ಸಿ.ಪಿ.ಯೋಗೇಶ್ವರ್ ವಿರುದ್ಧ ತಿರುಗಿ ಬಿದ್ದ ರಾಮನಗರ ಬಿಜೆಪಿ ಮುಖಂಡರು

ರಾಮನಗರ, ನವೆಂಬರ್.05: ರಾಜಕೀಯ ಇತಿಹಾಸದಲ್ಲಿಯೇ ನಡೆಯದ ರಾಜಕೀಯ ಬೆಳವಣಿಗೆ ರಾಮನಗರ ವಿಧಾನಸಭಾ ಕ್ಷೇತ್ರ ಉಪಚುನಾವಣೆಯಲ್ಲಿ ನಡೆದಿದೆ. ಕೈ ಪಕ್ಷದಿಂದ ಕರೆತಂದು ಟಿಕೆಟ್ ನೀಡಿದ ಬಿಜೆಪಿಯ ರಾಜ್ಯ ನಾಯಕರಿಗೆ ಮುಖಭಂಗವಾಗಿದ್ದು, ರಾಜ್ಯ ನಾಯಕರ ಈ ನಡವಳಿಕೆ ಸ್ಥಳೀಯ ಬಿಜೆಪಿ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ.

ನಾಳೆ(ನ.6) ಮತ ಎಣಿಕೆಗೆ ಒಂದು ಕಡೆ ಸಿದ್ಧತೆ ನಡೆದಿರುವಾಗಲೇ ಬಿಜೆಪಿ ಅನುಭವಿಸಿದ ಮುಜುಗರ ಮತ್ತು ಅದರ ಕಾರ್ಯಕರ್ತರ ಆಕ್ರೋಶ ನಿಧಾನವಾಗಿ ಹೊರಬರತೊಡಗಿದ್ದು, ಇದರಿಂದ ಮುಂದಿನ ಲೋಕಸಭಾ ಚುನಾವಣೆ ಮೇಲೆ ಪರಿಣಾಮ ಬೀರುವ ಎಲ್ಲ ಲಕ್ಷಣಗಳು ಕಾಣತೊಡಗಿದೆ.

ರಾಮನಗರದಲ್ಲಿ ಜೆಡಿಎಸ್ ಅಲೆಯಿದೆ. ಹೀಗಾಗಿ ಗೆಲುವು ನಮಗೆ ಸುಲಭವಲ್ಲ ಎಂಬುದು ಬಿಜೆಪಿಯ ರಾಜ್ಯ ನಾಯಕರಿಗೆ ಚೆನ್ನಾಗಿಯೇ ಗೊತ್ತಿತ್ತು. ಇಲ್ಲಿ ಘಟಾನುಘಟಿ ನಾಯಕ ಅದರಲ್ಲೂ ಪಕ್ಷದಲ್ಲಿಯೇ ಇರುವ ಕಟ್ಟಾ ಬಿಜೆಪಿಗನಿಗೆ ಟಿಕೆಟ್ ನೀಡಿದ್ದರೆ ಬಹುಶಃ ಬಿಜೆಪಿಗೆ ಇವತ್ತು ತಲೆ ತಗ್ಗಿಸಬೇಕಾದ ಪರಿಸ್ಥಿತಿ ಬರುತ್ತಿರಲಿಲ್ಲವೇನೋ?

ದೀಪಾವಳಿ ವಿಶೇಷ ಪುರವಣಿ

ಆದರೆ ಬಿಜೆಪಿ ರಾಜ್ಯ ನಾಯಕರು ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ಅವರನ್ನು ನಂಬಿ ಎಲ್ಲ ತೀರ್ಮಾನವನ್ನು ಅವರಿಗೆ ಬಿಟ್ಟುಬಿಟ್ಟರು. ಇದರಿಂದ ಕಾಂಗ್ರೆಸ್ ಹಿರಿಯ ಮುಖಂಡ ವಿಧಾನಪರಿಷತ್ ಸದಸ್ಯ ಸಿ.ಎಂ. ಲಿಂಗಪ್ಪ ಅವರ ಪುತ್ರ ಕಾಂಗ್ರೆಸ್ ನಲ್ಲಿ ಗುರುತಿಸಿಕೊಂಡಿದ್ದ ಎಲ್.ಚಂದ್ರಶೇಖರ್ ಅವರನ್ನು ಬಿಜೆಪಿಗೆ ಕರೆ ತರುವ ಪ್ರಯತ್ನ ಮಾಡಿದರು.

ಅವತ್ತು ಕಾಂಗ್ರೆಸ್ ನಿಂದ ಚಂದ್ರಶೇಖರ್ ಅವರನ್ನು ಬಿಜೆಪಿಗೆ ಕರೆ ತಂದಿದ್ದೇ ದೊಡ್ಡ ಸಾಧನೆ ಎಂಬಂತೆ ಬಿಂಬಿಸಲಾಗಿತ್ತು. ಬಿಜೆಪಿ ಹಿರಿಯ ನಾಯಕರ ಮಾತುಗಳನ್ನು ಕೇಳಿ ಡಿಕೆ ಬ್ರದರ್ಸ್ ಮೀಸೆ ಕೆಳಗೆ ಸಣ್ಣಗೆ ನಕ್ಕಿದ್ದರು.

 ಭುಗಿಲೆದ್ದ ಅಸಮಾಧಾನ

ಭುಗಿಲೆದ್ದ ಅಸಮಾಧಾನ

ಯೋಗೇಶ್ವರ್ ಅವರಿಗೆ ಒಂದಷ್ಟು ಜವಾಬ್ದಾರಿಗಳನ್ನು ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಬಾವುಟ ಕೊಟ್ಟು ಹೋದವರು ರಾಮನಗರಕ್ಕೆ ಮತ್ತೆ ಕಾಲಿಡಲಿಲ್ಲ. ಹೋಗಲಿ ರಾಮನಗರದಲ್ಲಿ ರಾಜಕೀಯ ಚಟುವಟಿಕೆಗಳು ಹೇಗೆ ನಡೆಯುತ್ತಿವೆ ಎಂದು ಕೇಳಲಿಲ್ಲ. ಕಾರ್ಯಕರ್ತರ ಕಷ್ಟ ಸುಖ ಆಲಿಸುವ ಸೌಜನ್ಯವಂತೂ ತೋರಲೇ ಇಲ್ಲ.

ಬೇರೆ ಪಕ್ಷದಿಂದ ನಾಯಕನನ್ನು ಕರೆತಂದು ಟಿಕೆಟ್ ಕೊಟ್ಟಾಗಲೇ ಬಿಜೆಪಿಯ ದಿವಾಳಿತನ ಎಲ್ಲರಿಗೂ ಗೊತ್ತಾಗಿ ಹೋಗಿತ್ತು. ರಾಮನಗರದಲ್ಲಿ ಪ್ರಭಾವಿ ನಾಯಕನನ್ನು ಸೃಷ್ಟಿ ಮಾಡುವಲ್ಲಿ ವಿಫಲರಾದ ರಾಜ್ಯ ಬಿಜೆಪಿಯ ಮಹಾನ್ ನಾಯಕರ ವಿರುದ್ಧವೇ ಅಸಮಾಧಾನಗಳು ಭುಗಿಲೆದ್ದಿದ್ದವು.

 ಆಕ್ರೋಶ ಹೊರಹಾಕಿದ ಕಾರ್ಯಕರ್ತರು

ಆಕ್ರೋಶ ಹೊರಹಾಕಿದ ಕಾರ್ಯಕರ್ತರು

ಯಾರನ್ನೋ ಕರೆದು ತಂದು ಅವರಿಗೆ ಟಿಕೆಟ್ ನೀಡುವ ಚಾಳಿ ವಿರುದ್ಧ ಪಕ್ಷ ಸಂಘಟನೆ ಮಾಡಿಕೊಂಡು ಪಕ್ಷಕ್ಕಾಗಿ ದುಡಿದ ನಿಷ್ಠಾವಂತ ಕಾರ್ಯಕರ್ತರು ತಮ್ಮ ಆಕ್ರೋಶವನ್ನು ಹೊರ ಹಾಕಿದ್ದರು. ಆದರೆ ಅದ್ಯಾವುದಕ್ಕೂ ಸೊಪ್ಪು ಹಾಕದ ಯೋಗೇಶ್ವರ್ ಅವರು ಚಂದ್ರಶೇಖರ್ ಅವರನ್ನು ಕರೆ ತಂದು ಅಭ್ಯರ್ಥಿಯಾಗಿ ಕಣಕ್ಕಿಳಿಸುವಲ್ಲಿ ಸಫಲರಾಗಿ ಬಿಟ್ಟರು.

ಇವತ್ತು ಚಂದ್ರಶೇಖರ್ ಅವರು ಸಮರ ಸಮಯದಲ್ಲೇ ಶಸ್ತ್ರಾಸ್ತ್ರಗಳನ್ನು ಕೆಳಗಿಟ್ಟ ಬಗ್ಗೆ ಹಲವು ಕಾರಣಗಳನ್ನು ನೀಡಿದ್ದಾರೆ. ಅದು ನಿಜ ಎಂಬುದಾಗಿ ಬಿಜೆಪಿ ಪಕ್ಷದ ಮುಖಂಡರೇ ಒಪ್ಪಿಕೊಳ್ಳುತ್ತಿದ್ದಾರೆ. ಜತೆಗೆ ಜವಬ್ದಾರಿ ವಹಿಸಿಕೊಂಡ ಯೋಗೇಶ್ವರ್ ಅದರಿಂದ ನುಣುಚಿಕೊಂಡಿದ್ದನ್ನು ಕೂಡ ಖಂಡಿಸುತ್ತಿದ್ದಾರೆ.

 ಮತದಾರರಿಗೆ ಅಪಮಾನ

ಮತದಾರರಿಗೆ ಅಪಮಾನ

ಬಿಜೆಪಿ ಅಭ್ಯರ್ಥಿ ಚಂದ್ರಶೇಖರ್ ನಿಲುವಿನಿಂದ ಕ್ಷೇತ್ರದ ಮತದಾರರಿಗೆ ಅಪಮಾನವಾಗಿದ್ದು, ಇದೆಲ್ಲ ರಾಜಕೀಯ ಬೆಳವಣಿಗೆಗಳಿಗೆ ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ಅವರೇ ನೇರ ಕಾರಣ ಎಂಬುದು ಹಲವರ ಅಭಿಪ್ರಾಯವಾಗಿದೆ.

ಎಂಇಐಎಲ್ ನಿಗಮದ ಮಾಜಿ ಅಧ್ಯಕ್ಷ ಕೆ.ಶೇಷಾದ್ರಿ(ಶಶಿ) ಅವರು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅವರ ವಿರುದ್ಧ ಹರಿಹಾಯ್ದಿದ್ದು, ಯೋಗೇಶ್ವರ್ ಮತದಾನಕ್ಕೆ ಎರಡು ದಿನ ಇರುವಾಗಲೇ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದು ಏಕೆ? ಇಡೀ ದೇಶದಲ್ಲಿಯೆ ರಾಷ್ಟ್ರೀಯ ಪಕ್ಷವೊಂದರ ಅಭ್ಯರ್ಥಿ ಕಣದಿಂದ ನಿವೃತ್ತಿ ಘೋಷಣೆ ಮಾಡಿ, ಎದುರಾಳಿ ಪಕ್ಷಕ್ಕೆ ಬೆಂಬಲ ವ್ಯಕ್ತಪಡಿಸಿದ ಘಟನೆ ನಡೆದಿಲ್ಲ ಎಂದು ತಿಳಿಸಿದ್ದಾರೆ.

 ಸಿ.ಪಿ.ಯೋಗೇಶ್ವರ್ ಪಾಲಿದೆ

ಸಿ.ಪಿ.ಯೋಗೇಶ್ವರ್ ಪಾಲಿದೆ

ರಾಮನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಲ್.ಚಂದ್ರಶೇಖರ್ ಚುನಾವಣಾ ಕಣದಿಂದ ನಿವೃತ್ತಿ ಘೋಷಿಸಿ, ಜನರ ಸ್ವಾಭಿಮಾನಕ್ಕೆ ಮಾಡಿದ ಅವಮಾನದಲ್ಲಿ, ಚಂದ್ರಶೇಖರ್ ಅವರನ್ನು ಬಿಜೆಪಿಗೆ ಕರೆದುಕೊಂಡು ಹೋದ ಸಿ.ಪಿ.ಯೋಗೇಶ್ವರ್ ಅವರ ಸಹ ಸಮಪಾಲು ಇದೆ ಎಂದು ಕೆ.ಶೇಷಾದ್ರಿ ಹೇಳಿದ್ದಾರೆ.

ನಾಳೆ(ನ.6) ಮತ ಎಣಿಕೆ ನಡೆದು ಮುಂದಿನ ರಾಜಕೀಯ ಬೆಳವಣಿಗೆಗಳು ಏನಾಗುತ್ತವೆಯೋ ಅದು ಆಚೆಗಿರಲಿ. ಆದರೆ ಬಿಜೆಪಿ ಅನುಭವಿಸಿದ ಮುಜುಗರ ಮತ್ತು ಅವಮಾನ ನಾಯಕರನ್ನು ಕಾಡುತ್ತಲೇ ಇರುತ್ತದೆ. ಆದರ ಜತೆಗೆ ಇಲ್ಲಿ ಬಿಜೆಪಿ ಪಕ್ಷಕ್ಕಾಗಿ ಹಗಲಿರುಳು ದುಡಿದು ಸಂಘಟನೆ ಮಾಡಿದ ಕಾರ್ಯಕರ್ತರಂತು ಬಲಿಪಶುವಾಗಿದ್ದಂತು ಸತ್ಯ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+