ಭಾರಿ ಮಳೆಗೆ ರೇಷ್ಮೆ ನಗರಿ ರಾಮನಗರದಲ್ಲಿ ಮತ್ತೆ ಜಲ ಕಂಟಕ
ರಾಮನಗರ, ಅಕ್ಟೋಬರ್ 15: ರಾತ್ರಿಯಿಡೀ ನಿರಂತರವಾಗಿ ಸುರಿದ ಮಳೆಯಿಂದಾಗಿ ರೇಷ್ಮ ನಗರಿ ರಾಮನಗರ ಹಾಗೂ ಬೊಂಬೆನಾಡು ಚನ್ನಪಟ್ಟಣದಲ್ಲಿ ಹಲವೆಡೆ ಅವಾಂತರ ಸೃಷ್ಟಿಯಾಗಿದೆ. ಜಿಲ್ಲೆಯ ಪ್ರಮುಖ ಜಲಾಶಯಗಳಾದ ಕಣ್ವ ಜಲಾಶಯ ಹಾಗೂ ಮಂಚನಬೆಲೆ ಜಲಾಶಯ ತುಂಬಿದ್ದು ನದಿಗೆ ಪಾತ್ರದ ಜನರಲ್ಲಿ ಆತಂಕ ಮೂಡಿದೆ.
ಬಾರಿ ಮಳೆಯಿಂದ ಮಂಚನಬೆಲೆ ಜಲಾಶಯಕ್ಕೆ ಒಳಹರಿವು ಹೆಚ್ಚಾದ ಹಿನ್ನಲೆಯಲ್ಲಿ ಜಲಾಶಯದಿಂದ ಅರ್ಕಾವತಿ ನದಿಗೆ 5.5 ಸಾವಿರ ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡಲಾಗಿದ್ದು, ಅರ್ಕಾವತಿ ನದಿ ಮೈದುಂಬಿ ಹರಿಯುತ್ತಿದೆ. ಇನ್ನೂ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗುವ ಸಂಭವವಿರುವುದರಿಂದ ನದಿ ಪಾತ್ರದ ಜನರು ಸುರಕ್ಷಿತ ತಾಣಗಳಿಗೆ ತೆರಳಲು ಜಿಲ್ಲಾಡಳಿತ ಸೂಚನೆ ನೀಡಿದೆ.
Karnataka Rains : ಕರ್ನಾಟಕದಾದ್ಯಂತ ಮಳೆ ಅಬ್ಬರ: ಬೆಂಗಳೂರಿನಲ್ಲಿ ಮುಂದಿನ 4 ದಿನ ಮಳೆ
ಮೈದುಂಬಿ ಹರಿಯುತ್ತಿರುವ ಆರ್ಕಾವತಿ ನದಿಯನ್ನು ನೋಡಲು ಜನರ ದಂಡೆ ನೆರದಿದೆ. ಯಾವುದೇ ಅಪಾಯವಾಗದಂತೆ ಜನರನ್ನು ಪೋಲಿಸರು ಸ್ಥಳದಿಂದ ಕಳಿಸುತ್ತಿದ್ದಾರೆ. ಅರ್ಕಾವತಿ ತುಂಬಿ ಹರಿದ ಹಾಗೂ ನಗರದಲ್ಲಿ ರಾತ್ರಿಯಿಡೀ ಸುರಿದ ಮಳೆಯಿಂದಾಗಿ ಸೀರಹಳ್ಳ ಅಪಾಯದ ಮಟ್ಟದಲ್ಲಿ ಹರಿಯುತ್ತಿರುವುದರಿಂದ ಜನರ ಆತಂಕದಲ್ಲಿದ್ದಾರೆ.
ಕಳೆದ ತಿಂಗಳು ಸುರಿದ ಬಾರಿ ಭಾರೀ ಅವಾಂತರ ಸೃಷ್ಟಿಸಿದ್ದ ಸೀರಹಳ್ಳ, ಅರ್ಕೇಶ್ವರ ಕಾಲೋನಿ, ಟಿಪ್ಪುನಗರ, ಜೀಯಾಉಲ್ಲಾ ಬ್ಲಾಕ್, ಗೌಸಿಯಾ ನಗರ, ಯಾರಬ್ ನಗರ ಸೇರಿದಂತೆ ಐದಾರು ಬಡಾವಣೆಗಳಿಗೆ ನುಗ್ಗಿದ್ದ ಸೀರಹಳ್ಳ ನೀರು ಅಪಾರ ಪ್ರಮಾಣದ ಹಾನಿ ಎಬ್ಬಿಸಿದ ಪರಿಣಾಮ ಸಾವಿರಾರು ಮಂದಿ ಮನೆ-ಬದುಕು ಕಳೆದುಕೊಂಡು ಸಂಕಷ್ಟ ಅನುಭವಿಸಿದ್ದರು. ಇದೀಗ ಮತ್ತೆ ಸೀರಹಳ್ಳ ತುಂಬಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಮತ್ತೆ ಜನರಲ್ಲಿ ಆತಂಕ ಮನೆ ಮಾಡಿದೆ.
ರಾಯಚೂರು; ಭಾರಿ ಮಳೆಯಿಂದ ಹತ್ತಿ ಬೆಳೆ ನಾಶ, ವಿಷದ ಬಾಟಲಿ ಹಿಡಿದ ರೈತ
ಜಮೀನಿಗೆ ನುಗ್ಗಿದ ನೀರು, ಮನೆ ಗೋಡೆ ಕುಸಿತ
ಇಡೀ ರಾತ್ರಿ ಸುರಿದ ಬಾರಿ ಮಳೆಗೆ ರಾಮನಗರದ ಅಚ್ಚಲು ದೊಡ್ಡಿ ಗ್ರಾಮದಲ್ಲಿ ಮನೆಯ ಗೋಡೆ ಕುಸಿದು ಬಿದ್ದಿರುವ ಘಟನೆ ನಡೆದಿದೆ. ಗ್ರಾಮದ ಕುಮಾರ್ ಎಂಬುವರಿಗೆ ಸೇರಿದ ಮನೆ ಗೋಡೆ ಕುಸಿದುಬಿದ್ದಿದೆ. ಮನೆಯಲ್ಲಿದ್ದವರು ಕೂದಲೆಳೆಯ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ.
ರಾಮನಗರದಲ್ಲಿ ತಡರಾತ್ರಿ ಭಾರಿ ಮಳೆ ಸುರಿದ ಪರಿಣಾಮ ಅಪಾರ ಪ್ರಮಾಣದ ನೀರು ಜಮೀನುಗಳಿಗೆ ನುಗ್ಗಿದೆ. ತಾಲೂಕಿನ ಕೂಟಗಲ್, ಶ್ಯಾನಭೋಗನಹಳ್ಳಿ, ಎರೇಹಳ್ಳಿ ಗ್ರಾಮಗಳಲ್ಲಿ ಮಳೆನೀರು ಜಮೀನುಗಳಿಗೆ ನುಗ್ಗಿದ್ದು, ಪರಿಣಾಮ ಅಪಾರ ಪ್ರಮಾಣದ ಬಾಳೆ, ಸೀಮೆ ಹುಲ್ಲು ಬೆಳೆಗಳು ಸಂಪೂರ್ಣ ನಾಶವಾಗಿದೆ.
ಬೀಡಿ ಕಾಲೋನಿಯ ಕೆಲ ಮನೆಗಳು ಜಲಾವೃತ
ನಿರಂತರ ಮಳೆಗೆ ಬೊಂಬೆ ನಗರಿ ಚನ್ನಪಟ್ಟಣದ ಕುಡಿನೀರು ಕಟ್ಟೆ ಕೋಡಿ ಹೊಡೆದ ಪರಿಣಾಮ ಬೀಡಿ ಕಾಲೋನಿಯ ಕೆಲ ಮನೆಗಳು ಜಲಾವೃತವಾಗಿವೆ. ಬಡಾವಣೆಯ ತಗ್ಗು ಪ್ರದೇಶದ ಮನೆಗಳಿಗೆ ಮಳೆನೀರು ನುಗ್ಗಿ ಮನೆಯಲ್ಲಿದ್ದ ವಸ್ತುಗಳು ನೀರುಪಾಲಾಗಿವೆ. ನಗರಸಭೆಯ ಸಿಬ್ಬಂದಿಗಳು ಜೆಸಿಬಿ ಮೂಲಕ ಕಿರು ಸೆತುವೆ ಹೊಡೆದು ನೀರು ಸರಾಗವಾಗಿ ಹರಿದುಹೋಗುವಂತೆ ಕಾಲುವರ ಮಾಡಿದ್ದ ಪರಿಣಾಮ ನೀರು ತಗ್ಗಿದ್ದು, ಜನರಲ್ಲಿದ್ದ ಆತಂಕ ಮರೆಯಾಗಿದೆ.
ಇನ್ನೂ ಕಳೆದ ಬಾರಿಯಂತೆ ಈ ಬಾರಿಯೂ ತಾಲ್ಲೂಕಿನ ಕೋಲೂರು ಗ್ರಾಮದ ಗಾಂಧಿ ಗ್ರಾಮದ ಮನೆಗಳಿಗೆ ಅಲ್ಪ ಪ್ರಮಾಣದ ನೀರು ನುಗ್ಗಿದೆ. ಅಲ್ಲದೇ ಬಹುತೇಕ ಕೆರೆಗಳು ತುಂಬಿದ್ದು ಕೆಲ ಕೆರೆಗಳು ಕೋಡಿ ಬಿದ್ದಿರುವ ಹಿನ್ನಲೆಯಲ್ಲಿ ತಾಲ್ಲೂಕಿನ ಹಲವು ಭಾಗಗಳಲ್ಲಿ ಜಮೀನುಗಳಿಗೆ ಮಳೆ ನೀರು ನುಗ್ಗಿರುವ ಘಟನೆ ನಡೆದಿದೆ.
5 ದಿನ ಮಳೆ ಸಾಧ್ಯತೆ
ರಾಜ್ಯದಲ್ಲಿ ಮುಂದಿನ ಐದಾರು ದಿನ ಭರ್ಜರಿ ಮಳೆಯಾಗುವ ಸಾಧ್ಯತೆಯಿದೆ. ನೈರುತ್ಯ ಮುಂಗಾರು ಮಾರುತ ಮರಳುವಿಕೆ, ಅರಬ್ಬಿ ಸಮುದ್ರ, ಉತ್ತರ ಅಂಡಮಾನ್ ಸಮುದ್ರ ಭಾಗ ಮತ್ತು ಬಂಗಾಳ ಕೊಲ್ಲಿಯಲ್ಲಿ ನಿರ್ಮಾಣ ಆಗಿರುವ ಮೇಲ್ಮೈ ಸುಳಿಗಾಳಿಗಳು ಮಳೆಯ ಅಬ್ಬರವನ್ನು ಹೆಚ್ಚಿಸಲಿದೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ. ಶನಿವಾರ ಬೆಳಗ್ಗೆ 8.30ರವರೆಗೆ ಕಲಬುರಗಿ, ವಿಜಯಪುರ, ಬಾಗಲಕೋಟೆ, ಯಾದಗಿರಿ, ರಾಯಚೂರು, ಕೊಪ್ಪಳ, ಬಾಗಲಕೋಟೆ, ಬೆಳಗಾವಿ, ಉತ್ತರಕನ್ನಡ, ದಾವಣಗೆರೆ, ಚಿಕ್ಕಮಗಳೂರು, ತುಮಕೂರು, ಹಾಸನ, ಬೆಂಗಳೂರು ನಗರ ಮತ್ತು ಗ್ರಾಮಾಂತರ, ರಾಮನಗರ, ಮಂಡ್ಯ, ಚಾಮರಾಜನಗರ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದ್ದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಬೆಂಗಳೂರಿನಲ್ಲೂ ಭಾರಿ ಮಳೆ
ಶುಕ್ರವಾರ ಮಧ್ಯರಾತ್ರಿವರೆಗೂ ಬೆಂಗಳೂರಿನಾದ್ಯಂತ ಭಾರಿ ಮಳೆಯಾಗಿದೆ. ಜಯನಗರ, ಮೆಜೆಸ್ಟಿಕ್, ಕೆ.ಆರ್ ಮಾರುಕಟ್ಟೆ, ಶಾಂತಿನಗರ, ಕೋರಮಂಗಲ, ರಾಜಾಜಿನಗರ, ಮಲ್ಲೇಶ್ವರಂ, ಯಶವಂತಪುರ, ಆರ್.ಟಿ.ನಗರ, ಹೆಬ್ಬಾಳ, ಬೊಮ್ಮನಹಳ್ಳಿ ಸೇರಿದಂತೆ ನಗರದ ಹಲವೆಡೆ ಭಾರಿ ಮಳೆಯಾಗಿದೆ. ರಾತ್ರಿ 7ರಿಂದಲೇ ಮಳೆ ಆರಂಭವಾದ ಹಿನ್ನಲೆ ಕೆಲವೆಡೆ ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ಕೂಡ ಉಂಟಾಗಿ ಜನರು ಪರದಾಡಿದ್ದರು.