ರಾಮನಗರ: ಜಾನುವಾರುಗಳ ಚರ್ಮಗಂಟು ರೋಗ ನಿವಾರಣೆಗೆ ಲಸಿಕೆ ಅಭಿಯಾನ
ರಾಮನಗರ, ಅಕ್ಟೋಬರ್ 21: ಜಿಲ್ಲೆಯಲ್ಲಿ ಜಾನುವಾರುಗಳ ಚರ್ಮಗಂಟು ರೋಗ ಹರಡದಂತೆ ಜಿಲ್ಲಾಡಳಿತ ಈಗಾಗಲೇ ಒಂದು ತಿಂಗಳ ಕಾಲ ದನಗಳ ಸಂತೆ ಹಾಗೂ ಜಾನುವಾರು ಸಾಗಾಣಿಕೆಯನ್ನು ನಿಷೇಧ ಮಾಡಿದೆ.
ಚರ್ಮಗಂಟು ರೋಗ ವ್ಯಾಪಕವಾಗಿ ಹರಡದಂತೆ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮ ಕೈಗೊಂಡರೂ ಸಹ ಗಡಿ ಗ್ರಾಮಗಳಲ್ಲಿನ ರಾಸುಗಳಲ್ಲಿ ಚರ್ಮಗಂಟು ರೋಗ ಹಬ್ಬುತ್ತಿದೆ. ಜಾನುವಾರುಗಳ ಈ ಕಾಯಿಲೆಯಿಂದ ರೈತರು ಕಂಗಾಲಾಗಿದ್ದಾರೆ.
ಭಾರಿ ಮಳೆಗೆ ರೇಷ್ಮೆ ನಗರಿ ತತ್ತರ: ಸರ್ಕಾರಿ ಕಚೇರಿಗಳು ಜಲಾವೃತ
ಕಳೆದ ಹಲವು ದಿನಗಳಿಂದ ರಾಜ್ಯದ ಬೇರೆ ಬೇರೆ ಜಿಲ್ಲೆಗಳು, ಅದರಲ್ಲೂ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಚರ್ಮಗಂಟು ಹಬ್ಬುತ್ತಿದೆ. ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನಲ್ಲಿ ಅತೀ ಹೆಚ್ಚು ಪ್ರಕರಣಗಳು ಕಂಡು ಬಂದಿರುವುದು ಜಿಲ್ಲೆಯ ಹಾಲು ಉತ್ಪಾದಕರಲ್ಲಿ ಆತಂಕ ಮೂಡಿಸಿದೆ.
ತಿಗಣೆ ಹಾಗೂ ಸೊಳ್ಳೆಗಳ ಕಡಿತದಿಂದ ಹಬ್ಬಿದ ರೋಗ
ತಮಿಳುನಾಡು ಗಡಿಗೆ ಹೊಂದಿಕೊಂಡಿರುವ ರಾಮನಗರ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಹಸುಗಳಿಗೆ ಚರ್ಮಗಂಟು ರೋಗ ಕಾಣಿಸಿಕೊಂಡಿದೆ. ಈ ಕಾಯಿಲೆಯು ಪ್ರಾಣಿ ಜನ್ಯವಾಗಿರದೇ, ತಿಗಣೆ ಹಾಗೂ ಸೊಳ್ಳೆಗಳ ಕಡಿತದಿಂದ ಹಸುಗಳಿಗೆ ಹಬ್ಬುತ್ತಿದೆ. ಅದರಲ್ಲೂ ಗಡಿ ಗ್ರಾಮದಲ್ಲಿ ಅರಣ್ಯ ಪ್ರದೇಶ ಹೆಚ್ಚಾಗಿರುವ ಕಾರಣ, ಚರ್ಮಗಂಟು ರೋಗ ಹೆಚ್ಚಾಗಿ ಕಾಣಿಸಿಕೊಂಡಿದೆ.
ತಮಿಳುನಾಡು ಗಡಿ ಹಂಚಿಕೊಂಡಿರುವ ಕನಕಪುರ ತಾಲೂಕಿನ ಮರಳವಾಡಿ ಹೋಬಳಿ ಮತ್ತು ಆರೋಹಳ್ಳಿ ಹೋಬಳಿಗಳಲ್ಲಿ ರಾಸುಗಳಲ್ಲಿ ಚರ್ಮಗಂಟು ರೋಗದ ಬಾದೆ ಹೆಚ್ಚಾಗಿದೆ. ರಾಮನಗರ ಮತ್ತು ಚನ್ನಪಟ್ಟಣ ತಾಲೂಕಿನಲ್ಲಿ ಕಡಿಮೆ ಪ್ರಕರಣಗಳು ಕಂಡುಬಂದಿವೆ. ಇನ್ನು ಮಾಗಡಿ ತಾಲೂಕಿನ ಹಸುಗಳಲ್ಲಿ ಚರ್ಮಗಂಟು ರೋಗದ ಲಕ್ಷಣ ಇಲ್ಲದಿರುವುದು ಆ ಭಾಗದ ರೈತರಲ್ಲಿ ಸಮಾಧಾನ ಮೂಡಿಸಿದೆ.
ಜಾನುವಾರುಗಳಿಗೆ ಗೋಟ್ ಪಾಕ್ಸ್ ಲಸಿಕೆ
ಚರ್ಮಗಂಟು ರೋಗದ ಬಗ್ಗೆ ಬಮೂಲ್ ನಿರ್ದೇಶಕ ಹರೀಶ್ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. "ಜಾನುವಾರುಗಳಲ್ಲಿ ಚರ್ಮಗಂಟು ರೋಗ ಕಂಡುಬಂದಿರುವ ಮೂರು ತಾಲೂಕಿನಲ್ಲಿ ವ್ಯಾಪಕ ಲಸಿಕೆ ಕಾರ್ಯಕ್ರಮ ಕೈಗೊಂಡಿದ್ದೇವೆ. ರೋಗದ ಪತ್ತೆಯಾದ ಗ್ರಾಮ ಸೇರಿದಂತೆ ಸುತ್ತಮುತ್ತಲಿನ 5 ಕಿ.ಮೀ ವ್ಯಾಪ್ತಿಯಲ್ಲಿನ ಗ್ರಾಮಗಳ ಜಾನುವಾರುಗಳಿಗೆ ಲಸಿಕೆ ನೀಡಲಾಗಿದೆ. ಇನ್ನು ಗೋಟ್ ಪಾಕ್ಸ್ ಎನ್ನುವ ಲಸಿಕೆಯನ್ನು ಹಸುಗಳಿಗೆ ಸಾಮೂಹಿಕವಾಗಿ ನೀಡಲಾಗುತ್ತಿದೆ," ಎಂದರು.
ಇನ್ನು ಬಮೂಲ್ ವತಿಯಿಂದ ಜಾನುವಾರುಗಳಿಗೆ ಲಸಿಕೆ ನೀಡುವ ಕಾರ್ಯಕ್ರಮ ವ್ಯಾಪಕವಾಗಿ ಹಮ್ಮಿಕೊಳ್ಳಲಾಗಿದೆ. ಪಶು ಇಲಾಖೆ ಅಧಿಕಾರಿಗಳು ಕಾಯಿಲೆ ಕಾಣಿಸಿಕೊಂಡ ಗ್ರಾಮಗಳಿಗೆ ತೆರಳಿ ಮುಂಜಾಗ್ರತ ಕ್ರಮಗಳ ಕುರಿತು ಮಾಹಿತಿ ನೀಡುತ್ತಿದ್ದಾರೆ. ಅಲ್ಲದೇ, ರೋಗದ ಲಕ್ಷಣ ಹಾಗೂ ನಿಯಂತ್ರಣ ಮಾಡಬೇಕಾದ ಕ್ರಮಗಳ ಬಗ್ಗೆ ಕರ ಪತ್ರ ಹಂಚಿಕೆ ಮಾಡಿ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.
ಚರ್ಮಗಂಟು ರೋಗಕ್ಕೆ ನಿಖರ ಲಸಿಕೆ ಇಲ್ಲ
"ಚರ್ಮಗಂಟು ರೋಗಕ್ಕೆ ನಿಖರವಾಗಿ ಯಾವುದೇ ಲಸಿಕೆ ಇಲ್ಲ. ಉತ್ತರ ಭಾರತದಲ್ಲಿ ಜಾನುವಾರುಗಳ ಚರ್ಮಗಂಟು ರೋಗಕ್ಕೆ ಗೋಟ್ ಪಾಕ್ಸ್ ಲಸಿಕೆ ನೀಡಿ ಯಶಸ್ವಿಯಾಗಿದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಭಾರತದಲ್ಲೂ ಇದೇ ಲಸಿಕೆ ನೀಡುತ್ತಿದ್ದೇವೆ. ಸುಮಾರು 13 ತಾಲೂಕುಗಳಲ್ಲಿ 90ಸಾವಿರ ಗೋಟ್ ಪಾಕ್ಸ್ ಲಸಿಕೆಯನ್ನು ವ್ಯಾಪಕವಾಗಿ ನೀಡುಲಾಗುತ್ತಿದೆ. ಲಸಿಕೆ ಅಭಿಯಾನದಿಂದ ಚರ್ಮಗಂಟು ರೋಗ ಹತೋಟಿಗೆ ಬರುತ್ತಿದೆ," ಎಂದು ಬಮೂಲ್ ವ್ಯವಸ್ಥಾಪಕ ಶ್ರೀಧರ್ ಹೇಳಿದ್ದಾರೆ.
ತಮಿಳುನಾಡು ಗಡಿ ಹಾಗೂ ಕೋಲಾರದ ಗಡಿ ಭಾಗಗಳಿಂದ ರೋಗ ವ್ಯಾಪಕವಾಗಿ ಹರಡುತ್ತಿದೆ. ಬೆಂಗಳೂರು ದಕ್ಷಿಣ ತಾಲೂಕು, ಬೆಂಗಳೂರು ಉತ್ತರ ತಾಲೂಕು, ದೇವನಹಳ್ಳಿ , ಹೊಸಕೋಟೆ, ದೊಡ್ಡಬಳ್ಳಾಪುರ ಭಾಗಗಳಲ್ಲಿನ ರಾಸುಗಳಲ್ಲಿ ಹೆಚ್ಚು ಚರ್ಮಗಂಟು ರೋಗ ಕಾಣಿಸಿಕೊಂಡಿದೆ ಎನ್ನುವ ಮಾಹಿತಿ ತಿಳಿಸಿದ್ದಾರೆ.
ರೋಗ ಹರಡದಂತೆ ವಾಶಿಂಗ್ ಸೋಡ ಸಿಂಪಡಣೆ
ರಾಮನಗರದ ಆರೋಹಳ್ಳಿ ಮತ್ತು ಮರಳವಾಡಿ ಹೋಬಳಿಗಳಲ್ಲಿ ಸುಮಾರು 300 ಹೆಚ್ಚು ಹಸುಗಳಲ್ಲಿ ಚರ್ಮಗಂಟು ರೋಗ ವ್ಯಾಪಿಸಿದೆ. ಬಮೂಲ್ ವತಿಯಿಂದ ನೀಡುವ ಗೋಟ್ ಪಾಕ್ಸ್ ವಾಕ್ಸಿನ್ ಚೊತೆಗೆ ಚರ್ಮಗಂಟು ರೋಗಕ್ಕೆ ಸ್ಥಳೀಯವಾಗಿ ಮಾಡುವ ಹೋಮಿಯೋಪತಿ ಚಿಕಿತ್ಸೆ ಹೆಚ್ಚು ಪರಿಣಾಮಕಾರಿಯಾಗಿದೆ. ಸ್ಥಳೀಯವಾಗಿ ಬೇವಿನ ಸೂಪ್ಪು , ವಿಳ್ಯೆದೆಲೆ, ಅರಶಿನ ಮತ್ತು ತುಳಸಿ ರಸದಿಂದ ತಯಾರಿಸುವ ಔಷಧಿ ನೀಡುವುದರಿಂದ ಚರ್ಮಗಂಟು ರೋಗದಲ್ಲಿ ಗಣನೀಯ ಪ್ರಮಾಣದಲ್ಲಿ ಹತೋಟಿಗೆ ಬರುತ್ತಿದೆ. ಅಲ್ಲದೇ ರೋಗ ಕಂಡು ಬಂದ ಗ್ರಾಮಗಳಲ್ಲಿ ವಾಶಿಂಗ್ ಸೋಡ ಸಿಂಪಡಣೆ ಮಾಡುವ ಮೂಲಕ ರೋಗ ಪರಿಸದಂತೆ ಕ್ರಮಕೈಗೊಳ್ಳಲಾಗಿದೆ. ಚರ್ಮಗಂಟು ರೋಗ ಹೆಚ್ಚು ವ್ಯಾಪಿಸಿದ್ದರೂ, ಅಗತ್ಯ ಮುಂಜಾಗ್ರತಾ ಕ್ರಮಗಳಿಂದ ರೋಗಕ್ಕೆ ತುತ್ತಾಗಿರುವ ಹಸುಗಳ ಮರಣ ಪ್ರಮಾಣ ಕಡಿಮೆ ಇದೆ.
ರೇಷ್ಮೆ ಇಲಾಖೆ ವಿಲೀನಕ್ಕೆ ರೈತರ ವಿರೋಧ: ಸರ್ಕಾರಕ್ಕೆ ಪ್ರತಿಭಟನೆಯ ಎಚ್ಚರಿಕೆ