ಭಾರಿ ಮಳೆಗೆ ಮರಬಿದ್ದು ವ್ಯಕ್ತಿ ಸಾವು, ಕುಟುಂಬಸ್ಥರಿಗೆ 5 ಲಕ್ಷ ಪರಿಹಾರದ ಚೆಕ್ ವಿತರಿಸಿದ ಎಚ್ಡಿಕೆ
ರಾಮನಗರ, ಆಗಸ್ಟ್ 30: ಸೋಮವಾರ ಸುರಿದ ಧಾರಾಕಾರ ಮಳೆಗೆ ರಸ್ತೆ ಬದಿಯಿದ್ದ ಬೃಹತ್ ಮರ ಉರುಳಿ ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಪರಿಣಾಮಕಾರಿನ ಮಾಲೀಕ ಸ್ಥಳದಲ್ಲೆ ಸಾವನ್ನಪ್ಪಿರುವ ಘಟನೆ ತೊರೆದೊಡ್ಡಿ ಗ್ರಾಮದ ಬಳಿ ನಡೆದಿದೆ. ಮರ ಬಿದ್ದ ರಭಸಕ್ಕೆ ಕಾರು ಸಂಪೂರ್ಣ ಜಖಂಗೊಂಡು ಕಾರಿನಲ್ಲಿದ್ದ ಬೋರೇಗೌಡ (52) ಮೃತಪಟ್ಟಿದ್ದಾರೆ.
ಇಟ್ಟಮಡು ಗ್ರಾಮದ ನಿವಾಸಿ ಬೋರೇಗೌಡ ಕೆಲಸ ನಿಮಿತ್ತ ಬರುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಬೋರೇಗೌಡ ಚಾಲಾಯಿಸುತ್ತಿದ್ದ ಕಾರು ತೊರೆದೊಡ್ಡಿ ಸಮೀಪ ಬರುತ್ತಿದ್ದಾಂತೆ ರಸ್ತೆಯ ಬದಿಯಲ್ಲಿದ್ದ ಬೃಹತ್ ಅಲದಮರ ಉರುಳಿ ಕಾರಿನ ಮೇಲೆ ಬಿದ್ದಿದೆ. ಪರಿಣಾಮ ಬೋರೇಗೌಡ ಸ್ಥಳದಲ್ಲೇ ಮೃತಪಟ್ಟಿದ್ದರು.
ರಾಮನಗರ ಪ್ರವಾಹ ಪೀಡಿತ ಪ್ರದೇಶಕ್ಕೆ ಸಿಎಂ ಭೇಟಿ: ಮನೆ ಕಳೆದುಕೊಂಡವರಿಗೆ 5 ಲಕ್ಷ ಪರಿಹಾರ
ಇನ್ನು ಮರ ವಿದ್ಯುತ್ ತಂತಿಯ ಮೇಲೆ ಬೀಳುತ್ತಿದ್ದಂತೆ ತುಸು ದೂರದಲ್ಲಿದ್ದ ವಿದ್ಯುತ್ ಕಂಬ ಮುರಿದು ಬಿದ್ದಿದೆ. ಇದೇ ವೇಳೆಗೆ ಬರುತ್ತಿದ್ದ ಬೈಕ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳು ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಸಾಂತ್ವನ ಹೇಳಿದ ಎಚ್.ಡಿ.ಕುಮಾರಸ್ವಾಮಿ
ಬೋರೇಗೌಡರ ನಿವಾಸಕ್ಕೆ ಸೋಮವಾರ ಬೆಳಗ್ಗೆ ಭೇಟಿ ನೀಡಿದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ದುಃಖತಪ್ತ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ಬೆಳಗ್ಗೆಯೇ ಮಾಗಡಿ ಶಾಸಕ ಮಂಜುನಾಥ್ ಅವರೊಂದಿಗೆ ಬೋರೇಗೌಡರ ನಿವಾಸಕ್ಕೆ ಧಾವಿಸಿದ ಮಾಜಿ ಮುಖ್ಯಮಂತ್ರಿ, ಕುಟುಂಬ ಸದಸ್ಯರಿಗೆ ಧೈರ್ಯ ತುಂಬಿದರಲ್ಲದೆ, ಅವರಿಗೆ 5 ಲಕ್ಷ ರೂಪಾಯಿಯ ನೆರವಿನ ಚೆಕ್ ಹಸ್ತಾಂತರ ಮಾಡಿ, ಯಾವುದೇ ಕಾರಣಕ್ಕೂ ಧೃತಿಗೆಡಬೇಡಿ ಎಂದು ಮನೆಯವರಿಗೆ ಧೈರ್ಯ ತುಂಬಿದ ಅವರು, ಕುಟುಂಬದ ಸ್ಥಿತಿಗತಿಗಳನ್ನು ಕೇಳಿ ತಿಳಿದುಕೊಂಡರು.
ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಕುಮಾರಸ್ವಾಮಿ ಅವರು ನಿನ್ನೆಯ ದಿನ ಅವಘಡದಲ್ಲಿ ಬೋರೇಗೌಡರು ನಿಧನ ಹೊಂದಿದ್ದರು. ಅವರದ್ದು ಕಷ್ಟಪಟ್ಟು ಜೀವನ ಮಾಡುತ್ತಿರುವ ಕುಟುಂಬ. ಸರಕಾರದ ವತಿಯಿಂದ 5 ಲಕ್ಷ ರೂ. ಪರಿಹಾರ ನೀಡಲಾಗಿದೆ. ನಮ್ಮ ಒಡನಾಟದಲ್ಲಿ ಬೋರೇಗೌಡರು ಇದ್ದರು. ನಮ್ಮ ಜತೆಗೂಡಿ ಕೆಲಸ ಮಾಡುತ್ತಿದ್ದರು. ಅವರ ನಿಧನ ಅತ್ಯಂತ ನೋವಿನ ಸಂಗತಿ ಎಂದು ಹೇಳಿದರು.
ಬೋರೇಗೌಡ ಮಗಳಿಗೆ ಉದ್ಯೋಗ ಭರವಸೆ
ಪರಿಹಾರದ ಚೆಕ್ ವಿತರಿಸಿದ ನಂತರ ಬೋರೆಗೌಡರ ಮಗಳಿಗೆ ರಾಮನಗರದಲ್ಲಿ ಕೆಲಸ ಕೊಡಿಸುವುದಾಗಿ ದೈರ್ಯ ಹೇಳಿದರು. ಅಲ್ಲದೆ ಏನಾದರೂ ಸಹಾಯ ಬೇಕಾದರೂ ತಮ್ಮನ್ನು ಭೇಟಿ ಮಾಡುವಂತೆ ಹೇಳಿದರು.
ನಂತರ ಮಳೆಯಿಂದ ಹಾನಿಗೊಳಗಾದ ಇತರರ ಬಗ್ಗೆಯೂ ಮಾಹಿತಿ ಪಡೆದು ಅಧಿಕಾರಿಗಳಿಗೆ ಪರಿಹಾರ ಒದಗಿಸಿಕೊಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.