ಡಿಕೆಶಿ ಹುಟ್ಟೂರು ದೊಡ್ಡಾಲಳ್ಳಿಯಲ್ಲಿ ತೀವ್ರ ಆಕ್ರೋಶ; ಮೋದಿ, ಶಾ ಅಣಕು ತಿಥಿ
ರಾಮನಗರ, ಸೆಪ್ಟೆಂಬರ್ 5: ಡಿ.ಕೆ.ಶಿವಕುಮಾರ್ ಬಂಧನ ವಿರೋಧಿಸಿ ನಿನ್ನೆಯಿಂದ ಆರಂಭಗೊಂಡಿದ್ದ ಪ್ರತಿಭಟನೆ ಇಂದೂ ಮುಂದುವರೆದಿದೆ. ಸೆಪ್ಟೆಂಬರ್ 13ರವರೆಗೂ ಡಿಕೆಶಿ ಇಡಿ ಕಸ್ಟಡಿಯಲ್ಲಿ ಇರಬೇಕೆಂದು ಘೋಷಣೆಯಾದ ಬೆನ್ನಲ್ಲೇ ಆಕ್ರೋಶ ತೀವ್ರಗೊಂಡಿದೆ. ಜಿಲ್ಲೆಯಲ್ಲಿ ಎರಡನೇ ದಿನವೂ ಬಂದ್ ಮುಂದುವರೆದಿದೆ.
ಬಿಡದಿಯಲ್ಲಿ ತಾಲೂಕು ಪಂಚಾಯ್ತಿ ಅಧ್ಯಕ್ಷ ನಟರಾಜ್ ನೇತೃತ್ವದಲ್ಲಿ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಬೈಕ್ ಜಾಥಾ ನಡೆಸಲಾಗಿದೆ. ಮಾಗಡಿಯಲ್ಲಿ ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ನೇತೃತ್ವದಲ್ಲಿ ಜೆಡಿಎಸ್ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ ನಡೆದಿದೆ. ಚನ್ನಪಟ್ಟಣದಲ್ಲಿ ಕೈ-ತೆನೆ ಪಕ್ಷದ ಕಾರ್ಯಕರ್ತರು ಬೆಂಗಳೂರು- ಮೈಸೂರು ಹೆದ್ದಾರಿ ತಡೆದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಮನಗರದಲ್ಲಿ ಮುಂಜಾನೆ ಬೈಕ್ ಜಾಥಾ ನಡೆಸುವ ಮೂಲಕ ಜೆಡಿಎಸ್-ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಡಿಕೆಶಿ ಕ್ಷೇತ್ರ ಕನಕಪುರದಲ್ಲಿ ಬೆಂಗಳೂರು -ಮಳವಳ್ಳಿ ಹೆದ್ದಾರಿ ತಡೆದು ಚನ್ನಬಸಪ್ಪ ಸರ್ಕಲ್ ನಲ್ಲಿ ಪ್ರತಿಭಟನೆ ನಡೆಸಲಾಗಿದೆ. ತಳ್ಳುವ ಗಾಡಿ ಮೇಲೆ ಮೋದಿ ಮತ್ತು ಅಮಿತ್ ಶಾ ಅವರ ಭಾವಚಿತ್ರವಿಟ್ಟು, ಅಣಕು ತಿಥಿ ನಡೆಸಿದ್ದಾರೆ. ಡಿಕೆಶಿ ಹುಟ್ಟೂರು ದೊಡ್ಡಾಲಳ್ಳಿ ಗ್ರಾಮದಲ್ಲಿ ಡಿಕೆಶಿ ಬೆಂಬಲಿಗರು ಟೈರ್ ಗಳಿಗೆ ಬೆಂಕಿ ಹಚ್ಚಿ, ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ.
ಜಿಲ್ಲೆಯಲ್ಲಿ ಬಂದ್ ಹಿನ್ನಲೆಯಲ್ಲಿ ಅಂಗಡಿಗಳು ಮುಚ್ವಿದ್ದು, ರಸ್ತೆ ಸಂಚಾರ ವಿರಳವಾಗಿದೆ.












Click it and Unblock the Notifications