ಮತದಾನಕ್ಕೆ ಎರಡು ಗಂಟೆ ಉಳಿದಿರುವಾಗಲೂ ಹಣ ಹಂಚಿಕೆ
ಚನ್ನಪಟ್ಟಣ ಮೇ 12 : ಚನ್ನಪಟ್ಟಣ ಶಾಸಕ ಸಿ.ಪಿ ಯೋಗೇಶ್ವರ್ ಸ್ವಗ್ರಾಮದಲ್ಲಿಯೇ ಮತದಾನಕ್ಕೆ ಎರಡು ಗಂಟೆ ಉಳಿದಿದ್ದರೂ ಮತದಾರರಿಗೆ ಹಣ ಹಂಚಿದ ಘಟನೆ ನಡೆದಿದೆ. ಶಾಸಕರ ತವರು ಊರಿನಲ್ಲೇ ಮತದಾರರಿಗೆ ಹಣ ಹಂಚಿ ಮತ ಹಾಕುವಂತೆ ಸೂಚಿಸಲಾಗಿದೆ.
ರಾಜಾ ರೋಷವಾಗಿ ಮತದಾರರಿಗೆ ರಸ್ತೆಯಲ್ಲಿಯೇ ಮುಖಂಡರು ಮತದಾರರಿಗೆ ಹಣ ಹಂಚಿದ್ದಾರೆ. ಅಲ್ಲದೇ ಸಿ.ಪಿ ಯೋಗೇಶ್ವರ್ ಗೆ ಮತ ಹಾಕುವಂತೆ ಹೇಳಿ ಮತದಾರರಿಗೆ ಹಣ ನೀಡಿದ್ದಾರೆ. ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿರುವ ಶಾಸಕ ಯೋಗೇಶ್ವರ್ ಅವರ ತವರೂರು ಚಕ್ಕೆರೆ ಗ್ರಾಮದಲ್ಲಿಯೇ ಇಂತಹದೊಂದು ಘಟನೆ ನಡೆದಿರುವುದು ಎಲ್ಲರ ಗಮನ ಸೆಳೆದಿದೆ.
LIVE: ಹೆಬ್ಬಾಳ ಕ್ಷೇತ್ರದ ಲೊಟ್ಟಗೊಲ್ಲಹಳ್ಳಿ ಮರು ಮತದಾನ
ಇದೊಂದು ಘಟನೆ ಬಿಟ್ಟರೆ ಇನ್ನುಳಿದಂತೆ ರಾಮನಗರ ಹಾಗೂ ಚನ್ನಪಟ್ಟಣದಲ್ಲಿ ಎಲ್ಲೆಡೆ ಸುಗಮವಾಗಿ ಮತದಾನ ನಡೆದಿದೆ. ಯಾರು ಎಲ್ಲಿ ಮತ ಚಲಾಯಿಸಿದರು ಎಂಬುದರ ವಿವರ ಇಲ್ಲಿದೆ ನೋಡಿ...
ನಿಖಿಲ್ ಕುಮಾರಸ್ವಾಮಿ
ಮಾಗಡಿ ವಿಧಾನಸಭಾ ಕ್ಷೇತ್ರದ ಬಿಡದಿಯ ಕೇತಗಾನಹಳ್ಳಿ ಮತಗಟ್ಟೆ 232 ರಲ್ಲಿ ನಿಖಿಲ್ ಮತ ಚಲಾಯಿಸಿದರು. ಈ ಬಾರಿ ಸ್ವಂತ ಬಲದ ಮೇಲೆ ಜೆಡಿಎಸ್ ಸರ್ಕಾರ ರಚನೆ ಮಾಡುವುದು ಖಚಿತ. ತಂದೆಯವರು ರಾಮನಗರ ಹಾಗೂ ಚನ್ನಪಟ್ಟಣ ಎರಡು ಕ್ಷೇತ್ರಗಳಲ್ಲಿ ಗೆಲ್ತಾರೆ.
ನಾನು ಸಿನಿಮಾ ಕ್ಷೇತ್ರವನ್ನ ಬಹಳ ಇಷ್ಟಪಟ್ಟಿದ್ದೇನೆ. ರಾಜಕೀಯ ನನ್ನ ರಕ್ತದಲ್ಲೇ ಹರಿಯುತ್ತಿದೆ. ಹಾಗಾಗಿ ರಾಜಕೀಯಕ್ಕೆ ಬರುವ ಬಗ್ಗೆ ಯಾವುದೇ ಚಿಂತನೆ ಇಲ್ಲ ಎಂದು ಮತದಾನದ ಬಳಿಕ ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯಿಸಿದರು.
ಮಾಗಡಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎ.ಮಂಜುನಾಥ್ ಪತ್ನಿ ಲಕ್ಷ್ಮಿ ಅವರೊಂದಿಗೆ ಬೈರಮಂಗಲದ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.
ಎಚ್.ಸಿ.ಬಾಲಕೃಷ್ಣ
ಮಾಗಡಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಚ್.ಸಿ.ಬಾಲಕೃಷ್ಣ ತಾಲೂಕಿನ ಹುಲಿಕಟ್ಟೆ ಗ್ರಾಮದ ಮತಗಟ್ಟೆ ಸಂಖ್ಯೆ 175 ರಲ್ಲಿ ಮತ ಚಲಾಯಿಸಿದರು. ಇವರೊಂದಿಗೆ ಪತ್ನಿ ರಾಧಾ, ತಾಯಿ ಶಾರದಮ್ಮ, ಮಗಳು ರಚನಾ ಜತೆಗಿದ್ದರು.
ನಿತ್ಯಾನಂದ ಮತದಾನ
ಮಾಗಡಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರುವ ದಾಸಪ್ಪನದೊಡ್ಡಿಯಲ್ಲಿ ತಮ್ಮ ಅನುಯಾಯಿಗಳೊಂದಿಗೆ ಆಗಮಿಸಿ ನಿತ್ಯಾನಂದ ಸ್ವಾಮೀಜಿ ಮತ ಚಲಾಯಿಸಿದರು.
ನಾರಾಯಣಗೌಡ
ಕನಕಪುರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ನಾರಾಯಣಗೌಡ ತಮ್ಮ ಸ್ವಗ್ರಾಮ ಕೇರಳಾಳುಸಂದ್ರದಲ್ಲಿ ಮತ ಚಲಾಯಿಸಿದರು.