ರಾಮನಗರ: ರಸ್ತೆಯಲ್ಲೇ ನೂರಾರು ಲೀಟರ್ ಹಾಲು ಸುರಿದು ರೈತರ ಆಕ್ರೋಶ, ಕಾರಣವೇನು?
ರಾಮನಗರ ಜನವರಿ 02: ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ನೇಮಕ ವಿಚಾರಲ್ಲಿ ಹಾಲು ಉತ್ಪಾದಕರ ಅಭಿಪ್ರಾಯಕ್ಕೆ ಮನ್ನಣೆ ನೀಡದೆ ಸಹಕಾರ ಇಲಾಖೆಯ ಅಧಿಕಾರಿಗಳು ರಾಜಕೀಯ ಪ್ರಭಾವಕ್ಕೆ ಮಣಿದಿದ್ದಾರೆ ಎಂದು ಆರೋಪಿಸಿ ಅಣ್ಣೆಹಳ್ಳಿ ಗ್ರಾಮಸ್ಥರು ನೂರಾರು ಲೀಟರ್ ಹಾಲನ್ನು ರಸ್ತೆಗೆ ಚಲ್ಲಿ ಪ್ರತಿಭಟನೆ ನಡೆಸಿದರು.
ರಾಮನಗರ ತಾಲೂಕಿನ ಅಣ್ಣೆಹಳ್ಳಿ ಗ್ರಾಮದ ಹಾಲು ಉತ್ಪಾದಕ ರೈತರು, ಸಹಕಾರ ಇಲಾಖೆಯ ಅಧಿಕಾರಿಗಳು ಕಳೆದ 19 ವರ್ಷಗಳಿಂದ ಸಂಘಕ್ಕೆ ಚುನಾವಣೆ ನಡೆಸದೆ ಸಂಘದಲ್ಲಿ ಕಾರ್ಯದರ್ಶಿಗಳು ಅಕ್ರಮ ನಡೆಸಲು ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಆರೋಪಿಸಿ ಹಸುಗಳನ್ನು ಕರೆತಂದು ನಗರದ ಐಜೂರು ವೃತ್ತದಲ್ಲಿ ಪ್ರತಿಭಟನೆ ನೆಡೆಸಿದರು.

ನಗರದ ಹಳೆ ಬೆಂಗಳೂರು -ಮೈಸೂರು ಹೆದ್ದಾರಿಯ ಐಜೂರು ವೃತ್ತದಲ್ಲಿ ಜಾನುವಾರುಗಳೊಂದಿಗೆ ಜಮಾಯಿಸಿದ ಅಣ್ಣೆಹಳ್ಳಿ ರೈತರು ಹಸುಗಳನ್ನು ರಸ್ತೆಯಲ್ಲಿ ಕಟ್ಟಿಹಾಕಿ ನೂರಾರು ಲೀಟರ್ ಹಾಲನ್ನು ರಸ್ತೆಯಲ್ಲಿ ಸುರಿದು ಸಹಾಕಾರ ಇಲಾಖೆ ಅಧಿಕಾರಿಗಳ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ಭವನದ ಅವರಣದಲ್ಲೂ ಹಾಲು ಸುರಿದು ಪ್ರತಿಭಟನೆ
ಐಜೂರು ವೃತ್ತದಲ್ಲಿ ಹಸುಗಳನ್ನು ಕಟ್ಟಿಹಾಕಿ, ಹಾಲು ಸುರಿದು, ರಸ್ತೆತಡೆ ಮಾಡಿ ಪ್ರತಿಭಟನೆ ನಡೆಸಿದ ಅಣ್ಣೆಹಳ್ಳಿ ರೈತರ ಸಿಟ್ಟು ಶಮನಗೊಳ್ಳದೆ, ನೇರವಾಗಿ ಜಿಲ್ಲಾಧಿಕಾರಿ ಭವನಕ್ಕೆ ಬಂದ ರೈತರು ಜಿಲ್ಲಾಧಿಕಾರಿ ಭವನದ ಆವರಣದಲ್ಲಿ ಘೋಷಣೆಗಳನ್ನು ಕೂಗಿ ಮತ್ತೆ ಉಳಿದ ಹಾಲನ್ನು ಸುರಿದು ಡೈರಿ ಸಮಸ್ಯೆ ಪರಿಹಾರ ಮಾಡಲು ಮುಂದಾಗದ ಜಿಲ್ಲಾಧಿಕಾರಿಗಳ ನಿರ್ಲಕ್ಷ್ಯ ನಡೆಯನ್ನು ಖಂಡಿಸಿದರು.

ಜಿಲ್ಲಾಧಿಕಾರಿಗಳು ಸೇರಿದಂತೆ ಸಹಕಾರ ಇಲಾಖೆಯ ಅಧಿಕಾರಿಗಳಿಗೆ ಅಣ್ಣೆಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಚುನಾವಣೆ ನಡೆಸಿ ಎಂದು ಹಲವಾರು ಬಾರಿ ಮನವಿ ಮಾಡಿದರು ಪ್ರಯೋಜನವಾಗಿಲ್ಲ. ಕಳೆದ 19 ವರ್ಷಗಳಿಂದ ಸಂಘಕ್ಕೆ ವಿಶೇಷಾಧಿಕಾರಿಯನ್ನು ನೇಮಕ ಮಾಡಿ ಸಂಘದ ಅದಾಯವನ್ನು ಅಧಿಕಾರಿಗಳು ಹಾಗೂ ಸಂಘದ ಕಾರ್ಯದರ್ಶಿಗಳು ಕಬಳಿಸುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ನಮಗೆ ನ್ಯಾಯ ಒದಗಿಸುವಂತೆ ಹಲವು ಬಾರಿ ಮನವಿ ಕೊಟ್ಟರೂ ಜಿಲ್ಲಾಧಿಕಾರಿಗಳು ಸಮಸ್ಯೆ ಇತ್ಯರ್ಥಕ್ಕೆ ಮುಂದಾಗಿಲ್ಲ ಎಂದು ಆರೋಪಿಸಿದರು.
ಐಜೂರು ವೃತ್ತ ಹಾಗೂ ಜಿಲ್ಲಾಧಿಕಾರಿ ಭವನ ಎರಡು ಕಡೆಗಳಲ್ಲಿ ಪ್ರತಿಭಟನೆ ನಡೆಸಿ ತಮ್ಮ ನೋವು ತೊಡಿಕೊಂಡ ರೈತರು, ಅಧಿಕಾರಿಗಳು ರಾಜಕಾರಣಿಗಳ ಕೈಗೊಂಬೆಯಾಗಿದ್ದಾರೆ. ಗ್ರಾಮದ ಡೈರಿಯ ಸಮಸ್ಯೆಗಳಿಗೆ ಕಾಂಗ್ರೆಸ್ ಮುಖಂಡ ಹಾಗೂ ಬಮೂಲ್ ನಿರ್ದೇಶಕ ಪಿ.ನಾಗರಾಜು ನೇರ ಕಾರಣವಾಗಿದ್ದಾರೆ. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿರುವ ಕಾರಣ ಅಧಿಕಾರಿಗಳ ಮೇಲೆ ಒತ್ತಡ ತಂದು ಡೈರಿಗೆ ರೈತರ ಚುನಾಯಿತ ಅಡಳಿತ ಮಂಡಳಿ ಅಧಿಕಾರಕ್ಕೆ ಬರುವುದನ್ನು ತಡೆದಿದ್ದಾರೆ ಎಂದು ಆರೋಪಿಸದರು.

ಅಕ್ರಮ ಮುಚ್ಚಿಹಾಕುವ ಹುನ್ನಾರ
ಅಣ್ಣೆಹಳ್ಳಿ ಹಾಲು ಉತ್ಪಾದಕ ಸಹಕಾರ ಸಂಘದ ಕಾರ್ಯದರ್ಶಿ ಹುದ್ದೆಗೆ ಸಹಾಕಾರ ಇಲಾಖೆಯ ಅಧಿಕಾರಿಗಳು ಕಳೆದ ಮೂರು ದಿನಗಳ ಹಿಂದೆ ನಿತ್ಯಾನಂದ ಎಂಬುವವರನ್ನು ನೇಮಕ ಮಾಡಿರುವುದನ್ನು ಖಂಡಿಸಿ ಅಣ್ಣೆಹಳ್ಳಿ ಹಾಲು ಉತ್ಪಾದಕ ರೈತರು ಕಳೆದ ಮೂರು ದಿನಗಳಿಂದ ಡೈರಿಗೆ ಹಾಲು ಹಾಕದೆ, ನೂರಾರು ಲೀಟರ್ ಹಾಲನ್ನು ಡೈರಿಯ ಮುಂದೆಯೇ ರಸ್ತೆಗೆ ಸುರಿದು ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಅಧಿಕಾರಿಗಳು ಸ್ಥಳಕ್ಕೆ ಬಂದು ಡೈರಿ ಕಾರ್ಯದರ್ಶಿ ನಿತ್ಯಾನಂದ ನೇಮಕ ರದ್ದು ಮಾಡಬೇಕು. ಹಾಗೂ ಹಾಲು ಉತ್ಪಾದಕ ಸಂಘಕ್ಕೆ ಚುನಾವಣೆ ಘೋಷಣೆ ಮಾಡಬೇಕು. ಅಲ್ಲಿಯವರೆಗೆ ಡೈರಿಗೆ ಹಾಲು ಹಾಕದೆ ಚರಂಡಿಗೆ ಸುರಿಯುವುದಾಗಿ ಹಾಲು ಉತ್ಪಾದಕರು ಪಟ್ಟುಹಿಡಿದ್ದು. ಹಿಂದೆ ಡೈರಿಯಲ್ಲಿ ಕಾರ್ಯದರ್ಶಿಯಾಗಿ ನೇಮಕವಾಗಿದ್ದ ಮೂರು ಮಂದಿಯು ಸಂಘದಲ್ಲಿ ಹಣ ದುರ್ಬಳಕೆ ಮಾಡಿದ್ದಾರೆ ಎಂದು ಆರೋಪಿಸಿದರು.
ಬಮೂಲ್ ನಿರ್ದೇಶಕ ಪಿ.ನಾಗರಾಜ್ ಒತ್ತಡಕ್ಕೆ ಮಣಿದು ಹಣ ಪಡೆದು ಅಧಿಕಾರಿಗಳು ಕಾರ್ಯದರ್ಶಿ ಹುದ್ದೆಗೆ ನೇಮಕ ಮಾಡಿರುವ ನಿತ್ಯಾನಂದ ಹಿಂದೆ ಸಂಘದಲ್ಲಿ ಹಣ ದುರುಪಯೋಗ ಮಾಡಿ ಅಮಾನತುಗೊಂಡ ಕಾರ್ಯದರ್ಶಿಯ ಸಂಬಂಧಿ. ಹಾಗಾಗಿ ಅಧಿಕಾರಿಗಳು ಹಾಗೂ ಬಮೂಲ್ ನಿರ್ದೇಶಕ ಪಿ.ನಾಗರಾಜ್ ಹಿಂದಿನ ಕಾರ್ಯದರ್ಶಿಯ ಅಕ್ರಮವನ್ನು ಮುಚ್ಚಿಹಾಕಲು ಹುನ್ನಾರ ನಡೆಸಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.












Click it and Unblock the Notifications