ಸರ್ಕಾರಿ ಉದ್ಯೋಗ ಬೇಕೇ? ಹಾಗಾದರೆ ತಂಬಾಕು ಬಿಡಿ
ರಾಂಚಿ, ಡಿಸೆಂಬರ್ 3: ಸರ್ಕಾರಿ ಉದ್ಯೋಗವನ್ನು ಬಯಸುತ್ತಿರುವವರಿಗೆ ಜಾರ್ಖಂಡ್ ರಾಜ್ಯ ಸರ್ಕಾರ ಹೊಸ ನಿಯಮವನ್ನು ರೂಪಿಸಿದೆ. ಸರ್ಕಾರಿ ನೌಕರಿ ಅರಸುತ್ತಿರುವವರು ತಾವು ತಂಬಾಕು ಜಗಿಯುವ ಅಥವಾ ಧೂಮಪಾನ ಮಾಡುವ ನಿಗ್ರಹಿಸಿಕೊಳ್ಳುತ್ತೇನೆ ಎಂದು ಅಫಿಡವಿಟ್ ಮೂಲಕ ತಿಳಿಸಬೇಕು ಎಂಬುದನ್ನು ಕಡ್ಡಾಯಗೊಳಿಸಲಾಗಿದೆ.
ಈ ನಿಯಮವು 2021ರ ಏಪ್ರಿಲ್ 1ರಿಂದ ಜಾರ್ಖಂಡ್ನಲ್ಲಿ ಜಾರಿಯಾಗಲಿದೆ. ತಂಬಾಕು ಜಗಿಯುವ ಮತ್ತು ಧೂಮಪಾನ ಮಾಡುವ ಚಟವನ್ನು ತಡೆಯುವ ಪ್ರಯತ್ನವಾಗಿ ಈ ನಿಯಮ ಜಾರಿ ಮಾಡಲಾಗಿದೆ.
ಮುಖ್ಯ ಕಾರ್ಯದರ್ಶಿ ಸುಖದೇವ್ ಸಿಂಗ್ ಅವರ ನೇತೃತ್ವದಲ್ಲಿ ಮಂಗಳವಾರ ನಡೆದ ತಂಬಾಕು ನಿಯಂತ್ರಣ ಸಂಯೋಜನಾ ಸಮಿತಿಯ ಸಭೆಯಲ್ಲಿ, ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವ ಅಂಗಡಿಗಳಲ್ಲಿ ಇನ್ನು ಮುಂದೆ ಟೀ, ಬಿಸ್ಕತ್ನಂತಹ ಖಾದ್ಯ ಪದಾರ್ಥಗಳನ್ನು ಮಾರಾಟ ಮಾಡುವಂತಿಲ್ಲ ಎಂದೂ ನಿರ್ಧರಿಸಲಾಗಿದೆ. ಜಾರ್ಖಂಡ್ನಲ್ಲಿ ಈಗಾಗೇ ತಂಬಾಕು ನಿಯಂತ್ರಣ ಕಾಯ್ದೆ ಜಾರಿಯಲ್ಲಿದ್ದು, ಕೇವಲ 150 ವ್ಯಾಪಾರಿಗಳು ಪರವಾನಗಿ ಪಡೆದುಕೊಂಡಿದ್ದಾರೆ. ಮುಂದೆ ಓದಿ.

ತಂಬಾಕು ಮುಕ್ಯ ಜಿಲ್ಲೆಗಳ ಘೋಷಣೆ
ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವವರು ಅಂಗಡಿಗಳಲ್ಲಿ ಟೀ ಮತ್ತು ಬಿಸ್ಕತ್ಗಳಂತಹ ಖಾದ್ಯಗಳನ್ನು ಮಾರುವುದು ಅಕ್ರಮವಾಗಿದೆ. ರಾಂಚಿ, ಧನಬಾದ್, ಬೊಕಾರೊ, ಕುಂತಿ, ಸರೈಕೆಲಾ-ಖರ್ಸಾವನ್ ಮತ್ತು ಹಜಾರಿಬಾಗ್ಗಳನ್ನು ತಂಬಾಕು ಮುಕ್ತ ಜಿಲ್ಲೆಗಳೆಂದು ಘೋಷಿಸಲು ಕೂಡ ಸಭೆಯಲ್ಲಿ ನಿರ್ಧರಿಸಲಾಯಿತು.

ಅಫಿಡವಿಟ್ ಸಲ್ಲಿಕೆ ಕಡ್ಡಾಯ
'ಸರ್ಕಾರಿ ಉದ್ಯೋಗದಲ್ಲಿ ಇರುವವರು ಕೂಡ ತಾವು ಯಾವುದೇ ರೀತಿಯಲ್ಲಿ ತಂಬಾಕು ಸೇವನೆ ಮಾಡುವುದಿಲ್ಲ ಎಂಬ ಅಫಿಡವಿಟ್ ಸಲ್ಲಿಸಬೇಕಾಗುತ್ತದೆ' ಎಂದು ಆರೋಗ್ಯ, ಶಿಕ್ಷಣ ಮತ್ತು ಕೌಟುಂಬಿಕ ಕಲ್ಯಾಣ ಇಲಾಖೆ ಹೇಳಿಕೆ ತಿಳಿಸಿದೆ.
ಪ್ರವೇಶ ದ್ವಾರಗಳ ಬಳಿಯೇ ನಿಷೇಧಿತ ಬ್ರ್ಯಾಂಡ್ಗಳ ಗುಟ್ಕಾಗಳ ಮಾರಾಟವನ್ನು ತಡೆಯುವಂತೆ ಮತ್ತು ಅದನ್ನು ರಾಜ್ಯದಾದ್ಯಂತ ಕಠಿಣವಾಗಿ ಜಾರಿಗೆ ತರುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಉಗಿಯುವುದು ನಿಷೇಧ
ಶಾಲಾ ಆವರಣದ 100 ಮೀಟರ್ ಸುತ್ತಮುತ್ತ ಎಲ್ಲಿಯೂ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡದಂತೆ ಖಾತರಿ ವಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಹಾಗೆಯೇ ನಿಯಮ ಉಲ್ಲಂಘಿಸುವ ಅಂಗಡಿ ಮಾಲೀಕರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಆದೇಶಿಸಲಾಗಿದೆ.
ಏಪ್ರಿಲ್ ತಿಂಗಳಲ್ಲಿ ರಾಜ್ಯ ಸರ್ಕಾರವು ಕೋವಿಡ್ ಪ್ರಕರಣಗಳ ಹೆಚ್ಚಳದ ಹಿನ್ನೆಲೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಉಗಿಯುವುದನ್ನು ತಡೆಯಲು ಎಲ್ಲ ತಂಬಾಕು ಉತ್ಪನ್ನಗಳ ಮೇಲೆ ನಿಷೇಧ ಹೇರಿತ್ತು.
Recommended Video

ರಾಜಸ್ಥಾನವೂ ಜಾರಿಗೆ ತಂದಿತ್ತು
ಈ ರೀತಿಯ ನಿಯಮ ದೇಶದಲ್ಲಿ ಹೊಸದೇನಲ್ಲ. 2014ರಲ್ಲಿ ರಾಜಸ್ಥಾನ ಸರ್ಕಾರವು ಸರ್ಕಾರಿ ಉದ್ಯೋಗಿಗಳು ಧೂಮಪಾನ ಮಾಡದಂತೆ ಸೂಚನೆ ಹೊರಡಿಸಿತ್ತು. ಸರ್ಕಾರಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸುವ ಆಕಾಂಕ್ಷಿಗಳು ತಾವು ಸಿಗರೇಟ್ ಸೇದುವುದಿಲ್ಲ ಮತ್ತು ಗುಟ್ಕಾ ಸೇವಿಸುವುದಿಲ್ಲ ಎಂದು ಕಾಗದದ ಮೇಲೆ ಪ್ರತಿಜ್ಞೆ ಕೈಗೊಳ್ಳುವಂತೆ ರಾಜ್ಯ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಹೇಳಿತ್ತು.












Click it and Unblock the Notifications