ಟೊಯೋಟಾ ಬಿಕ್ಕಟ್ಟು; 132ನೇ ದಿನಕ್ಕೆ ಕಾಲಿಟ್ಟ ಪ್ರತಿಭಟನೆ
ರಾಮನಗರ, ಮಾರ್ಚ್ 19: ರಾಮನಗರ ಜಿಲ್ಲೆಯ ಬಿಡದಿ ಕೈಗಾರಿಕಾ ವಲಯದಲ್ಲಿರುವ ಏಷ್ಯಾದ ಅತಿ ದೊಡ್ಡ ಕಾರು ತಯಾರಿಕಾ ಕಾರ್ಖಾನೆ ಟೊಯೋಟಾ ಕಿರ್ಲೋಸ್ಕರ್ನಲ್ಲಿ ಬಿಕ್ಕಟ್ಟು ಬಗೆಹರಿದಿಲ್ಲ. ಅಕ್ರಮವಾಗಿ ಕೆಲಸದಿಂದ ಅಮಾನತ್ತು ಮಾಡಿರುವ ಕಾರ್ಮಿಕರನ್ನು ಮತ್ತೆ ಕೆಲಸಕ್ಕೆ ತೆಗೆದುಕೊಳ್ಳುವಂತೆ ಆಗ್ರಹಿಸಿ ಕಾರ್ಮಿಕರು ನಡೆಸುತ್ತಿರುವ ಪ್ರತಿಭಟನೆ 132 ನೇ ದಿನಕ್ಕೆ ಕಾಲಿಟ್ಟಿದೆ.
ಕಂಪನಿ ದಬ್ಬಾಳಿಕೆಯನ್ನು ಪ್ರಶ್ನಿಸಿದ ಓರ್ವ ಕಾರ್ಮಿಕ ಮುಖಂಡನನ್ನು ಕಾರ್ಖಾನೆಯ ಆಡಳಿತ ಮಂಡಳಿ ಅಮಾನತು ಮಾಡಿತ್ತು. ಈ ಹಿನ್ನಲೆಯಲ್ಲಿ ಪ್ರಾರಂಭವಾದ ಕಾರ್ಮಿಕರ ಮತ್ತು ಕಂಪನಿಯ ಆಡಳಿತ ಮಂಡಳಿಯ ನಡುವಿನ ತಿಕ್ಕಾಟಕ್ಕೆ ಈಗಾಗಲೇ 100 ಕಾರ್ಮಿಕರು ಅಮಾನತು ಗೊಂಡಿದ್ದಾರೆ.
ಈ ನಡುವೆ ಸರ್ಕಾರದ ಪ್ರತಿನಿಧಿಗಳಾದ ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್, ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಡಿಸಿಎಂ ಅಶ್ವಥ್ ನಾರಾಯಣ್ ಹಾಗೂ ಸ್ಥಳೀಯ ಶಾಸಕ ಎ. ಮಂಜುನಾಥ್ ಹಲವಾರು ಸುತ್ತಿನ ಸಂಧಾನ ಸಭೆಗಳನ್ನು ನಡೆಸಿದರು.

ಪ್ರತಿ ಸಭೆಯಲ್ಲೂ ಅಮಾನತು ಮಾಡಿರುವ ಕಾರ್ಮಿಕರನ್ನು ವಾಪಸ್ ಕೆಲಸಕ್ಕೆ ತೆಗೆದುಕೊಳ್ಳುವಂತೆ ಕಾರ್ಖಾನೆಯ ಅಡಳಿತ ಮಂಡಳಿಗೆ ಮನವಿ ಮಾಡಿದ್ದರು. ಮನವಿಗೆ ಮನ್ನಣೆ ನೀಡದ ಆಡಳಿತ ಮಂಡಳಿ ವಿರುದ್ಧ ಕಾರ್ಮಿಕರು ಇಂದಿಗೂ ಪ್ರತಿಭಟನೆ ಮಾಡುತ್ತಿದ್ದಾರೆ.
ಕಾರ್ಮಿಕರು ಇಂದೂ ತಮ್ಮ ಪ್ರತಿಭಟನೆ ಮುಂದುವರೆಸಿದ್ದಾರೆ. ನಮ್ಮ ಎಲ್ಲಾ ಬೇಡಿಕೆಗಳು ಈಡೇರಬೇಕು ಹಾಗೂ ಅಕ್ರಮವಾಗಿ ಅಮಾನತು ಮಾಡಿರುವ ಎಲ್ಲಾ ಕಾರ್ಮಿಕರನ್ನು ವಾಪಸ್ ಕೆಲಸಕ್ಕೆ ತೆಗೆದುಕೊಳ್ಳುವ ತನಕ ಹೋರಾಟ ಮುಂದುವರೆಯುತ್ತದೆ ಎಂದು ಹೇಳಿದ್ದಾರೆ.












Click it and Unblock the Notifications