ರಾಮನಗರ: ಅರ್ಕಾವತಿ ನದಿಯಲ್ಲಿ ಕೊಚ್ಚಿಹೋದ ಬೈಕ್ ಸವಾರರು
ರಾಮನಗರ, ನವೆಂಬರ್ 21: ಬೈಕ್ ನಲ್ಲಿ ನದಿ ದಾಟುತ್ತಿದ್ದ ಬೈಕ್ ಸವಾರರು ನಿಯಂತ್ರಣ ತಪ್ಪಿ ಬಿದ್ದು ನೀರುಪಾಲಾಗಿರುವ ಘಟನೆ ರಾಮನಗರ ಜಿಲ್ಲೆಯ ಕೈಲಾಂಚ ಹೋಬಳಿಯ ಹುಲಿಕೆರೆ ಗ್ರಾಮ ಹಾಗೂ ಕನಕಪುರ ರಸ್ತೆ ಸಂಪರ್ಕಿಸುವ ರಸ್ತೆಗೆ ಅಡ್ಡಲಾಗಿರುವ ಅರ್ಕಾವತಿ ನದಿಯಲ್ಲಿ ನಡೆದಿದೆ.
ರಾಮನಗರದ ಯಾರಬ್ ನಗರ ನಿವಾಸಿಗಳಾದ ಜುಲ್ಪಿಕಾರ್ (20), ಮತಿನ್ (22) ಎಂಬುವರೇ ಘಟನೆಯಲ್ಲಿ ಮೃತಪಟ್ಟ ಬೈಕ್ ಸವಾರರು.

ಇವರು ಸೋಮವಾರ(ನ.20) ಮಧ್ಯಾಹ್ನ 3ಗಂಟೆಯ ವೇಳೆಯಲ್ಲಿ ಹುಲಿಕೆರೆ ಗ್ರಾಮಕ್ಕೆ ಬಂದಿದ್ದರು. ಅಲ್ಲದೆ ಕನಕಪುರ ರಸ್ತೆಗೆ ತೆರಳಲು ಅಡ್ಡದಾರಿಯಾಗಿರುವ ಅರ್ಕಾವತಿ ನದಿಯನ್ನು ದಾಟಿ ಸಂಚರಿಸಲು ಮುಂದಾಗಿದ್ದು, ಅದರಂತೆ ನದಿ ನೀರನ್ನು ಲೆಕ್ಕಿಸದೆ ಬೈಕ್ ಚಲಾಯಿಸಿಕೊಂಡು ಹೋಗುವ ದುಸ್ಸಾಹಸ ಮಾಡಿದ್ದಾರೆ. ಸ್ವಲ್ಪ ದೂರ ನದಿಯಲ್ಲೇ ಬೈಕ್ ಚಲಾಯಿಸಿಕೊಂಡು ಹೋಗಿದ್ದಾರೆ. ಈ ವೇಳೆ ನೀರಿನ ಆಳ ಅರಿಯದೆ ಮುಂದೆ ತೆರಳುವಾಗ ನೀರಿನ ರಭಸಕ್ಕೆ ಆಯ ತಪ್ಪಿ ಬೈಕ್ ನಿಂದ ನೀರಿಗೆ ಬಿದ್ದು, ಕೊಚ್ಚಿಕೊಂಡು ಹೋಗಿದ್ದಾರೆ.
ದಡದಲ್ಲಿದ್ದ ಕೆಲವು ಸ್ಥಳೀಯರು ಈ ಘಟನೆಯನ್ನು ನೋಡಿದ್ದಾರೆ. ಅಲ್ಲದೆ ನೀರಿನಲ್ಲಿ ಮುಳುಗುತ್ತಿದ್ದ ಅವರನ್ನು ರಕ್ಷಿಸಲು ಮುಂದಾದರಾದರೂ ಪ್ರಯೋಜನವಾಗಲಿಲ್ಲ. ಹೀಗಾಗಿ ಕೂಡಲೇ ಪೊಲೀಸ್ ಮತ್ತು ಅಗ್ನಿ ಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಆದರೆ ಅವರು ಬರುವ ವೇಳೆಗೆ ಯುವಕರಿಬ್ಬರೂ ನದಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದರು.

ತಕ್ಷಣ ಈಜುಗಾರರ ಸಹಾಯದಿಂದ ತೆಪ್ಪದಲ್ಲಿ ಅಗ್ನಿಶಾಮಕ ಸಿಬ್ಬಂದಿ ಶವದ ಹುಡುಕಾಟ ನಡೆಸಿದ್ದು, ಜುಲ್ಪಿಕರ್ ಎಂಬಾತನ ಶವ ಸಂಜೆ ವೇಳೆ ದೊರೆತಿದೆಯಾದರೂ ಮತಿನ್ ಶವ ದೊರೆಯಲಿಲ್ಲ. ಹೀಗಾಗಿ ಆತನ ಶವದ ಕಾರ್ಯಾಚರಣೆಯನ್ನು ನಿನ್ನೆ ರಾತ್ರಿ ನಿಲ್ಲಿಸಿದ್ದು, ಇಂದು ಮುಂದುವರೆಸಲಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆಯೇ ತಹಶೀಲ್ದಾರ್ ಮಾರುತಿ ಪ್ರಸನ್ನ, ಸರ್ಕಲ್ ಇನ್ಸ್ ಸ್ಪೆಕ್ಟರ್ ರಮೇಶ್, ಗ್ರಾಮಾಂತರ ಠಾಣೆ ಸಬ್ಇನ್ಸ್ಪೆಕ್ಟರ್ ದೀಪಕ್, ಕೈಲಾಂಚ ಉಪತಹಶೀಲ್ದಾರ್ ವಿಲಿಯಂ, ರಾಜಸ್ವ ನಿರೀಕ್ಷಕ ಆರ್.ವಿ.ಸ್ವಾಮಿ ಮುಂತಾದವರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮಕ್ಕಳನ್ನು ಕಳೆದುಕೊಂಡ ಪೋಷಕರ ರೋದನ ಮುಗಿಲು ಮುಟ್ಟಿದೆ.











Click it and Unblock the Notifications