ಡಿಕೆಶಿ ತಮ್ಮ ತಪ್ಪನ್ನು ಪರಮೇಶ್ವರ್ ಮುಂದೆ ಹೇಳಿಕೊಂಡಿದ್ದಾರೆ: ಸಿ. ಟಿ. ರವಿ
ರಾಮನಗರ, ಸೆಪ್ಟೆಂಬರ್ 19: "ಡಿ. ಕೆ. ಶಿವಕುಮಾರ್ ಅವರೇ ತಾನು ತಪ್ಪು ಮಾಡಿದ್ದೇನೆಂದು ಪರಮೇಶ್ವರ್ ಬಳಿ ಹೇಳಿಕೊಂಡಿದ್ದಾರೆ. ಹಾಗಾಗಿ ಬಂಧನದ ವಿಚಾರವನ್ನು ರಾಜಕೀಯವಾಗಿ ಬಳಸಿಕೊಳ್ಳಬಾರದು" ಎಂದು ಪ್ರವಾಸೋದ್ಯಮ ಸಚಿವ ಸಿ. ಟಿ. ರವಿ ಗುರುವಾರ ಹೇಳಿದರು.
ರಾಮನಗರ ಜಿಲ್ಲೆಯ ಬಿಡದಿ ಬಳಿ ಇರುವ ಅಮೃತ ಕಾಲೇಜಿನಲ್ಲಿ ಏರ್ಪಡಿಸಿದ್ದ 370ನೇ ವಿಧಿ ರದ್ದತಿ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿ, ಶಿವಕುಮಾರ್ ಅವರ ಬಂಧನ ವಿಚಾರದಲ್ಲಿ ಕಾಂಗ್ರೆಸ್ ನಲ್ಲಿಯೇ ಕೆಲವರು ಖುಷಿ ಪಡುತ್ತಿದ್ದಾರೆ. ತಮ್ಮ ದಾರಿ ಸುಗಮವಾಯಿತು ಎಂದು ಖುಷಿಯಲ್ಲಿದ್ದಾರೆ ಎಂದರು.
ಫಿಲ್ಮ್ ಸಿಟಿಯನ್ನು ನಮ್ಮ ಸರ್ಕಾರ ಸ್ಥಳಾಂತರ ಮಾಡಿಲ್ಲ. ನಾವು ರಾಮನಗರ ವಿಚಾರದಲ್ಲಿ ದ್ವೇಷ ರಾಜಕಾರಣ ಮಾಡುತ್ತಿಲ್ಲ. ಫಿಲ್ಮ್ ಸಿಟಿಯನ್ನು ಕನಕಪುರ ತಾಲೂಕಿನ ಹೊರ ವಲಯದಲ್ಲಿ ಮಾಡಲು ಚಿಂತನೆ ಮಾಡಲಾಗಿದೆ. ಕುಮಾರಸ್ವಾಮಿ ಅವರು ಕೇವಲ ರಾಮನಗರ ತಾಲೂಕಿನ ನಾಯಕರಷ್ಟೇ ಅಲ್ಲ ಎಂದರು.

ಕುಮಾರಸ್ವಾಮಿ ಅವರು ಒಂದು ತಾಲೂಕಿಗೆ ಸೀಮಿತರಾದ ನಾಯಕಾರದರೆ ಆ ತಾಲೂಕಿನ ಬಗ್ಗೆ ಅಷ್ಟೇ ಯೋಚನೆ ಮಾಡುತ್ತಾರೆ, ರಾಜ್ಯದ ನಾಯಕರಾದರೆ ರಾಜ್ಯದ ಅಭಿವೃದ್ಧಿ ಬಗ್ಗೆ ಚಿಂತನೆ ಮಾಡುತ್ತಾರೆ ಎನ್ನುವ ಮೂಲಕ ಯಡಿಯೂರಪ್ಪ ಅವರು ರಾಮನಗರದ ವಿಚಾರದಲ್ಲಿ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ಸಿ. ಟಿ. ರವಿ ತಿರುಗೇಟು ನೀಡಿದರು.
ನೆರೆ ಸಂತ್ರಸ್ತರ ನೆರವಿಗೆ ಪ್ರಧಾನಿ ಮೋದಿ ಇದ್ದಾರೆ, ರಾಜ್ಯಕ್ಕೆ ಕೇಂದ್ರದ ಬರ ಪರಿಹಾರ ಹಣ ಬಂದೆ ಬರುತ್ತದೆ. ಈ ವಿಚಾರದಲ್ಲಿ ರಾಜಕೀಯ ಮಾಡಬಾರದು. ಬೇಕಿದ್ದರೆ ಜೆಡಿಎಸ್ 5 ಗ್ರಾಮ, ಕಾಂಗ್ರೆಸ್ ನವರು ಹತ್ತು ಗ್ರಾಮಗಳನ್ನು ದತ್ತು ಪಡೆದು, ಅಭಿವೃದ್ಧಿ ಪಡಿಸಲಿ ಎಂದರು.
ಕೇಂದ್ರ ಸರ್ಕಾರವು ಬಿಜೆಪಿ ಒಂದು ಸ್ಥಾನದಲ್ಲೂ ಇಲ್ಲದ ಕೇರಳ, ತಮಿಳುನಾಡಿಗೆ ಬರ ಪರಿಹಾರ ಹಣ ಬಿಡುಗಡೆ ಮಾಡಿದೆ. ಅಂತಹದರಲ್ಲಿ ನಮ್ಮ ರಾಜ್ಯಕ್ಕೆ ಪರಿಹಾರ ಹಣ ಬಿಡುಗಡೆ ಮಾಡಲ್ಲವಾ? ಹಣ ಬಿಡುಗಡೆ ಮಾಡಿಯೇ ಮಾಡುತ್ತಾರೆ ಎಂದು ಸಚಿವ ಸಿ. ಟಿ. ರವಿ ಹೇಳಿದರು.












Click it and Unblock the Notifications