ಹೈನುಗಾರಿಕೆ ನಂಬಿರುವ ರೈತರಲ್ಲಿ ಆತಂಕ ಹುಟ್ಟಿಸುತ್ತಿದೆ ರಾಸುಗಳಲ್ಲಿ ಕಾಣಿಸಿಕೊಂಡ ವಿಚಿತ್ರ ರೋಗ
ರಾಮನಗರ, ಜುಲೈ 15: ಕೊರೊನಾ ಸಂಕಷ್ಟ ಕಾಲದಲ್ಲೂ ರೈತನ ಬದುಕು ಕಾಪಾಡಿದ್ದ ಹೈನುಗಾರಿಕೆ ಉದ್ಯಮ ಪ್ರಸ್ತುತ ಕಾಣಿಸಿಕೊಂಡಿರುವ ವಿಚಿತ್ರ ಕಾಯಿಲೆಗೆ ತತ್ತರಿಸಿದೆ. ಇತ್ತೀಚೆಗೆ ರಾಸುಗಳಿಗೆ ಕಾಲು ಬಾಯಿ ಜ್ವರ ಕಾಣಿಸಿಕೊಂಡು ಹೈನುಗಾರಿಕೆಗೆ ಭಾರೀ ಹೊಡೆತ ನೀಡಿತ್ತು. ಇದೀಗ ವಿಚಿತ್ರ ಕಾಯಿಲೆಯಿಂದ ಹಾಲು ಉತ್ಪಾದಕರು ಆತಂಕಕ್ಕೆ ಒಳಗಾಗಿದ್ದಾರೆ.
ಪಟ್ಟಣದಲ್ಲಿ ವ್ಯಾಪಾರ, ಉದ್ಯೋಗ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಗ್ರಾಮೀಣ ಭಾಗದ ಜನರು ಕೊರೋನಾ ಮಹಾಮಾರಿಯ ಭೀತಿಯಿಂದ ಪಟ್ಟಣ ತೊರೆದು ಮತ್ತೆ ಹಳ್ಳಿಗಳತ್ತ ಮುಖ ಮಾಡಿದ್ದಾಗ ಅವರ ಬದುಕಿಗೆ ನೆರವಾಗಿದ್ದು ಹೈನುಗಾರಿಕೆ. ಕೋವಿಡ್ ಸೋಂಕು ಕಡಿಮೆಯಾಗಿ ಜನ ಜೀವನ ಸಹಜ ಸ್ಥಿತಿಯತ್ತ ಮರಳಿದಾಗಲು ಎಷ್ಟೂ ಮಂದಿ ಪಟ್ಟಣಕ್ಕೆ ತೆರಳದೆ ಹೈನುಗಾರಿಕೆಯನ್ನೇ ನಂಬಿಕೊಂಡು ಹಳ್ಳಿಯಲ್ಲೇ ಬದುಕು ಕಟ್ಟಿಕೊಂಡಿದ್ದಾರೆ.
ನಗರವಾಸ ತೊರೆದು ಹಳ್ಳಿಯಲ್ಲಿ ಹೈನುಗಾರಿಕೆಯಲ್ಲಿ ಬದುಕು ಕಟ್ಟಿಕೊಂಡ ಮಂದಿಗೆ ರಾಸುಗಳಿಗೆ ವಕ್ಕರಿಸಿದ ಕಾಲು ಬಾಯಿ ಜ್ವರ ಸಾಕಷ್ಟು ನಷ್ಟಮಾಡಿತ್ತು. ಕಾಲು ಬಾಯಿ ಜ್ವರ ವಿರುದ್ಧ ಹೋರಾಡಿ ತಮ್ಮ ರಾಸುಗಳನ್ನು ಕಾಪಾಡಿಕೊಂಡಿದ್ದ ರೈತನಿಗೆ ರಾಸುಗಳಿಗೆ ಹಬ್ಬುತ್ತಿರುವ ವಿಚಿತ್ರ ಕಾಯಿಲೆ ಚಿಂತೆಗೀಡುಮಾಡಿದೆ.
ಹೈನುಗಾರಿಕೆ ಕ್ಷೇತ್ರದಲ್ಲಿ ಫೇಮಸ್ ಆದ ಮುರ್ರಾ: ದಾಖಲೆ ಸೃಷ್ಟಿಸಿದ ಎಮ್ಮೆ
ತಾಲ್ಲೂಕಿನಲ್ಲಿ ರಾಸುಗಳಿಗೆ ಹೊಸ ರೀತಿಯ ಖಾಯಿಲೆ ಕಾಣಿಸಿಕೊಂಡಿದ್ದು, ರೋಗಕ್ಕೆ ತುತ್ತಾದ ಸೀಮೆ ಹಸುಗಳು ಕೃಶವಾಗುತ್ತಿವೆ. ಪಶುವೈದ್ಯರು ಯಾವುದೇ ಚಿಕಿತ್ಸೆ ನೀಡಿದರು ರಾಸುಗಳು ಸ್ಪಂದಿಸುತ್ತಿಲ್ಲ, ರಾಸುಗಳು ಗುಣಮುಖವಾಗುವ ಲಕ್ಷಣ ಗೋಚರಿಸುತ್ತಿಲ್ಲ, ಇದರಿಂದಾಗಿ ತಾಲ್ಲೂಕಿನ ಹೈನುಗಾರಿಕೆ ನಿರತ ರೈತರು ಕಂಗಾಲಾಗಿದ್ದಾರೆ.
ತಾಲೂಕಿನ ಮಂಕುಂದ ಗ್ರಾಮದ ರೈತ ಎಂ. ಲಿಂಗಪ್ಪರವರಿಗೆ ಸೇರಿದ ಹಸು ಕಳೆದ 15 ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಪ್ರಾರಂಭದಲ್ಲಿ ನೀರಿನಂತೆ ಬೇಧಿಯಾಗುತಿದ್ದು, ಸಗಣಿಯಲ್ಲಿ ಅತಿಯಾದ ದುರ್ವಾಸನೆ ಬರುತ್ತಿತ್ತು. ನಂತರ ಒಂದು ಕಣ್ಣಿನಲ್ಲಿ ಸಂಪೂರ್ಣವಾಗಿ (ಹೂ ಕೂರುವುದು)ಬಿಳುಪು ಬಣ್ಣಕ್ಕೆ ತಿರುಗಿದ್ದು ಎರಡು ದಿನಗಳ ನಂತರ ಮತ್ತೊಂದು ಕಣ್ಣಿಗೆ ಕೂಡ ಆ ಬಿಳುಪು ಬಣ್ಣ ಆವರಿಸಿದ್ದು ಕಣ್ಣುಗಳು ಮಂಜಾಗಿವೆ.
ಹೊಸ ಮಾದರಿ ಕಾಯಿಲೆಯಿಂದ ರಾಸುಗಳ ಕಣ್ಣುಗಳ ಸುತ್ತಲೂ ಕಜ್ಜಿಯಾಗುತ್ತಿದ್ದು, ರಾಸುಗಳ ಬಾಯಲ್ಲಿ ದ್ರವರೂಪದ ಅಂಟಿನ ರೂಪದ ಜೊಲ್ಲು ಸುರಿಸುತ್ತಿದ್ದು ಜೊತೆಗೆ ನಾಲಿಗೆಯಲ್ಲಿ ಗುಳ್ಳೆಗಳಾಗುತ್ತಿರುವುದರಿಂದ ಹಸುಗಳು ಯಾವುದೇ ರೀತಿಯ ಮೇವು ಮೇಯುತ್ತಿಲ್ಲ ನೀರು ಸಹ ಕೂಡಾ ಕುಡಿಯುತ್ತಿಲ್ಲ.
ರೋಗಕ್ಕೆ ತುತ್ತಾದ ಹಸುವಿನ ದೇಹದ ಎಲ್ಲಾ ಭಾಗಗಳಲ್ಲಿ ಕಜ್ಜಿ ಹರಡುತ್ತಿದ್ದು ಕಳೆದ 15 ದಿನಗಳಿಂದ ನಿರಂತರ ಚಿಕಿತ್ಸೆ ನೀಡುತಿದ್ದರೂ ಹಸು ಚೇತರಿಸಿಕೊಳ್ಳುವ ಬದಲು ಹಸುವಿನ ಆರೋಗ್ಯ ಹದಗೆಡುತ್ತಿದೆ. ಹಸುವಿಗೆ ಬಂದಿರುವ ರೋಗದಿಂದ ಕಂಗಾಲಾಗಿರುವ ರೈತರು, ವಿಚಿತ್ರ ರೋಗ ಸಾಂಕ್ರಾಮಿಕ ರೋಗವಾಗಿರಬಹುದು ಎಂದು ಆತಂಕಕ್ಕೆ ಒಳಗಾಗಿದ್ದಾರೆ.
ಒಂದು ಹಸುವಿನಿಂದ ಹಲವು ರಾಸುಗಳಿಗೆ ಹಬ್ಬುತ್ತಿರುವ ರೋಗವನ್ನು ನಿಯಂತ್ರಣ ಮಾಡುವುದು ಹೇಗೆ ಎಂಬ ಚಿಂತೆ ರೈತರನ್ನು ಕಾಡುತ್ತಿದೆ. ಹೊಸ ರೋಗ ಯಾವುದು ಎಂದು ಪತ್ತೆ ಹಚ್ಚಿ, ಸೂಕ್ತ ಚಿಕಿತ್ಸೆಗೆ ರೈತರಿಗೆ ಮಾರ್ಗದರ್ಶನ ಮಾಡಬೇಕಾದ ಅಧಿಕಾರಿಗಳು ಮೌನವಾಗಿದ್ದಾರೆ ಎಂದು ರೈತರು ಆರೋಪಿಸುತ್ತಿದ್ದಾರೆ. ರಾಸುಗಳಲ್ಲಿ ಕಾಣಿಸಿಕೊಂಡಿರುವ ರೋಗ ವ್ಯಾಪಕವಾಗಿ ಇತರೆ ರಾಸುಗಳಿಗೆ ಹರಡಿ ಹೈನುಗಾರಿಕೆಗೆ ಮಾರಕವಾಗುವ ಮೊದಲೇ ಪಶುಪಾಲನಾ ಅಧಿಕಾರಿಗಳು ಇತ್ತ ಗಮನಹರಿಸಿ, ವಿಚಿತ್ರ ಕಾಯಿಲೆಗೆ ಸೂಕ್ತ ಚಿಕಿತ್ಸೆ ನೀಡುವ ಮೂಲಕ ಹೈನುಗಾರಿಕೆಯನ್ನೇ ನಂಬಿರುವ ರೈತರ ಸಮಸ್ಯೆಗೆ ಪರಿಹಾರ ಒದಗಿಸುವಂತೆ ರೈತರು ಆಗ್ರಹಿಸಿದ್ದಾರೆ.
Recommended Video