ರಾಮನಗರ ಜಿಲ್ಲೆಗೆ ಬಂದು ತಲುಪಿದ ಕೊರೊನಾ ಲಸಿಕೆ: ಜ.16ರಿಂದ ವ್ಯಾಕ್ಸಿನೇಷನ್
ರಾಮನಗರ, ಜನವರಿ 15: ರಾಮನಗರ ಜಿಲ್ಲೆಗೆ ಶುಕ್ರವಾರ ಬೆಳಿಗ್ಗೆ ಬಂದ 5000 ಕೊರೊನಾ ಲಸಿಕೆಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ ಆವರಣದಲ್ಲಿ ಜಿಲ್ಲಾಧಿಕಾರಿ ಎಂ.ಎಸ್ ಅರ್ಚನಾ ಅವರು ಸ್ವಾಗತಿಸಿದರು.
ರಾಮನಗರ ಜಿಲ್ಲೆಯಲ್ಲಿ ಈಗಾಗಲೇ ಸುಮಾರು 8 ಕಡೆ ಕೊರೊನಾ ಲಸಿಕಾ ಕೇಂದ್ರವನ್ನು ತೆರೆಯಲಾಗಿದ್ದು, 107 ಸೆಷನ್ ನಲ್ಲಿ ಲಸಿಕೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಪ್ರತಿ ಕೇಂದ್ರದಲ್ಲಿ ತಲಾ 100 ಮಂದಿಗೆ ಲಸಿಕೆ ನೀಡಲಾಗುತ್ತದೆ.
ರಾಮನಗರ ಜಿಲ್ಲಾಸ್ಪತ್ರೆ, ರಾಮಕೃಷ್ಣ ಆಸ್ಪತ್ರೆ, ದಯಾನಂದ ಸಾಗರ್ ಆಸ್ಪತ್ರೆ, ಚನ್ನಪಟ್ಟಣ ತಾಲ್ಲೂಕು ಆಸ್ಪತ್ರೆ, ಕನಕಪುರ ಮೆಟರ್ ನಿಟಿ ಆಸ್ಪತ್ರೆ, ಮಾಗಡಿ ತಾಲ್ಲೂಕು ಆಸ್ಪತ್ರೆ, ಇಗ್ಗಲೂರು ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಕನಕಪುರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಗುರುತಿಸಲಾಗಿದ್ದು, ಪ್ರತಿ ಕೇಂದ್ರಕ್ಕೆ 5 ವ್ಯಾಕ್ಸಿನೇಟರ್ ಗಳನ್ನು ನೇಮಕ ಮಾಡಲಾಗಿದೆ.

ಜ.16ರಿಂದ ಲಸಿಕೆ ಕಾರ್ಯಕ್ಕೆ ಚಾಲನೆ ಸಿಗಲಿದೆ. ರಾಮನಗರದಲ್ಲಿ ಇದುವರೆಗೆ 8405 ಮಂದಿಯನ್ನು ನೋಂದಣಿ ಮಾಡಿಕೊಂಡಿದ್ದು, ಇದರಲ್ಲಿ ರಾಮನಗರ ತಾಲ್ಲೂಕಿನಲ್ಲಿ-3161, ಚನ್ನಪಟ್ಟಣ-1633, ಮಾಗಡಿ-1601, ಕನಕಪುರ-2010 ನೋಂದಣಿ ಮಾಡಿಕೊಂಡಿದ್ದಾರೆ.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಿರಂಜನ್, ಆರ್.ಸಿ.ಹೆಚ್ ಅಧಿಕಾರಿ ಡಾ.ಪದ್ಮ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

8400 ಮಂದಿ ಅರೋಗ್ಯ ಕಾರ್ಯಕರ್ತರನ್ನು ಗುರುತಿಸಲಾಗಿತ್ತು. ಆದರೆ ಇನ್ನೂ 3400 ಮಂದಿ ಅರೋಗ್ಯ ಕಾರ್ಯಕರ್ತರಿಗೆ ಲಸಿಕೆ ಕೊರತೆಯಾಗಲಿದೆ. 10 ದಿನದೊಳಗೆ ಉಳಿದ ಲಸಿಕೆ ಬರುವ ನಿರೀಕ್ಷೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.












Click it and Unblock the Notifications