ನಾನು ಕೈಗೊಂಡಿರುವ ಕಾರ್ಯಕ್ರಮಗಳಿಗೆ ₹2.5 ಲಕ್ಷ ಕೋಟಿ ಹಣ ಬೇಕು-ಕುಮಾರಸ್ವಾಮಿ
ರಾಮನಗರ, ಜನವರಿ 16: 58 ತಾಲೂಕಿನ ರೈತರ ಜೊತೆಯಲ್ಲಿ ಸಂವಾದ ಮಾಡುತ್ತಿದ್ದೇನೆ. 15 ಸಾವಿರಕ್ಕೂ ಹೆಚ್ಚು ರೈತರ ಜೊತೆ ವರ್ಚುಯಲ್ ಸಭೆಯಲ್ಲಿ ಭಾಗವಹಿಸುತ್ತಿದ್ದೇನೆ. ರೈತರ ಜೊತೆ ಚರ್ಚಿಸಿ ಅವರ ಸಮಸ್ಯೆಗಳನ್ನು ಆಲಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.
ರಾಮನಗರದ ಕೇತಿಗಾನಹಳ್ಳಿ ಗ್ರಾಮದಲ್ಲಿ ಸಂಕ್ರಾಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಂಚರತ್ನ ಯೋಜನೆಯ ಮುಖಾಂತರ ಜನರ ಬಳಿ ಹೋಗುತ್ತಿದ್ದೇನೆ. ನಾಡಿನ ಪ್ರತಿ ವರ್ಗದ ಕುಟುಂಬಗಳಿಗೆ ಉಪಯೋಗವಾಗುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಸ್ಯಾಂಟ್ರೋ ರವಿ ಬಂಧನದ ಬಗ್ಗೆ ರಾಮನಗರ ಎಸ್ಪಿ ಸ್ಪಷ್ಟನೆ: ತನಿಖೆಗೆ ವಿಶೇಷ ತಂಡ ರಚನೆ
ಕೆಲವು ಕಾರ್ಯಕ್ರಮಗಳ ಮೂಲಕ ಇಲಾಖೆಯಲ್ಲಿ ಪರ್ಸೆಂಟೆಜ್ ನಿಲ್ಲಿಸುವ ಕೆಲಸವಾಗಲಿದೆ. ಎಲ್ಲವೂ ಪಾರದರ್ಶಕವಾಗಿ ಇರಬೇಕೆಂದು ಈ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಸರ್ಕಾರದ ಹಣ ಯಾವುದೇ ರೀತಿ ದುರ್ಬಳಕೆ ಆಗಬಾರದು ಎಂದು ಹೇಳಿದರು.
ಮಾತು ಮುಂದುವರಿಸಿದ ಕುಮಾರಸ್ವಾಮಿ ಕಾಂಗ್ರೆಸ್ನವರು 200 ಯೂನಿಟ್ ವಿದ್ಯುತ್ ಉಚಿತವಾಗಿ ನೀಡುತ್ತೇವೆ.
ಮಹಿಳೆಯರಿಗೆ ತಿಂಗಳಿಗೆ 2000 ರೂಪಾಯಿ ನೀಡುತ್ತೇವೆ ಎಂದು ಕಾಂಗ್ರೆಸ್ನವರು ಹೇಳುತ್ತಿದ್ದಾರೆ.
ನಾನು ಅದರ ಬಗ್ಗೆ ಮಾತನಾಡುವುದಿಲ್ಲ. ಆದರೆ ದುಡಿಯುವವರ ಕೈ ಬಲಪಡಿಸುವ ಕೆಲಸ ಮಾಡಬೇಕು ಎಂದರು.
ಚುನಾವಣೆ ಬಂದರೆ ಸೀರೆ ಕುಕ್ಕರ್ ಹಂಚುತ್ತಾರೆ. ನಾಡಿನ ಜನರು ಯಾರಿಂದ ಏನೂ ಬೇಡಬಾರದು. ಆ ನಿಟ್ಟಿನಲ್ಲಿ ನಾನು ಕೈಗೊಂಡಿರುವ ಕಾರ್ಯಕ್ರಮ ಮುಂದಿನ 5 ವರ್ಷ ಪ್ರಗತಿಯಲ್ಲಿರುತ್ತದೆ. ರೈತರ ಆತ್ಮಹತ್ಯೆಗಳನ್ನು ನೋಡಿ ಸಾಲ ಮನ್ನಾ ಕಾರ್ಯಕ್ರಮ ಮಾಡಿದೆ.
ನಾನು ಕೈಗೊಂಡಿರುವ ಕಾರ್ಯಕ್ರಮಗಳಿಗೆ 2.5 ಲಕ್ಷ ಕೋಟಿ ಅಷ್ಟು ಹಣ ಬೇಕು. ಅಷ್ಟು ಹಣವನ್ನು ಸಂಗ್ರಹಿಸುವ ಕೆಲಸ ಮಾಡುತ್ತೇನೆ. ನಮ್ಮ ರಾಜ್ಯ ಸಂಪತ್ತು ಭರಿತವಾಗಿದೆ ಎಂದು ಹೇಳಿದರು.
ಇನ್ನು ಸ್ತೀ ಶಕ್ತಿ ಸ್ವಸಹಾಯ ಸಂಘಗಳು ಮನವಿ ಮಾಡಿದ್ದಾರೆ. ರೈತರ ಸಾಲಮನ್ನಾ ಮಾಡಿದ ಹಾಗೆ ನಮ್ಮ ಸಾಲ ಕೂಡ ಮನ್ನಾ ಮಾಡಿ ಎಂದು ಹೇಳಿದ್ದಾರೆ. ಅದರ ಬಗ್ಗೆ ಕೂಡ ಚರ್ಚೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಗೃಹ ಸಚಿವ ಆರಗ ಜ್ಞಾನೇಂದ್ರ ನೀಡಿರುವ ಆತ್ಮಹತ್ಯೆ ಹೇಳಿಕೆ ವಿಚಾರವಾಗಿ ಮಾತನಾಡಿದ ಕುಮಾರಸ್ವಾಮಿ, ಲಂಚ, ವರ್ಗಾವಣೆ ಅಂತಹ ಕೆಲಸಗಳನ್ನು ಸ್ಯಾಂಟ್ರೋ ರವಿ ಮಾಡಿದ್ದಾನೆ. ಇಂತಹ ವ್ಯಕ್ತಿ 150ಕ್ಕೂ ಹೆಚ್ಚು ಪೊಲೀಸರ ಬಳಿ ದುಡ್ಡು ಕಿತ್ತಿದ್ದಾನೆ. ಹಾಗಾದರೆ ಸಚಿವರಿಗೆ ಗೊತ್ತಿಲ್ಲದೇ ಅವರ ಕಚೇರಿಯಲ್ಲಿ ಓಡಾಡಿದ್ದಾನಾ..? ಎಂದು ಪ್ರಶ್ನಿಸಿದ್ದಾರೆ.