ಜಾನಪದ ಲೋಕದಲ್ಲಿ ಮೇಳೈಸಿದ ಹಳ್ಳಿ ಆಟ: ಸಂಭ್ರಮದಿಂದ 'ಗ್ರಾಮೀಣ ಆಟಗಳ ಉತ್ಸವ' ಸಂಪನ್ನ
ರಾಮನಗರ, ಡಿಸೆಂಬರ್ 26: ಆಧುನಿಕತೆಯ ಅಬ್ಬರದಲ್ಲಿ ಅಳಿವಿನ ಅಂಚಿಗೆ ತಲುಪಿರುವ ಗ್ರಾಮೀಣ ಆಟಗಳನ್ನು ಉತ್ತೇಜಿಸುವ ಹಾಗೂ ಮಕ್ಕಳಿಗೆ ಪರಿಚಯಿಸುವ ನಿಟ್ಟಿನಲ್ಲಿ ಜಾನಪದ ಲೋಕದಲ್ಲಿ ಲಗೋರಿ, ಚಿನ್ನಿದಾಂಡು, ಕುಂಟೋಬಿಲ್ಲೆ, ಅಣ್ಣೆಕಲ್ಲಾಟ, ರತ್ತೊ ರತ್ತೋ ರಾಯನ ಮಗಳೆ. ಸೇರಿದಂತೆ ವಿವಿಧ ಬಗೆಯ 'ಗ್ರಾಮೀಣ ಆಟಗಳ ಉತ್ಸವ' ನಡೆಯಿತು.
ರಾಮನಗರದ ಹೊರವಲಯದಲ್ಲಿರುವ ಜಾನಪದ ಲೋಕದಲ್ಲಿ. ನಾಡೋಜ ದಿ.ಡಾ. ಜಿ. ನಾರಾಯಣ ಅವರ ನೆನಪಿನ ಕಾರ್ಯಕ್ರಮದ ಅಂಗವಾಗಿ ಕರ್ನಾಟಕ ಜಾನಪದ ಪರಿಷತ್ತಿನ ವತಿಯಿಂದ ಹಮ್ಮಿಕೊಂಡಿದ್ದ 'ಗ್ರಾಮೀಣ ಆಟಗಳ ಉತ್ಸವ' ಪ್ರೇಕ್ಷಕರ ಮನಸೂರೆಗೊಂಡಿದಲ್ಲದೆ. ಗ್ರಾಮೀಣ ಆಟ ಸ್ವತಃ ಆಡಿ ಮಕ್ಕಳು ಮತ್ತು ಯುವ ಸಮೂಹ ಉಲ್ಲಾಸಿತರಾದರು.
ಗ್ರಾಮೀಣ ಹಾಗೂ ಜಾನಪದ ಸೊಗಡಿನ ಆಟಗಳು ಜನ ಮಾನಸದಿಂದ ದೂರ ಸರಿಯದಂತೆ ಮಾಡುವುದೇ ಈ ಉತ್ಸವದ ಪ್ರಮುಖ ಉದ್ದೇಶ. ಹೆಣ್ಣು ಮಕ್ಕಳಿಗೆ ಕಣ್ಣಾಮುಚ್ಚಾಲೆ, ರತ್ತೊ ರತ್ತೊ ರಾಯನ ಮಗಳೆ, ಕುಂಟೋಬಿಲ್ಲೆ, ಬಳೆಚೂರು ಆಟ, ಗಂಡು ಮಕ್ಕಳಿಗೆ ಗೋಲಿ ಆಟ, ಬುಗುರಿ ಆಟ, ಉಪ್ಪುಪ್ಪುಕಡ್ಡಿ ಆಟ ಆಡಿಸಲಾಯಿತು.
ಜಾನಪದ ಲೋಕವನ್ನು ಸವಿದ ಪ್ರವಾಸಿಗರು
ಮಕ್ಕಳಿಗಾಗಿ ಹುಲಿ ಕುರಿ ಆಟ, ಚೌಕಾಬಾರ, ಅಳಿಗುಳಿ ಮನೆ ಆಟ, ಅಣ್ಣೆಕಲ್ಲಾಟ, ಲಗೋರಿ ಚಂಡು, ಚಿನ್ನಿದಾಂಡು ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಯುವಕ, ಯುವತಿಯರು, ಚಿಣ್ಣರು, ಬಾಲಕ, ಬಾಲಕಿಯರು ವಿವಿಧ ಗ್ರಾಮೀಣ ಆಟಗಳ ಉತ್ಸವದಲ್ಲಿ ಭಾಗವಹಿಸಿದ್ದರು. ಗ್ರಾಮೀಣ ಆಟಗಳಲ್ಲಿ ಜಿಲ್ಲೆಯ ವಿವಿಧೆಡೆಯಿಂದ ಬಂದ ತಂಡಗಳು ಭಾಗವಹಿಸಿದ್ದರು.
ಜಾನಪದ ಲೋಕಕ್ಕೆ ಭೇಟಿ ನೀಡಿದ್ದ ಪ್ರವಾಸಿಗರು ತಮ್ಮ ಮಕ್ಕಳಿಗೆ, ಸ್ನೇಹಿತರಿಗೆ, ಸಂಬಂಧಿಕರಿಗೆ ಗ್ರಾಮೀಣ ಆಟಗಳನ್ನು ಕುರಿತು ಮಾಹಿತಿ ನೀಡವ ಮೂಲಕ ತಮ್ಮ ಬಾಲ್ಯದ ದಿನಗಳನ್ನೂ ನೆನಪು ಮಾಡಿಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಇನ್ನು ಜಾನಪದ ಲೋಕಕ್ಕೆ ಭೇಟಿ ನೀಡಿದ್ದ ಪ್ರವಾಸಿಗರು ಸ್ಥಳೀಯ ಗ್ರಾಮೀಣ ಆಟಗಳನ್ನು ನೋಡಿ, ತಮ್ಮ ಕ್ಯಾಮೆರಾಗಳಲ್ಲಿ, ಮೊಬೈಲ್ಗಳಲ್ಲಿ ಫೋಟೊಗಳನ್ನು ಕ್ಲಿಕ್ಕಿಸಿಕೊಂಡರು.
ಗ್ರಾಮೀಣ ಆಟಗಳನ್ನು ಸ್ನೇಹಿತರಿಗೂ ಕಲಿಸುತ್ತೇವೆ
ಗ್ರಾಮೀಣ ಆಟಗಳ ಉತ್ಸವದಲ್ಲಿ ಹೆಣ್ಣು ಮಕ್ಕಳ ಅಣ್ಣೆ ಕಲ್ಲು ಆಟದಲ್ಲಿ ಪ್ರಥಮ ಸ್ಥಾನ ಗಳಿಸಿದ ಚನ್ನಪಟ್ಟಣದ ಸಿ.ವೈ. ಜೀವಿತಾ ಮಾತನಾಡಿ, "ಆಟಗಳೆಂದರೆ ನಮಗೆ ಕ್ರಿಕೆಟ್, ಪುಟ್ ಬಾಲ್, ಬ್ಯಾಡ್ಮಿಂಟನ್ ಎಂಬುದು ಮಾತ್ರ ಗೊತ್ತಿತ್ತು. ಆದರೆ ಇವತ್ತು ಜಾನಪದ ಲೋಕದಲ್ಲಿ ಗ್ರಾಮೀಣ ಆಟಗಳನ್ನು ನೋಡಿದಾಗ ಸಂತೋಷವಾಯಿತು. ಈ ಆಟಗಳನ್ನು ಕಲಿತು ನಗರ ಪ್ರದೇಶಗಳಲ್ಲಿಯೂ ಆಡುತ್ತೇವೆ, ಜೊತೆಗೆ ಇತರರಿಗೆ ಕಲಿಸುತ್ತೇನೆ" ಎಂದು ಗ್ರಾಮೀಣ ಆಟಗಳ ಮೇಲಿನ ಅಭಿಮಾನ ವ್ಯಕ್ತಪಡಿಸಿದರು.
ಮನುಷ್ಯರಲ್ಲಿ ಸೃಜನಶೀಲತೆ ಬಂದರೆ ಎಲ್ಲರನ್ನು ಪ್ರೀತಿಸುತ್ತಾರೆ
ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಪ್ರೊ. ಹಿ.ಶಿ. ರಾಮಚಂದ್ರೇಗೌಡ ಮಾತನಾಡಿ "ಜನಪದ ನೈತಿಕ ಬದುಕಿಗೆ ಸಾಕ್ಷಿಯಾದರೆ, ನಗರ ಬದುಕು ಶೋಷಣೆಯನ್ನು ತಿಳಿಸುತ್ತದೆ. ಜನಪದ ಎಲ್ಲರನ್ನು ಒಗ್ಗೂಡಿಸುವ ಕೆಲಸ ಮಾಡುತ್ತದೆ ಜಾನಪದ ಕಲೆ ಸೃಜನಶೀಲತೆಗೆ ಹೆಚ್ಚು ಒತ್ತು ನೀಡುತ್ತದೆ. ಮನುಷ್ಯರಲ್ಲಿ ಸೃಜನಶೀಲತೆ ಬಂದರೆ ಎಲ್ಲರನ್ನು ಪ್ರೀತಿಸುವುದನ್ನು ಕಲಿಯುತ್ತಾರೆ. ಮುಂದಿನ ದಿನಗಳಲ್ಲಿ ಜಾನಪದ ಲೋಕದ ವತಿಯಿಂದ ಶಿಶು ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತದೆ" ಎಂದು ತಿಳಿಸಿದರು.
ಜಾನಪದ ಲೋಕದಲ್ಲಿ ಗಣ್ಯರ ಸಮಾಗಮ
"ಬಾಲ್ಯದಲ್ಲೇ ಮಕ್ಕಳನ್ನು ಮಾನಸಿಕವಾಗಿ ಹಾಗೂ ದೈಹಿಕ ಸದೃಢ ಮಾಡಬೇಕಾಗಿದೆ. ಇದನ್ನು ಮನಗೊಂಡು ಸರ್ಕಾರ ಪ್ರಾಥಮಿಕ ಶಾಲಾ ಶಿಕ್ಷಣದ ಹಂತದಲ್ಲಿಯೇ ನಲಿ ಕಲಿ ಯೋಜನೆಯನ್ನು ರೂಪಿಸಿದೆ. ವಿದ್ಯಾರ್ಥಿಗಳು ಸಹ ಪುಸ್ತಕದ ಜೊತೆಗೆ, ಪಠ್ಯೇತರ ಚುಟುವಟಿಕೆಗಳಲ್ಲಿ ಭಾಗಿಯಾಗಬೇಕು" ಎಂದು ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಪ್ರೊ. ಹಿ.ಶಿ. ರಾಮಚಂದ್ರೇಗೌಡ ಕರೆ ನೀಡಿದರು.
ಉತ್ಸವದ ವೇದಿಕೆ ಕಾರ್ಯಕ್ರದಲ್ಲಿ, ಸಂಘಟಕಿ ಕಲ್ಪನಾ ಶಿವಣ್ಣ, ಕರ್ನಾಟಕ ಜನಪದ ಪರಿಷತ್ನ ಚನ್ನಪಟ್ಟಣ ತಾಲೂಕು ಅಧ್ಯಕ್ಷ ವಿಜಯ್ ರಾಂಪುರ, ಶಿಕ್ಷಣ ಸಂಯೋಜಕ ಯೋಗೇಶ್ ಚಕ್ಕೆರೆ, ಜಾನಪದ ಲೋಕದ ಆಡಳಿತಾಧಿಕಾರಿ ಸರಸವಾಣಿ, ಕ್ಯುರೇಟರ್ ಡಾ.ಯು.ಎಂ. ರವಿ, ರಂಗ ನಿರ್ದೇಶಕ ಎಸ್. ಪ್ರದೀಪ್ ಹಾಗೂ ಸಿಬ್ಬಂದಿ ವರ್ಗ ಪಾಲ್ಗೊಂಡಿದ್ದರು.