ರಾಮನಗರ: ಬೊಮ್ಮಾಯಿ ಸರ್ಕಾರದಲ್ಲಿಯಾದರೂ ಮಾವು ಸಂಸ್ಕರಣ ಘಟಕ ಅನುಷ್ಠಾನಗೊಳ್ಳುವುದೇ?
ರಾಮನಗರ, ಆಗಸ್ಟ್ 02: ರಾಮನಗರ ಜಿಲ್ಲೆ ರೈತರ ಬಹುವರ್ಷದ ಬೇಡಿಕೆಯಾದ ಮಾವು ಸಂಸ್ಕರಣ ಘಟಕಕ್ಕೆ ಕೊನೆಗೂ ಕಾಲಕೂಡಿ ಬಂದಿದೆ. ತಾಲೂಕಿನ ಬೈರಾಪಟ್ಟಣ ಗ್ರಾಮದ ಬಳಿ ಅಂತರಾಷ್ಟ್ರೀಯ ಗುಣಮಟ್ಟದ ಮಾವು ಹಾಗೂ ಇತರೆ ತೋಟಗಾರಿಕೆ ಬೆಳೆಗಳ ಸಂಸ್ಕರಣ ಘಟಕ ತಲೆ ಎತ್ತಲಿದೆ.
ಯೋಜನೆಯನ್ನು ಶೀಘ್ರವಾಗಿ ಅನುಷ್ಠಾನಗೊಳಿಸುವ ಸಂಬಂಧ ಇತ್ತೀಚಿಗೆ ಡಾ. ಅಶ್ವಥ್ ನಾರಾಯಣ, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಸೇರಿದಂತೆ ಹಿರಿಯ ಅಧಿಕಾರಿಗಳೊಂದಿಗೆ ವಿಧಾನಸೌಧದಲ್ಲಿ ಸಭೆ ನಡೆಸಿದ್ದು, ಈ ಯೋಜನೆಯ ಟೆಂಡರ್ ಕಾರ್ಯ ಪ್ರಗತಿಯಲ್ಲಿದೆ. ಇದೀಗ ನೂತನ ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರ ಯೋಜನೆ ಕಾಮಗಾರಿಯನ್ನು ತ್ವರಿತ ಅನುಷ್ಠಾನ ಮಾಡುವುದೇ ಎಂಬುದನ್ನು ಕಾದು ನೋಡಬೇಕಿದೆ.
ಗ್ರಾಮೀಣ ಭಾಗದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ: ಅನಿತಾ ಕುಮಾರಸ್ವಾಮಿ
ಬೈರಾಪಟ್ಟಣ ಗ್ರಾಮದ ಬಳಿ ಇರುವ ತೋಟಗಾರಿಕೆ ಇಲಾಖೆಯ ಜಾಗದಲ್ಲಿ ಈ ಘಟಕ ಆರಂಭವಾಗಲಿದ್ದು, ಈಗಾಗಲೇ ಈ ಸಂಬಂಧಪಟ್ಟ ತಾಂತ್ರಿಕ ಹಾಗೂ ಆಡಳಿತಾತ್ಮಕ ಕೆಲಸಗಳು ಆರಂಭಗೊಂಡಿವೆ. ವರ್ಷಕ್ಕೆ 3 ಲಕ್ಷ ಟನ್ಗಿಂತ ಹೆಚ್ಚು ಮಾವು ಉತ್ಪಾದಿಸುವ ರಾಮನಗರ ಜಿಲ್ಲೆಯಲ್ಲಿ ಮಾವು ಸಂಸ್ಕರಣ ಘಟಕ ಆರಂಭಿಸಬೇಕು ಎಂಬುದು ಮಾವು ಬೆಳೆಗಾರರ ಬಹುದಿನದ ಬೇಡಿಕೆಯಾಗಿತ್ತು.
ಸೀಸನ್ನಲ್ಲಿ ಸರಾಸರಿ 400 ಟನ್ ಮಾವು ಉತ್ಪಾದನೆ
ರಾಮನಗರ ಜಿಲ್ಲೆಯಲ್ಲಿ ಅತಿಹೆಚ್ಚು ಮಾವು ಬೆಳೆಯಲಾಗುತ್ತದೆ. ಮಾವಿನ ಸೀಸನ್ನಲ್ಲಿ ಸರಾಸರಿ 400 ಟನ್ ಮಾವು ಇಲ್ಲಿಂದ ಹೊರರಾಜ್ಯಕ್ಕೆ ರವಾನೆಯಾಗುತ್ತದೆ. ತಾಲೂಕಿನಲ್ಲಿರುವ ಮಾವಿನ ಮಾರುಕಟ್ಟೆ ಹೆಚ್ಚು ವಹಿವಾಟು ನಡೆಸುವ ಹೆಗ್ಗಳಿಕೆ ಹೊಂದಿದೆ. ಆದರೆ, ಮಾವಿನ ಹಣ್ಣಿನ ಶೇಖರಣೆ ಹಾಗೂ ಸಂಸ್ಕರಣೆಗೆ ಸೂಕ್ತವಾದ ಸೌಲಭ್ಯವಿಲ್ಲದ ಕಾರಣ ಸೂಕ್ತ ಬೆಲೆ ಸಿಗದೆ ಮಾವು ಬೆಳೆಗಾರರು ನಷ್ಟ ಅನುಭವಿಸಬೇಕಾಗಿತ್ತು.
ಮಾವು ಬೆಳೆಗಾರರಿಗೆ ಸಾಕಷ್ಟು ಸಮಸ್ಯೆ ಎದುರಾಗಿತ್ತು. ಈ ಎಲ್ಲಾ ಕಾರಣಕ್ಕಾಗಿ ರಾಮನಗರ ಜಿಲ್ಲೆಯಲ್ಲಿ ಮಾವು ಸಂಸ್ಕರಣ ಘಟಕ ಸ್ಥಾಪಿಸಬೇಕು ಎಂಬ ಕೂಗು ಎದ್ದಿತ್ತು. ಈ ಮನವಿಗೆ ಸ್ಪಂದಿಸಿದ ಅಂದಿನ ಸಿಎಂ ಎಚ್.ಡಿ. ಕುಮಾರಸ್ವಾಮಿ ತಮ್ಮ ಅಧಿಕಾರವಧಿಯಲ್ಲಿ ಯೋಜನೆಗೆ ಹಸಿರು ನಿಶಾನೆ ನೀಡಿದ್ದರು. ಆದರೆ, ಸೂಕ್ತ ಸ್ಥಳ ಹಾಗೂ ಇನ್ನಿತರ ಕಾರಣದಿಂದಾಗಿ ಯೋಜನೆ ಕಾರ್ಯರೂಪಕ್ಕೆ ಬರಲು ವಿಳಂಬವಾಗಿತ್ತು.
ಇತರ ಚಟುವಟಿಕೆಗಳಿಗೆ ಮಾಸ್ಟರ್ ಪ್ಲಾನ್ ಸಿದ್ಧ
ಪ್ರಾರಂಭದಲ್ಲಿ ತಾಲೂಕಿನ ಕೆಂಗಲ್ ಅಥವಾ ಕಣ್ವ ಪ್ರದೇಶದಲ್ಲಿ ಯೋಜನೆಯ ಅನುಷ್ಠಾನಕ್ಕೆ ಸ್ಥಳ ಗುರುತಿಸಲಾಗಿತ್ತು. ಆದರೆ, ಹಲವು ಕಾರಣಗಳಿಂದ ಆ ಸ್ಥಳಗಳು ಈ ಯೋಜನೆಗೆ ಸೂಕ್ತವಾಗಿಲ್ಲ ಎಂದು ಕೈ ಬಿಡಲಾಗಿತ್ತು. ಇದೀಗ ತಾಲೂಕಿನ ಬೈರಾಪಟ್ಟಣ ಗ್ರಾಮದ ಬಳಿ ಇರುವ ತೋಟಗಾರಿಕಾ ಇಲಾಖೆಯ ಜಾಗದಲ್ಲಿ ಮಾವು ಸೇರಿದಂತೆ ಇನ್ನಿತರ ತೋಟಗಾರಿಕೆ ಬೆಳೆಗಳ ಸಂಸ್ಕರಣೆ ಮತ್ತು ಇತರ ಚಟುವಟಿಕೆಗಳಿಗೆ ಮಾಸ್ಟರ್ ಪ್ಲಾನ್ ಸಿದ್ಧಗೊಂಡಿದೆ.
ತಲೆ ಎತ್ತಲಿದೆ ಅಂತರಾಷ್ಟ್ರೀಯ ಗುಣಮಟ್ಟದ ಸಂಸ್ಕರಣ ಘಟಕ
ಬೈರಾಪಟ್ಟಣ ಗ್ರಾಮದ ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿರುವ ತೋಟಗಾರಿಕಾ ಕ್ಷೇತ್ರದ 15 ಎಕರೆ ಪ್ರದೇಶದಲ್ಲಿ ಈ ಸಂಸ್ಕರಣ ಘಟಕ ತಲೆ ಎತ್ತಲಿದೆ. ಈ ಸಂಬಂಧ ಈಗಾಗಲೇ 10 ಕೋಟಿ ರೂ. ವೆಚ್ಚದ ನೀಲನಕ್ಷೆ ಸಿದ್ಧಗೊಂಡಿದ್ದು, 15 ಎಕರೆ ಜಮೀನಿನ ಪೈಕಿ ನಾಲ್ಕು ಎಕರೆಯಲ್ಲಿ ಮಾವು ಸಂಸ್ಕರಣ ಘಟಕ ಜೊತೆಗೆ ಮಾವು ಬೆಳೆಯ ತರಬೇತಿ, ತೋಟಗಾರಿಕೆ ಸಂಪತ್ತು ಮತ್ತು ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸುವ ಯೋಜನೆ ರೂಪಿಸಲಾಗಿದೆ. ನಾಲ್ಕು ಎಕರೆ ಪ್ರದೇಶದಲ್ಲಿ ಈ ಎಲ್ಲಾ ಅನುಕೂಲವನ್ನು ಅಂತರಾಷ್ಟ್ರೀಯ ಗುಣಮಟ್ಟದಲ್ಲಿ ಸ್ಥಾಪಿಸುವ ಯೋಜನೆ ಇದಾಗಿದೆ. ಉಳಿದ 11 ಎಕರೆ ಪ್ರದೇಶವನ್ನು ಸರ್ಕಾರ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ವಿವಿಧ ತೋಟಗಾರಿಕೆ ಬೆಳೆಗಳ ಉಪ ಉತ್ಪನ್ನಗಳ ಸಮುಚ್ಛಯ ನಿರ್ಮಿಸಲು ಕಾಯ್ದಿರಿಸಲಾಗಿದೆ.
ತಪ್ಪಲಿದೆ ರೈತರ ಆತಂಕ
ರಾಮನಗರ ಜಿಲ್ಲೆಯಲ್ಲಿ ಅತಿಹೆಚ್ಚು ಮಾವು ಬೆಳೆಯುವ ಕಾರಣ, ಕೆಲವೊಮ್ಮೆ ಬೆಳೆಗೆ ಸೂಕ್ತ ಬೆಲೆ ಸಿಗದೇ ರೈತರು ಸಮಸ್ಯೆಗೆ ಸಿಲುಕುತ್ತಿದ್ದರು. ಹೆಚ್ಚುವರಿಯಾದ ಬೆಳೆಯನ್ನು ಕೆಡದಂತೆ ಸಂಸ್ಕರಣಾ ಘಟಕದಲ್ಲಿ ದಾಸ್ತಾನಿಟ್ಟು, ಸೂಕ್ತ ಬೆಲೆ ಬಂದಾಗ ಮಾರಾಟ ಮಾಡಲು ಈ ಯೋಜನೆಯಿಂದ ಅನುಕೂಲವಾಗಲಿದೆ. ಈ ಯೋಜನೆಯಿಂದ ರೈತನಿಗೆ ಸೂಕ್ತ ಬೆಲೆ ದೊರೆಯುವ ಮೂಲಕ ಮಾವು ಬೆಳೆಗಾರರ ಮುಖದಲ್ಲಿ ಮಂದಹಾಸ ಮೂಡಲಿದೆ.
ಮಾಜಿ ಸಿಎಂ ಎಚ್ಡಿಕೆ ಪ್ರತಿಕ್ರಿಯೆ
"ರಾಮನಗರ ಜಿಲ್ಲೆಯಲ್ಲಿ ಮಾವು ಬೆಳೆಯನ್ನು ಹೆಚ್ಚಾಗಿ ಬೆಳೆಯುವ ಕಾರಣ ಜಿಲ್ಲೆಯ ರೈತರ ಅನುಕೂಲಕ್ಕಾಗಿ ಮಾವು ಸಂಸ್ಕರಣಾ ಘಟಕಕ್ಕೆ ನನ್ನ ಅಧಿಕಾರವಧಿಯಲ್ಲಿ ಅನುಮೋದನೆ ನೀಡಿದ್ದೆ. ಅದರೆ ಘಟಕಕ್ಕೆ ಸೂಕ್ತವಾದ ಸ್ಥಳ ಕೊರತೆ ಕಂಡುಬಂದ ಹಿನ್ನೆಲೆಯಲ್ಲಿ ಘಟಕ ಆರಂಭಿಸಲು ಸಾಧ್ಯವಾಗಿಲ್ಲ. ಇದೀಗ, ಬೈರಾಪಟ್ಟಣ ಗ್ರಾಮದ ಬಳಿ ಇರುವ ತೋಟಗಾರಿಕಾ ಕ್ಷೇತ್ರದ ಸ್ಥಳದಲ್ಲಿ ನಿರ್ಮಿಸಲು ಎಲ್ಲಾ ಪ್ರಕ್ರಿಯೆಗಳು ಮುಗಿದಿವೆ. ಈ ಸಂಬಂಧ ವಿಧಾನಸೌಧದಲ್ಲಿ ನಡೆದ ಸಭೆಯಲ್ಲೂ ಭಾಗವಹಿಸಿದ್ದೆ.
ಘಟಕದ ಕಾಮಗಾರಿಯ ಟೆಂಡರ್ ಪ್ರಗತಿಯಲ್ಲಿದ್ದು, ಮಾವಿನ ಜೊತೆಗೆ ಇತರೆ ತೋಟಗಾರಿಕೆ ಬೆಳೆಗಳಿಗೂ ಈ ಘಟಕದಲ್ಲಿ ಬೆಳೆಗಳ ಸಂಸ್ಕರಿಸಿಕೊಳ್ಳಲು ಅವಕಾಶವಿದೆ. ಈ ಬಗ್ಗೆ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗಮನಕ್ಕೆ ತಂದು ಶೀಘ್ರವಾಗಿ ಯೋಜನೆ ಅನುಷ್ಠಾನಕ್ಕೆ ಶ್ರಮಿಸುವುದಾಗಿ,'' ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.
ಅಧಿಕಾರಿಯ ಪ್ರತಿಕ್ರಿಯೆ
"ಮಾವು ಸೇರಿದಂತೆ ಇನ್ನಿತರ ತೋಟಗಾರಿಕೆ ಬೆಳೆಗಳ ಸಂಸ್ಕರಣೆ ಘಟಕವನ್ನು ನಿರ್ಮಿಸಲು ನಮ್ಮ ಇಲಾಖೆಯ ಜಾಗವನ್ನೇ ಅಂತಿಮಗೊಳಿಸಲಾಗಿದೆ. ಈ ಸಂಬಂಧ ಈಗಾಗಲೇ ನೀಲನಕ್ಷೆ ಸೇರಿದಂತೆ ಆಡಳಿತಾತ್ಮಕವಾದ ಪ್ರಕ್ರಿಯೆಗಳು ಮುಗಿದಿವೆ. ಈ ಪ್ರದೇಶದಲ್ಲಿ ಸಂಸ್ಕರಣೆ ಅಷ್ಟೇ ಅಲ್ಲದೆ, ತರಬೇತಿ, ಬೆಳೆಗಳ ಪ್ರದರ್ಶನ ಹಾಗೂ ಮಾರಾಟಕ್ಕೂ ಅನುಕೂಲ ಕಲ್ಪಿಸಲಾಗಿವುದು. ಜೊತೆಗೆ ಖಾಸಗಿ ಸಹಭಾಗಿತ್ವದಲ್ಲಿ ಬೆಳೆಗಳಿಂದ ಉಪ ಉತ್ಪನ್ನಗಳ ತಯಾರಿಕಾ ಘಟಕಗಳನ್ನು ಸಹ ಸ್ಪಾಪಿಸಲಾಗುವುದು,'' ಎಂದು ತೋಟಗಾರಿಕಾ ಇಲಾಖೆಯ ನಿರ್ದೇಶಕರಾದ ಮುನೇಗೌಡ ತಿಳಿಸಿದರು.
Recommended Video
ಮಾವು ಬೆಳೆಗಾರರ ಪ್ರತಿಕ್ರಿಯೆ
"ಜಿಲ್ಲೆಯಲ್ಲಿ ಮಾವು ಸಂಸ್ಕರಣ ಘಟಕ ಆರಂಭವಾಗಬೇಕು ಎಂಬುದು ನಮ್ಮೆಲ್ಲರ ಬಹುದಿನದ ಕಸನು. ಈ ಯೋಜನೆಯನ್ನು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ತಮ್ಮ ಅಧಿಕಾರವಧಿಯಲ್ಲಿ ಘೋಷಣೆ ಮಾಡಿದರು. ಕೆಲ ಕಾರಣಗಳಿಂದ ವಿಳಂಬವಾಗಿತ್ತು. ಯೋಜನೆ ನಿಗದಿಯಂತೆ ಅನುಷ್ಠಾನಗೊಂಡಿದ್ದರೆ ಕಳೆದ ಕೊರೊನಾ ಒಂದು ಮತ್ತು ಎರಡನೇ ಅಲೆಯಲ್ಲಿ ಮಾವು ಬೆಳೆಗಾರರು ಅನುಭವಿಸಿದ ನಷ್ಟ ತಪ್ಪಿಸಬಹುದಾಗಿತ್ತು,'' ಎಂದು ಹೇಲುತ್ತಾರೆ ಮಾವು ಬೆಳೆಗಾರರ ಸಂಘದ ಅಧ್ಯಕ್ಷ ಧರಣೇಶ್ ರಾಂಪುರ.