ಅವಾಚ್ಯ ಶಬ್ದಗಳಿಂದ ನಿಂದಿಸಿ ಮತಬೇಟೆಗೆ ಮುಂದಾದ ಪಕ್ಷೇತರ ಅಭ್ಯರ್ಥಿ
ರಾಮನಗರ, ಮೇ.3: ಎಲ್ಲಾ ರಾಜಕೀಯ ಪಕ್ಷಗಳು ಮತದಾರರನ್ನು ಒಲಿಸಿಕೊಳ್ಳಲು ಬಣ್ಣ ಬಣ್ಣದ ಮಾತುಗಳನ್ನಾಡಿ ನಾನಾ ಭರವಸೆ, ಕಸರತ್ತು ಮಾಡುತ್ತಾರೆ. ಅದರೆ ಇಲ್ಲೊಬ್ಬ ಭೂಪ ಮತದಾರರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಮತ ಬೇಟೆಗೆ ಮುಂದಾಗಿದ್ದಾನೆ.
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಎಸ್.ಆರ್.ಜೈಕಿಸಾನ್ ಎಂಬಾತ ನಿಜತಾಯಿ ಗರ್ಭಸಂಜಾತರಾಗಿದ್ದರೆ ನನಗೆ ಮತಕೊಡಿ ಎಂದು ಕರಪತ್ರದಲ್ಲಿ ಮುದ್ರಿಸಿ ನಗರ ಹಾಗೂ ಗ್ರಾಮಾಂತರ ಪ್ರದೇಶದೆಲ್ಲೆಡೆ ಕರಪತ್ರ ಹಂಚಿ ಮತ ಬೇಟೆಗೆ ಮುಂದಾಗಿದ್ದಾನೆ.
ಪಕ್ಷೇತರನಾಗಿ ಸ್ಪರ್ಧೆ ಮಾಡಿ, ಟ್ರಾಕ್ಟರ್, ನೇಗಿಲಿನ ಚಿನ್ಹೆ ಪಡೆದಿರುವ ಜೈಕಿಸಾನ್ ಮತದಾರರನ್ನೇ ಛೇಡಿಸುವಂತೆ ಕರಪತ್ರ ಮುದ್ರಿಸಿ ತನ್ನ ಬೆಂಬಲಿಗರಿಂದ ಕರಪತ್ರ ಹಂಚಿಸಿದ್ದಾನೆ. ಕರಪತ್ರ ಹಂಚುತ್ತಿದ್ದ ಜೈಕಿಸಾನ್ ಅಭ್ಯರ್ಥಿಯ ಬೆಂಬಲಿಗ ಮಲ್ಲೇಶ ಎಂಬುವವನನ್ನು ಚುನಾವಣಾ ಅಧಿಕಾರಿಗಳು ಹಾಗೂ ಪೊಲೀಸರು ಬಂಧಿಸಿದ್ದಾರೆ.

ಇನ್ನು ಪ್ರಕರಣದ ಸಂಬಂಧ ಚುನಾವಣಾ ಆಯೋಗದ ಅಧಿಕಾರಿಗಳು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಚನ್ನಪಟ್ಟಣದಲ್ಲಿ ಜೆಡಿಎಸ್ ನಿಂದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಕಾಂಗ್ರೆಸ್ ನಿಂದ ಸಾರಿಗೆ ಸಚಿವ ಎಚ್. ಎಂ.ರೇವಣ್ಣ, ಬಿಜೆಪಿಯಿಂದ ಸಿ.ಪಿ.ಯೋಗೇಶ್ವರ್ ಸ್ಪರ್ಧಿಸುತ್ತಿದ್ದು, ಮೂರು ಪಕ್ಷಗಳಿಂದ ಪ್ರಬಲ ಅಭ್ಯರ್ಥಿಗಳು ಕಣದಲ್ಲಿದ್ದು, ಈ ಬಾರಿ ತ್ರಿಕೋನ ಸ್ಪರ್ಧೆ ಏರ್ಪಡುವುದು ಖಚಿತವಾಗಿದೆ.












Click it and Unblock the Notifications