Breaking: ಜಾರ್ಖಂಡ್, ಪ್ರೀತಿಸಲು ಒಪ್ಪದ ಯುವತಿಗೆ ಬೆಂಕಿ, ಸಾವು
ರಾಂಚಿ, ಆಗಸ್ಟ್ 29: ತನ್ನ ಪ್ರಸ್ತಾವನೆಯನ್ನು ತಿರಸ್ಕರಿಸಿದ ಕೋಪದಲ್ಲಿ ಮೇಲೆ ಜಾರ್ಖಂಡ್ನ ದುಮ್ಕಾ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ಯುವತಿಗೆ ಬೆಂಕಿ ಹಚ್ಚಿ ಕೊಲೆ ಮಾಡಿದ್ದಾನೆ. ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಯುವತಿ ಸಾವನ್ನಪ್ಪಿದ್ದು, ಭಾರೀ ಆಕ್ರೋಶ ಉಂಟಾಗಿದೆ.
12 ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದ 19 ವರ್ಷದ ಯುವತಿಯ ಹತ್ಯೆಯಿಂದಾಗಿ ದುಮ್ಕಾ ಜಿಲ್ಲೆಯಲ್ಲಿ ಪ್ರತಿಭಟನೆ ಭುಗಿಲೆದ್ದಿದೆ. ಜನರಿಗೆ ಶಾಂತವಾಗಿರುವಂತೆ ಮನವಿ ಮಾಡಿರುವ ಪೊಲೀಸರು ಜಿಲ್ಲೆಯಲ್ಲಿ ಸೆಕ್ಷನ್ 144 ಜಾರಿಗೊಳಿಸಿದ್ದಾರೆ.
ಜಾರ್ಖಂಡ್ ಸಿಎಂ ಶಾಸಕ ಸ್ಥಾನದಿಂದ ಅನರ್ಹ; ಮುಂದೇನು ಕಥೆ?
ಬೆಂಕಿ ಹಚ್ಚಿ ವಿದ್ಯಾರ್ಥಿನಿಯ ಹತ್ಯೆಗೆ ಕಾರಣವಾದ ಆರೋಪಿ ಕಟ್ಟಡ ಕಾರ್ಮಿಕ ಶಾರುಖ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
"ಆರೋಪಿ ಶಾರುಖ್ನನ್ನು ಬಂಧಿಸಿದ್ದೇವೆ. ತ್ವರಿತ ವಿಚಾರಣೆಗಾಗಿ ನಾವು ತ್ವರಿತ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸುತ್ತೇವೆ. ಜನರು ನಮಗೆ ಸಹಕಾರ ನೀಡುತ್ತಿದ್ದಾರೆ. ಶಾಂತಿ ಕಾಪಾಡುವಂತೆ ನಾವು ಜನರಿಗೆ ಮನವಿ ಮಾಡುತ್ತೇವೆ. ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಜಿಲ್ಲೆಯಲ್ಲಿ ಸೆಕ್ಷನ್ 144 ವಿಧಿಸಲಾಗಿದೆ" ಎಂದು ದುಮ್ಕಾ ಎಸ್ಪಿ ಅಂಬರ್ ಲಕ್ಡಾ ತಿಳಿಸಿದ್ದಾರೆ.
ಘಟನೆಯಿಂದ 90 ಪ್ರತಿಶತ ಸುಟ್ಟಗಾಯಗಳೊಂದಿಗೆ ಗಂಭೀರ ಸ್ಥಿತಿಯಲ್ಲಿದ್ದ 12 ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದ 19 ವರ್ಷದ ಯುವತಿಯನ್ನು ದುಮ್ಕಾದ ಫುಲೋ ಜಾನೋ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಆಕೆಯನ್ನು ಉತ್ತಮ ಚಿಕಿತ್ಸೆಗಾಗಿ ರಾಂಚಿಯ ರಾಜೇಂದ್ರ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ (RIMS) ಶಿಫಾರಸು ಮಾಡಲಾಗಿತ್ತು. ಭಾನುವಾರ ರಾಂಚಿಯ ರಿಮ್ಸ್ನಲ್ಲಿ ಯುವತಿ ಸುಟ್ಟ ಗಾಯಗಳಿಂದ ಸಾವನ್ನಪ್ಪಿದ್ದಾಳೆ ಎಂದು ದುಮ್ಕಾ ಪಟ್ಟಣ ಪೊಲೀಸ್ ಠಾಣೆಯ ಉಸ್ತುವಾರಿ ನಿತೀಶ್ ಕುಮಾರ್ ತಿಳಿಸಿದ್ದಾರೆ.
#WATCH | Jharkhand: Accused Shahrukh who set ablaze a class 12 girl in Dumka for allegedly turning down his proposal, was arrested on 23rd August.
— ANI (@ANI) August 29, 2022
The girl succumbed to her burn injuries yesterday, 28th August.
(In video: The accused from the day of his arrest - 23rd August) pic.twitter.com/PwkQuM8plt
'ಕಳೆದ ಮಂಗಳವಾರ ಬೆಳಗ್ಗೆ ಯುವತಿ ತನ್ನ ಮನೆಯಲ್ಲಿ ಗಾಢ ನಿದ್ದೆಯಲ್ಲಿದ್ದಾಗ ದುಮ್ಕಾ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಶಾರುಖ್ ಯುವತಿಯ ಮೇಲೆ ಕಿಟಕಿಯಿಂದ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ" ಎಂದು ಪೊಲೀಸರು ತಿಳಿಸಿದ್ದಾರೆ.
ಯುವತಿಯ ಹೇಳಿಕೆ ಪ್ರಕಾರ, ಆರೋಪಿಯು 10 ದಿನಗಳ ಹಿಂದೆ ತನ್ನ ಮೊಬೈಲ್ಗೆ ಕರೆ ಮಾಡಿ ಆತನ ಸ್ನೇಹಿತನಾಗಲು ಪೀಡಿಸುತ್ತಿದ್ದ ಎಂದು ಹೇಳಿದ್ದಾರೆ.
"ಸೋಮವಾರ ರಾತ್ರಿ 8 ಗಂಟೆ ಸುಮಾರಿಗೆ ನನಗೆ ಮತ್ತೆ ಕರೆ ಮಾಡಿ, ನಾನು ಮಾತನಾಡದಿದ್ದರೆ ನನ್ನನ್ನು ಕೊಲ್ಲುತ್ತೇನೆ ಎಂದು ಹೇಳಿದ್ದಾನೆ. ಬೆದರಿಕೆಯ ಬಗ್ಗೆ ನಾನು ನನ್ನ ತಂದೆಗೆ ತಿಳಿಸಿದ್ದೇನೆ, ಅವರು ಮಂಗಳವಾರ ವ್ಯಕ್ತಿಯ ಕುಟುಂಬದೊಂದಿಗೆ ಮಾತನಾಡುವುದಾಗಿ ಭರವಸೆ ನೀಡಿದರು. ಊಟ ಮಾಡಿ ನಾವು ಮಲಗಲು ಹೋದೆವು, ನಾನು ಇನ್ನೊಂದು ಕೋಣೆಯಲ್ಲಿ ಮಲಗಿದ್ದೆವು'.
"ಮಂಗಳವಾರ ಬೆಳಗ್ಗೆ, ನನ್ನ ಬೆನ್ನಿನಲ್ಲಿ ನೋವಾಗುತ್ತಿರುವಂತೆ ಆಯಿತು. ಏನೋ ಉರಿಯುತ್ತಿರುವ ವಾಸನೆ ಬರುತ್ತಿತ್ತು. ನಾನು ಕಣ್ಣು ತೆರೆದಾಗ ಅವನು ಓಡಿಹೋಗುತ್ತಿರುವುದನ್ನು ನೋಡಿದೆ. ನಾನು ನೋವಿನಿಂದ ಕಿರುಚಲು ಪ್ರಾರಂಭಿಸಿದೆ. ನನ್ನ ತಂದೆಯ ಕೋಣೆಗೆ ಹೋದೆ, ನನ್ನ ಪೋಷಕರು ಬೆಂಕಿಯನ್ನು ನಂದಿಸಿ ನನ್ನ ಆಸ್ಪತ್ರೆಗೆ ಎತ್ತಿಕೊಂಡು ಹೋದರು" ಎಂದು ಯುವತಿ ಕಷ್ಟಪಟ್ಟು ಮಾತನಾಡಿದ್ದು, ಪೊಲೀಸರು ಹೇಳಿಕೆ ದಾಖಲಿಸಿಕೊಂಡಿದ್ದಾರೆ.