ರಾಮನಗರ : ಹಾಡುಹಗಲಲ್ಲೇ ಆಟವಾಡುತ್ತಿದ್ದ ಮಗು ಅಪಹರಣ!
ರಾಮನಗರ, ಅಕ್ಟೋಬರ್ 26 : ಹಾಡುಗಲಲ್ಲೇ ಒಂದೂವರೆ ವರ್ಷದ ಮಗುವನ್ನು ಅಪಹರಣ ಮಾಡಿದ ಘಟನೆ ಚನ್ನಪಟ್ಟಣದಲ್ಲಿ ನಡೆದಿದೆ. ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಳ್ಳಾರಿ ಮೂಲದ ಶಿರಗುಪ್ಪ ತಾಲೂಕಿನ ಕೆಂಚನಗುಡ್ಡ ನಿವಾಸಿಗಳಾದ ಈರಮ್ಮ ಹಾಗೂ ಸೋಮಶೇಖರ್ ಅವರ ತೃತೀಯ ಪುತ್ರ ಉಲ್ಲೇಶ್ ಅಪಹರಣವಾದ ಬಾಲಕ. ಕೆ.ಹೆಚ್.ಬಿ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ವಿಳಾಸ ಕೇಳುವ ನೆಪದಲ್ಲಿ ಕಾರಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಅಂಗವಿಕಲ ತಂದೆಯ ಮುಂದೆಯೇ ಮಗುವನ್ನು ಅಪಹರಿಸಿದ್ದಾರೆ.

ಎರಡು ವರ್ಷಗಳ ಹಿಂದೆ ಕೆಲಸ ಅರಸಿಕೊಂಡು ಬಳ್ಳಾರಿಯಿಂದ ಚನ್ನಪಟ್ಟಣಕ್ಕೆ ಬಂದು ಕೂಲಿ ಕೆಲಸ ಮಾಡಿಕೊಂಡು ಸೋಮಶೇಖರ್, ಈರಮ್ಮ ಜೀವನ ನಡೆಸುತ್ತಿದ್ದರು. ಕೆ.ಎಚ್.ಬಿ ಬಡಾವಣೆಯ ಖಾಲಿ ನಿವೇಶನದಲ್ಲಿ ಟೆಂಟ್ ಹಾಕಿಕೊಂಡು ವಾಸಿಸುತ್ತಿದ್ದರು.
ಬುಧವಾರ ಮಧ್ಯಾಹ್ನ 3.30ರ ಸಮಯದಲ್ಲಿ ಅಂಗವಿಕಲರಾದ ತಂದೆಯೊಡನೆ ಟೆಂಟ್ ಮುಂದೆ ಮೂರು ಮಕ್ಕಳು ಆಟವಾಡುತ್ತಿದ್ದರು. ಈ ಸಮಯದಲ್ಲಿ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಮಗುವನ್ನು ಅಪಹರಣ ಮಾಡಿದ್ದಾರೆ. ಈ ಸಮಯದಲ್ಲಿ ಈರಮ್ಮ ಕೂಲಿ ಕೆಲಸಕ್ಕೆ ಹೋಗಿದ್ದರು.
ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಾಗಿದೆ. ಪೋಲಿಸರು ಘಟನೆ ನಡೆದ ಸ್ಥಳ ಮತ್ತು ಸುತ್ತಮುತ್ತಲಿನ ಮನೆಗಳ ಸಿಸಿಟಿವಿ ಕ್ಯಾಮರಾಗಳ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದ್ದಾರೆ.












Click it and Unblock the Notifications