ಟಿಪ್ಪುವಿನಂತೆ ಬಿಜೆಪಿಯವರು ಮಕ್ಕಳನ್ನು ಒತ್ತೆಯಿಟ್ಟಿದ್ದಾರಾ? : ಡಿ.ಕೆ.ಶಿವಕುಮಾರ್
ರಾಮನಗರ, ನವೆಂಬರ್ 10: ದೇಶದ ಸ್ವಾತಂತ್ರಕ್ಕಾಗಿ ಟಿಪ್ಪು ತನ್ನ ಎರಡು ಮಕ್ಕಳನ್ನು ಬ್ರಿಟೀಷರ ಬಳಿ ಒತ್ತೆಯಿಟ್ಟಿದ್ದ. ಈಶ್ವರಪ್ಪ ನೀನ್ ಒತ್ತೆ ಇಟ್ಟಿದ್ಯೇನಪ್ಪಾ..? ಇಲ್ಲ. ಜಗದೀಶ್ ಶೆಟ್ಟರ್ ಏನಾದ್ರೂ ಅವರ ಮಕ್ಕಳನ್ನು ಒತ್ತೆ ಇಟ್ಟಿದ್ದರಾ? ಎಂದು ಬಿಜೆಪಿ ನಾಯಕರ ವಿರುದ್ದ ಇಂಧನ ಸಚಿವ ಡಿ.ಕೆ ಶಿವಕುಮಾರ್ ವಾಗ್ದಾಳಿ ನಡೆಸಿದರು.
ರಾಮನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಟಿಪ್ಪು ಜಯಂತಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, "ಈ ಹಿಂದೆ ಕೆಜೆಪಿಯಲ್ಲಿದ್ದಾಗ ಯಡಿಯೂರಪ್ಪನವರು ಪೇಟ ಹಾಕಿ ಖಡ್ಗ ಅಲ್ಲಾಡಿಸಲಿಲ್ವಾ. ಅವತ್ತೊಂದು ನಾಟಕ ಇವತ್ತೊಂದು ನಾಟಕ. ಅವತ್ತೊಂದು ಬಣ್ಣ ಇವತ್ತೊಂದು ಬಣ್ಣ," ಎಂದು ವ್ಯಂಗ್ಯವಾಡಿದರು.

"ದೇಶದ ಚರಿತ್ರೆಯನ್ನು ತಿದ್ದಲು ಮುಂದಾದರೆ ಅದಕ್ಕಿಂತ ದೇಶದ್ರೋಹ ಮತ್ತೊಂದಿಲ್ಲ," ಎಂದು ಹೇಳಿದ ಶಿವಕುಮಾರ್, "ರಾಷ್ಟ್ರಪತಿಯವರಿಗೆ ವಿಧಾನಸೌದದ ವಜ್ರಮಹೋತ್ಸವದಲ್ಲಿ ನಾವು ಭಾಷಣ ಬರೆದುಕೊಟ್ಟಿದಲ್ಲ. ರಾಷ್ಟ್ರಪತಿಗಳೇ ಟಿಪ್ಪುವನ್ನು ಸ್ಮರಿಸಿದ ಮೇಲೂ ಬಾಯ್ಮುಚ್ಚಿಕೊಂಡು ಇರೋಕೆ ಸಾಧ್ಯವಾಗಿಲ್ಲ ಅಂದರೆ ಬಿಜೆಪಿಯವರಿಗೆ ದ್ವೇಷ ಎಷ್ಟಿದೆ ಎನ್ನುವುದು ಅವರ ವರ್ತನೆಯಿಂದ ತಿಳಿಯುತ್ತದೆ," ಎಂದು ಹೇಳಿದರು.
ಕಾಂಗ್ರೆಸ್ ಮೇಲೆ ಗೊಬೆ ಕೂರಿಸುವ ಬದಲು ರಾಷ್ಟ್ರಪತಿಗಳ ಹೇಳಿಕೆ ಸರಿಯಿಲ್ಲ ಅಂತಾ ಪಕ್ಷದಿಂದ ನಿರ್ಣಯ ಮಾಡಿ, ಅಧಿವೇಶನದ ಭಾಷಣವನ್ನು ತೆಗೆದುಹಾಕಬೇಕು ಎಂದು ಒತ್ತಾಯಿಸಿ ಎಂದು ಸವಾಲು ಹಾಕಿದರು.

ಟಿಪ್ಪು ದೇಶಕ್ಕಾಗಿ ಮಕ್ಕಳನ್ನ ಒತ್ತೆಯಿಟ್ಟ. ನೀವ್ಯಾರಾದ್ರೂ ನಿಮ್ಮ ಮಕ್ಕಳನ್ನ ಒತ್ತೆಯಿಟ್ಟಿದ್ದೀರಾ? ಎಂದು ಶೆಟ್ಟರ್ ಹಾಗೂ ಈಶ್ವರಪ್ಪರನ್ನು ಪ್ರಶ್ನಿಸಿದರು. "ನೀವಲ್ಲದಿದ್ದರೆ ನಿಮ್ಮ ಪಕ್ಷದವರು, ನೀವು ಆದರ್ಶವಾಗಿ ಪೂಜಿಸೋ ವ್ಯಕ್ತಿಗಳು ಯಾರಾದರೂ ಇಂತಹ ಕೆಲಸ ಮಾಡಿದ್ದಾರಾ? ಇದನ್ನೆಲ್ಲಾ ಮೇಲೊಬ್ಬ ನೋಡ್ಕೋತಾನೆ," ಎಂದು ತಿಳಿಸಿದರು.

ರೇಷ್ಮೆನಗರಿ ರಾಮನಗರದಲ್ಲೂ ಕೂಡಾ ಟಿಪ್ಪು ಸುಲ್ತಾನ್ ಜಯಂತಿಯನ್ನು ವಿಜೃಂಭಣೆಯಿಂದ ಆಚರಣೆ ಮಾಡಲಾಯಿತು. ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ವತಿಯಿಂದ ನಡೆದ ಕಾರ್ಯಕ್ರಮವನ್ನು ಇಂಧನ ಸಚಿವ ಡಿ.ಕೆ ಶಿವಕುಮಾರ್ ಉದ್ಘಾಟಿಸಿದರು. ಕಾರ್ಯಕ್ರಮದ ಉದ್ಘಾಟನೆಯ ವೇಳೆಗೆ ಸಾವಿರಾರು ಜನ ಸೇರಿದ್ದರು. ಆದ್ರೆ ಕಾರ್ಯಕ್ರಮ ಆರಂಭವಾಗಿದ್ದೇ ಮಧ್ಯಾಹ್ನವಾಗಿದ್ದರಿಂದ ಸೇರಿದ್ದ ಜನರು ಹೊರನಡೆದಿದರು. ಕಾರ್ಯಕ್ರಮ ಅರ್ಧವಾಗುವಷ್ಟರಲ್ಲಿ ಬಹುತೇಕ ಖುರ್ಚಿಗಳೆಲ್ಲಾ ಖಾಲಿ ಖಾಲಿಯಾಗಿತ್ತು. ವೇದಿಕೆಯಲ್ಲಿ ಕಾರ್ಯಕ್ರಮ ನೆಪ ಮಾತ್ರಕ್ಕೆ ಎಂಬಂತೆ ನಡೆಯಿತು.












Click it and Unblock the Notifications