ಕಾವೇರಿ ನದಿಯಲ್ಲಿ ಮಿಂದು ಬಾಲ್ಯದ ನೆನಪು ಮೆಲುಕು ಹಾಕಿದ ಡಿಕೆಶಿ
ರಾಮನಗರ, ಜೂನ್ 22: ಬಿಡುವಿಲ್ಲದ ರಾಜಕೀಯ ಜಂಜಾಟದ ನಡುವೆ ಕಾವೇರಿ ನದಿಯಲ್ಲಿ ಈಜಾಡಿ, 40 ವರ್ಷದ ಹಿಂದೆ ತಮ್ಮ ತಂದೆಯೊಂದಿಗೆ ಕಳೆದ ಮಧುರ ಕ್ಷಣಗಳನ್ನು ಮೆಲುಕು ಹಾಕಿದ್ದಾರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್. ಅವರು "ಅಪ್ಪಂದಿರ ದಿನ" ತಮ್ಮ ಸಂತಸವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ವೈರಲ್ ಆಗಿದೆ.
Recommended Video
ಪ್ರಭಾವಿ ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಜೂನ್ 21ರ ಭಾನುವಾರ ಸೂರ್ಯಗ್ರಹಣದಂದು ಕುಟುಂಬ ಸಮೇತರಾಗಿ ಹುಟ್ಟೂರಿಗೆ ಹೋಗಿದ್ದರು. ಕಾವೇರಿ ನದಿಯಲ್ಲಿ ಈಜಾಡಿದರು. ಬಾಲ್ಯದಲ್ಲಿ ಕಾವೇರಿ ನದಿ ತಟದಲ್ಲಿ ತಂದೆಯೊಂದಿಗೆ ಕಳೆದ ಮಧುರ ಕ್ಷಣಗಳನ್ನು ಮೆಲುಕು ಹಾಕಿಕೊಂಡು ಅಪ್ಪನ ದಿನದಂದು ಅಪ್ಪನೊಂದಿಗಿನ ನೆನಪನ್ನೂ ಹಂಚಿಕೊಂಡಿದ್ದಾರೆ.

ಕಾವೇರಿಯಲ್ಲಿ ಈಜಾಡಿ ಕಾಲ ಕಳೆದ ಡಿಕೆಶಿ
ಭಾನುವಾರ ಸಂಜೆ 4:30ಕ್ಕೆ ನಮ್ಮ ಹಳ್ಳಿಯ ಬಳಿಯ ಕಾವೇರಿ ನದಿಯಲ್ಲಿ ಈಜಾಡಿ ಕೆಲ ಸಮಯ ಕಳೆದೆ. ಈ ಸಂಗತಿ ನಿಜಕ್ಕೂ ಸಂತಸ ನೀಡಿದೆ. ನನ್ನ ಶಾಲಾ ಹಾಗೂ ಕಾಲೇಜು ದಿನಗಳಲ್ಲಿ ನಾನು, ನನ್ನ ತಂದೆಯೊಂದಿಗೆ ಇದೇ ಸ್ಥಳದಲ್ಲಿ ಮೀನು ಹಿಡಿಯುತ್ತಿದ್ದ ಮತ್ತು ನದಿಯಲ್ಲಿ ಈಜಾಡುತ್ತಿದ್ದ ಕ್ಷಣಗಳು ಮತ್ತೊಮ್ಮೆ ಕಣ್ಣ ಮುಂದೆ ಹಾದುಹೋದವು ಎಂದು ಸಂತಸವನ್ನು ಹಂಚಿಕೊಂಡಿದ್ದಾರೆ.

ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ ಕುಟುಂಬ
ಸೂರ್ಯ ಗ್ರಹಣದ ದಿನ ತಮ್ಮ ಹುಟ್ಟೂರು ದೊಡ್ಡಹಾಲಹಳ್ಳಿಗೆ ಹೋಗಿ, ಕಾವೇರಿ ನದಿಯಲ್ಲಿ ಮಿಂದು ತಮ್ಮ ಕುಟುಂಬದೊಂದಿಗೆ ಸಂಗಮ ಬಳಿಯ ಈಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಪತ್ನಿ, ಮಗನ ಜೊತೆ ಕಾಲ ಕಳೆದರು
ಹುಟ್ಟೂರಿಗೆ ತಮ್ಮ ಮಗ, ಪತ್ನಿ ಜೊತೆ ಡಿಕೆಶಿ ತೆರಳಿದ್ದರು. ಪುತ್ರ ಆಕಾಶ್, ಪತ್ನಿ ಉಷಾ ಅವರೊಂದಿಗೆ ವಿಶೇಷ ಪೂಜೆಯನ್ನು ಸಲ್ಲಿಸಿ ಅಲ್ಲಿ ಕೆಲ ಕಾಲ ತಂಗಿದ್ದರು. ಬಾಲ್ಯದ ಎಲ್ಲಾ ಸವಿನೆನಪುಗಳನ್ನು ಮಗನೊಂದಿಗೆ ಸೇರಿ ಅನುಭವಿಸಿ ಅಪ್ಪಂದಿರ ದಿನವನ್ನು ಸಂಭ್ರಮಿಸಿದ್ದಾರೆ ಡಿಕೆಶಿ.

ಫೋಟೊ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ ಡಿಕೆಶಿ
ತಮ್ಮ ಕುಟುಂಬದೊಂದಿಗೆ ಮೇಕೆದಾಟು ಸಂಗಮಕ್ಕೆ ತೆರಳಿದ, ತಾವು ನದಿಯಲ್ಲಿ ಈಜುತ್ತಿರುವ ಮತ್ತು ಕುಟುಂಬದವರೊಂದಿಗೆ ಕ್ಲಿಕ್ಕಿಸಿದ ಕೆಲ ಫೋಟೋಗಳನ್ನು ಡಿ.ಕೆ.ಶಿವಕುಮಾರ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ.












Click it and Unblock the Notifications