ಮೇಕೆದಾಟು ಪಾದಯಾತ್ರೆ; ಡಿಕೆಶಿ, ಸಿದ್ದರಾಮಯ್ಯ ಇತರ ನಾಯಕರ ವಿರುದ್ಧ ಎಫ್ಐಆರ್
ರಾಮನಗರ, ಫೆಬ್ರವರಿ 28: ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಪಾದಯಾತ್ರೆ ನಡೆಸುತ್ತಿರುವ ಕಾಂಗ್ರೆಸ್ ನಾಯಕರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ರಾಮನಗರದ ಐಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಎ1 ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಎ2 ವಿಪಕ್ಷ ನಾಯಕ ಸಿದ್ದರಾಮಯ್ಯ, ಎ3 ಡಿ.ಕೆ. ಸುರೇಶ್, ಎ4 ಎಂಎಲ್ಸಿ ಎಸ್. ರವಿ ಸೇರಿ ಪಾದಯಾತ್ರೆ ನಡೆಸುತ್ತಿರುವ 37 ಕಾಂಗ್ರೆಸ್ ನಾಯಕರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.
ಕೊರೊನಾ ಕಾರಣದಿಂದ ಅರ್ಧಕ್ಕೆ ನಿಂತಿದ್ದ ಕಾಂಗ್ರೆಸ್ ನಾಯಕರ ಮೇಕೆದಾಟು ಪಾದಯಾತ್ರೆ ಮತ್ತೆ ಭಾನುವಾರದಿಂದ (ಫೆ.27) ಆರಂಭವಾಗಿದೆ. ಜನವರಿ 9 ರಿಂದ ಶುರುವಾಗಿದ್ದ ಮೇಕೆದಾಟು ಪಾದಯಾತ್ರೆ ಅರ್ಧಕ್ಕೆ ನಿಲ್ಲಿಸಲಾಗಿತ್ತು.

ರಾಮನಗರದಲ್ಲಿ ನಿಂತಿದ್ದ ಮೇಕೆದಾಟು ಪಾದಯಾತ್ರೆ 2.Oಕ್ಕೆ ಭಾನುವಾರ ಚಾಲನೆ ಸಿಕ್ಕಿದೆ. 2ನೇ ಹಂತದ ಪಾದಯಾತ್ರೆ ಮಾರ್ಚ್ 3ನೇ ತಾರೀಕು ಬೆಂಗಳೂರಿನ ನ್ಯಾಷನಲ್ ಕಾಲೇಜ್ ಮೈದಾನ ತಲುಪಲಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಈ ಪಾದಯಾತ್ರೆ ಸಾಗುತ್ತಿದೆ. ಭಾನುವಾರ ರಾಮನಗರದಿಂದ ಶುರುವಾದ ಪಾದಯಾತ್ರೆ ಸಂಜೆ ಬಿಡದಿ ತಲುಪಿ ಅಲ್ಲೇ ವಾಸ್ತವ್ಯ ಹೂಡಿದ್ದರು. ಬಿಡದಿಯಿಂದ ಬೆಂಗಳೂರಿಗೆ ಹೊರಟಿರುವ ಪಾದಯಾತ್ರೆ ಸೋಮವಾರ ಸಂಜೆ ಕೆಂಗೇರಿ ತಲುಪಲಿದೆ.

ರಾಮನಗರ ತಹಶೀಲ್ದಾರರಿಂದ ದೂರು ದಾಖಲು
ಈ ಬಾರಿ ಯಶಸ್ವಿಯಾಗಿ ಮೇಕೆದಾಟು ಪಾದಯಾತ್ರೆ ನಡೆಸಲು ಕಾಂಗ್ರೆಸ್ ಮುಂದಾಗಿದೆ. ರಾಮನಗರದಲ್ಲಿ ಫೆಬ್ರವರಿ 28ರವರೆಗೆ ಜಿಲ್ಲೆಯಾದ್ಯಂತ ಕೊರೊನಾ ಮಾರ್ಗಸೂಚಿ ಪಾಲನೆಗೆ ಮಾರ್ಗಸೂಚಿ ನೀಡಲಾಗಿತ್ತು. ಆದರೆ ಕಾಂಗ್ರೆಸ್ ಸಾವಿರಾರು ಜನರನ್ನು ಗುಂಪು ಸೇರಿಸಿ ಪಾದಯಾತ್ರೆ ನಡೆಸುತ್ತಿದೆ. ಎಲ್ಲಾ ಕೊರೊನಾ ಮಾರ್ಗಸೂಚಿಯನ್ನು ಉಲ್ಲಂಘಿಸಿದೆ ಎಂದು ರಾಮನಗರ ತಹಶೀಲ್ದಾರ ವಿಜಯ್ ಕುಮಾರ್ರಿಂದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಹೀಗಾಗಿ ಕಾಂಗ್ರೆಸ್ನ 38 ಮಂದಿ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
2ನೇ ದಿನವೂ ಸಿದ್ದು- ಡಿಕೆಶಿ ಜೊತೆಯಾಗಿ ಪಾದಯಾತ್ರೆ
ಭಾನುವಾರ 15 ಕಿ.ಮೀ ಪಾದಯಾತ್ರೆ ಮಾಡಿ ಮೊದಲ ದಿನದ ಪಾದಯಾತ್ರೆಯನ್ನು ಅಂತ್ಯಗೊಳಿಸಿದ್ದ ಕಾಂಗ್ರೆಸ್, ಇಂದು ಬಿಡದಿಯಿಂದ ಮೇಕೆದಾಟು ಪಾದಯಾತ್ರೆ ಆರಂಭಿಸಿದೆ. ಎರಡನೇ ದಿನದ ಪಾದಯಾತ್ರೆಯಲ್ಲಿ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಹಾಗೂ ಇತರ ನಾಯಕರು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿದ್ದಾರೆ.
ಇದೇ ವೇಳೆ ಮಾತಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ನಮ್ಮ ಪಾದಯಾತ್ರೆಗೆ ಸುಮಾರು 40 ಜನ ಸ್ವಾಮೀಜಿಗಳು ಬರುತ್ತಿದ್ದಾರೆ. ಮುರುಗಾನಂದ ಶ್ರೀಗಳ ನೇತೃತ್ವದಲ್ಲಿ ಪಾದಯಾತ್ರೆ ಮುಂದುವರಿಯುತ್ತದೆ. ಎಲ್ಇಡಿ ಸ್ಕ್ರೀನ್ ಇರುವ ವಾಹನ ರೆಡಿ ಮಾಡಿ ಎಂದು ಕಾರ್ಯಕರ್ತರಿಗೆ ಸೂಚಿಸಿದರು.












Click it and Unblock the Notifications