ಕನಕಪುರ : ಜೆಡಿಎಸ್ ಮುಖಂಡನ ಹತ್ಯೆ ಆರೋಪಿಗಳಿಗೆ ಗುಂಡೇಟು
ರಾಮನಗರ, ನವೆಂಬರ್ 20 : ಕನಕಪುರದಲ್ಲಿ ಪೊಲೀಸರು ಇಬ್ಬರು ಕೊಲೆ ಆರೋಪಿಗಳ ಮೇಲೆ ಗುಂಡಿನ ದಾಳಿ ನಡೆಸಿ ಬಂಧಿದ್ದಾರೆ. ಆರೋಪಿಗಳು ಜೆಡಿಎಸ್ ಮುಖಂಡ ಆರ್.ಟಿ.ರಾಜಗೋಪಾಲ್ ಹತ್ಯೆ ಮಾಡಿ ತಲೆಮರೆಸಿಕೊಂಡಿದ್ದರು.
ರಾಮ (21) ಮತ್ತು ದೀಪು (17) ಎಂಬ ಆರೋಪಿಗಳ ಮೇಲೆ ಕನಕಪುರದ ಸಾತನೂರು ಬಳಿ ಗುಂಡಿನ ದಾಳಿ ನಡೆಸಲಾಗಿದೆ. ಇಬ್ಬರು ಆರೋಪಿಗಳ ಕಾಲಿಗೆ ಗುಂಡು ತಗುಲಿದ್ದು, ಕನಕಪುರದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಜೆಡಿಎಸ್ ಎಸ್ಸಿ ಮತ್ತು ಎಸ್ಟಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್.ಟಿ.ರಾಜಗೋಪಾಲ್ ಅವರನ್ನು ನವೆಂಬರ್ 12ರಂದು ರಾತ್ರಿ ಆರೋಪಿಗಳು ಹತ್ಯೆ ಮಾಡಿದ್ದರು. ತಲೆಮರೆಸಿಕೊಂಡಿದ್ದ ಆರೋಪಿಗಳಿಗಾಗಿ ಹುಡುಕಾಟ ನಡೆದಿತ್ತು.

ಮಂಗಳವಾರ ಮುಂಜಾನೆ ಸಾತನೂರು ಬಳಿ ಅವರು ಅಡಗಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದರು. ಆಗ ಆರೋಪಿಗಳು ಪರಾರಿಯಾಗಲು ಪ್ರಯತ್ನ ನಡೆಸಿದ್ದು, ಗುಂಡಿನ ದಾಳಿ ನಡೆಸಿ ಅವರನ್ನು ಬಂಧಿಸಲಾಗಿದೆ.
ಕನಕಪುರದ ಜನನಿ ಆಸ್ಪತ್ರೆ ಬಳಿ ನವೆಂಬರ್ 12ರಂದು ಆರ್.ಟಿ.ರಾಜಗೋಪಾಲ್ ಹತ್ಯೆ ನಡೆದಿತ್ತು. ರಾತ್ರಿ 8 ಗಂಟೆ ಸಮಯದಲ್ಲಿ ಅವರು ಟೀ ಕುಡಿಯುತ್ತಿದ್ದಾಗ ಮೂವರು ದುಷ್ಕರ್ಮಿಗಳು ಲಾಂಗು, ಚಾಕುವಿನಿಂದ ಅವರ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಿದ್ದರು.
ಕೊಲೆಗೆ ನಿಖರವಾದ ಕಾರಣ ಏನು? ಎಂಬುದು ಇನ್ನೂ ತಿಳಿದುಬಂದಿಲ್ಲ. ಕನಕಪುರ ಟೌನ್ ಪೊಲೀಸರು ಆರೋಪಿಗಳ ವಿಚಾರಣೆ ನಡೆಸುತ್ತಿದ್ದಾರೆ.











Click it and Unblock the Notifications