Bengaluru Property: ಬೆಂಗಳೂರು ಆಸ್ತಿದಾರರಿಗೆ ಗುಡ್ನ್ಯೂಸ್: ಕಟ್ಟಡ ಉಲ್ಲಂಘನೆ ವಿನಾಯಿತಿ ಮಿತಿ ಶೇ.5 ರಿಂದ ಶೇ.15ಕ್ಕೆ ಹೆಚ್ಚಳ
Bengaluru Property: ಬೆಂಗಳೂರಿನ ಆಸ್ತಿದಾರರಿಗೆ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರು ಗುಡ್ನ್ಯೂಸ್ ಕೊಟ್ಟಿದ್ದಾರೆ. ಕಟ್ಟಡ ಉಲ್ಲಂಘನೆ ವಿನಾಯಿತಿ ಮಿತಿ ಶೇ.5 ರಿಂದ ಶೇ.15 ಕ್ಕೆ ಹೆಚ್ಚಳ ಮಾಡಿರುವುದಾಗಿ ತಿಳಿಸಿದ್ದಾರೆ.
ಕಟ್ಟಡದ ಉಲ್ಲಂಘನೆ ವಿನಾಯಿತಿ ಮಿತಿಯನ್ನು (ಎತ್ತರ, ಎಫ್ ಎಆರ್, ಸೆಟ್ ಬ್ಯಾಕ್) ಶೇ.5 ರ ಬದಲಾಗಿ ಶೇ.15 ಕ್ಕೆ ಹೆಚ್ಚಿಸಲಾಗಿದೆ. ಶೇ.15 ರಷ್ಟು ಪ್ರಮಾಣದ ಉಲ್ಲಂಘನೆಗಳಿಗೆ ದಂಡ ಪಾವತಿಸಿಕೊಂಡು ಸ್ವಾಧೀನಾನುಭವ ಪ್ರಮಾಣ ಪತ್ರ ನೀಡಲು ಒಪ್ಪಿಗೆ ನೀಡಲಾಗಿದೆ. ಸುಪ್ರೀಂ ಕೋರ್ಟ್ ಸ್ವಾಧೀನಾನುಭವ ಪ್ರಮಾಣ ಪತ್ರ ಪಡೆಯದ ಕಟ್ಟಡಗಳಿಗೆ ವಿದ್ಯುತ್ ಹಾಗೂ ನೀರು ಸರಬರಾಜು ಸೌಕರ್ಯ ಒದಗಿಸಬಾರದೆಂದು ಆದೇಶಿಸಿದೆ. ಈ ಸಮಸ್ಯೆ ನಿವಾರಿಸಲು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಇದರ ಬಗ್ಗೆ ತೀರ್ಮಾನ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

ನಾವು ಅಕ್ರಮ ಸಕ್ರಮ ಮಾಡುತ್ತಿಲ್ಲ. ನಗರದಲ್ಲಿ ಭೂಮಿಯ ತೀವ್ರ ಬೇಡಿಕೆಯಿಂದ ಹಾಗೂ ದಿನೇ ದಿನೇ ಬೆಳವಣಿಗೆಗಳ ಒತ್ತಡದಿಂದ ನಿವೇಶನ/ ಸ್ವತ್ತಿನ ಮಾಲೀಕರು ನಿಯಮಾನುಸಾರ ಸೆಟ್ ಬ್ಯಾಕ್ ಬಿಡದೆ ನಕ್ಷೆ ಉಲ್ಲಂಘನೆ ಮಾಡಿ ಕಟ್ಟಡಗಳನ್ನು ನಿರ್ಮಾಣ ಮಾಡಿದ್ದಾರೆ. 20/30, 30/40, 40/60 ಅಳತೆಯ ನಿವೇಶನಗಳಿಗೆ ಗರಿಷ್ಠ ಶೇ. 50 ರಷ್ಟು ಸೆಟ್ ಬ್ಯಾಕ್ ರಿಯಾಯಿತಿ ನೀಡಲು ಕಾಯ್ದೆಯಲ್ಲಿ ಅವಕಾಶವಿದೆ. ನಾವೀಗ ಶೇ. 15 ರಷ್ಟು ವಿನಾಯಿತಿ ನೀಡಿದ್ದೇವೆ" ಎಂದು ಹೇಳಿದ್ದಾರೆ.
2020 ರಲ್ಲಿ ಬಿಜೆಪಿ ಸರ್ಕಾರ '38 ಡಿ' ಎನ್ನುವ ಕಾನೂನು ಜಾರಿಗೆ ತಂದಿತ್ತು. ಸುಮಾರು 1 ಲಕ್ಷಕ್ಕೂ ಹೆಚ್ಚು ಜನ ಬಿಡಿಎ ಲೇಔಟ್ ಗಳಲ್ಲಿ ಮನೆಗಳನ್ನು ಕಟ್ಟಿಕೊಂಡಿದ್ದರು. ಇದರಲ್ಲಿ 570 ಜನ ಮಾತ್ರ ಅರ್ಜಿ ಸಲ್ಲಿಸಿದ್ದರು. 200 ರಿಂದ 600 ಅಡಿವರೆಗೆ ಶೇ.10 ರಷ್ಟು, 600 ರಿಂದ 900 ಅಡಿವರೆಗೆ ಶೇ.25 ರಷ್ಟು, 1200 ರಿಂದ 2400 ವರೆಗೆ ಶೇ.40 ರಷ್ಟು, 2400 ರಿಂದ 4000 ವರೆಗೂ ಶೇ.50 ರಷ್ಟು ಗೈಡೆನ್ಸ್ ವ್ಯಾಲ್ಯೂ ಮೇಲೆ ಶುಲ್ಕ ಕಟ್ಟಲು ಕಾನೂನಿನಲ್ಲಿ ಅವಕಾಶ ಮಾಡಿದ್ದರು.
ಆಗ 6 ತಿಂಗಳ ಕಾಲ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಆದರೆ ಯಾರೂ ಕೂಡ ಶುಲ್ಕ ಕಟ್ಟಲು ಮುಂದೆ ಬರಲಿಲ್ಲ. ಶುಲ್ಕ ಹೆಚ್ಚಾಯಿತು ಎಂದು ಯೋಜನೆ ಪ್ರಯೋಜನ ಪಡೆಯಲಿಲ್ಲ. ಈಗಲೂ ಈ ದಾಖಲೆಗಳು ಬರೀ ಸರ್ಕಾರಿ ದಾಖಲೆಗಳಾಗಿ ಉಳಿದುಕೊಂಡಿವೆ ಎಂದರು.
ಈಗ ಅರ್ಜಿ ಹಾಕಲು ಜೂನ್ 15 ರಿಂದ ಒಟ್ಟು ಮೂರು ತಿಂಗಳ ಕಾಲ ಅವಕಾಶ ಕಲ್ಪಿಸಿಕೊಡಲಾಗುವುದು. ಓಟಿಎಸ್ ಜಾರಿ ಮಾಡಲಾಗುವುದು. ಮೊದಲ 100 ದಿನ ಅರ್ಜಿ ಸಲ್ಲಿಸಲು, 100 ದಿನ ಅರ್ಜಿ ಪರಿಶೀಲನೆಗೆ, ನಂತರ ಪಾವತಿಗೆ ಅವಕಾಶ ನೀಡಲಾಗವುದು. 1 ವರ್ಷ ಕಾಲಮಿತಿಯೊಳಗೆ ಅಂದರೆ 2027 ರ ಜೂನ್ ಗೆ ಈ ಯೋಜನೆ ಮುಕ್ತಾಯಗೊಳಿಸಲಾಗವುದು ಎಂದಿದ್ದಾರೆ.
ಮೂರು ತಿಂಗಳ ಒಳಗೆ ಅರ್ಜಿ ಸಲ್ಲಿಸಿದವರು ಶೇ 10 ರ ಬದಲು ಶೇ. 5 ರಷ್ಟು ಮಾತ್ರ ಪಾವತಿ ಮಾಡಬಹುದು. ಅವರಿಗೆ ಶೇ.50 ರಷ್ಟು ರಿಯಾಯಿತಿ ದೊರೆಯಲಿದೆ. ಕಾನೂನಿನ ಚೌಕಟ್ಟಿನಲ್ಲಿಯೇ ರಿಯಾಯಿತಿ ನೀಡಲಾಗಿದೆ. ಗೈಡೆನ್ಸ್ ವ್ಯಾಲ್ಯೂ ಪೈಕಿ ಶೇ. 25 ಇರುವ ಕಡೆ ಶೇ 12.5, ಶೇ.40 ಇರುವ ಕಡೆ ಶೇ.20 ರಷ್ಟು, ಶೇ.50 ಇರುವ ಕಡೆ ಶೇ.25 ರಷ್ಟು ರಿಯಾಯಿತಿ ನೀಡಲಾಗುವುದು.
ಈ ಬಗ್ಗೆ ಮುಖ್ಯಮಂತ್ರಿಯವರು ಸೇರಿದಂತೆ ಸಚಿವರ ಬಳಿಯೂ ಚರ್ಚೆ ನಡೆಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಮುಂದುವರಿದು ಈ ಯೋಜನೆಯ ಸೌಲಭ್ಯ ಬಳಸಿಕೊಳ್ಳದೇ ಇದ್ದರೆ ಕಾನೂನು ರೀತಿ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಈಗಾಗಲೇ ಬಿಡಿಎ 2 ಸಾವಿರ ಕೋಟಿ ಮೌಲ್ಯದ ಆಸ್ತಿಗಳನ್ನು ವಶಕ್ಕೆ ಪಡೆದಿದೆ ಎಂದಿದ್ದಾರೆ.
ಶಿವರಾಂ ಕಾರಂತ ಬಡಾವಣೆಯ ಭೂ ಮಾಲೀಕರಿಗೆ 18 ಸಾವಿರ ನಿವೇಶನ ಹಂಚಿಕೆ
ಇನ್ನು 3,052 ಭೂ ಮಾಲೀಕರು ತಮ್ಮ ಆಸ್ತಿಯನ್ನು ಶಿವರಾಂ ಕಾರಂತ ಬಡಾವಣೆಗೆ ನೀಡಿದ್ದರು. ಅನೇಕ ಆಸ್ತಿ ಮಾಲೀಕರು ಬೇರೆಯವರಿಗೆ ಆಸ್ತಿ ಮಾರಾಟ ಮಾಡಿದ್ದು ಸೇರಿದಂತೆ ಅನೇಕ ತೊಡಕುಗಳಿದ್ದವು. ಈಗ ನ್ಯಾಯಾಲಯದ ಅನುಮತಿ ಪಡೆದು 18 ಸಾವಿರ ನಿವೇಶನಗಳನ್ನು ಭೂ ಮಾಲೀಕರಿಗೆ ನೀಡಲಾಗುತ್ತಿದೆ. ಮೇ 15 ನೇ ತಾರೀಕಿನಿಂದಲೇ ನಿವೇಶನ ಪಡೆದುಕೊಳ್ಳಲು ಅವಕಾಶ ನೀಡಲಾಗಿದೆ. ಕೇಂದ್ರಿಯ ಇ ಗವರ್ನೆನ್ಸ್ ನಿಂದ ಸಾಫ್ಟವೇರ್ ಅಭಿವೃದ್ಧಿಪಡಿಸಿ ಅದರ ಮೂಲಕ ಹಂಚಿಕೆ ವ್ಯವಸ್ಥೆ ಮಾಡಲಾಗಿದೆ ಎಂದು ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ.
ಮುಂದುವರಿದು 1, 2 ಎಕರೆ ಅಥವಾ ಹೆಚ್ಚು ಭೂಮಿ ಹೊಂದಿದ್ದ ಮಾಲೀಕರಿಗೆ ಪ್ರತ್ಯೇಕ ಅವಕಾಶ ಕಲ್ಪಿಸಲಾಗಿದೆ. ಒಂದೇ ಜಾಗದಲ್ಲಿ ದೊಡ್ಡ ನಿವೇಶನ ಬೇಕು ಎಂದವರಿಗೂ ಅವಕಾಶ ನೀಡುತ್ತೇವೆ ಎಂದು ಹೇಳಿದ್ದೆವು. ಇದಕ್ಕೆ 7 ಜನರು ಮಾತ್ರ ಅರ್ಜಿ ಸಲ್ಲಿಕೆ ಮಾಡಿದ್ದಾರೆ. 1 ಎಕರೆ ಜಮೀನು ಇದ್ದರೆ ಒಂದೇ ಜಾಗದಲ್ಲಿ 9,583 ಚದರ ಅಡಿ ಜಾಗ ನೀಡಲಾಗುವುದು. ಇದರ ಮೂಲಕ ಎತ್ತರದ ಕಟ್ಟಡಗಳಿಗೆ ಅವಕಾಶ ಮಾಡಿಕೊಡಲು ಈ ರೀತಿ ಅನುಕೂಲ ಕಲ್ಪಿಸಲಾಗಿದೆ ಎಂದು ಹೇಳಿದ್ದಾರೆ.













Click it and Unblock the Notifications