ಅಧಿಕಾರವನ್ನು ಯಾರಿಂದಲೂ ಕಿತ್ತುಕೊಳ್ಳಲು ಸಾಧ್ಯವಿಲ್ಲ: ಕುಮಾರಸ್ವಾಮಿ
ರಾಮನಗರ, ಆಗಸ್ಟ್.01: ರಾಜ್ಯದ ಮುಖ್ಯಮಂತ್ರಿಯಾಗಿ 5 ವರ್ಷಗಳನ್ನು ಪೂರೈಸುವ ಮೂಲಕ ಜನಮೆಚ್ಚುಗೆ ಆಡಳಿತ ನೀಡುತ್ತೇನೆ ಎಂದು ಸಿಎಂ ಎಚ್.ಡಿ.ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.
ಐತಿಹಾಸಿಕ ಚಾಮುಂಡೇಶ್ವರಿ ಕರಗ ಮಹೋತ್ಸವ ಹಿನ್ನಲೆಯಲ್ಲಿ ಮ್ಯೂಸಿಕಲ್ ನೈಟ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೆಲವರು ಸಮ್ಮಿಶ್ರ ಸರ್ಕಾರದ ಭದ್ರತೆಯ ಬಗ್ಗೆ ಊಹಾಪೋಹಗಳನ್ನು ಹಬ್ಬಿಸುತ್ತಿದ್ದು, ಇದು ಯಾವುದೇ ಕಾರಣಕ್ಕೂ ಫಲ ನೀಡುವುದಿಲ್ಲ.
ನಾಡಿನ ಜನ ಮತ್ತು ನಾಡ ದೇವತೆ ಚಾಮುಂಡೇಶ್ವರಿ ನನಗೆ ಅಧಿಕಾರ ನಡೆಸಲು ಕೊಟ್ಟಿರುವ ಅವಕಾಶವನ್ನು ಯಾರಿಂದಲೂ ಕಿತ್ತುಕೊಳ್ಳಲು ಸಾಧ್ಯವಿಲ್ಲ ಎಂದರು.

ನಾನು ರಾಜ್ಯದ ಆರುವರೆ ಕೋಟಿ ಜನರ ಮುಖ್ಯಮಂತ್ರಿ. ನನ್ನಿಂದ ಜನರಿಗೆ ಯಾವುದೇ ದ್ರೋಹವಾಗುವುದಿಲ್ಲ. ಈಗಾಗಲೇ ಕೊಟ್ಟ ಮಾತಿನಂತೆ ರಾಜ್ಯದ ರೈತರ 49 ಸಾವಿರ ಕೋಟಿ ಸಾಲ ಮನ್ನಾ ಮಾಡಿದ್ದೇನೆ ಎಂದರು.
ಇನ್ನು ರಾಮನಗರ-ಚನ್ನಪಟ್ಟಣ ನನ್ನ ಎರಡು ಕಣ್ಣುಗಳು ಎಂದು ಪುನಃ ಉಚ್ಚರಿಸಿದ ಎಚ್ ಡಿಕೆ ಎರಡು ಕ್ಷೇತ್ರಗಳಿಗೆ ಕಾವೇರಿಯಿಂದ ಕುಡಿಯುವ ನೀರಿನ ವ್ಯವಸ್ಥೆ ಮಾಡಿ ಜನರ ಬವಣೆ ದೂರ ಮಾಡುವುದಾಗಿ ಹೇಳಿದರು. ಎರಡು ಕ್ಷೇತ್ರಗಳ ನಡುವೆ ಹಲವಾರು ಕೈಗಾರಿಕೆಗಳನ್ನು ಸ್ಥಾಪಿಸಿ, ನಿರುದ್ಯೋಗ ಸಮಸ್ಯೆಗೆ ಇತಿಶ್ರೀ ಹಾಡುವುದಾಗಿ ತಿಳಿಸಿದರು.
ರಾಮನಗರದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ರಾಜೀವಗಾಂಧಿ ಆರೋಗ್ಯ ವಿವಿಗೆ ಸಂಬಂಧಿಸಿದಂತೆ ಎಲ್ಲಾ ರೈತರು ಆರೋಗ್ಯ ವಿವಿಗೆ ಭೂಮಿಯನ್ನು ನೀಡಲು ಸಮ್ಮತಿಸಿದ್ದು, ಮುಂದಿನ 20 ದಿನದೊಳಗೆ ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತದೆ.
ಕಳೆದ 12 ವರ್ಷಗಳ ಹಿಂದೆ ಆರೋಗ್ಯ ವಿವಿ ಕಾಮಗಾರಿಗೆ 350 ಕೋಟಿ ಹಣ ಬೇಕಾಗಿತ್ತು. ಆದರೆ ಇಂದು 650 ಕೋಟಿ ಹಣ ಬೇಕಾಗಿದ್ದು, ಸುಸಜ್ಜಿತ 1000 ಹಾಸಿಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಮೆಡಿಕಲ್ ಕಾಲೇಜು ಸೇರಿದಂತೆ ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲಾ ರೀತಿಯ ಸಂಶೋಧನಾ ಕೇಂದ್ರಗಳು ಇಲ್ಲಿ ಸ್ಥಾಪನೆಯಾಗಲಿವೆ ಎಂದರು.












Click it and Unblock the Notifications