ಆರತಿ ಎತ್ತಿ, ಮೆರವಣಿಗೆ ಮಾಡಿ ಶಿಕ್ಷಕನ ಬೀಳ್ಕೊಟ್ಟ ವಿದ್ಯಾರ್ಥಿಗಳು!
ರಾಮನಗರ, ಸೆಪ್ಟೆಂಬರ್ 07; ಮೂರು ದಶಕಗಳ ಕಾಲ ನಿಸ್ವಾರ್ಥವಾಗಿ ವಿದ್ಯಾದಾನ ಮಾಡಿದ ಶಿಕ್ಷಕರ ಸೇವೆಯನ್ನು ಗುರುತಿಸಿ ಗ್ರಾಮದ ಪ್ರತಿ ಬೀದಿಗಳಲ್ಲಿ ಎತ್ತಿನಗಾಡಿಯಲ್ಲಿ ಮೆರವಣಿಗೆ ಮಾಡಿ, ಪ್ರತಿ ಮನೆವರು ಅರತಿ ಬೆಳಗಿ ನೆಚ್ಚಿನ ಶಿಕ್ಷಕನಿಗೆ ಗುರುಕಾಣಿಕೆ ಸಮರ್ಪಿಸಿ ಬೀಳ್ಕೊಟ್ಟರು.
ರಾಮನಗರ ಜಿಲ್ಲೆಯ ಚನ್ನಪಟ್ಟಣದ ಕದರಮಂಗಲ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ವಿಶಿಷ್ಟವಾಗಿ ನೆಚ್ಚಿನ ಶಿಕ್ಷಕನಿಗೆ ಗೌರವ ಸಲ್ಲಿಸಿದರು. ತಾಲೂಕಿನ ಕದರಮಂಗಲ ಗ್ರಾಮದಲ್ಲಿ ಕಳೆದ ಮೂರು ಮೂರು ದಶಕಗಳ ಕಾಲ ವಿದ್ಯಾದಾನ ಮಾಡಿದ್ದ ಶಿಕ್ಷಕ ಪುಟ್ಟರಾಮಯ್ಯ ಮಂಗಳವಾರ ನಿವೃತ್ತರಾದರು.
ಅವರಿಂದ ಪಾಠ ಕಲಿತ ಅಪಾರ ವಿಧ್ಯಾರ್ಥಿ ಬಳಗ ಹಾಗೂ ಗ್ರಾಮಸ್ಥರು ನೆಚ್ಚಿನ ಶಿಕ್ಷಕರ ನಿವೃತ್ತಿ ದಿನವನ್ನೇ ಗುರುವಂದಾನ ಕಾರ್ಯಕ್ರಮ ಮಾಡುವ ಮೂಲಕ ಸಾರ್ಥಕ ಮಾಡಿದರು. ಕಳೆದ 33 ವರ್ಷಗಳಿಂದ ಶಿಕ್ಷಕ ಪುಟ್ಟರಾಮಯ್ಯ ಕದರಮಂಗಲ ಗ್ರಾಮದ ಶಾಲೆಯಲ್ಲಿ ಜಿಪಂ ಗೌರವ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದು, ಅಭಿನಂದನಾ ಸಮಾರಂಭ ಆಯೋಜಿಸಲಾಗಿತ್ತು.

ಈ ವೇಳೆ ಗ್ರಾಮಸ್ಥರು ಹಾಗೂ ಹಳೆಯ ಹಿರಿಯ ಹಾಗೂ ಕಿರಿಯ ವಿದ್ಯಾರ್ಥಿಗಳೆಲ್ಲರೂ ಗ್ರಾಮದ ಬೀದಿಗಳಲ್ಲಿ ತಮ್ಮ ನೆಚ್ಚಿನ ಶಿಕ್ಷಕರನ್ನು ಎತ್ತಿನ ಬಂಡಿಯಲ್ಲಿ ಮೆರವಣಿಗೆ ಮಾಡಿದರು. ಈ ವೇಳೆ ಪ್ರತಿಮನೆಯಲ್ಲೂ ಶಿಕ್ಷಕರಿಗೆ ದೀಪದ ಆರತಿ ಬೆಳಗಲಾಯಿತು.
ನಿವೃತ್ತರಾದ ಪುಟ್ಟರಾಮಯ್ಯ ಗ್ರಾಮದ ಶಾಲೆಯಲ್ಲಿ 33 ವರ್ಷಗಳ ಕಾಲ ಜಿಪಂ ಗೌರವ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿದರು. 300 ರೂ. ಗಳ ಗೌರವಧನದಿಂದ ತಮ್ಮ ಸೇವೆ ಆರಂಭಿಸಿದ ಅವರ ನಿಸ್ವಾರ್ಥ ಹಾಗೂ ಪ್ರಾಮಾಣಿಕ ಸೇವೆಯನ್ನು ಸ್ಮರಣೆ ಮಾಡಿಕೊಂಡು ಗ್ರಾಮಸ್ಥರು ಹಾಗೂ ಹಿರಿಯ ವಿದ್ಯಾರ್ಥಿಗಳು ಗುರುವಂದನೆ ಸಲ್ಲಿಸುವುದರ ಜೊತೆಗೆ ಎರಡೂವರೆ ಲಕ್ಷ ರೂ. ಗಳ ಗುರುಕಾಣಿಕೆ ನೀಡಿ ನೆಚ್ಚಿನ ಗುರುವಿನ ಆರ್ಶೀವಾದ ಪಡೆದರು.

ಗುರುವಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿಧಾನ ಪರಿಷತ್ ಸದಸ್ಯರಾದ ಶ್ರೀಕಂಠೇಗೌಡ ಹಾಗೂ ಡಿವೈಎಸ್ಪಿ ಕೆ. ಎನ್. ರಮೇಶ್ ಮಾತನಾಡಿ, ಶಿಕ್ಷಕ ಸ್ಥಾನ ಎಂಬುದು ಪವಿತ್ರವಾದದ್ದು. ನಿಸ್ವಾರ್ಥ ಹಾಗೂ ಸೇವಾಪರತೆಯನ್ನು ಸ್ಮರಿಸುತ್ತಾರೆ ಎಂಬುದಕ್ಕೆ ನಿವೃತ್ತ ಶಿಕ್ಷಕ ಪುಟ್ಟರಾಮಯ್ಯನವರಿಗೆ ಗ್ರಾಮದಲ್ಲಿ ಮಾಡಿರುವ ಅದ್ದೂರಿ ಹಾಗೂ ಅರ್ಥಪೂರ್ಣ ಕಾರ್ಯಕ್ರಮವೇ ಸಾಕ್ಷಿ ಎಂದು ಮೆಚ್ಚುಗೆ ಸೂಚಿಸಿದರು.
ಗೌರವ ಸ್ವೀಕರಿಸಿದ ನಿವೃತ್ತ ಶಿಕ್ಷಕ ಪುಟ್ಟರಾಮಯ್ಯ ಮಾತನಾಡಿ, "ಗ್ರಾಮಸ್ಥರು ಹಾಗೂ ವಿಧ್ಯಾರ್ಥಿಗಳು ತೋರಿದ ಗೌರವದಿಂದ ನಾನು ಮೂಕ ವಿಸ್ಮಿತನಾಗಿದ್ದೇನೆ. ನನ್ನ ವಿದ್ಯಾರ್ಥಿಗಳು ಪಾಠದೊಂದಿಗೆ ಸ್ಮರಿಸುವ ಗುಣವನ್ನು ಬೆಳೆಸಿಕೊಂಡಿದ್ದಾರೆ. ಈ ಮೂಲಕ ನನ್ನ ಕೆಲಸ ಸಾರ್ಥಕವಾಗಿದೆ" ಎಂದು ಭಾವುಕರಾದರು.
ಕಾರ್ಯಕ್ರಮದಲ್ಲಿ ಪದವಿಪೂರ್ವ ಕಾಲೇಜು ಶಿಕ್ಷಕರ ಸಂಘದ ನಿಂಗೇಗೌಡ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಚಂದ್ರಶೇಖರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನಾಗೇಶ್, ಶಿಕ್ಷಕರಾದ ರಾಜು, ವಕೀಲರಾದ ಪ್ರದೀಪ್, ರವಿ, ಗ್ರಾಮದ ಚಿಕ್ಕೇಗೌಡ ಸೇರಿದಂತೆ ಗ್ರಾಮದ ಮುಖಂಡರು ಹಾಗೂ ಹಿರಿಯ ಮತ್ತು ಕಿರಿಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.












Click it and Unblock the Notifications