ಎಚ್ಡಿಕೆ ಸಿಎಂ ಆಗಿದ್ದ ವೇಳೆ ಹೋಟೆಲ್ನಲ್ಲಿ ರಾಸಲೀಲೆ ಮಾಡಿಕೊಂಡಿದ್ದ; ಸಿ.ಪಿ. ಯೋಗೇಶ್ವರ್ ಆರೋಪ
ರಾಮನಗರ, ಮಾರ್ಚ್ 14: "ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸಿಎಂ ಆಗಿದ್ದ 14 ತಿಂಗಳ ಅವಧಿಯಲ್ಲಿ ತಾಲ್ಲೂಕಿಗೆ ಬರದೆ ಬೆಂಗಳೂರಿನ ತಾಜ್ ವೆಸ್ಟೆಂಡ್ ಹೋಟೆಲ್ನಲ್ಲಿ ರಾಸಲೀಲೆ ಮಾಡಿಕೊಂಡಿದ್ದ," ಎಂದು ಮಾಜಿ ಸಚಿವ ಹಾಗೂ ಹಾಲಿ ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಗಂಭೀರ ಆರೋಪ ಮಾಡಿದ್ದಾರೆ.
ಇದೇ ವೇಳೆ ಸ್ವಪಕ್ಷ ಬಿಜೆಪಿಯ ವಿರುದ್ಧ ತಮ್ಮ ಆಸಮಾಧಾನ ಹೊರಹಾಕಿದ ಸಿ.ಪಿ. ಯೋಗೇಶ್ವರ್, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿಯವರಿಗೆ ನಮ್ಮ ಪಕ್ಷದವರು ರಾಜಕೀಯವಾಗಿ ಸಪೋರ್ಟ್ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಚನ್ನಪಟ್ಟಣ ತಾಲ್ಲೂಕಿನ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಂಎಲ್ಸಿ ಸಿ.ಪಿ. ಯೋಗೇಶ್ವರ್ ಮಾಧ್ಯಮಗಳೊಂದಿಗೆ ಮಾಡಿದರು.
"ನಾನು, ಕುಮಾರಸ್ವಾಮಿ 25 ವರ್ಷಗಳಿಂದ ರಾಜಕೀಯ ಎದುರಾಳಿಗಳು. ನನಗೆ ಒಂದು ಕಡೆ ನೋವಾಗುತ್ತದೆ. ಮಾಜಿ ಸಿಎಂ ಕುಮಾರಸ್ವಾಮಿಗೆ ರಾಜಕೀಯವಾಗಿ ಸಪೋರ್ಟ್ ಕೊಡುತ್ತಿರುವುದು ನಮ್ಮ ಪಾರ್ಟಿಯವರೇ,'' ಎಂದು ಆರೋಪಿಸಿದರು.

"ನಮ್ಮ ಪಕ್ಷದವರೇ ಕುಮಾರಸ್ವಾಮಿಯವರನ್ನು ಒಂದು ಕಡೆ ಹೊಗಳುತ್ತಾರೆ. ಕುಮಾರಸ್ವಾಮಿಯನ್ನು ಹೊಗಳಿ ವೈಭವೀಕರಿಸುವ ಅವಶ್ಯಕತೆ ಇಲ್ಲ. ಕುಮಾರಸ್ವಾಮಿ ಜನಾಭಿಪ್ರಾಯವನ್ನು ಕಳೆದುಕೊಂಡಿದ್ದಾನೆ, ಜನ ಅವನನ್ನು ತಿರಸ್ಕರಿಸಿದ್ದಾರೆ," ಎಂದು ಏಕವಚನದಲ್ಲೇ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಎಂಎಲ್ಸಿ ಸಿಪಿವೈ ಹರಿಹಾಯ್ದರು.
ಇತ್ತೀಚಿನ ಬಹಳ ಚುನಾವಣೆಯಲ್ಲಿ ಎಚ್.ಡಿ. ಕುಮಾರಸ್ವಾಮಿ ಅಸ್ತಿತ್ವ ಕಳೆದುಕೊಂಡಿದ್ದಾನೆ. ಮಂಡ್ಯದ ಎಂಪಿ ಚುನಾವಣೆ, ತುಮಕೂರು ಎಂಪಿ ಚುನಾವಣೆ, ಮೊನ್ನೆ ನಡೆದ ಎಂಎಲ್ಸಿ ಚುನಾವಣೆಯಲ್ಲಿ ಸೋಲಿಸಿದ್ದಾರೆ. ಕುಮಾರಸ್ವಾಮಿಗೆ ರಾಜಕೀಯ ಅಸ್ತಿತ್ವ ಇಲ್ಲ. ಬಾಯಿಗೆ ಬಂದ ಹಾಗೆ ಒದರುವುದು ನಿಲ್ಲಿಸಬೇಕು ಎಂದು ಎಚ್ಡಿಕೆಗೆ ಎಚ್ಚರಿಕೆ ನೀಡಿದರು.
ನಮ್ಮ ಪಕ್ಷದ ನಾಯಕರಿಗೆ ಬುದ್ದಿ ಇಲ್ಲ, ಕುಮಾರಸ್ವಾಮಿಯವರನ್ನು ಒಲೈಸುವ ಕೆಲಸ ಮಾಡುತ್ತಿದ್ದಾರೆ. ಈ ಭಾಗದ ಪರಿಸ್ಥಿತಿ ಗೊತ್ತಿಲ್ಲ, ಅದೆಲ್ಲಾ ನಮ್ಮ ಪಕ್ಷದ ವೇದಿಕೆಯಲ್ಲಿ ಮತನಾಡುತ್ತೇನೆ. ನಾವು ಯಾವುದೇ ಕಾರಣಕ್ಕೂ ಜೆಡಿಎಸ್ ಜೊತೆ ಹೊಂದಾಣೆಕೆ ಮಾಡಿಕೊಳ್ಳುವುದಿಲ್ಲ. ನಮ್ಮ ಪಕ್ಷಕ್ಕೆ ಆ ರೀತಿ ಅನಿವಾರ್ಯ ಇಲ್ಲ ಎಂದು ಸಿಪಿವೈ ಹೇಳಿದರು.

ಬಿಜೆಪಿ 2023ಕ್ಕೆ ರಾಜ್ಯದಲ್ಲಿ ಸ್ವತಂತ್ರವಾಗಿ ಅಧಿಕಾರಕ್ಕೆ
ಬಿಜೆಪಿ 2023ಕ್ಕೆ ರಾಜ್ಯದಲ್ಲಿ ಸ್ವತಂತ್ರವಾಗಿ ಅಧಿಕಾರಕ್ಕೆ ಬರುತ್ತದೆ. ಈಗಾಗಲೇ ನಮ್ಮ ಕೇಂದ್ರದ ನಾಯಕರು ಹೇಳಿಕೆ ನೀಡಿದ್ದಾರೆ. ಜೆಡಿಎಸ್ ಇವತ್ತು ರಾಜ್ಯದಲ್ಲಿ ನೆಲಕಚ್ಚಿದ್ದು, ಜೆಡಿಎಸ್ ಜನಾಭಿಪ್ರಾಯವನ್ನು ಕಳೆದುಕೊಂಡಿದೆ. ಇಂತಹ ಸಂಧರ್ಭದಲ್ಲಿ ನಮ್ಮ ಪಕ್ಷದವರು ಅವರಿಗೆ ಪ್ರೋತ್ಸಾಹ ನಿಡುವುದು ಸರಿಯಲ್ಲ ಎಂದು ಯೋಗೇಶ್ವರ್ ಅಸಮಾಧಾನ ಹೊರಹಾಕಿದರು.
ಇದು ಹೀಗೆ ಮುಂದುವರೆದರೆ ನಮ್ಮ ಪಕ್ಷದ ಬೆಳವಣಿಗೆ ಕುಂಠಿತವಾಗುತ್ತದೆ. ಹಳೆ ಮೈಸೂರು ಭಾಗದಲ್ಲಿ ನಮ್ಮ ಪಕ್ಷ ಬೆಳೆಯಬೇಕು ಅಂದರೆ, ನಾವು ಸ್ವತಂತ್ರವಾಗಿರಬೇಕು. ಯಾವುದೇ ಕಾರಣಕ್ಕೂ ಜೆಡಿಎಸ್ ಜೊತೆ ಕೈಜೊಡಿಸಬಾರದು. ಕುಮಾರಸ್ವಾಮಿಗೆ ಮತ್ತೆ ಏನಾದರೂ ಅಧಿಕಾರ ಕೊಟ್ಟರೆ ಮಹಾಘಟಬಂಧನ್ ಮಾಡ್ತಾರೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಆತಂಕ ವ್ಯಕ್ತಪಡಿಸಿದರು.
ಎಚ್ಡಿಕೆ ಬಹಿರಂಗ ಚರ್ಚೆಗೆ ಬರಲಿ ನಾನು ಸಿದ್ಧನಿದ್ದೇನೆ
ಚುನಾವಣೆ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ರಾಜಕೀಯ ಕಣದಲ್ಲಿ ಆರೋಪ ಪ್ರತ್ಯಾರೋಪಗಳು ಹೆಚ್ಚಾಗಿವೆ. ಸಿ.ಪಿ. ಯೋಗೇಶ್ವರ್ರಂತೆ ನಾನು ಯಾವುದೋ ಜಮೀನಿಗೆ ಬೇಲಿ ಸುತ್ತಿಲ್ಲ ಎಂದು ಆರೋಪಿಸಿದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್, ಎಚ್ಡಿಕೆ ಸಿಎಂ ಆಗಿದ್ದ 14 ತಿಂಗಳ ವೇಳೆಯಲ್ಲಿ ತಾಲ್ಲೂಕಿಗೆ ಬರದೆ ಬೆಂಗಳೂರಿನ ತಾಜ್ ವೆಸ್ಟೆಂಡ್ ಹೋಟೆಲ್ನಲ್ಲಿ ಕಾಲಹರಣ ಮಾಡಿದ್ದರು ಎಂದು ಗಂಭೀರ ಆರೋಪ ಮಾಡಿದರು.

ಎಚ್.ಡಿ. ಕುಮಾರಸ್ವಾಮಿ ಸಿಎಂ ಆಗಿದ್ದ 14 ತಿಂಗಳ ವೇಳೆ ಚನ್ನಪಟ್ಟಣಕ್ಕೆ ಬರುತ್ತಿರಲಿಲ್ಲ, ಇದೀಗ ಚನ್ನಪಟ್ಟಣ ತಾಲ್ಲೂಕಿಗೆ ಬಂದು ಜನರ ಮುಂದೆ ಕಣ್ಣೀರಿಟ್ಟು ನಾಟಕ ಮಾಡುತ್ತಿದ್ದಾರೆ. ನೇರಾನೇರಾ ನನ್ನ ಮುಂದೆ ಕೂರಿಸಿ ವೈಯಕ್ತಿಕ ಹಾಗೂ ಸಾರ್ವಜನಿಕ ವಿಚಾರಗಳನ್ನು ಬಹಿರಂಗವಾಗಿ ಮಾತನಾಡೋಣ. ಎಚ್ಡಿಕೆ ಬಹಿರಂಗ ಚರ್ಚೆಗೆ ಬರಲಿ ನಾನು ಸಿದ್ಧನಿದ್ದೇನೆ ಎಂದು ಪಂಥಾಹ್ವಾನ ನೀಡಿದರು.
ಎಚ್ಡಿಕೆ ನನ್ನ ಬಗ್ಗೆ ಏಕವಚನದಲ್ಲಿ ಮಾತಾಡಿದರೆ ನಾನೂ ಕೂಡ ಏಕವಚನದಲ್ಲೇ ಮಾತನಾಡುತ್ತೇನೆ. ಕಳೆದ 25 ವರ್ಷಗಳಿಂದ ನಾನು ಸುದೀರ್ಘವಾಗಿ ಚನ್ನಪಟ್ಟಣ ತಾಲ್ಲೂಕಿನಲ್ಲಿ ರಾಜಕಾರಣ ಮಾಡುತ್ತಿದ್ದೇನೆ. ನನ್ನ ಮೇಲೆ ಯಾವುದೇ ಆರೋಪ ಇಲ್ಲ. ಕುಮಾರಸ್ವಾಮಿ ಮೇಲೆ ಆರೋಪ ಇದೆ, ಬಿಡದಿಯಲ್ಲಿ ದಲಿತರ ಜಮೀನು ಹೊಡೆದಿದ್ದಾರೆ ಎಂದು ಆರೋಪಿಸಿದರು.
ನನ್ನ ಬಗ್ಗೆ ಮಾತನಾಡುವಾಗ ನಾಲಿಗೆ ಬಿಗಿ ಹಿಡಿದು ಮಾತಾಡು ಅಂತಾ ಕುಮಾರಸ್ವಾಮಿಗೆ ಹೇಳಿದ್ದೇನೆ. ಅಭಿವೃದ್ಧಿ ವಿಚಾರವಾಗಿ ಸಾರ್ವಜನಿಕವಾಗಿ ಚರ್ಚೆ ಮಾಡಲಿ. 2023ರ ಚುನಾವಣೆಯಲ್ಲಿ ನಾನು ಕುಮಾರಸ್ವಾಮಿ ವಿರುದ್ಧ ಇದೇ ಚನ್ನಪಟ್ಟಣದಲ್ಲಿ ಚುನಾವಣೆ ಮಾಡುತ್ತೇನೆ. ಇದು ನನ್ನ ತಾಲ್ಲೂಕು, ನನ್ನ ಜನ್ಮ ಭೂಮಿ. ನನ್ನ ಬಗ್ಗೆ ಹಗುರವಾಗಿ ಮಾತಾಡುವುದು ಬಿಡಬೇಕು ಎಂದು ಮಾಜಿ ಸಿಎಂ ವಿರುದ್ಧ ಕಿಡಿಕಾರಿದರು.
ನನ್ನ ಬಗ್ಗೆ ಆರೋಪ ಮಾಡುವ ಕುಮಾರಸ್ವಾಮಿ ಹೇಳಿಕೆ ನೋಡುತ್ತಿದ್ದರೆ ಹತಾಶೆಯಿಂದ ಕೂಡಿದೆ. ರಾಜಕೀಯ ಅಸ್ತಿತ್ವ ದಿನೇದಿನೇ ಕಳೆದುಕೊಳ್ಳುತ್ತಿದ್ದಾರೆ. ಈ ಭಾಗದ ಜನರನ್ನು ಯಾಮಾರಿಸುತ್ತಿದ್ದ ಕಾಲ ಹೋಯಿತು. ಅವನ ಬೂಟಾಟಿಕೆ, ಬಣ್ಣದ ಮಾತುಗಳು, ಭಾವನಾತ್ಮಕವಾಗಿ ಮಾತಾಡಿ ಜನರನ್ನು ಯಾಮಾರಿಸುವ ಕಾಲ ಹೋಗಿದೆ ಎಂದು ಲೇವಡಿ ಮಾಡಿದರು.
ಕುಮಾರಸ್ವಾಮಿ ನೀನೊಬ್ಬ ನಯವಂಚಕ, ಇದು ನಿನಗೆ ಕೊನೆಯ ಎಚ್ಚರಿಕೆ. ಇದೇ ರೀತಿ ಮುಂದುವರಿದರೆ ನಾನೇ ಅಡ್ಡಹಾಕಿ ಹಿಡಿದು ಕೇಳುತ್ತೇನೆ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದ ಸಿ.ಪಿ. ಯೋಗೇಶ್ವರ್, ತಮ್ಮ ಹೇಳಿಕೆ ಮೂಲಕ ಎಚ್.ಡಿ. ಕುಮಾರಸ್ವಾಮಿಗೆ ಎಚ್ಚರಿಕೆ ನೀಡಿದರು.












Click it and Unblock the Notifications