ರಾಮನಗರ: ಕರ್ನಾಟಕ ಬಂದ್ ಗೆ ರೈತಸಂಘ ಬೆಂಬಲ: ತುಂಬೇನಹಳ್ಳಿ ಶಿವಕುಮಾರ್
ರಾಮನಗರ, ಸೆಪ್ಟೆಂಬರ್ 25: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಎಪಿಎಂಸಿ ತಿದ್ದುಪಡಿ ಮಸೂದೆಗಳನ್ನು ವಿರೋಧಿಸಿ ರೈತ ಹಾಗೂ ಪ್ರಗತಿಪರ ಸಂಘಟನೆಗಳು ಸೆ.28 ರಂದು ಕರೆ ನೀಡಿರುವ ಕರ್ನಾಟಕ ಬಂದ್ ಗೆ ಕರ್ನಾಟಕ ರೈತಸಂಘ ಹಾಗೂ ಹಸಿರು ಸೇನೆ ಸಂಪೂರ್ಣ
ಬೆಂಬಲ ವ್ಯಕ್ತಪಡಿಸಿ, ಬಂದ್ ನಲ್ಲಿ ಭಾಗಿಯಾಗಲಿದೆ ಎಂದು ಸಂಘದ ಅಧ್ಯಕ್ಷ ತುಂಬೇನಹಳ್ಳಿ ಶಿವಕುಮಾರ್ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಾರಿ ಮಾಡಿರುವ ಹಾಗೂ ಮಾಡಲು ಹೊರಟಿರುವ ಮಸೂದೆಗಳು ದಲಿತ, ಕಾರ್ಮಿಕ ಮತ್ತು ರೈತರಿಗೆ ಮರಣ ಶಾಸನವಾಗಿವೆ ಎಂದು ಆರೋಪಿಸಿದರು.

ಕೃಷಿ ಸಮುದಾಯ ಹಾಗೂ ಕೃಷಿ ಅವಲಂಬಿತ ಕುಟುಂಬಗಳು ಹಾಗೂ ಕಾರ್ಮಿಕರಿಗೆ ಕಂಟಕವಾಗಿರುವ ಎಪಿಎಂಸಿ, ಭೂ ಸುಧಾರಣೆ ಮತ್ತು ಕಾರ್ಮಿಕ ತಿದ್ದುಪಡಿ ಮಸೂದೆಗಳನ್ನು ವಾಪಸ್ ಪಡೆಯುವಂತೆ ಒತ್ತಾಯಿಸಿ ಸೆ. 28 ರಂದು ನಡೆಯಲಿರುವ 'ಕರ್ನಾಟಕ ಬಂದ್'ಗೆ 20ಕ್ಕೂ ಹೆಚ್ಚು ಪ್ರಗತಿಪರ ಸಂಘಟನೆಗಳು ಬೆಂಬಲಿಸಿವೆ.
ಕರ್ನಾಟಕ ರೈತ ಸಂಘ ಹಾಗೂ ಹಸಿರುಸೇನೆ ಕೂಡ ಇದಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿ, ಸೆ.28 ರಂದು ರಾಮನಗರದ ಐಜೂರು ವೃತ್ತದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಲಿದೆ ಎಂದರು.

ಬಂಡವಾಳಶಾಹಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಸರ್ಕಾರ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಮಾಡಲು ಹೊರಟಿದ್ದು, ಇದನ್ನು ಎಲ್ಲರೂ ವಿರೋಧಿಸಬೇಕಿದೆ ಎಂದು ಮನವಿ ಮಾಡಿದರು.
Recommended Video
ಸಂಘದ ಗೌರವಾಧ್ಯಕ್ಷ ಶಾನುಭೋಗನಹಳ್ಳಿ ದೇವರಾಜು, ತಾಲ್ಲೂಕು ಅಧ್ಯಕ್ಷ ಮೆಳೇಹಳ್ಳಿ ಶಿವಕುಮಾರ್, ಬಿಡದಿ ಹೋಬಳಿ ಅಧ್ಯಕ್ಷ ಜಯರಾಮ್, ಉಪಾಧ್ಯಕ್ಷ ರಂಗಸ್ವಾಮಿ, ಮಹಿಳಾ ಘಟಕದ ಚಿಕ್ಕಮ್ಮಣಿ, ಪದಾಧಿಕಾರಿಗಳಾದ ನರಸಿಂಹಮೂರ್ತಿ, ನಾರಾಯಣ, ತಿಮ್ಮಯ್ಯ, ಚಿಕ್ಕರಾಮಣ್ಣ, ಚಿಕ್ಕಣ್ಣ ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications