ಅತ್ತೆ ಮಗಳನ್ನು ಅಪಹರಿಸಿ ತಾಳಿ ಕಟ್ಟಿದವ ಅರೆಸ್ಟ್!
ಹಾಸನ, ಫೆಬ್ರವರಿ 05 : ಬಸ್ಸಿಗಾಗಿ ಕಾಯುತ್ತಿದ್ದ ಅತ್ತೆ ಮಗಳನ್ನು ಅಪಹರಿಸಿ ತಾಳಿ ಕಟ್ಟಿದವನನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆ ಬಳಿಕ ಯುವತಿ ತಂದೆ ಅಸ್ವಸ್ಥರಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಹಾಸನ ತಾಲೂಕಿನ ದುದ್ದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯುವತಿ ಅಪಹರಣ ನಡೆದಿತ್ತು. ರಾಮನಗರದಲ್ಲಿ ಯುವತಿಯನ್ನು ರಕ್ಷಿಸಲಾಗಿದ್ದು, ಆಕೆಗೆ ಬಲವಂತವಾಗಿ ತಾಳಿ ಕಟ್ಟಿದ್ದ ಯುವಕ ಮನುವನ್ನು ಬಂಧಿಸಲಾಗಿದೆ.
ನವ ಜೋಡಿಗಳನ್ನು ಹಾಸನದ ಎಸ್ಪಿ ಕಚೇರಿಗೆ ಕರೆದುಕೊಂಡು ಬರಲಾಗುತ್ತಿದ್ದು, ಪೊಲೀಸರು ವಿಚಾರಣೆ ನಡೆಸಲಿದ್ದಾರೆ. ಯುವತಿಯನ್ನು ಅಪಹರಿಸಿ, ಬಲವಂತವಾಗಿ ವಿವಾಹ ಮಾಡಿಕೊಳ್ಳಲಾಗಿದೆ ಎಂದು ಯುವತಿಯ ಪೋಷಕರು ದುದ್ದ ಪೊಲೀಸರಿಗೆ ದೂರು ನೀಡಿದ್ದಾರೆ.

ಪುತ್ರಿಯ ಬಲವಂತದ ವಿವಾಹದ ಸುದ್ದಿ ಕೇಳಿ ಆಕೆಯ ತಂದೆ ಅಸ್ವಸ್ಥಗೊಂಡಿದ್ದು, ಹಾಸನದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅವರು ಚೇತರಿಸಿಕೊಳ್ಳುತ್ತಿದ್ದು, ಪೊಲೀಸರು ಅವರ ಹೇಳಿಕೆಯನ್ನು ಪಡೆಯಲಿದ್ದಾರೆ.
ಮನು ಅತ್ತೆ ಮಗಳನ್ನು ಪ್ರೀತಿಸುತ್ತಿದ್ದ. ಆದರೆ, ಆಕೆ ಮದುವೆಯಾಗಲು ನಿರಾಕರಿಸಿದ್ದಳು. ಆದ್ದರಿಂದ, ಬಸ್ಗಾಗಿ ಕಾಯುತ್ತಿದ್ದ ಅವಳನ್ನು ಸ್ನೇಹಿತರ ಸಹಾಯದಿಂದ ಅಪಹರಣ ಮಾಡಿ ಕಾರಿನಲ್ಲಿ ಬಲವಂತವಾಗಿ ತಾಳಿ ಕಟ್ಟಿದ್ದ. ಇದನ್ನು ವಿಡಿಯೋ ಸಹ ಮಾಡಿದ್ದ.
ಅತ್ತೆ ಮಗಳನ್ನು ಮದುವೆಯಾಗಲು ಬಯಸಿದ್ದ ಮನು ಅರಸೀಕೆರೆ ತಾಲೂಕಿನ ಕುಡುಕುಂದಿ ಗ್ರಾಮದ ನಿವಾಸಿ. ಮದುವೆಯಾಗಲು ಆಕೆ ಒಪ್ಪಿಗೆ ನೀಡದ ಕಾರಣ ಟೈಲರಿಂಗ್ ಕ್ಲಾಸ್ಗೆ ಹೋಗಲು ಬಸ್ ಕಾಯುತ್ತಿದ್ದಾಗ ಅಪಹರಣ ಮಾಡಿ ಬಲವಂತದಿಂದ ಮದುವೆಯಾಗಿದ್ದ.
ಮನುವಿನಿಂದ ಬಿಡಿಸಿಕೊಳ್ಳಲು ಯುವತಿ ಪ್ರಯತ್ನ ನಡೆಸಿದ್ದಳು, ಮುಖ ಮುಚ್ಚಿಕೊಂಡಿದ್ದಳು, ಮನುವಿನ ಕೈ ಕಚ್ಚಿದ್ದಳು. ಆದರೆ, ಸ್ನೇಹಿತರ ಸಹಾಯದಿಂದ ಬಲವಂತವಾಗಿ ಮನು ತಾಳಿ ಕಟ್ಟಿದ್ದ.












Click it and Unblock the Notifications