ಪಿಎಸ್ಐ ಹಗರಣದ ಹಿಂದೆ ಇರುವ ರಾಜಕಾರಣಿ, ಅಧಿಕಾರಿ ಯಾರೆಂಬ ಸತ್ಯ ಹೊರ ಬರಬೇಕು : ಡಿಕೆಶಿ
ರಾಮನಗರ, ಜೂನ್ 7: "ರಾಜ್ಯವನ್ನು ಬೆಚ್ಚಿ ಬೀಳಿಸಿದ್ದ ಪಿಎಸ್ಐ ನೇಮಕಾತಿ ಹಗರಣದಲ್ಲಿ ಬರೀ 18 ರಿಂದ 20 ಹುಡುಗರನ್ನು ಅರೆಸ್ಟ್ ಮಾಡಿದರೆ ಸಾಲುವುದಿಲ್ಲ, ನಮಗೂ ಎಲ್ಲಾ ವಿಚಾರ ಗೊತ್ತಿದೆ. ಹಗರಣದ ಹಿಂದೆ ಯಾವ ರಾಜಕಾರಣಿ, ಯಾವ ಆಫೀಸರ್ ಇದ್ದಾರೆ ಎನ್ನುವುದು ಹೊರತರಬೇಕು" ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಆಗ್ರಹಿಸಿದರು.
ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ಯಡಮಾರನಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ದೇವಾಲಯದ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, "ಪಿಎಸ್ಐ ನೇಮಾಕಾತಿ ಹಗರಣದ ಹಿಂದಿರುವ ಕಾಣದ ಕೈಗಳು ಯಾರು ಎನ್ನುವ ಸತ್ಯ ಹೊರಬರುವವರೆಗೂ ನಮ್ಮ ಹೋರಾಟ ನಿಲ್ಲದು" ಎಂದರು.
ಪಿಎಸ್ಐ ಅಕ್ರಮ ನೇಮಕಾತಿಯಲ್ಲಿ ಮಾಗಡಿಯ ದರ್ಶನ್ ಗೌಡ ಬಂಧಿಸಿರುವ ಬಗ್ಗೆ ಪ್ರತಕ್ರಿಯೆ ನೀಡಿ. "ನನಗೆ ಏನು ಸತ್ಯ ಗೊತ್ತಿತ್ತು. ಅದರ ಆಧಾರದ ಮೇಲೆ ಹೇಳಿದ್ದೆ, ಅಂದು ಸಿಐಡಿ ಅಧಿಕಾರಿಗಳು ದರ್ಶನ್ ಗೌಡನನ್ನು ಕರೆದುಕೊಂಡು ಹೋಗಿ ವಿಚಾರಣೆ ಮಾಡದೇ ಕಳುಹಿಸಿದ್ದರು. ವಿಚಾರಣೆ ಮಾಡದೇ ಹೇಗೆ ಕಳಿಸಲು ಸಾಧ್ಯ?. ಫೋನ್ ಯಾರು ಮಾಡಿದ್ದರು, ಯಾಕೆ ಮಾಡಿದ್ದರೂ ಎಂದು ಅಕ್ರಮದ ವಿರುದ್ಧ ಧ್ವನಿ ಎತ್ತಿದ್ದೆ" ಎಂದು ಡಿ. ಕೆ. ಶಿವಕುಮಾರ್ ಹೇಳಿದರು.

ಪಿಎಸ್ಐ ನೇಮಕಾತಿ ತನಿಖೆಗೆ ಹಸ್ತಕ್ಷೇಪ
"ತನಿಖೆಯಲ್ಲಿ ಪ್ರಭಾವಿಗಳ ಹಸ್ತಕ್ಷೇಪ ಇದೆ ಎಂದು ಆರೋಪ ಮಾಡಿದ್ದೆವು. ಆಗ ಬಹಳ ಅಬ್ಬರದಿಂದ ಸರ್ಕಾರದವರು, ಮಂತ್ರಿಗಳು ಮಾತನಾಡಿದ್ದರೆ. ಮತ್ತೆ ಈಗ ದರ್ಶನ್ ಗೌಡನನ್ನು ವಿಚಾರಣೆಗೆ ಏಕೆ ಕರೆದುಕೊಂಡು ಹೋಗಿದ್ದಾರೆ. ನಮ್ಮ ಜಿಲ್ಲೆಯಲ್ಲಿ ಎಷ್ಟು ಜನ ಪಿಎಸ್ಐ ಪರೀಕ್ಷೆಯಲ್ಲಿ ಪಾಸಾಗಿದ್ದಾರೆ ಎನ್ನುವುದನ್ನು ಮುಚ್ಚಿ ಹಾಕುವುದಕ್ಕೆ ಏನೇನು ಪ್ರಯತ್ನ ಮಾಡಿದ್ದರು. ಪಾಪ ದರ್ಶನ್ ಗೌಡ ಹಾಗೂ ಇತರೆ ಹುಡುಗರು ಬಾಳೆಹಣ್ಣು ತಿನ್ನುವುದಕ್ಕೆ ಬಂದವರು, ಅಂಗಡಿ ಓಪನ್ ಇದ್ದರೆ, ಇಂತಹವರು ವ್ಯಾಪಾರ ಮಾಡಲು ಬಂದೇ ಬರುತ್ತಾರೆ" ಎಂದು ಈ ಹಗರಣದ ಹಿಂದೆ ಪ್ರಭಾವಿಗಳಿದ್ದಾರೆ ಎಂದು ಮಾರ್ಮಿಕವಾಗಿ ತಿಳಿಸಿದರು.

ರಾಜಕಾರಣಿ ಹೆಸರು ಹೊರಬರಬೇಕು
"ಪಿಎಸ್ಐ ನೇಮಕಾತಿ ಹಗರಣದಲ್ಲಿ ಬರೀ 18 - 20 ಹುಡುಗರನ್ನು ಬಂಧಿಸಿದರೆ ಸಾಲುವುದಿಲ್ಲ. ನಮಗೂ ಎಲ್ಲಾ ವಿಚಾರ ಗೊತ್ತಿದೆ. ಒಬ್ಬನಿಗೆ ಪ್ರತ್ಯೇಕವಾಗಿ ಇನ್ ಸರ್ವೀಸ್ ಆರ್ಡರ್ ಮಾಡಿದ್ದಾರೆ ಎನ್ನುವುದು ಗೊತ್ತಿದೆ . ಹಗರಣದ ಹಿಂದೆ ಇರುವ ಆ ಕಾಣದ ಕೈ ಯಾವ ರಾಜಕಾರಣಿ, ಅಧಿಕಾರಿಗಳಿದ್ದಾರೆ ಎನ್ನುವ ಸತ್ಯ ಹೊರತರಬೇಕು. ಅಲ್ಲಿಯ ವರೆಗೆ ನಾವು ನಮ್ಮ ಹೋರಾಟ ನಿಲ್ಲಿಸುವುದಿಲ್ಲ" ಎಂದು ಡಿ. ಕೆ. ಶಿವಕುಮಾರ್ ತಿಳಿಸಿದರು.

ಯುವ ಸಮೂಹಕ್ಕೆ ನ್ಯಾಯ ಸಿಗಬೇಕು
"ನಮ್ಮ ಹೋರಾಟ ಪಿಎಸ್ಐ ನೇಮಕಾತಿ ಹಗರಣದ ವಿರುದ್ಧ ಮಾತ್ರ ಅಲ್ಲ, ರಾಜ್ಯದಲ್ಲಿ ನಡೆದಿರುವ ಹಲವು ನೇಮಕಾತಿ ಹಗರಣದ ವಿರುದ್ಧ ಕಾಂಗ್ರೆಸ್ ಹೋರಾಟ ಮಾಡುತ್ತದೆ. ಬಹಳ ದೊಡ್ಡ ಭ್ರಷ್ಟಾಚಾರದ ಕೂಪ ಕರ್ನಾಟಕದಲ್ಲಿದೆ. ನಿರುದ್ಯೋಗಿ ಯುವಕರಿಗೆ ಉದ್ಯೋಗ ನೀಡುವಾಗ ರಾಷ್ಟ್ರದ ಯಾವ ರಾಜ್ಯದಲ್ಲಿಯೂ ನಡೆಯದ ಅನ್ಯಾಯ ನಮ್ಮ ರಾಜ್ಯದ ಯುವ ಸಮೂಹಕ್ಕೆ ಆಗಿದೆ. ರಾಜ್ಯದ ಎಲ್ಲಾ ವಿದ್ಯಾವಂತ ನಿರುದ್ಯೋಗ ಯುವ ಸಮೂಹಕ್ಕೆ ನ್ಯಾಯ ದೊರೆಯುವವರೆಗೂ ನನ್ನ ಹೋರಾಟ ಮುಂದುವರೆಯುತ್ತದೆ" ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಸ್ಪಷ್ಟಪಡಿಸಿದರು.

ಅಶ್ವಥ್ ನಾರಾಯಣ್ಗೆ ತಿರುಗೇಟು
"ಕಾಂಗ್ರೆಸ್ ನಾಯಕರು ಅವರ ಹಳ್ಳ ಅವರೇ ತೋಡಿಕೊಳ್ಳುತ್ತಿದ್ದಾರೆ" ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ. ಎನ್. ಅಶ್ವಥ್ ನಾರಾಯಣ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್, "ಆಯ್ತು ನಮ್ಮನ್ನೆಲ್ಲ ಹಳ್ಳ ತೋಡಿ ಸಮಾಧಿ ಮಾಡಲಿ ಬಿಡಿ" ಎಂದರು.
"ಡಿ. ಕೆ. ಶಿವಕುಮಾರ್ ಭ್ರಷ್ಟಾಚಾರದ ಬ್ರಾಂಡ್" ಎಂಬ ಅಶ್ವಥ್ ನಾರಾಯಣ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, "ಯಾರು ಭ್ರಷ್ಟಾಚಾರ ಮಾಡಿದ್ದಾರೆ ಅವರನ್ನು ತನಿಖೆ ಮಾಡಲು ಹೇಳಿ. ಪಿಎಸ್ಐ ನೇಮಕಾತಿ ಅಥವಾ ಅರ್ಕಾವತಿ ವಿಷಯದಲ್ಲಿ ಹಗರಣ ಮಾಡಿದ್ದರೆ ತನಿಖೆ ಮಾಡಲಿ, ಅವರ ಬಳಿ ಇನ್ನೂ ಅಧಿಕಾರ ಇದೆ, ತನಿಖೆ ಮಾಡಲು ಇಲ್ಲಿ ಯಾರು ಬೇಡ ಅನ್ನಲ್ಲ. ಇಲ್ಲಿ ಜನ ಯಾರ ಕಡೆ ಬೆರಳು ಮಾಡಿ ತೋರಿಸುತ್ತಿದ್ದಾರೆ. ಎಲ್ಲಾ ಸಾಕ್ಷಿ ಕಣ್ಣಲ್ಲೇ ಸಿಗುತ್ತಾ ಇದೆ" ಎಂದು ತಿರುಗೇಟು ನೀಡಿದರು.












Click it and Unblock the Notifications