ರಾಮನಗರ ಬಿಜೆಪಿಯಲ್ಲಿ ಭಿನ್ನಮತ; ಅಧ್ಯಕ್ಷರ ವಿರುದ್ಧ ಆಕ್ರೋಶ
ರಾಮನಗರ, ಅಕ್ಟೋಬರ್ 10; "ರಾಜ್ಯದಲ್ಲಿ ಬಿಜೆಪಿ ಪಕ್ಷ ಅಧಿಕಾರದಲ್ಲಿದ್ದರೂ ಪಕ್ಷ ಸಂಘಟನೆ ಮಾಡುವುದನ್ನು ಬಿಟ್ಟು ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಮಾಗಡಿ ತಾಲ್ಲೂಕು ಅಧ್ಯಕ್ಷರು ಅಧಿಕಾರಿಗಳ ವರ್ಗಾವಣೆ ದಂಧೆಯಲ್ಲಿ ಮಗ್ನರಾಗಿದ್ದಾರೆ" ಎಂದು ಬಿಜೆಪಿ ಬಿಡದಿ ಹೋಬಳಿಯ ಘಟಕ ಮಾಜಿ ಪ್ರಧಾನ ಕಾರ್ಯದರ್ಶಿ ಶರತ್ ಗೌಡ ಆರೋಪಿಸಿದರು.
ರಾಮನಗರ ಜಿಲ್ಲೆಯ ಬಿಡದಿಯ ಖಾಸಗಿ ಹೋಟೆಲ್ನಲ್ಲಿ ಪತ್ರಿಕಾಗೋಷ್ಠಿ ನಡಸಿದ ಬಿಡದಿ ಹೋಬಳಿಯ ಬಿಜೆಪಿ ಮುಖಂಡರು, ಜಿಲ್ಲಾಧ್ಯಕ್ಷರು ತಮ್ಮ ಲೆಟರ್ ಹೆಡ್ ದುರ್ಬಳಕೆ ಮಾಡಿಕೊಂಡು ಅಧಿಕಾರಿಗಳ ವರ್ಗಾವಣೆಯಲ್ಲಿ ತೊಡಗಿದ್ದಾರೆ ದೂರಿದರು.
ಬಿಜೆಪಿ ಮಾಗಡಿ ಕ್ಷೇತ್ರ ಅಧ್ಯಕ್ಷ ಧನಂಜಯ ತಮ್ಮ ಲೆಟರ್ ಹೆಡ್ ಮೂಲಕ ಬೆಂಗಳೂರು ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯದರ್ಶಿಯನ್ನು ಮಾಗಡಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಹುದ್ದೆಗೆ ವರ್ಗಾವಣೆ ಮಾಡುವಂತೆ ಕೋರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಪತ್ರ ಬರೆದಿರುವುದನ್ನು ಪ್ರದರ್ಶಿಸಿದರು.

ಪಕ್ಷದ ಅಧ್ಯಕ್ಷರು ಲೆಟರ್ ಹೆಡ್ಗೆ ಬೆಲೆ ನಿಗದಿ ಮಾಡಿದ್ದಾರೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಪಕ್ಷದ ಸಂಘಟನೆಗೆ ಮಾಡುವಲ್ಲಿ ವಿಫಲರಾಗಿರುವ ಜಿಲ್ಲಾಧ್ಯಕ್ಷರು ಹಾಗೂ ಮಾಗಡಿ ತಾಲೂಕು ಅಧ್ಯಕ್ಷರು ಕೂಡಲೇ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕೆಂದು ಮುಖಂಡರು ಒತ್ತಾಯಿಸಿದರು.
ಜಿಲ್ಲೆಯಲ್ಲಿ ಪಕ್ಷ ಸಂಘಟನೆಗೆ ಶ್ರಮಿಸಿದ ಕಾರ್ಯಕರ್ತರನ್ನು ಪ್ರಾಧಿಕಾರದ ಅಧ್ಯಕ್ಷ ಹಾಗೂ ನಿರ್ದೇಶಕರ ಸ್ಥಾನಗಳಿಗೆ ನೇಮಕ ಮಾಡಲಾಗಿದೆ. ಆದರೆ ಈಗ ಆ ಸ್ಥಾನಗಳನ್ನು ಖಾಲಿ ಮಾಡಿಸಿ ಮಾರಾಟಕ್ಕೆ ಇರಿಸಿದ್ದಾರೆ. ಪ್ರಾಧಿಕಾರದ ಅಧ್ಯಕ್ಷ ಮತ್ತು ನಿರ್ದೇಶಕರ ಸ್ಥಾನಗಳು ಹೆಚ್ಚಿನ ಹಣ ನೀಡುವವರಿಗೆ ಮಾರಾಟವಾಗಲಿದೆ ಎಂದು ಮುಖಂಡರು ಟೀಕಿಸಿದರು.
ಜಿಲ್ಲಾಧ್ಯಕ್ಷ ದೇವರಾಜು ರಾಮನಗರ ನಗರಸಭೆ ಆಯುಕ್ತ ಹುದ್ದೆ ಕೊಡಿಸುವುದಾಗಿ ಅಧಿಕಾರಿಯೊಬ್ಬರಿಗೆ ಆಮಿಷವೊಡ್ಡಿ ಹಣ ಪಡೆದು ಮೋಸ ಮಾಡಿರುವುದು ಹಾಗೂ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿರುವ ವಕೀಲನಿಗೆ ನೋಟರಿ ಕೊಡಿಸಲು 3 ಲಕ್ಷ ಲಂಚ ಕೇಳಿರುವುದು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಂದ ಹಣ ವಸೂಲಿ ಮಾಡಿದ್ದಾರೆ ಎಂದು ಬಿಡದಿ ಹೋಬಳಿಯ ಬಿಜೆಪಿ ಮುಖಂಡರು ದೂರಿದರು.
ಮಾಗಡಿ ಕ್ಷೇತ್ರ ಅಧ್ಯಕ್ಷರ ಧನಂಜಯ ಪಕ್ಷ ಸಂಘಟನೆಯಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ. ತಮ್ಮ ಗುಂಪನ್ನೇ ಪಕ್ಷವೆಂದು ತಿಳಿದುಕೊಂಡಿದ್ದಾರೆ. ತಾಲೂಕು ಪಂಚಾಯಿತಿ ಹುದ್ದೆಗೆ ಬೇರೊಬ್ಬ ಅಧಿಕಾರಿಯನ್ನು ನೇಮಿಸಲು ಮುಖ್ಯಮಂತ್ರಿಗಳಿಗೆ ಶಿಫಾರಸು ಮಾಡಿರುವ ಲೆಟರ್ ಹೆಡ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ. ಅಲ್ಲದೆ ಕೂಲಿಕಾರ್ಮಿಕರಿಗೆ ನೀಡಿರುವ ದಿನಸಿ ಕಿಟ್ ಅನ್ನು ತಮಗೆ ಬೇಕಾದವರಿಗೆ ನೀಡಿದ್ದಾರೆ ಎಂದು ಆರೋಪಿಸಿದರು.
ಇನ್ನು ಗ್ರಾಮಾಂತರ ಸಂಘಟನಾ ಕಾರ್ಯದರ್ಶಿ ಕಾಂತರಾಜ ಚುನಾವಣೆಯಲ್ಲಿ ಪಕ್ಷದಲ್ಲಿ ಬಿ-ಫಾರಂ ಕೊಡಿಸುವುದಾಗಿ ಹೇಳಿ ಆಕಾಂಕ್ಷಿಗಳಿಂದ ಹಣ ಲೂಟಿ ಮಾಡುತ್ತಿದ್ದಾರೆ. ಪಕ್ಷ ನೀಡಿರುವ ಜವಾಬ್ದಾರಿಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಇವರು ಬಿಜೆಪಿಗೆ ಅಂಟಿರುವ ಕಳಂಕ ಎಂದು ಕಟುವಾಗಿ ಟೀಕಿಸಿದರು.
ಈ ರೀತಿಯ ನಾಯಕರಿಂದಲೇ ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಸಾಧ್ಯವಾಗುತ್ತಿಲ್ಲ. ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆಗಳು ಸನಿಹದಲ್ಲಿರುವ ಕಾರಣ ನಿಷ್ಠಾವಂತ ಕಾರ್ಯಕರ್ತರಿಗೆ ಸಂಘಟನೆಯ ಕಾರ್ಯ ನೀಡುವಂತೆ ಪಕ್ಷದ ವರಿಷ್ಠರನ್ನು ಮುಖಂಡರು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಒಬಿಸಿ ಜಿಲ್ಲಾ ಉಪಾಧ್ಯಕ್ಷ ಶಿವಣ್ಣ, ಬಿಡದಿ ಹೋಬಳಿಯ ಘಟಕ ಮಾಜಿ ಪ್ರಧಾನ ಕಾರ್ಯದರ್ಶಿ ಶರತ್ ಗೌಡ, ಮಾಜಿ ಕಾರ್ಯದರ್ಶ ಜಿ. ನಂಜೇಶ್, ಯುವ ಮುಖಂಡರಾದ ಅನಿಲ್ ಕುಮಾರ್, ವಿನಯ್, ಹರೀಶ್ ಮುಂತಾದವರಿದ್ದರು.
ರಾಮನಗರ ಜೆಡಿಎಸ್ ಪಕ್ಷದ ಭದ್ರಕೋಟೆ. ಎಚ್. ಡಿ. ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ ಜಿಲ್ಲೆಯಿಂದ ಆಯ್ಕೆಯಾಗಿದ್ದಾರೆ. ಮಾಗಡಿಯಲ್ಲಿ ಜೆಡಿಎಸ್ನ ಎ. ಮಂಜುನಾಥ್ ಶಾಸಕರು. ಕನಕಪುರ ರಾಮನಗರಕ್ಕೆ ಸೇರಿದ್ದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ತವರು ಕ್ಷೇತ್ರವಾಗಿದೆ. ವಿಧಾನ ಪರಿಷತ್ ಸದಸ್ಯ, ಮಾಜಿ ಸಚಿವ ಸಿ. ಪಿ. ಯೊಗೀಶ್ವರ್ ಜಿಲ್ಲೆಯ ಬಿಜೆಪಿ ನಾಯಕರು.












Click it and Unblock the Notifications