ಮಂಗಗಳಿಂದ ಬೆಳೆ ರಕ್ಷಿಸಲು ಹುಲಿ ಬೊಂಬೆ ಮೊರೆ ಹೋದ ರೈತರು
ರಾಮನಗರ, ನವೆಂಬರ್ 18 : ಕಷ್ಟಪಟ್ಟು ಬೆಳೆದಿದ್ದ ಬೆಳೆಯನ್ನು ನಾಶ ಮಾಡುತ್ತಿದ್ದ ಮಂಗಗಳ ಕಾಟದಿಂದ ರೋಸಿ ಹೋಗಿರುವ ರಾಮನಗರದ ರೈತರು ಮಂಗಗಳನ್ನು ಓಡಿಸಲು ವಿನೂತನ ವಿಧಾನವನ್ನು ಕಂಡುಹಿಡಿದಿದ್ದಾರೆ.
ಅವರೀಗ ಹುಲಿಯ ಬೊಂಬೆಯನ್ನು ಇಟ್ಟು ಮಂಗಗಳನ್ನು ಓಡಿಸುವ ತಂತ್ರಗಾರಿಕೆಗೆ ಮೊರೆಹೋಗಿದ್ದಾರೆ. ಇದು ತಕ್ಕಮಟ್ಟಿಗೆ ಯಶಸ್ಸನ್ನೂ ನೀಡಿದೆ.
ರಾಮನಗರ ತಾಲ್ಲೂಕಿನ ಕೈಲಾಂಚ ಸಮೀಪದ ಗೌಡಯ್ಯನದೊಡ್ಡಿ ಗ್ರಾಮದಲ್ಲಿ ರೈತರ ತಲೆಗೆ ಹೊಳೆದ ಐಡಿಯಾ ಇದು. ಮಂಗಗಳನ್ನು ಹೆದರಿಸಲು ಗ್ರಾಮದ ರಾಮಣ್ಣ ಎಂಬುವವರು ಹಾಗೂ ಕೆಲ ರೈತರು ಹುಲಿಯ ಬೊಂಬೆ ಹಿಡಿದು ಸರ್ಕಸ್ ಮಾಡ್ತಿದ್ದಾರೆ.

ಮಂಗಗಳ ಹಾವಳಿ ವಿಪರೀತವಾಗಿದ್ದು, ತೆಂಗು, ಭತ್ತ, ನೆಲಗಡಲೆಯನ್ನೆಲ್ಲ ನಾಶ ಮಾಡ್ತಿವೆ. ಒಂದು ಎಳೆನೀರನ್ನು ಸಹ ಬಿಡದಂತೆ ನಾಶ ಮಾಡುತ್ತಿರುವ ಮಂಗಗಳಿಂದ ತಮ್ಮ ಫಸಲನ್ನು ರಕ್ಷಿಸಲು ರೈತರು ಹುಲಿಯ ಬೊಂಬೆ ಮೊರೆ ಹೋಗದೆ ಬೇರೆ ದಾರಿಯಿರಲಿಲ್ಲ.
ರಾಮನಗರ ಸಮೀಪದ ಕೈಲಾಂಚದ ಬಳಿ ನೂರಾರು ಕೋತಿಗಳು ಬೀಡುಬಿಟ್ಟಿದ್ದು ಬೆಳೆ ನಾಶ ಮಾಡ್ತಿವೆ. ಹುಲಿ ಬೊಂಬೆಯನ್ನು ತರುವ ಮೊದಲು ಕೋವಿ ತೋರಿಸಿ ಬೆದರಿಸಿದರೆ ರೈತರನ್ನೇ ಅಟ್ಟಾಡಿಸಿಕೊಂಡು ಬಂದ ನಿದರ್ಶನಗಳುಂಟು. ಹಾಗಾಗಿ ರೈತರು ಹುಲಿಯನ್ನು ಕಂಡ್ರೆ ಮಂಗಗಳು ಭಯ ಬೀಳ್ತಾವೆ ಎಂದು ಹುಲಿ ಬೊಂಬೆಯನ್ನ ತಂದಿದ್ದಾರೆ.
ಜಮೀನಿನ ಮಧ್ಯೆ ಹುಲಿ ಬೊಂಬೆ ಇಟ್ಟು ಮಂಗಗಳನ್ನು ಓಡಿಸುವ ಯತ್ನ ನಡೆಸ್ತಿದ್ದಾರೆ. ಸಾಲದೆಂಬಂತೆ ತೆಂಗಿನ ಮರಗಳಲ್ಲಿ ಅವಿತು ಕುಳಿತ ಮಂಗಗಳಿಗೆ ಹುಲಿ ಬೊಂಬೆಯನ್ನ ಮರ ಹತ್ತಿಸಿದಂತೆ ಮಾಡಿ ಭಯ ಬೀಳುವಂತೆ ಮಾಡ್ತಿದ್ದಾರೆ.
ಖತರ್ನಾಕ್ ಮಂಗಗಳು ಜಮೀನಿನಲ್ಲಿ ಇಟ್ಟ ಹುಲಿ ಬೊಂಬೆಗೆ ಕೆಲವೊಮ್ಮೆ ಹೆದರಿದರೂ, ಕೆಲವೊಮ್ಮೆ ಮರದಿಂದ ಇಳಿದು ಹುಲಿ ಬೊಂಬೆಯ ಬಾಲವನ್ನು ಹಿಡಿದು ಅಲ್ಲಾಡಿಸಿ ಕಿರುಚಿಕೊಂಡು ಓಡಿ ಹೋಗ್ತಿವೆ. ಈ ಮೂಲಕವಾದ್ರೂ ಅಲ್ಪ ಬೆಳೆ ಉಳಿಸಿಕೊಳ್ಳುವ ಪ್ರಯತ್ನವನ್ನ ರೈತರು ಮಾಡ್ತಿದ್ದಾರೆ.
ಹುಲಿ ಬೊಂಬೆ ಐಡಿಯಾದಿಂದ ಖುಷಿಗೊಂಡಿರೋ ಕೆಲ ರೈತರು ತಾವು ಸಹ ಐಡಿಯಾ ಯೂಸ್ ಮಾಡಿ ಮಂಗಗಳ ಹೆದರಿಸೋಕೆ ಮುಂದಾಗಿದ್ದಾರೆ. ಇನ್ನಾದ್ರೂ ಮಂಗಗಳ ಹಾವಳಿ ತಪ್ಪಿಸೋಕೆ ರೈತರ ನೆರವಿಗೆ ಅಧಿಕಾರಿಗಳು ನಿಲ್ಲಬೇಕಿದೆ.











Click it and Unblock the Notifications