ರಾಮನಗರ : ಬಾಳೆ, ರಾಗಿ ಬೆಳೆಗಳು ಕಾಡಾನೆಗಳ ಪಾಲು
ರಾಮನಗರ, ಡಿಸೆಂಬರ್ 25 : ಸತತವಾಗಿ ನಾಲ್ಕು ವರ್ಷಗಳಿಂದ ಬರಗಾಲದಲ್ಲಿ ನೊಂದಿದ್ದ ರಾಮನಗರದ ರೈತರ ಮೊಗದಲ್ಲಿ ಮಂದಹಾಸ ಮೂಡಿತ್ತು. ಇತ್ತೀಚೆಗೆ ಬಿದ್ದ ಮಳೆಯಿಂದ ಉತ್ತಮ ಬೆಳೆಯಾಗಿತ್ತು. ಆದರೆ, ಕಾಡಾನೆಗಳ ಹಾವಳಿಗೆ ಬೆಳೆ ನಷ್ಟವಾಗಿದೆ.
ಕಾಡಾನೆಗಳ ಹಾವಳಿಯಿಂದ, ಕೈಯಿಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಬೆಳೆಯನ್ನು ನಂಬಿ ಕುಳಿತ್ತಿದ್ದ ರೈತ ಈಗ, ದಿಕ್ಕು ತೋಚದೆ ಆಕಾಶದತ್ತ ಮುಖ ಮಾಡಿದ್ದಾನೆ.
ತೋಟದ ಮಧ್ಯದಲ್ಲಿ ತುಂಡು ತುಂಡಾಗಿ ಬಿದ್ದಿರುವ ಬಾಳೆ ಗೊನೆಗಳು. ಹಾಳಗಿರುವ ರಾಗಿ ಮೆದೆಗಳು ಅಂದಹಾಗೆ ಇಂತಹ ದೃಶ್ಯಕಂಡು ಬಂದಿದ್ದು ರೇಷ್ಮೆನಗರಿ ರಾಮನಗರ ಜಿಲ್ಲೆ ಕೈಲಾಂಚ ಹೋಬಳಿಯ ಕವಣಾಪುರ ಗ್ರಾಮದಲ್ಲಿ.

ಈ ಭಾಗದ ರೈತರಿಗೆ ಕಾಡಾನೆಗಳ ಹಾವಳಿಯಿಂದ ಕೈಯಿಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ತಡ ರಾತ್ರಿ ಮೂರು ಕಾಡಾನೆಗಳು, ಕವಣಾಪುರ ಹಾಗೂ ನಂಜಾಪುರ ಸುತ್ತ-ಮುತ್ತಲ ತೋಟಗಳಿಗೆ ನುಗ್ಗಿ ಬಾಳೆಯ ತೋಟ ಹಾಗೂ ರಾಗಿಯ ಬೆಳೆಯನ್ನು ನಾಶ ಮಾಡಿವೆ.
ಇನ್ನೂ ಕವಾಣಾಪುರ ಹಾಗೂ ನಂಜಾಪುರ ಗ್ರಾಮಗಳ ಸುತ್ತಮುತ್ತಲ ಪ್ರದೇಶಗಳಿಗೆ ಕಾಡಾನೆಗಳು ನುಗ್ಗಿ ಪದೇ-ಪದೇ ಬೆಳೆಗಳನ್ನ ನಾಶ ಮಾಡುತ್ತಿದ್ದರೂ, ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ.
ಈ ಘಟನೆಯ ಬಗ್ಗೆ ಅರಣ್ಯ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ಮನನೊಂದ ರೈತರು ಅಧಿಕಾರಿಗಳಿಗೆ, ಹಿಡಿ ಶಾಪ ಹಾಕುತ್ತಿದ್ದಾರೆ. ಉತ್ತಮವಾದ ಬೆಳೆಯನ್ನ ಬೆಳೆದಿದ್ದ ರೈತರಿಗೆ ಕಾಡಾನೆಗಳು ಕಂಟಕವಾಗಿವೆ.

ಅರಣ್ಯ ಅಧಿಕಾರಿಗಳು ಎಚ್ಚೆತ್ತುಕೊಂಡು ಕಾಡಾನೆಗಳ ಕಾಟಕ್ಕೆ ಕಡಿವಾಣ ಹಾಕಬೇಕು. ಹಾಗೂ ರೈತರ ಕಷ್ಟಕ್ಕೆ ಸರ್ಕಾರ ಸ್ಪಂದಿಸಿ ಸೂಕ್ತ ಬೆಳೆ ಪರಿಹಾರ ನೀಡಬೇಕು ಎಂದು ಜನರು ಆಗ್ರಹಿಸುತ್ತಿದ್ದಾರೆ.











Click it and Unblock the Notifications