಶಿವಮೊಗ್ಗ, ಡಿಸೆಂಬರ್ 29 : ಕರ್ನಾಟಕ ಬಿಜೆಪಿ ಅಧ್ಯಕ್ಷ, 2018ರ ಚುನಾವಣೆ ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್.ಯಡಿಯೂರಪ್ಪ ತವರು ಜಿಲ್ಲೆ ಶಿವಮೊಗ್ಗದಲ್ಲಿ ಪರಿವರ್ತಯಾ ಯಾತ್ರೆ ಕೈಗೊಂಡಿದ್ದಾರೆ. ಯಾತ್ರೆಗೆ ಉತ್ತಮ ಬೆಂಬಲವಾಗುತ್ತಿದೆ, ಆದರೆ, ಅಭ್ಯರ್ಥಿಗಳ ಬಗ್ಗೆ ಪ್ರಶ್ನೆಗಳು ಎದ್ದಿವೆ.
ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿ ಶಾಸಕರು ಇರುವುದು ಯಡಿಯೂರಪ್ಪ ತವರು ಕ್ಷೇತ್ರ ಶಿಕಾರಿಪುರದಲ್ಲಿ ಮಾತ್ರ. ರಾಜ್ಯದಲ್ಲಿ 150 ಸ್ಥಾನ ಗೆಲ್ಲಲು ಹೊರಟಿರುವ ಅವರಿಗೆ ತವರು ಕ್ಷೇತ್ರದಲ್ಲಿ ಮೊದಲು ಗೆಲುವು ಸಾಧಿಸುವುದು ಮುಖ್ಯವಾಗಿದೆ.
ಸೊರಬ, ಭದ್ರಾವತಿ, ಶಿವಮೊಗ್ಗ ಗ್ರಾಮಾಂತರ ಕ್ಷೇತ್ರಗಳು ಜೆಡಿಎಸ್ ವಶದಲ್ಲಿವೆ. ತೀರ್ಥಹಳ್ಳಿ, ಸಾಗರ ಮತ್ತು ಶಿವಮೊಗ್ಗ ನಗರ ಕ್ಷೇತ್ರಗಳು ಕಾಂಗ್ರೆಸ್ ವಶದಲ್ಲಿವೆ. ಶಿಕಾರಿಪುರದಲ್ಲಿ ಯಡಿಯೂರಪ್ಪ ಪುತ್ರ ಬಿ.ವೈ.ರಾಘವೇಂದ್ರ ಶಾಸಕರು.
ಜಿಲ್ಲೆಯ 7 ಕ್ಷೇತ್ರಗಳಲ್ಲಿಯೂ ಬಿಜೆಪಿ ಅಭ್ಯರ್ಥಿಗಳು ಗೆಲ್ಲಬೇಕು ಎಂಬುದು ಯಡಿಯೂರಪ್ಪ ಅವರ ಗುರಿ. ಅದಕ್ಕಾಗಿ ತಂತ್ರಗಳನ್ನು ರೂಪಿಸುತ್ತಿದ್ದಾರೆ. ಆದರೆ, ಕೆಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಯಾರು? ಎಂಬುದು ಇನ್ನೂ ಅಂತಿಮವಾಗಿಲ್ಲ.

ಕೆ.ಎಸ್.ಈಶ್ವರಪ್ಪ ಪುತ್ರ ಸ್ಪರ್ಧೆ?
ಗುರುವಾರ ಸಂಜೆ ಶಿವಮೊಗ್ಗ ನಗರದಲ್ಲಿ ಪರಿವರ್ತನಾಯಾತ್ರೆ ಸಮಾವೇಶ ನಡೆಯಿತು. ನಿರೀಕ್ಷಿತ ಜನರು ಸೇರಲಿಲ್ಲ ಎಂಬುದು ಕೆಲವರ ಅಭಿಪ್ರಾಯ. ಕ್ಷೇತ್ರದ ಶಾಸಕರು ಕಾಂಗ್ರೆಸ್ನ ಪ್ರಸನ್ನ ಕುಮಾರ್. ಮುಂದಿನ ಚುನಾವಣೆಯಲ್ಲಿ ಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಕ್ಷೇತ್ರದಲ್ಲಿ ಕಣಕ್ಕಿಳಿಯಬಹುದು ಎಂಬ ಅಂದಾಜಿತ್ತು. ಸದ್ಯದ ಮಾಹಿತಿ ಪ್ರಕಾರ ಈಶ್ವರಪ್ಪ ಪುತ್ರ, ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಇ.ಕಾಂತೇಶ್ ಸ್ಪರ್ಧಿಸಬಹುದು ಎನ್ನುವುದು ಸುದ್ದಿ.

ಈಶ್ವರಪ್ಪ v/s ರುದ್ರೇಗೌಡ
2018ರ ಚುನಾವಣೆಯಲ್ಲಿ ಟಿಕೆಟ್ಗಾಗಿ ಬಿಜೆಪಿ ಜಿಲ್ಲಾಧ್ಯಕ್ಷ ರುದ್ರೇಗೌಡ ಮತ್ತು ಕೆ.ಎಸ್.ಈಶ್ವರಪ್ಪ ನಡುವೆ ಪೈಪೋಟಿ ನಡೆಯಲಿದೆ. ಶಿವಮೊಗ್ಗ ನಗರದಲ್ಲಿ ಟಿಕೆಟ್ ಸಿಗದಿದ್ದರೆ ಈಶ್ವರಪ್ಪ ಅವರು ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಪುತ್ರನಿಗೆ ಟಿಕೆಟ್ ಕೊಡಿಸಲು ಮುಂದಾಗಬಹುದು.

ಸಾಗರ ಕ್ಷೇತ್ರದ ಟಿಕೆಟ್ ಯಾರಿಗೆ?
ಇನ್ನೂ ಸಾಗರ ಕ್ಷೇತ್ರದ ಶಾಸಕರು ಕಾಂಗ್ರೆಸ್ನ ಕಾಗೋಡು ತಿಮ್ಮಪ್ಪ. ಬಿಜೆಪಿಯಿಂದ ಈ ಬಾರಿ ಮಾಜಿ ಸಚಿವ ಹರತಾಳು ಹಾಲಪ್ಪ, ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಹೆಸರು ಕೇಳಿಬರುತ್ತಿದೆ. ಸಾಗರದಲ್ಲಿ ಗುರುವಾರ ನಡೆದ ಪರಿವರ್ತನಾಯಾತ್ರೆಯಲ್ಲಿ ಯಡಿಯೂರಪ್ಪ ಅಭ್ಯರ್ಥಿ ಯಾರು? ಎಂಬ ಗುಟ್ಟು ಬಿಟ್ಟುಕೊಟ್ಟಿಲ್ಲ.

ಹರತಾಳು ಹಾಲಪ್ಪ, ಕುಮಾರ್ ಬಂಗಾರಪ್ಪ
ಇನ್ನು ಸೊರಬ ಕ್ಷೇತ್ರದಲ್ಲಿ ಹರತಾಳು ಹಾಲಪ್ಪ ಸ್ಪರ್ಧಿಸಲಿದ್ದಾರೆಯೇ? ಎಂಬ ಪ್ರಶ್ನೆ ಎದ್ದಿದೆ. ಕಾಂಗ್ರೆಸ್ನಲ್ಲಿದ್ದ ಕುಮಾರ್ ಬಂಗಾರಪ್ಪ ಬಿಜೆಪಿ ಸೇರಿದ್ದಾರೆ. ಆದ್ದರಿಂದ, ಅವರು ಅಭ್ಯರ್ಥಿಯಾಗಬಹುದು ಎಂಬುದು ಲೆಕ್ಕಾಚಾರ. ಕ್ಷೇತ್ರ ಸದ್ಯ ಜೆಡಿಎಸ್ ವಶದಲ್ಲಿದ್ದು ಮಧು ಬಂಗಾರಪ್ಪ ಶಾಸಕರು.

ಶಿಕಾರಿಪುರದಲ್ಲಿ ಯಾರ ಸ್ಪರ್ಧೆ?
ಬಿ.ಎಸ್.ಯಡಿಯೂರಪ್ಪ ಸ್ವ ಕ್ಷೇತ್ರ ಶಿಕಾರಿಪುರದಲ್ಲಿ ಈ ಬಾರಿ ಅಭ್ಯರ್ಥಿ ಯಾರು ಎಂಬುದೂ ಇನ್ನೂ ನಿಗೂಢವಾಗಿದೆ. ಯಡಿಯೂರಪ್ಪ ಉತ್ತರ ಕರ್ನಾಟಕ ಭಾಗದಿಂದ ಸ್ಪರ್ಧಿಸಲಿದ್ದಾರೆ ಎಂಬ ಚರ್ಚೆ ಇನ್ನೂ ನಡೆಯುತ್ತಿದೆ. ಪರಿವರ್ತನಾಯಾತ್ರೆಯಲ್ಲಿ ಯಡಿಯೂರಪ್ಪ ಈ ಬಗ್ಗೆ ಗುಟ್ಟುಬಿಟ್ಟುಕೊಟ್ಟಿಲ್ಲ. ಯಡಿಯೂರಪ್ಪ ಶಿಕಾರಿಪುರದಿಂದ ಕಣಕ್ಕಿಳಿದರೆ ಬಿ.ವೈ.ರಾಘವೇಂದ್ರ ಎಲ್ಲಿಂದ ಸ್ಪರ್ಧಿಸುವರು?.

ತೀರ್ಥಹಳ್ಳಿಯಲ್ಲಿ ಅಭ್ಯರ್ಥಿ ಗೊಂದಲವಿಲ್ಲ
ತೀರ್ಥಹಳ್ಳಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮಾಜಿ ಶಾಸಕ ಆರಗ ಜ್ಞಾನೇಂದ್ರ ಎನ್ನುವುದು ಖಚಿತ. ಈಗಾಗಲೇ ಅವರು ಪ್ರಚಾರ ಆರಂಭಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿಯೂ ಅವರ ಪರವಾಗಿ ಭರ್ಜರಿ ಪ್ರಚಾರ ಸಾಗಿದೆ. ಕ್ಷೇತ್ರದ ಶಾಸಕರು ಕಾಂಗ್ರೆಸ್ನ ಕಿಮ್ಮನೆ ರತ್ನಾಕರ್.

ಭದ್ರಾವತಿಯಲ್ಲಿ ಅಭ್ಯರ್ಥಿ ಯಾರು?
ಇನ್ನೂ ಭದ್ರಾವತಿ ಕ್ಷೇತ್ರದಲ್ಲಿ ಬಿಜೆಪಿಗೆ ಯಾವಾಗಲೂ ಹಿನ್ನಡೆಯಾಗುತ್ತಿದೆ. ಬಿ.ಕೆ.ಸಂಗಮೇಶ್ವರ, ಜೆಡಿಎಸ್ನ ಅಪ್ಪಾಜಿ ಗೌಡ ವರ್ಷಕೊಬ್ಬರು ಗೆಲ್ಲುತ್ತಾ ಬಂದಿದ್ದಾರೆ. ಕಳೆದ ಚುನಾವಣೆಯಲ್ಲಿ ಸಿದ್ದರಾಮಯ್ಯ ಆಪ್ತ ಸಿ.ಎಂ.ಇಬ್ರಾಹಿಂ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋಲು ಕಂಡಿದ್ದರು. ಎಸ್.ಬಿ.ಶಿವಾಜಿರಾವ್ ಸಿಂಧ್ಯಾ ಬಿಜೆಪಿಯಿಂದ ಕಣಕ್ಕಿಳಿದಿದ್ದರು. ಆದರೆ ಪಡೆದ ಮತಗಳು 1,799 ಮಾತ್ರ.












Click it and Unblock the Notifications