ಸಂತೋಷ್ ಪಾಟೀಲ್ ಆತ್ಮಹತ್ಯೆ ಹಿಂದೆ ಕಾಣದ ಕೈಗಳ ಕೈವಾಡ; ಎಚ್ಡಿಕೆ
ರಾಮನಗರ, ಏಪ್ರಿಲ್ 14: ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಕಾಣದ ಕೈಗಳ ಚಿತಾವಣೆ ಇರುವುದು ಮೇಲ್ನೋಟಕ್ಕೆ ಕಾಣುತ್ತಿದೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅನುಮಾನ ವ್ಯಕ್ತಪಡಿಸಿದ್ದಾರೆ.
ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ಮಾತನಾಡಿದ ಮಾಜಿ ಸಿಎಂ ಎಚ್ಡಿಕೆ, "ಸಂತೋಷ್ ಪಾಟೀಲ್ ಆತ್ಮಹತ್ಯೆ ವಿಚಾರವಾಗಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ಇವತ್ತಿನ ಪರಿಸ್ಥಿತಿಯಲ್ಲಿ ರಾಜೀನಾಮೆ ನೀಡುವುದು ಸೂಕ್ತ ಎಂದು ಹೇಳಿದ್ದಾರೆ. ಈಶ್ವರಪ್ಪ ಇಂದು ಅಥವಾ ನಾಳೆ ರಾಜೀನಾಮೆ ನೀಡಬಹುದು. ರಾಜೀನಾಮೆ ನೀಡಿ ಎಂದು ಅವರಿಗೆ ಹೈಕಮಾಂಡ್ ಹೇಳಬಹುದು," ಎಂದು ತಿಳಿಸಿದರು.

ಪ್ರಕರಣದಲ್ಲಿ ಕಾಣದ ಕೈಗಳ ಚಿತಾವಣೆ
"ಎಲ್ಲಕ್ಕಿಂತ ಹೆಚ್ಚಾಗಿ ಈ ಪ್ರಕರಣದಲ್ಲಿ ಹಲವು ರೀತಿಯ ಸಂಶಯಗಳು, ಪ್ರೇರೇಪಣೆಗಳಿವೆ ಎಂದು ಗುಮಾನಿ ವ್ಯಕ್ತಪಡಿಸಿದ ಎಚ್ಡಿಕೆ, ಆತ್ಮಹತ್ಯೆ ಪ್ರಕರಣದ ಕುರಿತು ಸೂಕ್ತ ತನಿಖೆ ನಡೆಯಬೇಕು, ಸತ್ಯಾಸತ್ಯತೆ ಹೊರಗೆ ಬರಬೇಕು," ಎಂದು ಆಗ್ರಹಿಸಿದ್ದಾರೆ.
"ಈ ಪ್ರಕರಣದಲ್ಲಿ ಕಾಣದ ಕೈಗಳ ಚಿತಾವಣೆ ಇರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಏಕೆಂದರೆ, ಮೃತ ವ್ಯಕ್ತಿ 4 ಕೋಟಿ ರೂ. ಮೊತ್ತದ ಕಾಮಗಾರಿ ಕೆಲಸವನ್ನು ವರ್ಕ್ ಆರ್ಡರ್ ಹಾಗೂ ಎಸ್ಟಿಮೇಟ್ ಪಡೆಯದೇ ಮಾಡಿದ್ದಾನೆ. ಇವೆಲ್ಲ ಪ್ರಕ್ರಿಯೆ ನಡೆಯದೇ ಆತ ಹೇಗೆ ಕೆಲಸ ಮಾಡಿದ್ದಾನೆ ಎಂದು ಪ್ರಶ್ನಿಸಿದ ಮಾಜಿ ಮುಖ್ಯಮಂತ್ರಿ, ಸಂತೋಷ್ ಸಾವಿನ ವಿಚಾರದಲ್ಲೂ ಹಲವು ಅನುಮಾನಗಳು," ಇವೆ ಎಂದು ಎಚ್.ಡಿ. ಕುಮಾರಸ್ವಾಮಿ ಸಂಶಯಿಸಿದ್ದಾರೆ.

ಸ್ನೇಹಿತರು ಮತ್ತೊಂದು ಕೊಠಡಿಗೆ ಏಕೆ ಹೋಗಿದ್ದರು?
"ಗುತ್ತಿಗೆದಾರ ಸಂತೋಷ್ ಜತೆಗೆ ಉಡುಪಿಗೆ ಇಬ್ಬರು ಸ್ನೇಹಿತರು ಹೋಗಿದ್ದಾರೆ. ಈ ಪೈಕಿ ಸಂತೋಷ್ ಮಾತ್ರ ಒಂದು ಕೊಠಡಿಗೆ ಹೋಗಿದ್ದಾನೆ. ಉಳಿದ ಇಬ್ಬರು ಮತ್ತೊಂದು ಕೊಠಡಿಗೆ ಹೋಗಿದ್ದಾರೆ. ಇದು ಏಕೆ? ಅವರು ಮತ್ತೊಂದು ಕೊಠಡಿಗೆ ಏಕೆ ಹೋಗಿದ್ದರು? ಈ ರೀತಿ ಹಲವು ರೀತಿಯ ಸಂಶಯಗಳು ಈ ಪ್ರಕರಣದಲ್ಲಿ ಇವೆ. ಎಲ್ಲಕ್ಕಿಂತ ಹೆಚ್ಚಾಗಿ ಇವರು ಉಡುಪಿಗೆ ಯಾಕೆ ಹೋದರು?," ಎಂದೂ ಎಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದರು.
"ಸರಕಾರ ಇದೀಗ ಈ ಪ್ರಕರಣದ ತನಿಖೆಯನ್ನು ಪ್ರಾಮಾಣಿಕ ಹಾಗೂ ದಕ್ಷ ಅಧಿಕಾರಿಗೆ ವಹಿಸಬೇಕಿದೆ. ಸೂಕ್ತ ರೀತಿಯಲ್ಲಿ ತನಿಖೆ ನಡೆಸಿ ಸತ್ಯಾಸತ್ಯತೆ ಹೊರ ತರಬೇಕಿದೆ," ಎಂದು ಎಚ್ಡಿಕೆ ಚನ್ನಪಟ್ಟಣದಲ್ಲಿ ಆಗ್ರಹಿಸಿದರು.

ಗುತ್ತಿಗೆದಾರ ಸಂಘ ಮಾಡಿರುವ ಕಮೀಷನ್ ಆರೋಪ
ಕರ್ನಾಟಕ ಗುತ್ತಿಗೆದಾರ ಸಂಘ ಮಾಡಿರುವ ಕಮೀಷನ್ ಆರೋಪದ ಕುರಿತು ಪ್ರತಿಕ್ರಿಯಿಸಿದ ಎಚ್.ಡಿ. ಕುಮಾರಸ್ವಾಮಿ, "ಆ ವಿಚಾರವನ್ನು ನಾನು ಲಘುವಾಗಿ ತೆಗೆದುಕೊಳ್ಳಲ್ಲ. ಆದರೆ, ಅವರ ಆರೋಪ ಬೀದಿ ಬೀದಿಯಲ್ಲಿ ಚರ್ಚೆ ನಡೆಯುತ್ತಿರುವ ವಿಷಯವಾಗಿದೆ. ಇವತ್ತಿನ ವ್ಯವಸ್ಥೆಯನ್ನು ನಾವು ಆ ಮಟ್ಟಕ್ಕೆ ತಗೆದುಕೊಂಡು ಹೋಗಿದ್ದೇವೆ. ಒಂದು ವೇಳೆ ಗುತ್ತಿಗೆದಾರರ ಚರ್ಚೆಯಲ್ಲಿ ಸತ್ಯ ಇದೆ ಅನ್ನುವುದಾದರೆ ಇದನ್ನ ಸರಿಪಡಿಸಿಕೊಳ್ಳುವುದು ಸರಕಾರದ ಕರ್ತವ್ಯ," ಎಂದು ಹೇಳಿದರು.
ಶಾಸಕರು ಹಾಗೂ ಸಚಿವರು ಕಮಿಷನ್ ಕೇಳುತ್ತಾರೆ ಎಂಬ ಆರೋಪ ಕೇಳಿ ಬರುತ್ತಿರುವಾಗ ಈ ವ್ಯವಸ್ಥೆಯ ವಿರುದ್ಧ ಜನರೇ ತೀರ್ಮಾನ ಮಾಡಬೇಕು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದರು.

ಈಶ್ವರಪ್ಪ ಬಗ್ಗೆ ತಾವು ಸಾಫ್ಟ್ ಕಾರ್ನರ್ ತೋರಿಸಿಲ್ಲ
ಇನ್ನು ಕಾಂಗ್ರೆಸ್ ನಾಯಕರು ಮೃತ ಸಂತೋಷ್ ಮನೆಗೆ ತೆರಳಿ ಸಾಂತ್ವನ ಹೇಳಿದ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಎಚ್ಡಿಕೆ, "ಶಿವಮೊಗ್ಗದಲ್ಲಿ ಕೊಲೆಯಾದಾಗ ಬಿಜೆಪಿ ದಂಡೇ ಹೋಗಿತ್ತು. ಇದೀಗ ನಾವು ಏನ್ ಕಡಿಮೆ ಅಂತಾ ಸಂತೋಷ್ ಸಾವಿನಲ್ಲೂ ರಾಜಕಾರಣ ಮಾಡಲು ಕಾಂಗ್ರೆಸ್ ನಾಯಕರ ದಂಡು ಹೋಗಿದೆ," ಎಂದು ವ್ಯಂಗ್ಯವಾಡಿದರು.
ಇದೇ ವೇಳೆ ಸಚಿವ ಕೆ.ಎಸ್. ಈಶ್ವರಪ್ಪ ಬಗ್ಗೆ ತಾವು ಸಾಫ್ಟ್ ಕಾರ್ನರ್ ತೋರಿಸಿಲ್ಲ ಎಂದು ಸ್ಪಷ್ಟಪಡಿಸಿದ ಎಚ್ಡಿಕೆ, "ರಾಜೀನಾಮೆ ಕೊಡಿ ಅಂತಾ ನಾನು ಕೇಳಿದ್ದೇನೆ. ಈಶ್ವರಪ್ಪ ರಾಜೀನಾಮೆ ಕೊಟ್ಟ ಬಳಿಕ ವಾಸ್ತವಾಂಶ ಹೊರ ತರಬೇಕಿದೆ. ಇದೀಗ ಅವರು ಕಳಂಕಿತರು ಎಂಬ ಆರೋಪ ಹೊತ್ತಿದ್ದಾರೆ. ಅವರು ಆರೋಪದಿಂದ ಮುಕ್ತರಾಗಬೇಕಾದರೆ ಪ್ರಕರಣದ ವಾಸ್ತವಾಂಶವನ್ನು ಸೂಕ್ತ ತನಿಖೆಯ ಮೂಲಕ ಹೊರ ತರಬೇಕಿದೆ," ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.
ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ಇಂತಿದೆ: 080 - 25497777












Click it and Unblock the Notifications