ರಾಮನಗರ ಉಪ ಚುನಾವಣೆ : ಪ್ರಮಾಣ ಮಾಡಲು ಎಚ್ಡಿಕೆಗೆ ಆಹ್ವಾನ!
ರಾಮನಗರ, ನವೆಂಬರ್ 04 : 'ರಾಮನಗರ ಬಿಜೆಪಿ ಅಭ್ಯರ್ಥಿ ಎಲ್.ಚಂದ್ರಶೇಖರ್ ಅವರಿಗೆ ಹಣ ನೀಡಿ ಡೀಲ್ ಮಾಡಿಲ್ಲ ಎಂದು ಮುಖ್ಯಮಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ತಾಯಿ ಚಾಮುಂಡೇಶ್ವರಿ ಮುಂದೆ ಪ್ರಮಾಣ ಮಾಡಲಿ' ಎಂದು ರಾಮನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ರುದ್ರೇಶ್ ಸವಾಲು ಹಾಕಿದರು.
ರಾಮನಗರದಲ್ಲಿ ಭಾನುವಾರ ಎಂ.ರುದ್ರೇಶ್ ಪತ್ರಿಕಾಗೋಷ್ಠಿ ನಡೆಸಿದರು. 'ರಾಮನಗರದ ಬಿಜೆಪಿ ಅಭ್ಯರ್ಥಿ ಎಲ್.ಚಂದ್ರಶೇಖರ್ ಕಾಂಗ್ರೆಸ್ ಸೇರಲು ಡೀಲ್ ನಡೆದಿದೆ. ಸಚಿವ ಡಿ.ಕೆ.ಶಿವಕುಮಾರ್ ಅವರು ರಾತ್ರೋ ರಾತ್ರಿ ಬಳ್ಳಾರಿಯಿಂದ ಬೆಂಗಳೂರಿಗೆ ಬಂದಿದ್ದು ಏಕೆ?' ಎಂದು ಪ್ರಶ್ನಿಸಿದರು.
ನವೆಂಬರ್ 3ರಂದು ರಾಮನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ನಡೆದಿದೆ. 73.71ರಷ್ಟು ಮತದಾನವಾಗಿದೆ. ನವೆಂಬರ್ 6ರ ಮಂಗಳವಾರ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.
ನವೆಂಬರ್ 1ರಂದು ತುರ್ತು ಪತ್ರಿಕಾಗೋಷ್ಠಿ ನಡೆಸಿದ್ದ ಎಲ್.ಚಂದ್ರಶೇಖರ್ ಅವರು ರಾಮನಗರ ಚುನಾವಣಾ ಕಣದಿಂದ ಹಿಂದೆ ಸರಿಯುವುದಾಗಿ ಘೋಷಣೆ ಮಾಡಿದ್ದರು. ಕಾಂಗ್ರೆಸ್ ಸೇರುವುದಾಗಿ ಹೇಳಿದ್ದರು.

ಚಾಮುಂಡೇಶ್ವರಿ ಮುಂದೆ ಪ್ರಮಾಣ ಮಾಡಲಿ
'ರಾಮನಗರದ ಬಿಜೆಪಿ ಅಭ್ಯರ್ಥಿ ದೈವ ಇಚ್ಛೆಯಿಂದ ಕಾಂಗ್ರೆಸ್ ಸೇರಿದ್ದಾರೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಆದರೆ, ಬಿಜೆಪಿ ಅಭ್ಯರ್ಥಿಗೆ ಹಣ ನೀಡಿ ಡೀಲ್ ಮಾಡಿಲ್ಲ ಎಂದು ಕುಮಾರಸ್ವಾಮಿ ಅವರು ತಾಯಿ ಚಾಮುಂಡೇಶ್ವರಿ ಮುಂದೆ ಪ್ರಮಾಣ ಮಾಡಲಿ' ಎಂದು ಎಂ.ರುದ್ರೇಶ್ ಸವಾಲು ಹಾಕಿದರು.

ಏಕಾಏಕಿ ಡೀಲ್ ನಡೆದಿದೆ
'ಎಲ್.ಚಂದ್ರಶೇಖರ್ ಅವರು ಏಕಾಏಕಿ ಕಾಂಗ್ರೆಸ್ ಸೇರುವ ವಿಚಾರದಲ್ಲಿ ಡೀಲ್ ನಡೆದಿದೆ. ಬಳ್ಳಾರಿಯಲ್ಲಿದ್ದ ಸಚಿವ ಡಿ.ಕೆ.ಶಿವಕುಮಾರ್ ಅವರು ಮಧ್ಯರಾತ್ರಿಯಲ್ಲಿ ಬಳ್ಳಾರಿಯಿಂದ ಬೆಂಗಳೂರಿಗೆ ಏಕೆ ಬಂದಿದ್ದು?' ಎಂದು ಎಂ.ರುದ್ರೇಶ್ ಪ್ರಶ್ನಿಸಿದರು.

ಹಿಂಬಾಗಿಲ ರಾಜಕೀಯ
'ಮೈತ್ರಿ ಸರ್ಕಾರ ಹಿಂಬಾಗಿಲ ರಾಜಕೀಯ ಮಾಡಿ ಬಿಜೆಪಿ ಅಭ್ಯರ್ಥಿಯನ್ನು ಹೈಜಾಕ್ ಮಾಡಿ ಚುನಾವಣೆಯಲ್ಲಿ ಗೊಂದಲ ಉಂಟಾಗುವಂತೆ ಮಾಡಿದೆ. ಶನಿವಾರ ನಡೆದ ಮತದಾನ ಕೊನೆ ಕ್ಷಣದಲ್ಲಿ ಏರಿಕೆಯಾಗಿದೆ. ಬಲತ್ಕಾರವಾಗಿ ಮತದಾನ ಮಾಡಿಸಲಾಗಿದೆ. ಇಂದು ಗೂಂಡಾಗಿರಿಯ ಚುನಾವಣೆ. ನ.6ರ ಫಲಿತಾಂಶ ಎಲ್ಲದಕ್ಕೂ ಉತ್ತರ ನೀಡಲಿದೆ' ಎಂದು ರುದ್ರೇಶ್ ಹೇಳಿದರು.

ರಾಜೀನಾಮೆ ನೀಡುವುದಿಲ್ಲ
ಉಪ ಚುನಾವಣೆಯ ಬಳಿಕ ಎಂ.ರುದ್ರೇಶ್ ರಾಜೀನಾಮೆ ಸಲ್ಲಿಸಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಆದರೆ, ಭಾನುವಾರ ಪತ್ರಿಕಾಗೋಷ್ಠಿ ನಡೆಸಿದ ರುದ್ರೇಶ್, ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ರಾಜ್ಯ ನಾಯಕರು ತಪ್ಪು ಮಾಡಿದರು
'ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ರಾಜ್ಯ ನಾಯಕರು ತಪ್ಪು ಮಾಡಿದರು. ನಾವು ಮಾಡಿದ್ದು ತಪ್ಪಲ್ಲ. ನಮ್ಮ ತಪ್ಪಿದ್ದರೆ ಅವರಿಗೆ ಟಿಕೆಟ್ ನೀಡಲು ಒಪ್ಪಿಗೆ ನೀಡುತ್ತಿರಲಿಲ್ಲ. ಕ್ಷೇತ್ರದಲ್ಲಿ ಪ್ರಭಾವಿಗಳ ಚಕ್ರವ್ಯೂಹದಲ್ಲಿ ನಾವು ಬಂದಿಯಾಗಿದ್ದೆವು. ಕ್ಷೇತ್ರದಲ್ಲಿನ ಬೆಳವಣಿಗೆ ಬಗ್ಗೆ ಯಡಿಯೂರಪ್ಪ ಅವರಿಗೆ ಮಾಹಿತಿ ನೀಡುತ್ತೇನೆ' ಎಂದು ರುದ್ರೇಶ್ ಹೇಳಿದರು.












Click it and Unblock the Notifications