ಐತಿಹಾಸಿಕ ಶ್ರೀನಿವಾಸ ಕಲ್ಯಾಣ ವೈಭವ: ಗೋವಿಂದನ ದರ್ಶನಕ್ಕೆ ಭಕ್ತರ ದಂಡು
ರಾಮನಗರ, ಡಿಸೆಂಬರ್ 17: ದಕ್ಷಿಣ ಭಾರತದಲ್ಲೇ ಅತಿ ಹೆಚ್ಚು ಭಕ್ತಾಧಿಗಳು ಭೇಟಿ ನೀಡುವ ಪ್ರಮುಖ ಧಾರ್ಮಿಕ ಕೇಂದ್ರವಾದ ತಿರುಪತಿಯ ತಿರುಮಲ ದೇವಾಲಯದ ವೈಭವವು ರೇಷ್ಮೆ ನಗರಿ ಖ್ಯಾತಿಯ ರಾಮನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸೃಷ್ಟಿಯಾಗಿತ್ತು.
ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ 64ನೇ ವರ್ಷದ ಹುಟ್ಟುಹಬ್ಬದ ಹಿನ್ನಲೆಯಲ್ಲಿ ರಾಜ್ಯದಲ್ಲೇ ಎರಡನೇ ಬಾರಿಗೆ ತಿರುಪತಿ ತಿರುಮಲ ದೇವಾಲಯದ ಮೂಲ ವಿಗ್ರಹಗಳನ್ನು ತಂದು ಅದ್ಧೂರಿಯಾಗಿ ಶ್ರೀನಿವಾಸ ಕಲ್ಯಾಣ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು.
ಕಳೆದ ಏಳು ವರ್ಷಗಳ ಹಿಂದೆ ಬೆಂಗಳೂರು ಅರಮನೆ ಮೈದಾನದಲ್ಲಿ ನಡೆದ ಕಲ್ಯಾಣ ಉತ್ಸವ ಹೊರತುಪಡಿಸಿದರೆ, ಜಿಲ್ಲೆಯ ಮಟ್ಟದಲ್ಲಿ ಪ್ರಥಮ ಬಾರಿಗೆ ತಿರುಪತಿ ಮೂಲ ವಿಗ್ರಹ ತಂದು ಶ್ರೀನಿವಾಸ ಕಲ್ಯಾಣ ಏರ್ಪಡಿಸಿದ್ದು ಪ್ರಾಮುಖ್ಯತೆ ಪಡೆದಿತ್ತು.

ತಿರುಮಲ ದೇವಾಲಯದಂತೆ ಬೃಹತ್ ವೇದಿಕೆ
ಜಿಲ್ಲಾ ಕ್ರೀಡಾಂಗಣದಲ್ಲಿ ತಾತ್ಕಾಲಿಕವಾಗಿ ನಿರ್ಮಾಣಗೊಂಡಿದ್ದ ಸುಮಾರು 180 ಅಡಿ ಉದ್ದ ಹಾಗೂ 80 ಅಡಿ ಅಗಲದ ಬೃಹತ್ ವೇದಿಕೆಯಲ್ಲಿ ತಿರುಪತಿಯ ತಿರುಮಲ ದೇವಾಲಯದಂತೆ ನಿರ್ಮಾಣ ಮಾಡಿ, ತಿರುಪತಿಯ ತಿರುಮಲದಿಂದಲೇ ತಂದಿದ್ದ ಮೂಲ ವಿಗ್ರಹಗಳಾದ ಶ್ರೀದೇವಿ, ಭೂದೇವಿ ಸಮೇತ ವೆಂಕಟೇಶ್ವರ ಸ್ವಾಮಿಯನ್ನು ಪ್ರತಿಷ್ಟಾಪಿಸಲಾಗಿತ್ತು. ತಿರುಮಲ ದೇವಾಲಯದಿಂದ ಆಗಮಿಸಿದ್ದ 80ಕ್ಕೂ ಹೆಚ್ಚು ಅರ್ಚಕರು ಶ್ರೀನಿವಾಸ ಕಲ್ಯಾಣದ ಪೂಜಾಕೈಂಕರ್ಯಗಳನ್ನು ನೆರವೇರಿಸಿದರು.

ಶ್ರೀನಿವಾಸ ಕಲ್ಯಾಣದಲ್ಲಿ ದೇವೇಗೌಡರ ಕುಟುಂಬ
ತಿರುಪತಿ ಮೂಲ ವಿಗ್ರಹಗಳ ಶ್ರೀನಿವಾಸ ಕಲ್ಯಾಣ ಅದ್ಧೂರಿ ಧಾರ್ಮಿಕ ಕಾರ್ಯಕ್ರಮಕ್ಕೆ ಜಿಲ್ಲಾ ಕೇಂದ್ರ ಸಿಂಗಾರಗೊಂಡಿತ್ತು. ನಗರದ ಪ್ರಮುಖ ರಸ್ತೆಗಳು ವಿದ್ಯುತ್ ದೀಪಗಳಿಂದ ಅಲಂಕೃತವಾಗಿದೆ. ಜಿಲ್ಲಾ ಕ್ರೀಡಾಂಗಣದಲ್ಲಿ ತಿರುಪತಿಯ ತಿರುಮಲ ದೇವಾಲಯ ಮರುಸೃಷ್ಟಿಯಾಗಿತ್ತು. ಎಸ್.ಬಿ.ಟಾಕೀಸ್ ಕಂಪನಿ ತಿರುಪತಿ ಮಾದರಿಯಲ್ಲೇ ವೇದಿಕೆಯನ್ನು ನಿರ್ಮಾಣ ಮಾಡಿತ್ತು.
ತಿರುಮಲದ ಮೂಲ ವಿಗ್ರಹಗಳಿಗೆ ಜರುಗಿದ ಶ್ರೀನಿವಾಸ ಕಲ್ಯಾಣ ಪೂಜಾಕೈಂಕರ್ಯಗಳಲ್ಲಿ ಮಾಜಿ ಪ್ರಧಾನಿ ದೇವೇಗೌಡರು, ಚೆನ್ನಮ್ಮ ದೇವೇಗೌಡ, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಶಾಸಕಿ ಅನಿತಾ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ, ರೇವತಿ ಸೇರಿದಂತೆ ದೇವೇಗೌಡರ ಕುಟುಂಬದ ಸದಸ್ಯರು ಪಾಲ್ಗೊಂಡಿದ್ದರು.

ರಾಮನಗರದಲ್ಲಿ ಮೊಳಗಿದ ಗೋವಿಂದನ ನಾಮಸ್ಮರಣೆ
ತಿರುಪತಿಯಿಂದ ಆಗಮಿಸಿದ ಮೂಲ ವಿಗ್ರಹಗಳಿಗೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ದಂಪತಿ ಪೂಜೆ ಸಲ್ಲಿಸುವ ಮೂಲಕ ತಿರುಮಲದ ಮೂಲ ವಿಗ್ರಹಗಳಾದ ಶ್ರೀನಿವಾಸ, ಭೂದೇವಿ, ಶ್ರೀದೇವಿ ಹಾಗೂ ತಿರುಪತಿಯಿಂದ ಆಗಮಿಸಿದ ಅರ್ಚಕರ ತಂಡ ಪುರ ಪ್ರವೇಶ ಮಾಡಿದರು. ನಂತರ 11ಕ್ಕೂ ಹೆಚ್ಚು ಕಲಾತಂಡಗಳೊಂದಿಗೆ ನಗರದ ಕೆಂಪೇಗೌಡ ಸರ್ಕಲ್, ಐಜೂರು ವೃತ್ತ, ಹಳೆ ಬಸ್ ನಿಲ್ದಾಣ, ರೈಲ್ವೆ ಸ್ಟೇಷನ್ ರಸ್ತೆ, ಎಂಜಿ ರಸ್ತೆ ಮೂಲಕ ವೇದಿಕೆಗೆ ಆಗಮಿಸಿದವು. ಇನ್ನು ಮೆರವಣಿಗೆ ಸಾಗಿದ ದಾರಿಯುದ್ದಕ್ಕೂ ಗೋವಿಂದ, ಗೋವಿಂದ ಎಂದು ಶ್ರೀನಿವಾಸನ ನಾಮ ಸ್ಮರಣೆ ಮೊಳಗಿತ್ತು.

ತಡರಾತ್ರಿವರೆಗೂ ಹರಿದು ಬಂದ ಭಕ್ತ ಸಾಗರ
ತಿರುಪತಿಯಲ್ಲಿ ಜರುಗುವ ಕಲ್ಯಾಣೋತ್ಸದ ರೀತಿಯಲ್ಲೇ ಅದೇ ಭಕ್ತಿ ಸಂಪ್ರದಾಯದಂತೆ ಜರುಗಿದ ಕಲ್ಯಾಣೋತ್ಸವ ಪವಿತ್ರ ಧಾರ್ಮಿಕ ಕಾರ್ಯಕ್ರಮಕ್ಕೆ ಸಾವಿರಾರು ಮಂದಿ ಭಕ್ತ ಸಾಗರ ಹರಿದು ಬಂದಿತ್ತು. ಆಗಮಿಸಿದ ಲಕ್ಷಾಂತರ ಮಂದಿಗೆ ಅಚ್ಚುಕಟ್ಟಾದ ಹೋಳಿಗೆ ಊಟ, ಫಲಾವ್, ಮೊಸರನ್ನ, ಮೈಸೂರ್ ಪಾಕ್ ಸ್ವೀಟ್ ವಿತರಣೆ ಮಾಡಲಾಯಿತು. ಕಲ್ಯಾಣೋತ್ಸವ ಬಳಿಕ ದೇವರ ದರ್ಶನ ಪಡೆದ ಭಕ್ತಾಧಿಗಳಿಗೆ ತಿರುಪತಿಯಿಂದ ತಂದಿದ್ದ ಸುಮಾರು ಒಂದು ಲಕ್ಷ ಲಡ್ಡು ಪ್ರಸಾದ, ಪುಳಿಯೋಗರೆ ಹಾಗೂ ಕೇಸರಿ ಬಾತ್ ವಿತರಿಸಲಾಯಿತು. ಇನ್ನು ಮಹಿಳೆಯರಿಗೆ ಅರಿಶಿಣ ಕುಂಕುಮ ಸೇರಿದಂತೆ ತಾಂಬೂಲ ವ್ಯವಸ್ಥೆ ಮಾಡಲಾಗಿತ್ತು.
-
Raghav Chadha: ಸಂಸದ ರಾಘವ್ ಚಡ್ಡಾಗೆ ಶಾಕ್ ಕೊಟ್ಟ ಎಎಪಿ, ಬಿಜೆಪಿ ಸೇರಲಿದ್ದಾರೆಯೇ ಸ್ಟಾರ್ ರಾಜಕಾರಣಿ -
ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್ ಕೈ ಹಿಡಿಯುತ್ತವೆ: ಸಿದ್ದರಾಮಯ್ಯ ಹೇಳಿಕೆ -
ತಮಿಳುನಾಡಿನಲ್ಲಿ ರಂಗೇರಿದ ಅಖಾಡ: ಹೊಸ ಶಕ್ತಿಯಾಗಿ ವಿಜಯ್ ಪ್ರವೇಶ, ಪ್ರಮುಖ ಪಕ್ಷಗಳು, ಚರ್ಚೆಯ ವಿಷಯಗಳು -
By Election: ಒಬ್ಬರಿಂದ ಪಕ್ಷ ಗೆಲ್ಲಲ್ಲ, ಇದು ಕಾಂಗ್ರೆಸ್ ಸಿದ್ಧಾಂತಕ್ಕೆ ಸಿಗುವ ಜಯ: ಸಲೀಂ ಅಹ್ಮದ್ ಟಾಂಗ್ ಕೊಟ್ಟಿದ್ಯಾರಿಗೆ? -
Krunal Pandya: ವಿರಾಟ್ ಕೊಹ್ಲಿ - 2026ರ ಆರ್ಸಿಬಿ ತಂಡದ ಬಗ್ಗೆ ಸ್ಟಾರ್ ಆಟಗಾರ ಕೃನಾಲ್ ಪಾಂಡ್ಯರಿಂದ ಮಹತ್ವ ವಿಷಯ ರಿವೀಲ್ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ












Click it and Unblock the Notifications