ರಾಮನಗರ ಜಿ.ಪಂನಲ್ಲಿ ಮುಂದುವರೆದ ಡಿಕೆ ಸಹೋದರರ ಪ್ರಾಬಲ್ಯ
ರಾಮನಗರ, ಡಿಸೆಂಬರ್ 17: ರಾಮನಗರ ಜಿಲ್ಲಾ ಪಂಚಾಯ್ತಿಯಲ್ಲಿ ಉಪಾಧ್ಯಕ್ಷರಾಗಿ ತಮ್ಮ ಬೆಂಬಲಿಗರನ್ನು ಗೆಲ್ಲಿಸಿಕೊಳ್ಳುವ ಮೂಲಕ ಡಿಕೆ ಸಹೋದರರು ಪ್ರಾಬಲ್ಯ ಕಾಯ್ದುಕೊಂಡಿದ್ದಾರೆ. ಈಗಾಗಲೇ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನ ಕನಕಪುರಕ್ಕೆ ಲಭಿಸಿತ್ತು. ಇದೀಗ ಉಪಾಧ್ಯಕ್ಷ ಸ್ಥಾನವನ್ನೂ ಕನಕಪುರಕ್ಕೆ ದೊರಕಿಸಿಕೊಳ್ಳುವಲ್ಲಿ ಡಿಕೆ ಸಹೋದರರು ಯಶಸ್ವಿಯಾಗಿದ್ದಾರೆ.
ರಾಮನಗರ ಜಿ.ಪಂ ಉಪಾಧ್ಯಕ್ಷ ಸ್ಥಾನಕ್ಕೆ ಇಂದು ನಡೆದ ಚುನಾವಣೆಯಲ್ಲಿ ಕನಕಪುರ ತಾಲ್ಲೂಕಿನ ತುಂಗಣಿ ಜಿಲ್ಲಾ ಪಂಚಾಯ್ತಿ ಅಭ್ಯರ್ಥಿ ಉಷಾ ಅವಿರೋಧ ಆಯ್ಕೆಯಾಗಿದ್ದಾರೆ. ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತ ಹರ್ಷಗುಪ್ತಾ ಅಧ್ಯಕ್ಷತೆಯಲ್ಲಿ ನಡೆದ ಚುನಾವಣೆಯಲ್ಲಿ ಉಷಾ ಅವರನ್ನು ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಉಷಾ ಅವರನ್ನು ಉಪಾಧ್ಯಕ್ಷರನ್ನಾಗಿ ಚುನಾವಣಾಧಿಕಾರಿ ಘೋಷಿಸಿದರು.
ನಗರಸಭೆ ಚುನಾವಣೆ; ತಮ್ಮ ಅನುಪಸ್ಥಿತಿಯಲ್ಲೂ ಪ್ರಾಬಲ್ಯ ಕಾಯ್ದುಕೊಂಡ ಡಿ.ಕೆ. ಬ್ರದರ್ಸ್
ಉಪಾಧ್ಯಕ್ಷ ಸ್ಥಾನಕ್ಕೆ ಮಾಗಡಿಯ ನಾಗರತ್ನ, ಕನಕಪುರದ ಜಯರತ್ನ, ಉಷಾ ನಡುವೆ ಪೈಪೋಟಿ ಎದುರಾಗಿತ್ತು. ಈ ನಡುವೆ ಡಿಕೆ ಸಹೋದರರು ನಿನ್ನೆ ಸಂಜೆ ಬೆಂಗಳೂರು ನಿವಾಸದಲ್ಲಿ ಸಭೆ ನಡೆಸಿ ಅಂತಿಮ ತೀರ್ಮಾನ ಸೂಚಿಸಿದ ಹಿನ್ನಲೆಯಲ್ಲಿ ಡಿಕೆ ಸಹೋದರರ ಅಂತಿಮ ತೀರ್ಮಾನದಂತೆ ಎಲ್ಲಾ ಸದಸ್ಯರು ಒಟ್ಟಾಗಿ ಉಷಾ ಅವರ ಅವಿರೋಧ ಆಯ್ಕೆಗೆ ಸಹಕರಿಸಿದರು.
ಒಟ್ಟು 22 ಸದಸ್ಯ ಬಲವುಳ್ಳ ರಾಮನಗರ ಜಿ.ಪಂಯಲ್ಲಿ 16 ಕಾಂಗ್ರೆಸ್, 6 ಜೆಡಿಎಸ್ ಸದಸ್ಯರಿದ್ದಾರೆ.