ಮಹಿಳೆಯನ್ನು ಕೊಂದು ಚಿನ್ನ ಕದ್ದ ದುಷ್ಕರ್ಮಿಗಳಿಂದ ಗುಂಡು ಪಾರ್ಟಿ
ರಾಮನಗರ, ಫೆಬ್ರವರಿ 15: ಜಿಲ್ಲೆಯ ಚನ್ನಪಟ್ಟಣ ತಾಲೂಕು ಬೇವೂರು ಮಂಡ್ಯದಲ್ಲಿ ಮಹಿಳೆಯೊಬ್ಬರ ಕೊಲೆಯಾಗಿದ್ದು, ಹತ್ಯೆ ಮಾಡಿ, ಆಭರಣಗಳನ್ನು ದೋಚಿದವರು ಅದೇ ಸ್ಥಳದಲ್ಲಿ ಗುಂಡು ಪಾರ್ಟಿ ಮಾಡಿರುವುದು ಕಂಡುಬಂದಿದೆ. ಗ್ರಾಮದ ಹೊರವಲಯದಲ್ಲಿ ಒಂಟಿಯಾಗಿ ವಾಸಿಯಾಗಿದ್ದ ಐವತ್ತೆಂಟು ವರ್ಷದ ಸರೋಜಮ್ಮ ಕೊಲೆಯಾದವರು.
ಮೃತರ ಒಬ್ಬನೇ ಮಗರಾಜು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿಯಲ್ಲಿ ವಾಸವಾಗಿದ್ದಾರೆ. ಬೇವೂರು ಮಂಡ್ಯದಲ್ಲಿ ಒಂಟಿಯಾಗಿ ವಾಸವಿದ್ದ ಸರೋಜಮ್ಮ ಅವರನ್ನು ದುಷ್ಕರ್ಮಿಗಳು ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಆ ನಂತರ ಆಕೆಯ ಮೈ ಮೇಲಿದ್ದ ಒಡವೆಯೂ ಸೇರಿದಂತೆ ನೂರು ಗ್ರಾಮ್ ನಷ್ಟು ಚಿನ್ನಾಭರಣ ದೋಚಿದ್ದಾರೆ.
ದೊಡ್ಡಬಳ್ಳಾಪುರ: ಕೊಲೆಯಲ್ಲಿ ಅಂತ್ಯವಾದ ತ್ರಿಕೋನ ಪ್ರೇಮಕತೆ
ಸರೋಜಮ್ಮನನ್ನು ಕೊಲೆ ಮಾಡಿದ ನಂತರ ಅಲ್ಲೇ ಗುಂಡು ಪಾರ್ಟಿ ಮಾಡಿ, ಬೀರುವನ್ನು ಒಡೆದಿರುವುದು ಕಂಡು ಬಂದಿದೆ. ಈ ಭಾಗದಲ್ಲಿ ಪೊಲೀಸರು ಸರಿಯಾಗಿ ಗಸ್ತು ಮಾಡುತ್ತಿಲ್ಲ, ನಾವು ಪ್ರಶ್ನೆ ಮಾಡಿದರೆ ಸಿಬ್ಬಂದಿ ಇಲ್ಲ ಎಂಬ ಉಡಾಫೆ ಉತ್ತರ ಕೊಡುತ್ತಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೇಲ್ನೋಟಕ್ಕೆ ಇದು ಚಿನ್ನಾಭರಣಕ್ಕಾಗಿ ನಡೆದ ಕೊಲೆಯಂತೆ ಗೋಚರಿಸುತ್ತಿದೆ. ಆದರೆ ಈ ಹತ್ಯೆಯು ಹಲವು ಅನುಮಾನಕ್ಕೆ ಎಡೆ ಮಾಡಿಕೊಡುವಂತಿದೆ. ರಾಮನಗರ ಎಸ್ಪಿ ಬಿ.ರಮೇಶ್, ಡಿವೈಎಸ್ ಪಿ ಮಂಜುನಾಥ್, ಸರ್ಕಲ್ ಇನ್ ಸ್ಪೆಕ್ಟರ್ ಕುಮಾರ್ ಸ್ಥಳ ಪರಿಶೀಲನೆ ನಡೆಸಿದರು. ಕೊಲೆಗಾರರ ಪತ್ತೆಗಾಗಿ ಶ್ವಾನದಳ ಹಾಗೂ ಬೆರಳಚ್ಚು ತಜ್ಞರ ತಂಡದಿಂದ ಪರಿಶೀಲನೆ ನಡೆಯಿತು.
ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಬೆಂಗಳೂರಿನ ರಾಜರಾಜೇಶ್ವರಿ ಆಸ್ಪತ್ರೆಗೆ ರವಾನಿಸಲಾಯಿತು. ಚನ್ನಪಟ್ಟಣದ ಎಂ.ಕೆ.ದೊಡ್ಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.