ಕೊಡಗಿನಲ್ಲಿ ಧ್ಯಾನ ಕೇಂದ್ರ ನಿರ್ಮಿಸಲು ಮುಂದಾದ ಕೇರಳ ಮೂಲದ ಆಧ್ಯಾತ್ಮಿಕ ಗುರು ಶ್ರೀ ಎಂ, ಕನ್ನಡಿಗರಿಂದ ವಿರೋಧ
ಕರ್ನಾಟಕದ ಕೊಡಗು ಜಿಲ್ಲೆಯಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಕೊಡಗು ಜಿಲ್ಲೆಯ ನಿವಾಸಿಗಳು ಮತ್ತು ವಿವಿಧ ಸಂಘಟನೆಗಳ ವಿರೋಧದಿಂದಾಗಿ ಆಧ್ಯಾತ್ಮಿಕ ಗುರು ಮತ್ತು ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರಾದ ಶ್ರೀ. ಎಂ (ಮುಮ್ತಾಜ್ ಅಲಿ) ಅವರ ಉದ್ದೇಶಿತ ಧ್ಯಾನ ಕೇಂದ್ರ ಯೋಜನೆಯನ್ನು ಕೈಬಿಡಲಾಗಿದೆ. ಶ್ರೀ ಎಂ ಅವರು ಮಡಿಕೇರಿ ತಾಲ್ಲೂಕಿನ ಪರಿಸರ ಸೂಕ್ಷ್ಮ ಮಾಲ್ಮಾ ಬೆಟ್ಟದ ಪ್ರದೇಶದಲ್ಲಿ ಧ್ಯಾನ ಕೇಂದ್ರವನ್ನು ಪ್ರಾರಂಭಿಸುವುದಕ್ಕೆ ಮುಂದಾಗಿದ್ದರು. ಆದರೆ ಇಲ್ಲಿನ ನೆಲಜಿ ಗ್ರಾಮದ ಬಳಿಯ ಮಾಲ್ಮಾ ಬೆಟ್ಟ ಪ್ರದೇಶದಲ್ಲಿ ಯಾವುದೇ ರೀತಿಯ ವಾಣಿಜ್ಯ ಚಟುವಟಿಕೆಗಳನ್ನು ಅಥವಾ ಹೊಸ ಯೋಜನೆಗಳನ್ನು ಜಾರಿ ಮಾಡಬಾರದು ಎಂದು ಗ್ರಾಮಸ್ಥರು ವಿರೋಧಿಸುತ್ತಿದ್ದಾರೆ. ಈ ಬೆಟ್ಟವು ಜಿಲ್ಲೆಯ ನಿವಾಸಿಗಳಿಗೆ, ವಿಶೇಷವಾಗಿ ಕೊಡವ ಸಮುದಾಯದವರಿಗೆ ಪ್ರಮುಖ ಧಾರ್ಮಿಕ ಸ್ಥಳವಾಗಿದೆ. ಅಲ್ಲದೆ ಪ್ರಸಿದ್ಧ ಹಾಗೂ ಪವಿತ್ರ ದೇವಾಲಯ ಇಗ್ಗುತಪ್ಪ ಸಹ ಸಮೀಪದಲ್ಲೇ ಇದೆ. ಈ ಕಾರಣಕ್ಕೆ ಈ ಯೋಜನೆ ಅನುಷ್ಠಾನಕ್ಕೆ ವಿರೋಧ ವ್ಯಕ್ತವಾಗಿತ್ತು ಎಂದು "ದಿ ಹಿಂದೂ" ವರದಿ ಮಾಡಿದೆ.
ಸ್ಥಳೀಯ ನಿವಾಸಿಗಳ ಪ್ರಕಾರ ಶ್ರೀ ಎಂ ಅವರು ಇಲ್ಲಿನ ಬೆಟ್ಟದ ಮೇಲೆ ಭೂಮಿಯನ್ನು ಖರೀದಿಸಿದ್ದರು. ಈ ಪ್ರದೇಶದಲ್ಲಿ ಏಲಕ್ಕಿ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಸಲಾಗುತ್ತಿತ್ತು. ಆದರೆ ಭೂಮಿ ಖರೀದಿ ಮಾಡಿದ ನಂತರ ಮರಗಳನ್ನು ಕಡಿದು, ರಸ್ತೆಗಳನ್ನು ನಿರ್ಮಿಸಿದ್ದಾರೆ. ಅಲ್ಲದೆ ಈ ಭಾಗದಲ್ಲಿ ಕೊಳಗಳನ್ನು ಸಹ ನಿರ್ಮಿಸಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಭೂಮಿ ಖಾಸಗಿ ಒಡೆತನದಲ್ಲಿರುವುದು ನಿಜವಾದರೂ, ಪರಿಸರ ಸೂಕ್ಷ್ಮ ಬೆಟ್ಟದಲ್ಲಿ ವಾಣಿಜ್ಯ ಚಟುವಟಿಕೆಗಳು ನಡೆದರೆ, ಈ ಪರಿಸರ ಸೂಕ್ಷ್ಮ ಪ್ರದೇಶವು ದುರ್ಬಲವಾಗಲಿದೆ. ಅಲ್ಲದೆ ಈ ಭಾಗದ ಸಾಂಸ್ಕೃತಿಕ ಪರಂಪರೆ ಮತ್ತು ಧಾರ್ಮಿಕ ಕ್ಷೇತ್ರದ ಮೇಲೆಯೂ ಸಹ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದರು. ಅಲ್ಲದೆ ಉದ್ದೇಶಿತ ಧ್ಯಾನ ಕೇಂದ್ರ ನಿರ್ಮಾಣಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು.

ಇಲ್ಲಿನ ಬಲ್ಲಮಾವಟಿ ಗ್ರಾಮ ಪಂಚಾಯತ್ನ ಮಾಜಿ ಅಧ್ಯಕ್ಷ ಹರೀಶ್ ಕುಶಾಲಪ್ಪ ಅವರು, ಇಬ್ಬರು ಭೂಮಾಲೀಕರು ಕೆಲವು ತಿಂಗಳ ಹಿಂದೆ ಶ್ರೀ ಎಂ ಅವರಿಗೆ ಆಸ್ತಿಯನ್ನು ಮಾರಾಟ ಮಾಡಿದ್ದಾರೆ. ಈ ಆಸ್ತಿ ಸ್ವಲ್ಪಮಟ್ಟಿಗೆ ಕಾಡಿನಂತೆಯೇ ಇದೆ. ಈ ಪ್ರದೇಶದಲ್ಲಿ ಮೊದಲು ಏಲಕ್ಕಿ ಬೆಳೆಯಲಾಗುತ್ತಿತ್ತು. ಭೂಮಿಯನ್ನು ಖರೀದಿಸಿದವರು ಕೃಷಿ ಅಥವಾ ತೋಟಗಾರಿಕೆಗೆ ಜಾಗ ಬಳಕೆ ಮಾಡಿದರೆ ನಮಗೆ ಯಾವುದೇ ಆಕ್ಷೇಪವಿಲ್ಲ. ಆದಾಗ್ಯೂ, ಅಂತಹ ಪರಿಸರ ಸೂಕ್ಷ್ಮ ಪ್ರದೇಶವನ್ನು ವಾಣಿಜ್ಯ ಉದ್ದೇಶಗಳಿಗಾಗಿ ಬಳಸುವುದನ್ನು ನಾವು ವಿರೋಧಿಸುತ್ತೇವೆ ಎಂದು ಹೇಳಿದ್ದಾರೆ.
ಮುಂದುವರಿದು ಸ್ಥಳೀಯ ನಿವಾಸಿಗಳ ವಿರೋಧದ ನಂತರ ಶ್ರೀ ಎಂ ಅವರು ಈ ಭೂಮಿಯನ್ನು ವಾಣಿಜ್ಯ ಉದ್ದೇಶಕ್ಕಾಗಿ ಬಳಕೆ ಮಾಡುತ್ತಿಲ್ಲ. ಧ್ಯಾನ, ಶಾಸ್ತ್ರಗಳ ಅಧ್ಯಯನ, ಸಂಸ್ಕೃತ ಪಠಣ ಮತ್ತು ಯೋಗಾಭ್ಯಾಸ ಸೇರಿದಂತೆ ಸ್ವಯಂ-ವಿಶ್ರಾಂತಿ ಕೇಂದ್ರ ನಿರ್ಮಾಣ ಮಾಡುವುದಕ್ಕಾಗಿ ಖರೀದಿ ಮಾಡಲಾಗಿದೆ. ಯೋಜನೆಯ ಅನುಸಾರ ಈ ಪ್ರದೇಶದಲ್ಲಿ ಗೋಶಾಲೆ, ಧ್ಯಾನ ಮಂದಿರ ಮತ್ತು ಕೊಳಗಳನ್ನು ನಿರ್ಮಿಸುವ ಅವಶ್ಯಕತೆ ಇದೆ. ಮರಗಳನ್ನು ಕಡಿಯುವ ಅಥವಾ ಪರ್ವತ ಅರಣ್ಯಕ್ಕೆ ಹಾನಿ ಮಾಡುವ ಯಾವುದೇ ಉದ್ದೇಶ ಇಲ್ಲ. ಆದಾಗ್ಯೂ, ಗ್ರಾಮಸ್ಥರು ಮತ್ತು ಕೊಡವ ಸಮುದಾಯದ ಭಾವನೆಗಳನ್ನು ಗೌರವಿಸಿ ಎಲ್ಲಾ ಪ್ರಸ್ತಾವಿತ ಯೋಜನೆಗಳನ್ನು ಕೈಬಿಡಲಾಗುವುದು ಎಂದು ಹೇಳಿದ್ದಾರೆ.
ಶ್ರೀ. ಎಂ (ಮಮ್ತಾಜ್ ಅಲಿ) ಯಾರು
ಶ್ರೀ. ಎಂ (ಮಮ್ತಾಜ್ ಅಲಿ) ಅವರು ಭಾರತದ ಪ್ರಸಿದ್ಧ ಆಧ್ಯಾತ್ಮಿಕ ಗುರುಗಳಾಗಿದ್ದಾರೆ. ಅಲ್ಲದೆ ಯೋಗಿ, ಸಾಮಾಜಿಕ ಸುಧಾರಕರು ಮತ್ತು ಚಿಂತಕರಾಗಿ ಗುರುತಿಸಿಕೊಂಡಿದ್ದಾರೆ. ಶ್ರೀ ಎಂ ಅವರು ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರು. ಮುಮ್ತಾಜ್ ಅಲಿ ಖಾನ್ ಅವರು 1948ರಲ್ಲಿ ಕೇರಳದ ತಿರುವನಂತಪುರದಲ್ಲಿ ಜನಿಸಿದರು. ಬಾಲ್ಯದಿಂದಲೇ ಆಧ್ಯಾತ್ಮದ ಕಡೆಗೆ ಒಲವು ಹೊಂದಿದ್ದ ಇವರು, ತಮ್ಮ 19ನೇ ವಯಸ್ಸಿನಲ್ಲಿ ಹಿಮಾಲಯಕ್ಕೆ ತೆರಳಿ ಆಧ್ಯಾತ್ಮಿಕ ಸಾಧನೆ ಮಾಡಿದರು.














Click it and Unblock the Notifications