ಲಾಕ್ ಡೌನ್ ಟೈಮಲ್ಲಿ ಚಕ್ಕೆರೆ ಗ್ರಾ.ಪಂ ಕೆಲಸಕ್ಕೆ ಭೇಷ್ ಅನ್ನಲೇಬೇಕು
ರಾಮನಗರ, ಮಾರ್ಚ್ 30: ಕೊರೊನಾ ವೈರಸ್ ನಿಂದಾಗಿ ಇಡೀ ದೇಶವೇ ಲಾಕ್ ಡೌನ್ ಆಗಿದೆ. ಆದರೆ ಲಾಕ್ ಡೌನ್ ನಿಂದಾಗಿ ನಿರ್ಗತಿಕರು, ದಿನಗೂಲಿ ನೌಕರರು, ಅಲೆಮಾರಿಗಳು ತಿನ್ನಲು ಆಹಾರವಿಲ್ಲದೇ ಪರದಾಡುತ್ತಿದ್ದಾರೆ. ಈ ನಡುವೆ ಅವರಿಗೆ ನೆರವಾಗಲೆಂದೇ ರಾಜ್ಯದ ಎಲ್ಲೆಡೆಯೂ ಹಲವು ಮಂದಿ ಸಹಾಯ ಹಸ್ತವನ್ನೂ ಚಾಚುತ್ತಿದ್ದಾರೆ.
ಹಾಗೆಯೇ ರಾಮನಗರದಲ್ಲೂ ನಿರ್ಗತಿಕರಿಗೆ ಹಾಗೂ ಹೊರ ರಾಜ್ಯದ ಕುಟುಂಬದ ಹಸಿವು ನೀಗಿಸಲು ಆಹಾರದ ಕಿಟ್ ಅನ್ನು ವಿತರಣೆ ಮಾಡಲಾಗಿದೆ. ಇಂದು ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ಚಕ್ಕೆರೆ ಗ್ರಾಮ ಪಂಚಾಯತಿ ವತಿಯಿಂದ 150 ಕುಟುಂಬಗಳಿಗೆ ಆಹಾರದ ಬ್ಯಾಗ್ ವಿತರಣೆ ಮಾಡಲಾಯಿತು.
ಈ ಆಹಾರದ ಕಿಟ್ ನಲ್ಲಿ ಅಕ್ಕಿ, ಬೇಳೆ, ಅಡುಗೆ ಎಣ್ಣೆ, ಗೋಧಿ ಹಿಟ್ಟು, ಈರುಳ್ಳಿ, ಸಾಂಬಾರ್ ಪುಡಿ, ಉರುಳಿ ಕಾಳು, ರವೆ, ಸಕ್ಕರೆ ಸೇರಿದಂತೆ ಅಗತ್ಯ ವಸ್ತುಗಳು ಇವೆ. ಪ್ರತಿ ಆಹಾರದ ಕಿಟ್ ಮೌಲ್ಯ 550 ರೂಪಾಯಿ. ಇಂಥ ನೂರೈವತ್ತು ಕಿಟ್ ಅನ್ನು ಇಂದು ನೀಡಲಾಗಿದೆ.

ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಕಡು ಬಡವರು ಹಾಗೂ ಹೊರ ರಾಜ್ಯದಿಂದ ಉದ್ಯೋಗ ಅರಸಿ ಬಂದಿರುವ ಕುಟುಂಬಗಳಿಗೆ ಆಹಾರ ಧಾನ್ಯ ವಿತರಣೆ ಮಾಡಲಾಯಿತು. ಗ್ರಾಮ ಪಂಚಾಯ್ತಿ ಅನುದಾನದಲ್ಲಿ ಈ ನೆರವು ನೀಡಲಾಗಿದ್ದು, ಗ್ರಾಮ ಪಂಚಾಯತಿಗಳು ಮಾನವೀಯ ನೆಲೆಗಟ್ಟಿನ ಮೇಲೆ ಕೆಲಸ ಮಾಡಬೇಕು ಎಂದು ಪಿಡಿಓ ಯತೀಶ್ ಕರೆ ನೀಡಿದ್ದಾರೆ.

ಗ್ರಾಮ ಪಂಚಾಯಿತಿ ವತಿಯಿಂದ ಕೈಗೊಂಡಿರುವ ಈ ಕಾರ್ಯ ಇಡೀ ರಾಜ್ಯಕ್ಕೆ ಮಾದರಿ ಎಂದರೂ ತಪ್ಪಲ್ಲ.












Click it and Unblock the Notifications