ತಪ್ಪು ಮಾಡಿದ್ರೆ ಜೈಲಿಗೆ ಹೋಗೋಣ, ಇಲ್ಲದಿದ್ರೆ ಏಕೆ ಹೆದರಿಕೆ?: ಡಿಕೆಶಿ
Recommended Video
ರಾಮನಗರ, ಜೂನ್ 27: "ಒಂದು ವೇಳೆ ನಾವು ತಪ್ಪು ಮಾಡಿದ್ದರೆ ಪರಪ್ಪನ ಅಗ್ರಹಾರ ಜೈಲಿಗೆ ಬೇಕಾದರೆ ಹೋಗೋಣ. ಅದರೆ ನಾವು ತಪ್ಪೇ ಮಾಡಿಲ್ಲ. ನಮ್ಮನ್ನು ರಾಜಕೀಯವಾಗಿ ಹಣಿಯಲು ಕೇಂದ್ರ ಸರಕಾರ ಹುನ್ನಾರ ನಡೆಸಿದೆ ಅಷ್ಟೇ" ಎಂದು ಬಿಜೆಪಿ ವಿರುದ್ಧ ಡಿ.ಕೆ.ಶಿವಕುಮಾರ್ ಸಹೋದರರು ಗುಡುಗಿದರು.
ಕನಕಪುರದ ತಮ್ಮ ತೋಟದ ಮನೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗೆ ಮತ್ತು ಮತದಾರರಿಗೆ ಏರ್ಪಡಿಸಿದ್ದ ಅಭಿನಂದನಾ ಸಭೆಯಲ್ಲಿ ಮಾತನಾಡಿ, ನೋಟು ಅಮಾನ್ಯವಾದ ದಿನದಂದು ಕೇವಲ 10 ಲಕ್ಷ ಹಣ ಬದಲಾವಣೆ ಮಾಡಿದ್ದಾರೆ. ಇದಕ್ಕೆ ಫೋನ್ ಮಾಡಿ, ಸಂಸದ ಸುರೇಶ್ ಹಣ ಬದಲಾವಣೆ ಮಾಡುವಂತೆ ಹೇಳಿದ್ದಾರೆ. ಅದನ್ನೇ ವಿರೋಧ ಪಕ್ಷದವರು ತಮ್ಮ ಪ್ರಭಾವ ಬಳಸಿ ನಮ್ಮನ್ನ ಸಿಲುಕಿಸಲು ಹುನ್ನಾರ ಮಾಡುತ್ತಿದ್ದಾರೆ ಎಂದು ಶಿವಕುಮಾರ್ ಆರೋಪಿಸಿದರು.
ಡಿಕೆಶಿ ಮೇಲೆ ಐಟಿ ದಾಳಿ: ಬಿಜೆಪಿ ಮುಖಂಡರ ಮೌನದ ಹಿಂದಿನ ಮರ್ಮವೇನು?
ನಮ್ಮ ಆಪ್ತ ಸಹಾಯಕರನ್ನು ಕರೆದು ಕರೆದು ವಿಚಾರಣೆ ಮಾಡುತ್ತಲೇ ಇದ್ದಾರೆ. ಕೆಲವರು ನೀವು ಹಾಗೂ ಸುರೇಶ್ ಜಾಮೀನು ಪಡೆದುಕೊಳ್ಳಿ ಎಂದು ಹೇಳುತ್ತಿದ್ದಾರೆ. ನಾವು ಯಾವುದೇ ತಪ್ಪು ಮಾಡಿಲ್ಲ ಅಂದ ಮೇಲೆ ಜಾಮೀನು ಏಕೆ ಪಡೆಯಬೇಕು? ಈ ಬಗ್ಗೆ ಪಕ್ಷದ ಹೈಕಮಾಂಡ್ ಮತ್ತು ಸಂಸದ ಮಲ್ಲಿಕಾರ್ಜುನ್ ಖರ್ಗೆಯವರಿಗೆ ತಿಳಿಸಿದ್ದೇನೆ. ನಮ್ಮ ಪಕ್ಷದ ಮುಖಂಡರೊಬ್ಬರಿಗೆ ಕೇಂದ್ರ ಸರಕಾರ ತೊಂದರೆ ಕೊಡುತ್ತಿದೆ ಎಂದು ಸ್ಪೀಕರ್ ಗೆ ಪತ್ರ ಕೂಡ ಬರೆದಿದ್ದಾರೆ ಎಂದು ಶಿವಕುಮಾರ್ ಹೇಳಿದರು.
ಬಿಜೆಪಿಯವರು ಇನ್ನೂ ನಿದ್ದೆ ಮಾಡುತ್ತಿಲ್ಲ. ಅವರಿಗೆ ನಿದ್ದೆ ಕೂಡ ಬರುತ್ತಿಲ್ಲ ಎಂದು ಲೇವಡಿ ಮಾಡಿದ ಸಚಿವ ಶಿವಕುಮಾರ್, ಜುಲೈ ಐದರಂದು ಬಜೆಟ್ ಅಧಿವೇಶನದಲ್ಲಿ ನಾನು ಪಾಲ್ಗೊಳ್ಳುವುದಿಲ್ಲ. ನಾನು ನಂಬಿದ ದೇವರ ದೇವಾಲಯಕ್ಕೆ ತೆರಳಲಿದ್ದೇನೆ ಎಂದು ತಿಳಿಸಿದರು.
ಅಂದಹಾಗೆ ಸಭೆಯಲ್ಲಿ ಡಿ.ಕೆ.ಶಿವಕುಮಾರ್ ಸಹೋದರ ಹಾಗೂ ಸಂಸದ ಡಿ.ಕೆ.ಸುರೇಶ್ ಸಮ್ಮಿಶ್ರ ಸರಕಾರದ ಬಗ್ಗೆ ಮಾತನಾಡಿ, ನಮಗೆ ಇಷ್ಟ ಇದೆಯೋ ಅಥವಾ ಇಲ್ಲವೋ, ನಿಮಗೆ ಇಷ್ಟ ಇದೆಯೋ ಅಥವಾ ಇಲ್ಲವೋ ಗೊತ್ತಿಲ್ಲ. ಒಟ್ಟಾರೆ ಸಮ್ಮಿಶ್ರ ಸರಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದೆ ಎಂದರು.
ಸಿಬಿಐ, ಇಡಿ, ಐಟಿ ಇಲಾಖೆ ಇಟ್ಟುಕೊಂಡು ರಾಜ್ಯದಲ್ಲಿ ನನ್ನ ಹಾಗೂ ಸಚಿವರ ಮೇಲೆ ಕೇಂದ್ರ ಸರಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ಡಿ.ಕೆ.ಶಿವಕುಮಾರ್ ಅವರನ್ನು ಬಗ್ಗು ಬಡಿಯಲು ಕೇಂದ್ರ ಸರಕಾರ ಮುಂದಾಗಿದೆ. ಇದು ಅವರಿಂದ ಸಾಧ್ಯವಿಲ್ಲ ಎಂದು ಹೇಳಿದರು.