ಒಕ್ಕಲಿಗರ ಸಂಘದ ಚುನಾವಣೆ ಮತ ಎಣಿಕೆ: ಕುತೂಹಲ ಕೆರಳಿಸಿದ ಫಲಿತಾಂಶ
ರಾಮನಗರ, ಡಿಸೆಂಬರ್ 15: ರಾಜ್ಯ ಒಕ್ಕಲಿಗರ ಸಂಘದ 35 ನಿರ್ದೇಶಕ ಸ್ಥಾನಗಳಿಗೆ ನಡೆದಿರುವ ಚುನಾವಣೆಯ ಮತ ಎಣಿಕೆ ಇಂದು (ಡಿ.15) ನಡೆಯಲಿದ್ದು, ಸಂಜೆ ವೇಳೆಗೆ ಫಲಿತಾಂಶ ಪ್ರಕಟಗೊಳ್ಳುವ ನಿರೀಕ್ಷೆಯಿದೆ.
ರಾಮನಗರ ಜಿಲ್ಲೆಯನ್ನು ಒಳಗೊಂಡ ಬೆಂಗಳೂರು ಕ್ಷೇತ್ರದ ಮತಗಳ ಎಣಿಕೆಯು ರಾಜಧಾನಿಯ ಅರಮನೆ ಮೈದಾನದಲ್ಲಿ ನಡೆಯಲಿದೆ. ಬೆಂಗಳೂರು ಕ್ಷೇತ್ರದ 15 ಸ್ಥಾನಗಳಿಗೆ 141 ಹುರಿಯಾಳುಗಳು ಸ್ಪರ್ಧಿಸಿದ್ದಾರೆ.
ಇನ್ನುಳಿದಂತೆ ಮಂಡ್ಯ ಕ್ಷೇತ್ರದ 4 ಸ್ಥಾನಗಳಿಗೆ 16 ಅಭ್ಯರ್ಥಿಗಳಿದ್ದಾರೆ. ಈ ಕ್ಷೇತ್ರ ಸೇರಿದಂತೆ ಮೈಸೂರು, ಹಾಸನ, ತುಮಕೂರು, ಕೋಲಾರ ಮತ್ತಿತರ 11 ಜಿಲ್ಲೆಗಳಲ್ಲಿ ನಿಗದಿತ ಸ್ಥಾನಗಳಿಗೆ ನಡೆದಿರುವ ಚುನಾವಣೆಯ ಮತಗಳ ಎಣಿಕೆಗೆ ಆಯಾ ಜಿಲ್ಲಾ ಕೇಂದ್ರದಲ್ಲೇ ಏರ್ಪಾಟು ಮಾಡಿಕೊಳ್ಳಲಾಗಿದೆ.

ಬೆಂಗಳೂರು ಕ್ಷೇತ್ರದ ಮತಗಳ ಎಣಿಕೆಗೆ ಅರಮನೆ ಮೈದಾನದ ಪುರವಾಸಿನಿ ಹಾಲ್ನಲ್ಲಿ 389 ಟೇಬಲ್ಗಳನ್ನು ವ್ಯವಸ್ಥೆ ಮಾಡಲಾಗಿದೆ. ಯಾವುದೇ ಗೊಂದಲಕ್ಕೆ ಆಸ್ಪದವಿಲ್ಲದಂತೆ ಬುಧವಾರ ಬೆಳಗ್ಗೆ 9ರಿಂದಲೇ ಮತಗಳ ಎಣಿಕೆ ಪ್ರಾರಂಭಿಸಲಿದ್ದು, ಸಂಜೆ ವೇಳೆಗೆ ಫಲಿತಾಂಶವನ್ನು ಪ್ರಕಟಿಸಲಾಗುವುದು ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.
ರಾಜ್ಯದಲ್ಲಿಯೇ ಬೆಂಗಳೂರು ಕ್ಷೇತ್ರದ ಫಲಿತಾಂಶ ತೀವ್ರ ಕುತೂಹಲ ಮೂಡಿಸಿದೆ. ಇಲ್ಲಿ 1.41 ಲಕ್ಷದಷ್ಟು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಈ ಪೈಕಿ ರಾಮನಗರ ಜಿಲ್ಲೆಯ ಮತಗಳ ಪಾಲು 36 ಸಾವಿರದಷ್ಟಿವೆ. ಚನ್ನಪಟ್ಟಣ ತಾಲೂಕು ಒಂದರಲ್ಲೇ 15,856 ಮತಗಳು ಚಲಾವಣೆಗೊಂಡಿರುವುದು ವಿಶೇಷವಾಗಿದೆ.
ಚನ್ನಪಟ್ಟಣ ತಾಲೂಕು ಮತ್ತು ರಾಮನಗರ ಜಿಲ್ಲೆಯಲ್ಲಿ ಎಷ್ಟೇ ಗರಿಷ್ಠ ಪ್ರಮಾಣದ ಮತಗಳನ್ನು ಪಡೆದುಕೊಂಡರೂ ಜಯ ನಿಶ್ಚಯವಲ್ಲ. ಬೆಂಗಳೂರು ನಗರ ಮತ್ತು ಗ್ರಾಮಾಂತರದಲ್ಲಿ ಗೆಲುವಿಗೆ ಅಗತ್ಯವಿರುವ ಮತಗಳನ್ನು ಬಾಚಿಕೊಳ್ಳಲೇಬೇಕಾದ ಅನಿವಾರ್ಯತೆಯನ್ನು ಈ ಭಾಗದ ಅಭ್ಯರ್ಥಿಗಳು ಎದುರಿಸುತ್ತಿದ್ದಾರೆ.

ಸೀಮಿತ ಅಭ್ಯರ್ಥಿಗಳು ಮಾತ್ರವೇ ರಾಮನಗರ ಜಿಲ್ಲೆಯಲ್ಲಿ ಪ್ರಾಬಲ್ಯ ಸಾಧಿಸಿ, ಬೆಂಗಳೂರಿನಲ್ಲೂ ಮೇಲುಗೈ ಸಾಧಿಸುವ ಅವಕಾಶ ಹೊಂದಿದ್ದಾರೆ. ಹಲವರು ರಾಮನಗರ ಜಿಲ್ಲೆ ಮಟ್ಟಿಗೆ ಮುನ್ನಡೆ ಸಾಧಿಸಬಹುದು ಎನ್ನಲಾಗಿದೆ.
ಬೆಂಗಳೂರು ನಗರ ಮತ್ತು ಗ್ರಾಮಾಂತರದಲ್ಲಿ ಗೆಲುವಿಗೆ ಅಗತ್ಯವಿರುವ ಮತ ಗಳಿಸುವ ಸಾಧ್ಯತೆ ಕ್ಷೀಣವಾಗಿದೆ. ಅಭ್ಯರ್ಥಿಗಳ ವೈಯಕ್ತಿಕ ವರ್ಚಸ್ಸು, ಯೋಗ್ಯತೆ, ಅರ್ಹತೆ, ಅನುಕಂಪ ಎಲ್ಲವನ್ನೂ ಬದಿಗಿಟ್ಟಿರುವ ಬಹಳಷ್ಟು ಮತದಾರರು ದುಡ್ಡು ಕೊಟ್ಟವರಿಗಷ್ಟೇ ಆದ್ಯತೆ ನೀಡಿದ್ದಾರೆ ಎನ್ನುವ ಮಾತುಗಳು ವ್ಯಾಪಕವಾಗಿ ಕೇಳಿ ಬರುತ್ತಿವೆ. ಹೀಗಾಗಿ ಮತಗಳ ಎಣಿಕೆ ಮುಗಿದ ಬಳಿಕವಷ್ಟೇ ಅಭ್ಯರ್ಥಿವಾರು ಮತಗಳಿಕೆಯ ಸ್ಪಷ್ಟ ಚಿತ್ರಣ ಹೊರ ಬೀಳಲಿದೆ.
ರಂಗೇರಿದ ಬಿಡದಿ ಪುರಸಭೆಗೆ 50 ನಾಮಪತ್ರ ಸಲ್ಲಿಕೆ
ರಾಮನಗರ ಜಿಲ್ಲೆಯ ಬಿಡದಿ ಪುರಸಭೆ ಚುನಾವಣೆಗೆ ಮಂಗಳವಾರ 14 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಒಟ್ಟು ನಾಮಪತ್ರಗಳ ಸಂಖ್ಯೆ 50ಕ್ಕೆ ಏರಿಕೆಯಾಗಿದೆ.
ಡಿ.8ರಿಂದ 12ರವರೆಗೆ ಯಾವುದೇ ನಾಮಪತ್ರ ಸಲ್ಲಿಕೆಯಾಗಿರಲಿಲ್ಲ. ಡಿ.13ರಂದು 36 ನಾಮಪತ್ರಗಳು ಹಾಗೂ ಡಿ.14ರಂದು 14 ಮಂದಿ ಉಮೇದುವಾರಿಕೆ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಕೆಗೆ ಡಿ.15 (ಇಂದು) ಕಡೆಯ ದಿನವಾಗಿದ್ದು, ನೂಕುನುಗ್ಗಲು ಉಂಟಾಗುವ ಸಂಭವವಿದೆ.
ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದಿಂದ ತಲಾ 4, ಬಿಜೆಪಿಯಿಂದ 5, ಆಮ್ ಆದ್ಮಿ ಪಾರ್ಟಿಯಿಂದ ಒಬ್ಬರು ಸ್ಪರ್ಧೆ ಬಯಸಿ ನಾಮಪತ್ರ ಸಲ್ಲಿಸಿದ್ದಾರೆ. ನಿನ್ನೆ ಮಂಗಳವಾರವಾದ ಕಾರಣ ನಾಮಪತ್ರ ಸಲ್ಲಿಸುವವರ ಸಂಖ್ಯೆಯಲ್ಲಿ ಇಳಿಮುಖವಾಗಿತ್ತು.
3ನೇ ವಾರ್ಡ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಕವಿತಾ ಕುಮಾರ್, 15ನೇ ವಾರ್ಡ್ನಿಂದ ರೇಣುಕಯ್ಯ, 23ನೇ ವಾರ್ಡ್ನಿಂದ ಜೆಡಿಎಸ್ ಅಭ್ಯರ್ಥಿಯಾಗಿ ಎಚ್. ನಾಗರಾಜು ನಾಮಪತ್ರ ಸಲ್ಲಿಸಿದರು. ಜೆಡಿಎಸ್ ಅಭ್ಯರ್ಥಿಗಳಿಗೆ ತಾಪಂ ಮಾಜಿ ಅಧ್ಯಕ್ಷೆ ಹಾಗೂ ಶಾಸಕ ಎ. ಮಂಜುನಾಥ್ ಅವರ ಪತ್ನಿ ಲಕ್ಷ್ಮಿ ಮಂಜುನಾಥ್ ಸಾಥ್ ನೀಡಿದರು.
Recommended Video
8ನೇ ವಾರ್ಡ್ನಿಂದ ಬಿ.ಎನ್. ಪ್ರಸನ್ನಕುಮಾರ್, 10ನೇ ವಾರ್ಡ್ನಿಂದ ಪೊಲೀಸ್ ರೇವಣ್ಣ, 11ನೇ ವಾರ್ಡ್ನಿಂದ ಲೋಕೇಶ್, 12ನೇ ವಾರ್ಡ್ನಿಂದ ಶಿವಣ್ಣ, 23ನೇ ವಾರ್ಡ್ನಿಂದ ವಿಷ್ಣು ಅವರು ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಹುಲುವಾಡಿ ದೇವರಾಜು, ತಾಲೂಕು ಅಧ್ಯಕ್ಷ ಧನಂಜಯ, ಜಿಲ್ಲಾ ಉಪಾಧ್ಯಕ್ಷ ಶಿವಲಿಂಗಯ್ಯ, ಬಿಡದಿ ಹೋಬಳಿ ಅಧ್ಯಕ್ಷ ಎಸ್. ರವಿ, ಮುಖಂಡರಾದ ಡಿ. ನರೇಂದ್ರ, ಹನುಮೇಶ್ ಮತ್ತಿತರರು ಇದ್ದರು.












Click it and Unblock the Notifications