ಬಿಡದಿ ರೈತರ ಪರ ನನ್ನ ಹೋರಾಟ ಇಂದಿನಿಂದಲೇ ಆರಂಭ: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಆಕ್ರೋಶ
ಬೆಂಗಳೂರು: ಬಿಡದಿ ಸ್ಮಾರ್ಟ್ ಸಿಟಿ ಟೌನ್ಶಿಪ್ ಹೆಸರಿನಲ್ಲಿ ರೈತರ ಫಲವತ್ತಾದ ಜಮೀನನ್ನು ಕಿತ್ತುಕೊಂಡು ಬೃಹತ್ ದಂಧೆ ನಡೆಸಲು ಸರ್ಕಾರ ಹೊರಟಿದೆ ಎಂದು ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ದಂಧೆಯ ವಿರುದ್ಧ ಇಂದಿನಿಂದಲೇ ತಾವು ಪ್ರತ್ಯಕ್ಷ ಹೋರಾಟಕ್ಕೆ ಧುಮುಕುತ್ತಿರುವುದಾಗಿ ಅವರು ಅಧಿಕೃತವಾಗಿ ಘೋಷಿಸಿದ್ದಾರೆ.
ಜೆಡಿಎಸ್ ರಾಜ್ಯ ಕಚೇರಿಯಾದ 'ಜೆಪಿ ಭವನ'ದಲ್ಲಿ ಶನಿವಾರ ಆಯೋಜಿಸಲಾಗಿದ್ದ ಮಹತ್ವದ ಜಂಟಿ ಮಾಧ್ಯಮಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ಬಿಡದಿಯಲ್ಲಿ ಟೌನ್ಶಿಪ್ ನೆಪದಲ್ಲಿ ರೈತರ ಜಮೀನು ಲೂಟಿ ಹೊಡೆಯುವ ದಂಧೆ ನಡೆಯುತ್ತಿದ್ದರೂ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬೆಂಗಳೂರು ನಗರಾಭಿವೃದ್ಧಿ ಜವಾಬ್ದಾರಿ ಹೊತ್ತವರ ಒತ್ತಡಕ್ಕೆ ಮಣಿದು ಮೌನವಾಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ನೀವು ನನ್ನ ಹಳೆಯ ಸಹೋದ್ಯೋಗಿ. ಬಿಡದಿಯ ರೈತರು ಕಣ್ಣೀರು ಹಾಕುತ್ತಿದ್ದಾರೆ. ಧೈರ್ಯವಿದ್ದರೆ ನನ್ನ ಜೊತೆ ಬಿಡದಿಗೆ ಬನ್ನಿ, ಅಲ್ಲಿನ ವಾಸ್ತವ ಸ್ಥಿತಿಯನ್ನು ಒಟ್ಟಿಗೆ ಹೋಗಿ ನೋಡೋಣ ಎಂದು ದೇವೇಗೌಡರು ನೇರ ಸವಾಲು ಹಾಕಿದರು.

ರೈತರ ಭೂಮಿಯನ್ನು ಕಿತ್ತುಕೊಂಡು ದಂಧೆ ಮಾಡಲು ಈ ಸರ್ಕಾರ ಹೊರಟಿದೆ. ಒಬ್ಬರು 'ರೈತರು ಹೊಡೆದರೆ ಹೊಡೆಸಿಕೊಳ್ಳುವೆ' ಎಂದು ಹೇಳಿದ್ದಾರೆ. ಮೊದಲು ಅವರು ಹೋಗಿ ರೈತರಿಂದ ಹೊಡೆಸಿಕೊಂಡು ಬರಲಿ, ಆಮೇಲೆ ನಾನು ಹೋಗಿ ಮಾತನಾಡುತ್ತೇನೆ ಎಂದು ಗುಡುಗಿದರು. ದೇವೇಗೌಡರು ಈ ಹಿಂದೆ ಸಭೆಯಲ್ಲಿ ಅಳುತ್ತಿದ್ದರು ಎಂದು ಕೆಲವರು ವ್ಯಂಗ್ಯ ಮಾಡುತ್ತಿದ್ದರು. ಆದರೆ ಈ ವ್ಯವಸ್ಥೆಯನ್ನು ನೋಡಿ ನಾನು ನಗುತ್ತಿದ್ದೇನೆ. ಬಿಡದಿಯಲ್ಲಿ ನಡೆಯುತ್ತಿರುವುದು ಯಾರಿಗೂ ಕಾಣದಿರುವುದು ನನಗೆ ಅತೀವ ನೋವು ತಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕುಮಾರಸ್ವಾಮಿ ಕೇಂದ್ರ ಮಂತ್ರಿ ಆಗಿದ್ದಾರೆ. ಇವತ್ತು ನಾನು ಒಂದು ಇಂಗ್ಲೀಷ್ ಪೇಪರ್ ನೋಡಿದೆ. ಕುಮಾರಸ್ವಾಮಿಗೆ ಮಾಡುವುದಕ್ಕೆ ಬೇರೆ ಕೆಲಸ ಇಲ್ಲ ಎಂದು ಒಬ್ಬ ವ್ಯಕ್ತಿ ಹೇಳಿರುವ ವರದಿಯನ್ನು ಗಮನಿಸಿದೆ. ಕುಮಾರಸ್ವಾಮಿ ಮಾಡಿದ ಬಿಡದಿ ಟೌನ್ಶಿಪ್ ಅನ್ನು ನಾನು ಮಾಡುತ್ತಿದ್ದೇನೆ ಎಂದು ಆ ವ್ಯಕ್ತಿ ಹೇಳಿದ್ದಾರೆ. ಆಗ ಕುಮಾರಸ್ವಾಮಿ ಮಾಡಲು ಹೊರಟಿದ್ದು ಏನು? ಈ ವ್ಯಕ್ತಿ ಈಗ ಮಾಡುತ್ತಿರುವ ದಂಧೆ ಏನು ಎಂಬುದು ಜನರಿಗೆ ಅರ್ಥವಾಗಿದೆ. ಅದರ ವಿರುದ್ಧ ನಾನು ಹೋರಾಟ ಮಾಡುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇವರು ಮಾಡುತ್ತಿರುವ ದಂಧೆಯೇನು?
ಬೆಂಗಳೂರು ನಗರದ ಮೇಲೆ ಹೆಚ್ಚು ಒತ್ತಡ ಆಗುತ್ತದೆ ಎಂದು ಕುಮಾರಸ್ವಾಮಿ ಐದು ಟೌನ್ಶಿಪ್ ಗಳನ್ನು ಮಾಡಲು ಹೊರಟಿದ್ದರು. ಆಗ ಕಾಂಗ್ರೆಸ್ ಪಕ್ಷದ ನಾಯಕರು ದೊಡ್ಡ ಅಪಪ್ರಚಾರ ನಡೆಸಿ ಕುಮಾರಸ್ವಾಮಿಯವರು ಭೂಮಿಯನ್ನು ಹೊಡೆಯಲು ಹೊರಟಿದ್ದಾರೆ ಎಂದು ಸತ್ಯಶೋಧನ ಸಮಿತಿ ರಚಿಸಿ ತನಿಖೆಯನ್ನು ಮಾಡಿದರು. ಅವರ ಸತ್ಯಶೋಧನ ಸಮಿತಿ ವರದಿಯಲ್ಲಿ ಯಾವ ಸತ್ಯ ಹೊರಗೆ ಬಂತು ದೇವರೇ ಬಲ್ಲರು ಎಂದು ಮಾಜಿ ಪ್ರಧಾನಿಗಳು ವ್ಯಂಗ್ಯವಾಡಿದರು. ಬೆಂಗಳೂರು ಸುತ್ತಮುತ್ತಲಿನ ಸುಮಾರು 20,000 ಎಕರೆ ಭೂಮಿ ಸದ್ಯ ಯಾರ ಹೆಸರಿನಲ್ಲಿದೆ ಎಂಬ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸುವಂತೆ ಮುಖ್ಯಮಂತ್ರಿಗೆ ಪತ್ರ ಬರೆದಿರುವುದಾಗಿ ಬಹಿರಂಗಪಡಿಸಿದರು.
ರೈತರ ಹೈನುಗಾರಿಕೆ ಪ್ರದೇಶ ವಿನಾಶದ ಅಂಚಿಗೆ
ಬಿಡದಿ ಭಾಗದ ರೈತರು ನಿತ್ಯವೂ ಡೇರಿಗೆ ಹಾಲು ಒದಗಿಸುವ ಮೂಲಕ ದೊಡ್ಡ ಮಟ್ಟದ ಹೈನುಗಾರಿಕೆ ಮತ್ತು ತೋಟಗಾರಿಕೆಯಲ್ಲಿ ತೊಡಗಿದ್ದಾರೆ. ಈ ಹಿಂದೆ ಕುಮಾರಸ್ವಾಮಿಯವರು 250 ಕೋಟಿ ರೂ. ವೆಚ್ಚದಲ್ಲಿ ಇಲ್ಲಿ ನೀರಾವರಿ ಯೋಜನೆ ತಂದಿದ್ದರು. ಇಂತಹ ಸಮೃದ್ಧ ನೀರಾವರಿ ಜಾಗವನ್ನು ಕಿತ್ತುಕೊಳ್ಳಲು ಕಾಂಗ್ರೆಸ್ ನಾಯಕರು ಸಂಚು ರೂಪಿಸಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
'ಬಿಡಿಎ' ಅಕ್ರಮಗಳ ವಿರುದ್ಧವೂ ಸಮರ
"ಈ ಹಿಂದೆ ನಾನು ಸಭೆಗಳಲ್ಲಿ ಕಣ್ಣೀರು ಹಾಕುತ್ತಿದ್ದೆ ಎಂದು ಕೆಲವರು ವ್ಯಂಗ್ಯವಾಡುತ್ತಿದ್ದರು. ಆದರೆ ಇಂದಿನ ವ್ಯವಸ್ಥೆ ಮತ್ತು ಮನೋರಂಜನಾ ರಾಜಕಾರಣವನ್ನು ನೋಡಿ ನನಗೆ ನಗು ಬರುತ್ತಿದೆ" ಎಂದ ದೇವೇಗೌಡರು, ಬಿಡದಿ ಮಾತ್ರವಲ್ಲದೆ ಬಿಡಿಎ ಸೇರಿದಂತೆ ಬೆಂಗಳೂರು ಸುತ್ತಮುತ್ತ ಬಡವರ ಜಮೀನು ಲೂಟಿ ಮಾಡಿರುವ ಎಲ್ಲಾ ಅಕ್ರಮಗಳ ವಿರುದ್ಧ ತಮ್ಮ ಹೋರಾಟ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದರು. ಕನಕಪುರ ಭಾಗದಲ್ಲಿ ಎಷ್ಟು ಜಮೀನು ವಶಪಡಿಸಿಕೊಳ್ಳಲಾಗಿದೆ ಎಂಬ ಸಂಪೂರ್ಣ ಮಾಹಿತಿ ನನ್ನ ಬಳಿ ಇದೆ ಎಂದು ವಾಗ್ದಾಳಿ ನಡೆಸಿದರು.
ಕುಮಾರಸ್ವಾಮಿ ಮಾಡಿದ್ದನ್ನು ನಾನು ಮುಂದುವರಿಸುತ್ತೇನೆ ಎನ್ನುತ್ತಾರೆ ಆ ವ್ಯಕ್ತಿ. ಜನರಿಂದ ವಿರೋಧ ಬಂದಿದ್ದಕ್ಕೆ ಅವರು ನಿಲ್ಲಿಸಿದರು. ಅದನ್ನೇ ಈ ವ್ಯಕ್ತಿ ಕೂಡ ಮಾಡಬೇಕಲ್ಲವೇ? ಜನರಿಂದ ತೀವ್ರ ವಿರೋಧ ಬಂದರೂ ನಾನು ಟೌನ್ಶಿಪ್ ಮಾಡಿ ತೀರುತ್ತೇನೆ ಎಂದು ಹಠ ಮಾಡುತ್ತಿದ್ದಾರೆ. ಬಗ್ಗೆ ನಾನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದೇನೆ. ಇವತ್ತಿನಿಂದ ನನ್ನ ಹೋರಾಟ ಆರಂಭವಾಗಿದೆ. ಬೆಂಗಳೂರು ಸುತ್ತಮುತ್ತ ಬಡವರ ಜಮೀನನ್ನು ಕಿತ್ತುಕೊಳ್ಳುವ ಶಕ್ತಿಗಳನ್ನು ಮಟ್ಟ ಹಾಕಬೇಕಿದೆ. ಬಿಡಿಎ ಸೇರಿದಂತೆ ಎಲ್ಲೆಲ್ಲಿ ಅಕ್ರಮ ನಡೆದಿದೆಯೋ ಅಲ್ಲೆಲ್ಲ ನಾನು ಹೋರಾಟ ನಡೆಸುತ್ತೇನೆ. ಈ ಬಗ್ಗೆ ಮುಖ್ಯಮಂತ್ರಿಗೆ ಬರೆದಿರುವ ಪತ್ರದಲ್ಲಿ ಸ್ಪಷ್ಟವಾಗಿ ತಿಳಿಸಿದ್ದೇನೆ ಎಂದರು.













Click it and Unblock the Notifications