ರಾಮನಗರ ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯ: ಹಾವು ಕಚ್ಚಿ ಆಸ್ಪತ್ರೆ ಸೇರಿದ ಪೌರ ಕಾರ್ಮಿಕ
ರಾಮನಗರ, ಜುಲೈ, 27: ರಾಮನಗರ ಪಟ್ಟಣದ ಹೊರವಯದ ಹುಣಸನಹಳ್ಳಿ ಬಳಿ ಕಸ ಶೇಖರಣಾ ಘಟಕದಲ್ಲಿ ಕೆಲಸ ಮಾಡುವ ವೇಳೆ ಹಾವು ಕಚ್ಚಿ 32 ವರ್ಷದ ವೇಣು ಎಂಬ ಪೌರ ಕಾರ್ಮಿಕ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾನೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಾರ್ಮಿಕ ತೊಂದರೆಗೆ ಈಡಾಗಿದ್ದಾನೆ.
ಹುಣಸನಹಳ್ಳಿ ಗ್ರಾಮದ ಬಳಿ ಇರುವ ಕಸ ಶೇಖರಣಾ ಘಟಕದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಪೌರ ಕಾರ್ಮಿಕ 32 ವರ್ಷದ ವೇಣು ಎಂಬುವರಿಗೆ ಹಾವು ಕಚ್ಚಿದ್ದು, ತಕ್ಷಣ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮಂಡ್ಯ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಅಲ್ಲಿನ ಸ್ಥಳೀಯರು ಮಾಹಿತಿ ನೀಡಿದ್ದಾರೆ.
ನಗರದ ಸ್ವಚ್ಚತೆ ವಿಚಾರದಲ್ಲಿ ಸದಾ ಜೀವವನ್ನೇ ಪಣಕ್ಕಿಟ್ಟು ಕಾರ್ಯ ನಿರ್ವಹಿಸುವ ಪೌರ ಕಾರ್ಮಿಕರು ಸಾವು ಬದುಕಿನ ನಡುವೆ ನಿರಂತರವಾಗಿ ಹೋರಾಟ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಹಾವು ಕಡಿತದಿಂದ ಆಸ್ಪತ್ರೆ ಸೇರಿರುವ ವೇಣು ಪ್ರಕರಣವೇ ತಾಜಾ ಉದಾಹರಣೆಯಾಗಿದೆ.
ಹಾವು ಕಡಿತದಿಂದ ಆಸ್ಪತ್ರೆ ಸೇರಿರುವ ವೇಣು ಕಳೆದ 2017 ರಿಂದ ನೇರ ಪಾವತಿ ಆದಾರದಲ್ಲಿ ಪೌರ ಕಾರ್ಮಿಕನಾಗಿ ಕಾರ್ಯ ನಿರ್ವಹಿಸುತ್ತಿದ್ದಾನೆ. ಈಗಾಗಲೇ ಕಳೆದ ಬಾರಿ ರಾಮನಗರ ನಗರಸಭೆ ಕೇಂದ್ರ ಸರ್ಕಾರ ನೀಡುವ ಸ್ವಚ್ಚನಗರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ನಗರಸಭೆಯ ಸಾಧನೆಗೆ ಪ್ರಾಮಾಣಿವಾಗಿ ಶ್ರಮಿಸಿದ ಪೌರಕಾರ್ಮಿಕರ ಹಿತ ಕಾಪಾಡುವಲ್ಲಿ ವಿಫಲವಾಗಿದೆ. ಸರ್ಕಾರದ ನಿಯಮದಂತೆ ಪೌರ ಕಾರ್ಮಿಕರು ಕೆಲಸ ನಿರ್ವಹಿಸುವ ವೇಳೆ ಸಿಗಬೇಕಾದ ಮೂಲಭೂತ ಸೌಲಭ್ಯಗಳನ್ನ ನಗರಸಭೆ ನೀಡುತ್ತಿಲ್ಲ ಎನ್ನುವ ಆರೋಪಗಳು ಕೇಳಿ ಬರುತ್ತಿವೆ.
ಅಧಿಕಾರಿಗಳ ನಿರ್ಲಕ್ಷ್ಯ:
ಪೌರ ಕಾರ್ಮಿಕ ಕೆಲಸ ನಿರ್ವಹಿಸುವ ಸಮಯದಲ್ಲಿ ಸುರಕ್ಷತಾ ಸಾದನಗಳನ್ನು ಕಡ್ಡಾಯವಾಗಿ ಉಪಯೋಗಿಸಬೇಕು ಎಂಬ ನಿಯಮವಿದೆ. ಅದರೆ ನಗರಸಭೆ ಈ ಬಗ್ಗೆ ಗಮನ ಹರಿಸದೇ ನಿರ್ಲಕ್ಷ್ಯ ತೋರುತ್ತಿದೆ ಎನ್ನುವ ಆರೋಪ ಕೇಳಿಬರುತ್ತಿದೆ. ಪೌರ ಕಾರ್ಮಿಕರ ಜವಾಬ್ದಾರಿ ಹೊತ್ತಿರುವ ಅಧಿಕಾರಿ ಕೇಂದ್ರ ಸ್ಥಾನದಲ್ಲಿ ವಾಸವಿದ್ದು, ಎಲ್ಲವನ್ನೂ ನಿರ್ವಹಣೆ ಮಾಡಿಸುವ ಜವಾಬ್ದಾರಿ ಕೂಡ ಇರುತ್ತೆ.
ಆದರೆ ನಗರಸಭೆಯ ಹಿರಿಯ ಅಧಿಕಾರಿ ಸುಬ್ರಮಣ್ಯ ಅವರು ಬೆಂಗಳೂರಿನಲ್ಲಿ ವಾಸವಿದ್ದು, ಪ್ರತಿದಿನ ಬೆಂಗಳೂರಿನಿಂದ ನಗರಸಭೆಯ ಕಾರ್ಯಾಲಯಕ್ಕೆ ಹೋಗಿ ಬರುತ್ತಿದ್ದಾರೆ. ಅವರು ಪೌರ ಕಾರ್ಮಿಕರ ಸುರಕ್ಷತೆಯ ವಿಚಾರದಲ್ಲಿ ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎನ್ನಲಾಗಿದೆ. ಸೂರ್ಯ ಉದಯಿಸುವ ಮುನ್ನವೇ ಕೆಲಸಕ್ಕೆ ಹಾಜರಾಗುವ ಪೌರ ಕಾರ್ಮಿಕರಿಗೆ ಉತ್ತಮ ಗಣಮಟ್ಟದ ಉಪಹಾರ ನೀಡುವ ವ್ಯವಸ್ಥೆಯಲ್ಲೂ ತುಂಬಾ ಸಮಸ್ಯಗಳು ಇವೆ. ಅಲ್ಲದೆ ಪೌರ ಕಾರ್ಮಿಕರಿಗೆ ನಗರಸಭೆಯ ಸಿಬ್ಬಂದಿ ಕಿರುಕುಳ ನೀಡುತ್ತಿದ್ದಾರೆ ಎನ್ನುವ ಆರೋಪ ಕೂಡ ಹೆಚ್ಚಾಗಿ ಕೇಳಿ ಬರುತ್ತಿದೆ.
ಪೌರಾಯುಕ್ತ ನಂದಕುಮಾರ್ ಪ್ರತಿಕ್ರಿಯೆ:
ನಗರಸಭೆಯ ಪೌರ ಆಯುಕ್ತ ನಂದಕುಮಾರ್ ಈ ಬಗ್ಗೆ ಮಾತನಾಡಿ, "ಕಸ ವಿಲೇವಾರಿ ವೇಳೆ ಪೌರ ಕಾರ್ಮಿಕನಿಗೆ ಹಾವು ಕಚ್ಚಿಲ್ಲ . ನಿಯಮಾನುಸಾರ ನಗರಸಭೆ ಅವರಿಗೆ ನೀಡಬೇಕಾದ ರಕ್ಷಣಾತ್ಮಕ ವ್ಯವಸ್ಥೆಯಡಿ ಶೂಗಳು, ಕೈಗವಚ, ವಾಷ್ಕೋಟ್ ಸೇರಿದಂತೆ ಹಲವು ಸುರಕ್ಷತಾ ಪರಿಕರಗಳನ್ನ ನೀಡಿದ್ದೇವೆ. ಆದರೆ ತಿಂಡಿ ತಿನ್ನುವ ಸಮಯದಲ್ಲಿ ಶೂ ಬಿಚ್ಚಿ ಬಹಿರ್ದೆಸೆಗೆ ಹೋಗಿದ್ದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ. ಕೂಡಲೇ ಅವರನ್ನಯ ರಾಮನಗರ ಸರ್ಕಾರಿ ಜಿಲ್ಲಾಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ವೇಣು ಪ್ರಾಣಕ್ಕೆ ಯಾವುದೇ ತೊಂದರೆಯಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ," ಎಂದರು.
ನಗರದಲ್ಲಿ "ನನ್ನ ಕಸ ನನ್ನ ಜವಾಬ್ದಾರಿ" ಎಂಬ ಯೋಜನೆ ಜಾರಿಯಲ್ಲಿದೆ. ಇದನ್ನು ಸಾರ್ವಜನಿಕರು ಕಟ್ಟು ನಿಟ್ಟಾಗಿ ಪಾಲಿಸದೇ ಎಲ್ಲೆಂದರಲ್ಲಿ ಕಸ ಸುರಿಯುತ್ತಾರೆ. ಅಲ್ಲದೇ ನಗರಸಭೆಯಲ್ಲಿ ಕಾರ್ಮಿಕರ ಕೊರತೆ ಕೂಡ ಹೆಚ್ಚಾಗಿದೆ. ನಿಯಮದಂತೆ 700 ಜನಕ್ಕೆ ಒಬ್ಬರು ಪೌರ ಕಾರ್ಮಿಕರು ಬೇಕು. ಆದರೆ ನಮ್ಮಲ್ಲಿ ಇಷ್ಟೊಂದು ಜನ ಇಲ್ಲ. ಇದರಿಂದಾಗಿ ಎಲ್ಲಾ ಕಾರ್ಮಿಕರು ಮತ್ತು ಸಿಬ್ಬಂದಿವರ್ಗ ಶಕ್ತಿ ಮೀರಿ ಕಾರ್ಯನಿರ್ವಹಿಸಬೇಕಾಗಿದೆ ಎಂದು ಪೌರಾಯುಕ್ತ ನಂದಕುಮಾರ್ ಹೇಳಿದರು.
ಪೌರ ಕಾರ್ಮಿಕರ ಜಿಲ್ಲಾಧ್ಯಕ್ಷ ಪ್ರತಿಕ್ರಿಯೆ:
ಪೌರ ಕಾರ್ಮಿಕ ಸಂಘದ ಜಿಲ್ಲಾಧ್ಯಕ್ಷ ಚಲಪತಿ ಮಾತನಾಡಿ, "ನಗರಸಭೆಯಿಂದ ಪೌರ ಕಾರ್ಮಿಕರಿಗೆ ನೀಡುವ ರಕ್ಷಣಾತ್ಮಕ ವಸ್ತುಗಳನ್ನ ನೀಡುವಲ್ಲಿ ವ್ಯತ್ಯಾಸವಾಗಿದೆ. ಕಾರ್ಮಿಕರಿಗೆ ಗಂಬೂಟ್ ನೀಡುವ ಬದಲು ಸಾಮಾನ್ಯ ಶೂಗಳನ್ನ ನೀಡುತ್ತಿದ್ದಾರೆ. ಕಳೆದ 8 ತಿಂಗಳ ಹಿಂದೆ ಉಪಹಾರ ನೀಡುವ ವಿಚಾರದಲ್ಲಿ ಅವ್ಯವಹಾರ ಮಾಡಿದ್ದರು. ನಾವು ಹೋರಾಟ ಮಾಡಿ ಅದನ್ನೆಲ್ಲ ಸರಿ ಮಾಡಿದ್ದೇವೆ. ಇಲ್ಲಿ ಆರೋಗ್ಯ ಶಾಖೆಯ ಅಧಿಕಾರಿಗಳದ್ದೇ ದರ್ಬಾರ್ ಜೋರಾಗಿದ್ದು, ಅವರು ಕಾರ್ಮಿಕರಿಗೆ ಕಿರುಕುಳ ನೀಡುತ್ತಿರುವುದು ತಪ್ಪಬೇಕು. ಹೊರಗುತ್ತಿಗೆ ಆಧಾರದ ಕಾರ್ಮಿಕರಿಗೂ ನ್ಯಾಯಯುತವಾಗಿ ಸವಲತ್ತುಗಳು ತಲುಪಬೇಕು," ಎಂದು ಆಗ್ರಹಿಸಿದರು.
ಸಾಮಾಜಿಕ ಕಾರ್ಯಕರ್ತನ ಪ್ರತಿಕ್ರಿಯೆ:
ಇನ್ನು ಈ ಬಗ್ಗೆ ಸಾಮಾಜಿಕ ಕಾರ್ಯಕರ್ತ ಶಿವನಾಗಾಸ್ವಾಮಿ ಮಾತನಾಡಿ, "ನಗರಸಭೆಯಲ್ಲಿಅಧಿಕಾರಿಗಳ ಬೇಜವಾಬ್ದಾರಿ ಹೆಚ್ಚಾಗಿದೆ. ಪರಿಸರ ಅಭ್ಯಂತರರು ಕೊರೊನಾ ಸಂಧರ್ಭದಲ್ಲಿಯೂ ಕೇಂದ್ರ ಸ್ಥಾನದಲ್ಲಿ ವಾಸವಿಲ್ಲ. ಹಾಗೂ ನಗರಸಭೆಯಲ್ಲಿ ಅಕ್ರಮದ ವಾಸನೆ ಬಗ್ಗೆ ಯೋಜನಾ ನಿರ್ದೆಶಕರಿಗೆ ದೂರು ನೀಡಿದ್ದೇನೆ. ಯಾವ ಮಾಹಿತಿ ಕೇಳಿದರೂ ಕೊಟ್ಟಿಲ್ಲ. ವರ್ಷಗಳೇ ಕಳೆದರೂ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಅಧಿಕಾರಿಗಳು ಬೆಂಗಳೂರಿನಿಂದ ಹೋಗಿ ಬಂದು ಕಾರ್ಯ ನಿರ್ವಹಿಸುತ್ತಾರೆ. ಇಲ್ಲಿ ಹೇಳುವವರು ಕೇಳುವವರು ಯಾರು ಇಲ್ಲ ಎನ್ನುವಂತಾಗಿದೆ," ಎಂದು ಆರೋಪಿದರು.