ಮಾಗಡಿ ಜನರಿಗೆ ಗೌರಮ್ಮನ ಕೆರೆ ಅಪವಿತ್ರವಾಗುವ ಭಯ ಕಾಡುತ್ತಿದೆ!
ರಾಮನಗರ, ನವೆಂಬರ್.14:ಜನ ಜಾನುವಾರುಗಳ ಅನುಕೂಲಕ್ಕಾಗಿ ಕೆಂಪೇಗೌಡರು ನಿರ್ಮಿಸಿದರು ಎನ್ನಲಾದ ಮಾಗಡಿಯ ಗೌರಮ್ಮನ ಕೆರೆ ಈ ಬಾರಿ ಸುರಿದ ಮಳೆಯಿಂದಾಗಿ ಭರ್ತಿಯಾಗಿದ್ದು, ಇದೀಗ ನಳನಳಿಸುತ್ತಿದೆ. ಈ ಕೆರೆ ಎಲ್ಲಿ ಕಲುಷಿತಗೊಳ್ಳುತ್ತದೆಯೋ ಎಂಬ ಭಯ ಈಗ ಸುತ್ತಮುತ್ತಲ ಜನರನ್ನು ಕಾಡತೊಡಗಿದೆ.
ಇತ್ತೀಚೆಗಿನ ದಿನಗಳಲ್ಲಿ ಬಹಳಷ್ಟು ಕೆರೆಗಳು ಒತ್ತುವರಿಯಾಗಿದ್ದರೆ, ಮತ್ತೆ ಕೆಲವು ಕೆರೆಗಳು ಅಭಿವೃದ್ಧಿ ವಂಚಿತವಾಗಿ ಸುತ್ತಮುತ್ತಲ ಜನರಿಗೆ ಕಸದ ತೊಟ್ಟಿಯಾಗಿ ಮಾರ್ಪಟ್ಟಿವೆ, ಮತ್ತೆ ಕೆಲವು ಕೆರೆಗಳು ತ್ಯಾಜ್ಯ ನೀರು ಸಂಗ್ರಹಣಾ ಕೇಂದ್ರವಾಗಿ ಮಾರ್ಪಾಡುಗೊಂಡಿವೆ.
ಹೀಗಾಗಿ ಇಂತಹ ಕೆರೆಗಳ ಸುತ್ತಮುತ್ತ ಬದುಕುವವರ ಬದುಕು ಮೂರಾಬಟ್ಟೆಯಾಗತೊಡಗಿದೆ. ಇವತ್ತು ಗೌರಿ ಕೆರೆ ಶುದ್ಧ ನೀರಿನ ಸಂಗ್ರಹವಾಗಿದ್ದು, ಜನ ಜಾನುವಾರುಗಳಿಗೆ ಹಲವು ರೀತಿಯಲ್ಲಿ ಅನುಕೂಲವಾಗಿದೆ. ಆದರೆ ಇದಕ್ಕೆ ಪಟ್ಟಣದ ಚರಂಡಿ ನೀರು ಹರಿದು ಬಂದು ಸೇರುವ ಸಾಧ್ಯತೆ ಹೆಚ್ಚಾಗಿದ್ದು ಇದರಿಂದ ಸಾಂಕ್ರಾಮಿಕ ರೋಗದ ಭಯವೂ ಜಾಸ್ತಿಯಾಗಿದೆ.
ಇದಕ್ಕೆ ಕಾರಣ ಈ ಕೆರೆಯ ಹತ್ತಿರವೇ ಚರಂಡಿ ನಿರ್ಮಾಣ ಮಾಡಿದ್ದು, ಈ ಚರಂಡಿ ಕಾಮಗಾರಿಯನ್ನು ಗುತ್ತಿಗೆ ಪಡೆದವರು ಪೂರ್ಣಗೊಳಿಸದೆ ಇರುವ ಕಾರಣ ಚರಂಡಿ ನೀರು ಅಲ್ಲಿಯೇ ನಿಂತು ಕೊಳೆಯುತ್ತಿದ್ದು, ಕೆರೆ ನೀರಿಗೆ ಸೇರುವ ಸಾಧ್ಯತೆ ಹೆಚ್ಚಾದ ಕಾರಣ ಎಲ್ಲಿ ಕೆರೆಯ ನೀರು ಕಲುಷಿತಗೊಳ್ಳುತ್ತದೆಯೋ ಎಂಬ ಆತಂಕ ಜನರಲ್ಲಿದೆ. ಮುಂದೆ ಓದಿ...

ನೀರು ಹರಿದು ಹೋಗಲು ಸಾಧ್ಯವಾಗುತ್ತಿಲ್ಲ
ಗೌರಮ್ಮನ ಕೆರೆ ಬಳಿ ಕಳೆದ ಮೂರು ವರ್ಷಗಳ ಹಿಂದೆ ಚರಂಡಿ ನಿರ್ಮಾಣ ಮಾಡಿದ್ದು, ಚರಂಡಿ ಕಾಮಗಾರಿ ವೈಜ್ಞಾನಿಕವಾಗಿ ಮಾಡದ ಹಿನ್ನೆಲೆಯಲ್ಲಿ ಚರಂಡಿ ಕಾಮಗಾರಿ ಪೂರ್ಣಗೊಳ್ಳದೆ ನೀರು ಹರಿದು ಹೋಗಲು ಸಾಧ್ಯವಾಗುತ್ತಿಲ್ಲ. 10 ಅಡಿಗೂ ಹೆಚ್ಚು ಎತ್ತರದ ಚರಂಡಿಯನ್ನೇನೋ ನಿರ್ಮಾಣ ಮಾಡಲಾಗಿದೆ. ಆದರೆ ಅದರಲ್ಲಿ ನೀರು ಮಾತ್ರ ಸಲೀಸಾಗಿ ಹರಿದು ಹೋಗುತ್ತಿಲ್ಲ.

ಪುರಸಭೆ ಅಧಿಕಾರಿಗಳು ಗಮನಹರಿಸುತ್ತಿಲ್ಲ
ಈ ಚರಂಡಿಗೆ 18ನೇ ವಾರ್ಡಿನ ಮನೆಗಳ ನೀರು ಹಾಗೂ ಹೊಸಹಳ್ಳಿಯಿಂದ ಹರಿದು ಬಂದ ಮಳೆ ನೀರು ತಂದ ಮಣ್ಣಿನಿಂದ ಚರಂಡಿ ತುಂಬಿ ಹೋಗಿದ್ದು, ಇದರಿಂದ ನೀರು ಕೆರೆಗೆ ಹರಿದು ಹೋದರೆ ಅಚ್ಚರಿಪಡಬೇಕಾಗಿಲ್ಲ. ಕೆಲವರ್ಷಗಳಿಂದಲೂ ತ್ಯಾಜ್ಯ ನೀರು ಸರಾಗವಾಗಿ ಹರಿಯದೆ ಕೊಳೆತು ನಾರುತ್ತಿದ್ದು, ಪುರಸಭೆ ಅಧಿಕಾರಿಗಳು ಇತ್ತ ಗಮನ ಹರಿಸೇ ಇಲ್ಲ.

ಅಭಿವೃದ್ಧಿಗೊಳಿಸಲು ಯಾರೂ ಮುಂದಾಗುತ್ತಿಲ್ಲ
ಬಿಡಾಡಿ ದನಗಳು ಕೂಡ ನೀರು ಕುಡಿಯಲು ಬಂದು ಕರುಗಳು ಚರಂಡಿಯಲ್ಲಿ ಬಿದ್ದು ಮೇಲೆ ಬರಲಾಗದೆ ಅಲ್ಲೆ ಸಾವನ್ನಪ್ಪಿದ್ದರೂ ಚರಂಡಿ ಸರಿಪಡಿಸುವ ಕಾರ್ಯವನ್ನು ಯಾರೂ ಮಾಡಲೇ ಇಲ್ಲ. ಉತ್ತಮ ಮಳೆಯಿಂದ ಗೌರಮ್ಮನ ಕೆರೆ ತುಂಬಿದ್ದು, ಈ ಕೆರೆಯನ್ನು ಅಭಿವೃದ್ಧಿಗೊಳಿಸುವ ಕಾರ್ಯಕ್ಕೆ ಯಾರೂ ಕೂಡ ಮುಂದಾಗುತ್ತಿಲ್ಲ. ಕೆರೆಯನ್ನು ಅಭಿವೃದ್ಧಿಪಡಿಸಿದ್ದರೆ ಇದು ಒಂದು ಒಳ್ಳೆಯ ಪಿಕ್ನಿಕ್ ತಾಣವಾಗುತ್ತಿತ್ತು. ಆದರೆ ಯಾರೂ ಕೂಡ ಇದರತ್ತ ಗಮನಹರಿಸದಿರುವುದು ಎದ್ದು ಕಾಣುತ್ತಿದೆ.

ಸಾಂಕ್ರಾಮಿಕ ರೋಗ ಹರಡುವ ಕೆರೆಯಾಗುತ್ತದೆ!
ಮಾಗಡಿ ಯೋಜನಾ ಪ್ರಾಧೀಕಾರದಿಂದ 2 ಕೋಟಿ ಹಣ ಬಿಡುಗಡೆಯಾಗಿದ್ದು, ಕೆರೆ ಅಭಿವೃದ್ಧಿ ಮಾಡುವುದಾಗಿ ನೂತನ ಶಾಸಕ ಎ.ಮಂಜುನಾಥ್ ಹೇಳುತ್ತಿದ್ದು ಅದು ಕಾರ್ಯಗತವಾದರೆ ಗೌರಿಕೆರೆಗೆ ಕಳೆ ಬರಲಿದೆ. ಇಲ್ಲದೇ ಹೋದರೆ ಕೊಳೆ ತುಂಬಿ ಸಾಂಕ್ರಾಮಿಕ ರೋಗ ಹರಡುವ ಕೆರೆಯಾಗುವುದರಲ್ಲಿ ಎರಡು ಮಾತಿಲ್ಲ.












Click it and Unblock the Notifications