ಪ್ರಧಾನಮಂತ್ರಿ ಮಾಡಿದರೂ, ನನ್ನ ಹೆಣವೂ ಬಿಜೆಪಿಗೆ ಹೋಗಲ್ಲ-ಸಿದ್ದರಾಮಯ್ಯ
ಕರ್ನಾಟಕ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ನಡುವಿನ ಜಟಾಪಟಿ ಜೋರಾಗಿದೆ. ಬಿಜೆಪಿ ವಿರುದ್ಧ ಕಿಡಿಕಾರಿರುವ ಸಿದ್ದರಾಮಯ್ಯ ಪ್ರಧಾನಮಂತ್ರಿ ಮಾಡಿದರೂ ನನ್ನ ಹೆಣವೂ ಬಿಜೆಪಿಗೆ ಹೋಗಲ್ಲ ಎಂದಿದ್ದಾರೆ.
ರಾಮನಗರ, ಜನವರಿ 30: ನನ್ನನ್ನು ರಾಷ್ಟ್ರಪತಿ ಅಥವಾ ಪ್ರಧಾನಮಂತ್ರಿ ಮಾಡಿದರೂ ನನ್ನ ಹೆಣವೂ ಬಿಜೆಪಿಗೆ ಹೋಗಲ್ಲ. ನಾನು ಆರ್ಎಸ್ಎಸ್ ಪರ ಹೋಗಲ್ಲ ಎಂದು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ರಾಮನಗರದ ಮಾಗಡಿ ಪಟ್ಟಣದಲ್ಲಿ ಮಾತನಾಡಿದ ಅವರು, ನನ್ನನ್ನು ಹಿಂದೂ ವಿರೋಧಿ ಎಂದು ಬಿಂಬಿಸುತ್ತಾರೆ. ನಾನು ಅಪ್ಪಟ ಹಿಂದೂ. ಬಿಜೆಪಿಯವರು ಜಾತಿಗಳ ಮಧ್ಯೆ ದ್ವೇಷ ಬಿತ್ತುವ ಮೂಲಕ ರಾಜಕೀಯ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದರು.
ಶೀಘ್ರದಲ್ಲೇ ರಾಮನಗರ ಜಿಲ್ಲೆಯ 2,500 ಕೆರೆಗಳಿಗೆ ನೀರು ತುಂಬಿಸಲಿದ್ದೇವೆ: ಅಶ್ವತ್ಥ್ ನಾರಾಯಣ್
ಬಿಜೆಪಿಯ ಸಿಟಿ.ರವಿ ನನ್ನನ್ನು ಸಿದ್ದರಾಮುಲ್ಲಾಖಾನ್ ಅಂತಾನೆ. ಗಾಂಧೀಜಿ ಅಪ್ಪಟ ಹಿಂದೂ ಅಲ್ವಾ. ಅಂತವರನ್ನು ಕೊಂದ ಗೂಡ್ಸೆಯನ್ನು ಪೂಜಿಸುವವರು ಇವರು ಹಿಂದೂನಾ..? ಇವರಿಗೆ ಮರ್ಯಾದೆ ಇದೆಯಾ..? ಎಂದು ಪ್ರಶ್ನಿಸಿದ ಸಿದ್ದರಾಮಯ್ಯ ಇಂತವರ ಜೊತೆ ಸೇರಿಕೊಂಡಿರುವ ಜೆಡಿಎಸ್ನವರಿಗೆ ಮಾನಮರ್ಯಾದೆ ಇದ್ಯಾ.? ಎಂದು ಜೆಡಿಎಸ್ ವಿರುದ್ಧವೂ ಕಿಡಿಕಾರಿದರು.
ಎಲ್ಲರ ಸಾಲ ಮನ್ನಾ ಮಾಡಿದ್ದು ನಾವು
ಮಾತು ಮುಂದುವರಿಸಿದ ಅವರು, ಬಸವಜಯಂತಿ ದಿನ ನಾನು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಗಂಟೆ ಒಳಗೆ ಅನ್ನಭಾಗ್ಯ, ಕೃಷಿಭಾಗ್ಯ, ಕ್ಷೀರಭಾಗ್ಯ ಜಾರಿಗೆ ತಂದೆ. ಎಲ್ಲಾ ಬಡವರಿಗೂ ಅನುಕೂಲ ಮಾಡಿಕೊಟ್ಟೆ. ಎಲ್ಲರ ಸಾಲ ಮನ್ನಾ ಮಾಡಿದ್ದು ನಾವು. ಹಿಂದೆ ನಾವು 7 ಕೆ.ಜಿ ಅಕ್ಕಿ ಉಚಿತ ಕೊಟ್ಟಿದ್ದೇವೆ. ಆದರೆ ಬಿಜೆಪಿಯವರು ಈಗ 5 ಕೆ.ಜಿಗೆ ಇಳಿಸಿದ್ದಾರೆ. ಮುಂದೆ ನಾವು ಅಧಿಕಾರಕ್ಕೆ ಬಂದರೆ ಪ್ರತಿ ವ್ಯಕ್ತಿಗೆ ಉಚಿತವಾಗಿ 10 ಕೆ.ಜಿ ಅಕ್ಕಿ ಕೊಡುತ್ತೇವೆ ಎಂದು ಘೋಷಣೆ ಮಾಡಿದರು.
ಬಾಲಕೃಷ್ಣ ಅಂತವರನ್ನು ಸೋಲಿಸಿದ್ರಲ್ಲಾ ಇದು ನ್ಯಾಯಾನಾ..?
ಜಿ.ಪರಮೇಶ್ವರ್ ಅಧ್ಯಕ್ಷತೆಯಲ್ಲಿ ಪ್ರಣಾಳಿಕೆ ರೆಡಿ ಮಾಡುತ್ತಿದ್ದೇವೆ. ಪ್ರತಿ ಗೃಹಿಣಿಗೆ ತಿಂಗಳಿಗೆ 2 ಸಾವಿರ ರೂಪಾಯಿ ಹಣ ನೀಡುತ್ತೇವೆ. ವರ್ಷಕ್ಕೆ 24 ಸಾವಿರ ರೂ ಹಣವನ್ನು ನೀಡುವ ಯೋಜನೆ ಮಾಡುತ್ತೇವೆ. ಹಾಲಿಗೆ 4 ರೂ ನಿಂದ 5 ರೂ ಹೆಚ್ಚಿಸಿ ಬೆಂಬಲ ಬೆಲೆ ನೀಡುತ್ತೇವೆ. ನಾನು ನೀಡುವ ಜನೋಪಯೋಗಿ ಕಾರ್ಯಕ್ರಮಗಳಿಗೆ ನಮ್ಮಪ್ಪನ ಮನೆಯಿಂದ ಈ ಹಣ ನೀಡುತ್ತಿಲ್ಲ. ಜನರ ತೆರಿಗೆ ಹಣವನ್ನೇ ಸರಿಯಾದ ರೀತಿ ವಿನಿಯೋಗಿಸುತ್ತೇವೆ ಎಂದರು.
ಮಾಗಡಿಗೆ ಕುಡಿಯುವ ನೀರು ಕೊಟ್ಟಿದ್ದು ನಾವು. ಬಿಜೆಪಿಯವರು ಅಥವಾ ಜೆಡಿಎಸ್ನವರು ಮಾಡಿದರಾ..? ಮಾಗಡಿ ಅಭಿವೃದ್ಧಿಗೆ ಶ್ರಮಿಸಿದ ಬಾಲಕೃಷ್ಣ, ಅಂತವರನ್ನು ಸೋಲಿಸಿದ್ರಲ್ಲಾ ಇದು ನ್ಯಾಯಾನಾ..? ದಯಮಾಡಿ ಮುಂದೆ ಬಾಲಕೃಷ್ಣ ಅವರನ್ನು ಗೆಲ್ಲಿಸಬೇಕು ಎಂದು ಸಿದ್ದರಾಮಯ್ಯ ಜನರಲ್ಲಿ ಕೈ ಮುಗಿದು ಮನವಿ ಮಾಡಿದ್ದಾರೆ.
ಮೊದಲು ಗೆಲ್ಲಿಸಿ ಆಮೇಲೆ ಮಂತ್ರಿ ಮಾಡೊಣ
ಸಿದ್ದರಾಮಯ್ಯ ಭಾಷಣದ ವೇಳೆ ಬಾಲಕೃಷ್ಣಗೆ ಮಂತ್ರಿ ಸ್ಥಾನದ ಕೂಡಿ ಎಂದು ಅವರ ಅಭಿಮಾನಿಗಳ ಕೂಗಿಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಮೊದಲು ಹೆಣ್ಣು ನೋಡಿ, ಆಮೇಲೆ ಮದುವೆ ಮಾಡೋಣ. ಹೆಣ್ಣು ನೋಡದೇ ಮದುವೆ ಮಾಡಲು ಸಾಧ್ಯವೇ. ಮೊದಲು ಗೆಲ್ಲಿಸಿ ಆಮೇಲೆ ಮಂತ್ರಿ ಮಾಡೊಣ, ಗಂಡು ತಯಾರಾಗಿದೆ, ಮೊದಲು ಎಂಎಲ್ಎ ಮಾಡಿ ಆಮೇಲೆ ತೀರ್ಮಾನ ಮಾಡೋಣ ಎಂದರು.
ಸ್ವತಂತ್ರವಾಗಿ ಸಿದ್ದರಾಮಯ್ಯ ಐದು ಸ್ಥಾನ ಗೆಲ್ಲಲಿ ಎನ್ನುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸವಾಲಿಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ನಾನ್ಯಾಕೆ ಹೊಸ ಪಕ್ಷ ಕಟ್ಟಲಿ. ಕುಮಾರಸ್ವಾಮಿ ಹೇಳಿದ ಅಂತಾ ಹೊಸ ಪಕ್ಷ ಕಟ್ಟಲು ಹೋಗಲಾ, ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್ನಿಂದ ಮಾತ್ರ ಸಾಧ್ಯ ಬಿಜೆಪಿ ಜೊತೆ ಹೋದವರು ಯಾರು ಎಂದು ಪ್ರಶ್ನಿಸಿದರು.
ನಮಗೂ ಜೆಡಿಎಸ್ಗೂ ಸಂಬಂಧವಿಲ್ಲ
ನಾವು ಒಂದು ಧರ್ಮ, ಜಾತಿಯಲ್ಲಿ ಹುಟ್ಟಿ ಇನ್ನೊಂದು ಧರ್ಮ, ಜಾತಿಯನ್ನು ದ್ವೇಷಿಸಬಾರದು. ಬಿಜೆಪಿಯವರು ಆ ಕೆಲಸವನ್ನು ಮಾಡುತ್ತಾರೆ. ಈ ಜೆಡಿಎಸ್ನವರಿಗೂ ಸಿದ್ಧಾಂತ, ವೈಚಾರಿಕತೆ ಇಲ್ಲ. ಅಧಿಕಾರಕ್ಕಾಗಿ ಯಾರ ಜೊತೆ ಬೇಕಾದರೂ ಹೋಗುತ್ತಾರೆ. ನಮಗೂ ಜೆಡಿಎಸ್ಗೂ ಸಂಬಂಧವಿಲ್ಲ, ಅವರಿಗೆ ಯಾವುದೇ ತತ್ವ ಸಿದ್ಧಾಂತ ಇಲ್ಲ, ಬಿಜೆಪಿಗೆ ಅನುಕೂಲ ಮಾಡಲು, ಕಾಂಗ್ರೆಸ್ ಓಟ್ಗಳನ್ನು ಒಡೆಯಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ಜೆಡಿಎಸ್ ವಿರುದ್ಧ ಆರೋಪಿಸಿದರು.
ರಾಜ್ಯದಲ್ಲಿ ಸಿದ್ದರಾಮಯ್ಯ ಸಿಎಂ ಆದಾಗ ದೆಹಲಿ ಎಟಿಎಂ ಆಗಿದ್ದರು ಎನ್ನುವ ಅಮಿತ್ ಶಾ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನನ್ನ ಕಾಲದಲ್ಲಿ ಯಾರಾದರೂ 40 ಪರ್ಸೆಂಟ್ ಕಮಿಷನ್ ಸರ್ಕಾರ ಎಂದು ಕರೆದಿದ್ದರಾ..? ಯಾರ ಕಾಲದಲ್ಲಿ ಕರೆದಿದ್ದಾರೆ ಎನ್ನುವುದನ್ನು ಅವರು ಮೊದಲು ಅರ್ಥ ಮಾಡಿಕೊಳ್ಳಬೇಕು. ಅಮಿತ್ ಶಾ ಚುನಾವಣೆಗಾಗಿ ಸುಳ್ಳು ಹೇಳುತ್ತಿದ್ದಾರೆ ಎಂದು ಸಿದ್ದರಾಮಯ್ಯ ಕಿಡಿಕಾರಿದರು.